ಧಾರವಾಡ: ಕೇವಲ 53 ದಿನದಲ್ಲಿ 10000 ಕೊರೋನಾ ಸೋಂಕು!

By Kannadaprabha NewsFirst Published Oct 23, 2020, 12:36 PM IST
Highlights

ಧಾರವಾಡ ಜಿಲ್ಲೆಯಲ್ಲಿ 20 ಸಾವಿರ ಗಡಿ ದಾಟಿದ ಕೋವಿಡ್‌ ಪ್ರಕರಣ| ಕಳೆದ ಆಗಸ್ಟ್‌ 27ಕ್ಕೆ 10 ಸಾವಿರ ಸಂಖ್ಯೆಗೆ ತಲುಪಿದ್ದ ಕೋವಿಡ್‌| ಅಂದಾಜು 36 ಲಕ್ಷ ದಂಡ ಹಾಕಿದರೂ ಸಹ ಮಾಸ್ಕ್‌ ಹಾಕದೇ ಇರುವುದು ಕೋವಿಡ್‌ ಸೋಂಕು ಇನ್ನೂ ಆತಂಕ ಸೃಷ್ಟಿಸಲು ಕಾರಣ| 

ಧಾರವಾಡ(ಅ.23): ಇತ್ತೀಚಿನ ಒಂದು ವಾರದ ಕೊರೋನಾ ಪಾಸಿಟಿವ್‌ ಪ್ರಕರಣಗಳ ಸಂಖ್ಯೆ ಗಮನಿಸಿದರೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ತುಸು ಮಟ್ಟದಲ್ಲಿ ಇಳಿಮುಖವಾಗುತ್ತಿದೆ. ಆದರೆ, ಒಟ್ಟು ಪ್ರಕರಣಗಳ ಸಂಖ್ಯೆ 20 ಸಾವಿರ ಗಡಿ ದಾಟಿದ್ದು ಜನರಲ್ಲಿ ಇನ್ನೂ ಕೊರೋನಾ ಆತಂಕ ಮಾತ್ರ ಕಡಿಮೆಯಾಗಿಲ್ಲ.

ಕೋವಿಡ್‌ ಸಂಖ್ಯೆ ಕಳೆದ ಆಗಸ್‌ 27ಕ್ಕೆ ಬರೋಬ್ಬರಿ 10 ಸಾವಿರ ಗಡಿ ದಾಟಿತ್ತು. ಇದೀಗ ಬರೀ 53 ದಿನಗಳಲ್ಲಿ 10 ಸಾವಿರ ಪ್ರಕರಣಗಳು ದಾಖಲಾಗಿದ್ದು ಒಟ್ಟು 20 ಸಾವಿರ ದಾಟಿದೆ. ಪ್ರಸ್ತುತ ಅ. 21ಕ್ಕೆ 20112 ಪ್ರಕರಣಗಳಿವೆ. ಈಗಾಗಲೇ ಬೆಂಗಳೂರು ನಗರ ಅತೀ ಹೆಚ್ಚು ನಂತರದಲ್ಲಿ ಬಳ್ಳಾರಿ, ಬೆಳಗಾವಿ, ದಕ್ಷಿಣ ಕನ್ನಡ, ಹಾಸನ, ಮೈಸೂರು ಮತ್ತು ಉಡುಪಿ ಜಿಲ್ಲೆಗಳು 20 ಸಾವಿರ ದಾಟಿದ್ದು ಧಾರವಾಡ ಜಿಲ್ಲೆಯು ಅತೀ ಹೆಚ್ಚು ಪ್ರಕರಣಗದಲ್ಲಿ 8ನೇ ಸ್ಥಾನದಲ್ಲಿದೆ.

ಕೊರೋನಾ ನಡುವೆ ಕಾಲೇಜು ಆರಂಭ; ಡೇಟ್ ಕೊಟ್ಟ ಉನ್ನತ ಶಿಕ್ಷಣ ಇಲಾಖೆ?

ನಿಧಾನಗತಿ:

