ಕಾಂಗ್ರೆಸ್‌, ಬಿಜೆಪಿಯಲ್ಲಿನ ಭಿನ್ನಮತ ಜೆಡಿಎಸ್‌ಗೆ ಲಾಭ

By Kannadaprabha NewsFirst Published Dec 23, 2022, 6:35 AM IST
Highlights

ನಾನು ಯಾರನ್ನು ಸೋಲಿಸಲು ಜೆಡಿಎಸ್‌ ಪಕ್ಷ ಸೇರಿಲ್ಲ, ಸ್ಥಳೀಯ ಕಾಂಗ್ರೆಸ್‌ ಮುಖಂಡರ ವರ್ತನೆ ಹಾಗೂ ಗುಂಪುಗಾರಿಕೆಗೆ ಮನನೊಂದು ಜೆಡಿಎಸ್‌ ಪಕ್ಷಕ್ಕೆ ಸೇರ್ಪಡೆಗೊಂಡಿದ್ದೇನೆ. ಅಥಣಿ ಮತಕ್ಷೇತ್ರದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಎರಡು ಪಕ್ಷಗಳಲ್ಲಿ ಭಿನ್ನಮತ, ಗುಂಪುಗಾರಿಕೆ ಹೆಚ್ಚಿದ್ದು, ಅದರ ಲಾಭ ನಮ್ಮ ಜೆಡಿಎಸ್‌ ಪಕ್ಷಕ್ಕೆ ದೊರಕಲಿದೆ ಎಂದು ಮಾಜಿ ಶಾಸಕ ಷಹಜಹಾನ್‌ ಡೊಂಗರಗಾಂವ ಹೇಳಿದರು.

  ಅಥಣಿ : ನಾನು ಯಾರನ್ನು ಸೋಲಿಸಲು ಜೆಡಿಎಸ್‌ ಪಕ್ಷ ಸೇರಿಲ್ಲ, ಸ್ಥಳೀಯ ಕಾಂಗ್ರೆಸ್‌ ಮುಖಂಡರ ವರ್ತನೆ ಹಾಗೂ ಗುಂಪುಗಾರಿಕೆಗೆ ಮನನೊಂದು ಜೆಡಿಎಸ್‌ ಪಕ್ಷಕ್ಕೆ ಸೇರ್ಪಡೆಗೊಂಡಿದ್ದೇನೆ. ಅಥಣಿ ಮತಕ್ಷೇತ್ರದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಎರಡು ಪಕ್ಷಗಳಲ್ಲಿ ಭಿನ್ನಮತ, ಗುಂಪುಗಾರಿಕೆ ಹೆಚ್ಚಿದ್ದು, ಅದರ ಲಾಭ ನಮ್ಮ ಜೆಡಿಎಸ್‌ ಪಕ್ಷಕ್ಕೆ ದೊರಕಲಿದೆ ಎಂದು ಮಾಜಿ ಶಾಸಕ ಷಹಜಹಾನ್‌ ಡೊಂಗರಗಾಂವ ಹೇಳಿದರು.

ಪಟ್ಟಣದಲ್ಲಿ ಇತ್ತೀಚೆಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸಮ್ಮುಖದಲ್ಲಿ (JDS)  ಪಕ್ಷಕ್ಕೆ ಸೇರ್ಪಡೆಗೊಂಡ ಪ್ರಯುಕ್ತ ಅಥಣಿ ಜೆಡಿಎಸ್‌ ತಾಲೂಕಾ ಘಟಕದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಸನ್ಮಾನ, ಸ್ವೀಕರಿಸಿ ಮಾತನಾಡಿದ ಅವರು, ಸ್ಥಳೀಯ ಕಾಂಗ್ರೆಸ್‌ (congress)  ಮುಖಂಡರು ತಮ್ಮ ವೈಯಕ್ತಿಕ ಪ್ರಚಾರದಲ್ಲಿ ತೊಡಗಿದ್ದಾರೆ. ಸಮಯ ಸಂದರ್ಭ ನೋಡಿ ಕಾಲೆಳೆಯುವ ಪ್ರಯತ್ನ ಮಾಡುತ್ತಾರೆ. ಪಕ್ಷಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಯಾವುದೇ ಹೋರಾಟ ಸಂಘಟನೆ, ಕಾರ್ಯಕ್ರಮಗಳ ಪರಿಚಯ ಮಾಡುತ್ತಿಲ್ಲ. ರಾಜಕೀಯ ಅನುಭವ ಇರುವ ನಮಗೆ ಒಂದು ಸಲಹೆ ಕೇಳುವುದಿಲ್ಲ. ಕಾರ್ಯಕ್ರಮಗಳಲ್ಲಿ ಮಾತನಾಡಲು ನನಗೆ ಅವಕಾಶ ಕೊಡುವುದಿಲ್ಲ. ಹೀಗಾಗಿ ಮನನೊಂದು ನಾನು ಕಾಂಗ್ರೆಸ್‌ ಪಕ್ಷವನ್ನು ತೊರೆದು ಜೆಡಿಎಸ್‌ ಪಕ್ಷವನ್ನು ಸೇರಿಕೊಂಡಿದ್ದೇನೆ ಎಂದು ತಮ್ಮ ಅಳಲು ತೋಡಿಕೊಂಡರು.