ಆರಂಭದ ದಿನಗಳಲ್ಲಿ ನಿಧಾನಗತಿಯಲ್ಲಿ ಸೋಂಕಿತರು ಪತ್ತೆಯಾಗುತ್ತಿದ್ದರೂ ಜುಲೈ, ಆಗಸ್ಟ್‌, ಸೆಪ್ಟೆಂಬರ್‌ ತಿಂಗಳಲ್ಲಿ ಜಿಲ್ಲೆಯಲ್ಲಿ ಈ ಸಂಖ್ಯೆ ದ್ವಿಗುಣವಾಗುತ್ತಲೇ ಬಂದಿತು. ಆದರೆ, ಅಕ್ಟೋಬರ್‌ ತಿಂಗಳಲ್ಲಿ ಮಾತ್ರ ಕೊರೋನಾ ನಿಯಂತ್ರಣಕ್ಕೆ ಬಂದಿದೆ. ರಾಜ್ಯ ಸರ್ಕಾರದ ಸೂಚನೆಯಂತೆ ಜಿಲ್ಲಾಡಳಿತ ಕೋವಿಡ್‌ ಎಚ್ಚರಿಕೆಗಳನ್ನು ನೀಡಿದೆ. ಇಷ್ಟಾಗಿಯೂ ಜನರು ಮಾತ್ರ ಹೇಳಿಕೊಳ್ಳುವ ಯಾವುದೇ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಮಾರುಕಟ್ಟೆಯಲ್ಲಿ ಗುಂಪು-ಗುಂಪಾಗಿ ವ್ಯಾಪಾರ-ವಹಿವಾಟು ನಡೆಸುವುದು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಶಾರೀರಿಕ ಅಂತರ ಕಾಪಾಡದೇ ಇರುವುದು, ಜಿಲ್ಲೆಯಲ್ಲಿ ಅಂದಾಜು 36 ಲಕ್ಷ ದಂಡ ಹಾಕಿದರೂ ಸಹ ಮಾಸ್ಕ್‌ ಹಾಕದೇ ಇರುವುದು ಕೋವಿಡ್‌ ಸೋಂಕು ಇನ್ನೂ ಆತಂಕ ಸೃಷ್ಟಿಸಲು ಕಾರಣವಾಗಿದೆ. ಕೇಂದ್ರಸರ್ಕಾರ ಶಾಲಾ-ಕಾಲೇಜು, ಸಿನಿಮಾ ಮಂದಿರ ಸೇರಿದಂತೆ 5.0 ಅನಲಾಕ್‌ನಲ್ಲಿ ಬಹುತೇಕ ಎಲ್ಲ ಕ್ಷೇತ್ರಗಳಿಗೆ ಅವಕಾಶ ನೀಡಿದರೂ ಕೋವಿಡ್‌ ಭಯದಿಂದ ಇನ್ನೂ ಶಾಲಾ-ಕಾಲೇಜುಗಳನ್ನು ತೆರೆಯದಂತಾಗಿದೆ.

ನಿರೀಕ್ಷೆಯಂತೆ ಮೊದಮೊದಲು ಕೋವಿಡ್‌ ಪಾಸಿಟಿವ್‌ ಸಂಖ್ಯೆ ವಿಪರೀತ ಏರಿಕೆಯಾಗುತ್ತಿದ್ದು ಇದೀಗ ಅದು ಕಡಿಮೆಯಾಗುತ್ತಲೇ ಗುಣಮುಖ ಸಂಖ್ಯೆ ಹೆಚ್ಚಾಗುತ್ತಿದೆ. ಅ.21ಕ್ಕೆ 20112 ಕೋವಿಡ್‌ ಪ್ರಕರಣಗಳು ದಾಖಲಾಗಿದ್ದು ಈ ಪೈಕಿ 18,470 ಜನ ಬಿಡುಗಡೆ ಹೊಂದಿದ್ದರು. ಬರೀ 1098 ಜನರು ಮಾತ್ರ ಸಕ್ರಿಯ ಪ್ರಕರಣಗಳಿವೆ. ಜಿಲ್ಲೆಯು ಒಟ್ಟು ಕೋವಿಡ್‌ ಪ್ರಕರಣಗಳಲ್ಲಿ 8ನೇ ಸ್ಥಾನದಲ್ಲಿದ್ದರೂ ಕೋವಿಡ್‌ ಹಿನ್ನೆಲೆಯಲ್ಲಿ ಮೃತರಾದವರ ಸಂಖ್ಯೆಯಲ್ಲಿ 4ನೇ ಸ್ಥಾನದಲ್ಲಿದೆ. 
ಅ.19ರ ವರದಿ ಪ್ರಕಾರ, ಬೆಂಗಳೂರು ನಗರದಲ್ಲಿ ಅತೀ ಹೆಚ್ಚು 3542 ಜನರು ಮೃತಪಟ್ಟಿದ್ದಾರೆ. ಮೈಸೂರಿನಲ್ಲಿ 927 ಜನ ಮೃತಪಟ್ಟಿದ್ದರೆ ಈ ಸಂಖ್ಯೆ ದಕ್ಷಿಣ ಕನ್ನಡದಲ್ಲಿ 637ಕ್ಕಿದೆ. ನಂತರದಲ್ಲಿ ಧಾರವಾಡ 544 ಹಾಗೂ ಬಳ್ಳಾರಿಯಲ್ಲಿ 512 ಜನ ಮೃತಪಟ್ಟಿದ್ದಾರೆ. ಕಳೆದ ನಾಲ್ಕೈದು ದಿನಗಳಲ್ಲಿ ಧಾರವಾಡದಲ್ಲಿ ನಿತ್ಯ ಎರಡು, ಒಂದು ಸಂಖ್ಯೆಯಲ್ಲಿ ಮೃತರಾಗುತ್ತಿದ್ದರೆ, ಇದು ಎರಡು ತಿಂಗಳ ಹಿಂದೆ ನಿತ್ಯ 8 ರಿಂದ 10ಕ್ಕೆ ಇತ್ತು ಎಂಬುದು ಗಮನಾರ್ಹ.
 

click me!