ಕಾಂಗ್ರೆಸ್‌ ಪಕ್ಷದಲ್ಲಿ ಈಗ ಟಿಕೆಟ್‌ಗಾಗಿ ಬಾರಿ ಪೈಪೋಟಿ ನಡೆದಿದೆ. ಯಾರಿಗೆ ಟಿಕೆಟ್‌ ಸಿಕ್ಕರೂ ಟಿಕೆಚ್‌ ಸಿಗದೇ ಇದ್ದವರೆಲ್ಲ ಸೇರಿಕೊಂಡು ಟಿಕಿಟ್‌ ಸಿಕ್ಕವರನ್ನು ಸೋಲಿಸಲು ಯತ್ನಿಸುತ್ತಾರೆ. ಇದು ಕಾಂಗ್ರೆಸ್‌ನಲ್ಲಿ ಮಾತ್ರವಲ್ಲ, ಈಗ ಬಿಜೆಪಿಯಲ್ಲಿಯೂ ಗುಂಪುಗಾರಿಕೆ ಆರಂಭವಾಗಿದೆ. ಇದರ ಲಾಭ ಖಂಡಿತವಾಗಿಯೂ ನಮ್ಮ ಜೆಡಿಎಸ್‌ ಪಕ್ಷಕ್ಕೆ ದೊರಕಲಿದೆ. ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಮಾರ್ಗದರ್ಶನದಲ್ಲಿ ಪಕ್ಷವನ್ನ ಇನ್ನಷ್ಟುಬೇರು ಮಟ್ಟದಿಂದ ಸಂಘಟಿಸಿ ಮುಂಬರುವ ಚುನಾವಣೆಯಲ್ಲಿ ಗೆಲ್ಲುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದರು.

ಎಚ್‌.ಡಿ.ಕುಮಾರಸ್ವಾಮಿ ಅವರು ತಾವು ಮುಖ್ಯಮಂತ್ರಿಗಳಿದ್ದಾಗ ರಾಜ್ಯದ ಜನತೆಗೆ ಉತ್ತಮ ಕಾರ್ಯಕ್ರಮಗಳನ್ನು ಕೊಟ್ಟಿದ್ದಾರೆ. ಅವರ ಜನಪರ ಕಾರ್ಯಗಳು ಮತ್ತು ಅಥಣಿ ಮತಕ್ಷೇತ್ರದಲ್ಲಿ ನಾನು ಶಾಸಕನಿದ್ದಾಗ ಮಾಡಿದ ಜನಪರ ಕಾರ್ಯ ಮತ್ತು ಹೋರಾಟಗಳನ್ನು ಮತದಾರರ ಗಮನಕ್ಕೆ ತರುವುದಲ್ಲದೇ ಮತಕ್ಷೇತ್ರದ ಅಭಿವೃದ್ಧಿಗಾಗಿ ವಿಶೇಷ ಪ್ರಣಾಳಿಕೆ ರೂಪಿಸಿಕೊಂಡು ಮತದಾರರ ಮುಂದೆ ಹೋಗುತ್ತೇವೆ. ಕಾಂಗ್ರೆಸ್‌ ಮತ್ತು ಬಿಜೆಪಿ ಪಕ್ಷಗಳ ಆಡಳಿತಕ್ಕೆ ಮತದಾರರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ರಾಜ್ಯದಲ್ಲಿ ಮತ್ತೆ ಕುಮಾರಸ್ವಾಮಿ ಮುಖ್ಯಮಂತ್ರಿಗಳಾಗಲಿ ಎಂಬ ಭಾವನೆ ವ್ಯಕ್ತವಾಗುತ್ತಿದೆ. ರಾಜ್ಯದಲ್ಲಿ ಮತ್ತೆ ಕುಮಾರಸ್ವಾಮಿ ಮುಖ್ಯಮಂತ್ರಿ ಆಗುವುದು ಶತಸಿದ್ಧ. ಕ್ಷೇತ್ರದಲ್ಲಿ ಜೆಡಿಎಸ್‌ ಪಕ್ಷವನ್ನು ಗೆಲ್ಲಿಸುವ ಮೂಲಕ ಅವರ ಕೈ ಬಲಪಡಿಸುತ್ತೇವೆ ಎಂದು ಭರವಸೆ ನೀಡಿದರು.

ಜೆಡಿಎಸ್‌ ಪಕ್ಷದ ಬೆಳಗಾವಿ ಜಿಲ್ಲಾದ್ಯಕ್ಷ ಕಲ್ಲಪ್ಪ ಮಗೆನ್ನವರ ಮಾತನಾಡಿ, ಒಂದು ಬಾರಿ ಶಾಸಕರಾಗಿರುವ ಶಹಾಜಹಾನ ಡೊಂಗರಗಾಂವ ಅವರು ನಮ್ಮ ಪಕ್ಷಕ್ಕೆ ಸೇರ್ಪಡೆಯಾಗಿರುವುದರಿಂದ ನಮ್ಮ ಪಕ್ಷಕ್ಕೆ ಮತಕ್ಷೇತ್ರದಲ್ಲಿ ಆನೆ ಬಲ ಬಂದಂತಾಗಿದೆ. ಅವರ ಪಕ್ಷ ಸಂಘಟನೆ ಹಾಗೂ ರಾಜಕೀಯ ಅನುಭವದೊಂದಿಗೆ ನಾವು ಪಕ್ಷವನ್ನು ಬೂತ್‌ಮಟ್ಟದಲ್ಲಿ ಕಟ್ಟುತ್ತೇವೆ. ಅವರು ನೇತೃತ್ವದಲ್ಲಿ ಗೆದ್ದು ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ವೇಳೆ ಜೆಡಿಎಸ್‌ ಪಕ್ಷದ ತಾಲೂಕಾಧ್ಯಕ್ಷ ಅಣ್ಣಾರಾಯ ಹಾಲಳ್ಳಿ ಮುಖಂಡರಾದ ಗೀರಿಶ ಬುಟಾಳಿ ಮಾತನಾಡಿದರು. ಈ ಸಂದರ್ಭದಲ್ಲಿ ಮುಖಂಡರಾದ ರಸೂಲಸಾಬ ನಂದಗಾಂವ, ಶಿವಾನಂದ ಐಗಳಿ, ಶಬ್ಬೀರಗೌಡಾ ಪಟೇಲ, ಮಹಾಲಿಂಗ ಖೋತರೆಡ್ಡಿ, ಅಜೀತ ಕಾಂಬಳೆ, ಮಲ್ಲು ಗುಂಜಿಗಾವಿ, ಮುರಗೇಶ ನಾಯಿಕ, ಜಗದೀಶ ಹೀರೆಮಠ, ರವಿ ಹಂಜಿ, ಮಹಿಳಾ ಅಧ್ಯಕ್ಷೆ ಸರಸ್ವತಿ ನೇಮಗೌಡ, ಕಲಾವತಿ ಹರೋಲಿ, ಶಶಿಕಲಾ ಕಾಂಬಳೆ, ರೇಣುಕಾ ಮಾದರ, ಸೇರಿದಂತೆ ಇನ್ನಿತರರು ಹಾಜರಿದ್ದರು.

click me!