ಕೊಳ್ಳೇಗಾಲ ಕೆರೆಗಳ ಅಭಿವೃದ್ಧಿಗೆ 10 ಕೋಟಿ: ಸಚಿವ ಸೋಮಣ್ಣ

By Govindaraj SFirst Published Dec 4, 2022, 8:46 PM IST
Highlights

ಚಿಕ್ಕರಂಗನಾಥ ಕೆರೆ, ಕೊಂಗಳ ಕೆರೆ, ಮುಡಿಗುಂಡ ಕೆರೆ ಅಭಿವೃದ್ಧಿಗೆ ಮುಖ್ಯಮಂತ್ರಿಯವರ ವಿಶೇಷ ಅನುದಾನದಡಿ 10 ಕೋಟಿ ರು. ಬಿಡುಗಡೆಯಾಗಿದೆ. ಕೆರೆಗಳ ಅಭಿವೃದ್ಧಿಯನ್ನು ಉತ್ತಮವಾಗಿ ನಿರ್ವಹಿಸಿ ನಗರದ ಆಕರ್ಷಣೀಯ ಕೇಂದ್ರಗಳನ್ನಾಗಿಸಬೇಕು ಎಂದು ಸಚಿವ ಸೋಮಣ್ಣ ತಿಳಿಸಿದರು.

ಕೊಳ್ಳೇಗಾಲ (ಡಿ.04): ಚಿಕ್ಕರಂಗನಾಥ ಕೆರೆ, ಕೊಂಗಳ ಕೆರೆ, ಮುಡಿಗುಂಡ ಕೆರೆ ಅಭಿವೃದ್ಧಿಗೆ ಮುಖ್ಯಮಂತ್ರಿಯವರ ವಿಶೇಷ ಅನುದಾನದಡಿ 10 ಕೋಟಿ ರು. ಬಿಡುಗಡೆಯಾಗಿದೆ. ಕೆರೆಗಳ ಅಭಿವೃದ್ಧಿಯನ್ನು ಉತ್ತಮವಾಗಿ ನಿರ್ವಹಿಸಿ ನಗರದ ಆಕರ್ಷಣೀಯ ಕೇಂದ್ರಗಳನ್ನಾಗಿಸಬೇಕು ಎಂದು ಸಚಿವ ಸೋಮಣ್ಣ ತಿಳಿಸಿದರು. ಕೊಳ್ಳೇಗಾಲದ ಚಿಕ್ಕರಂಗನಾಥ ಕೆರೆ ಬಳಿ ಮೂರು ಕೆರೆಗಳ ಅಭಿವೃದ್ಧಿ ಕಾಮಗಾರಿಗೆ ಸಾಂಕೇತಿಕ ಭೂಮಿ ಪೂಜೆ ಸಲ್ಲಿಸುವ ಮೂಲಕ ಕಾಮಗಾರಿಗೆ ಚಾಲನೆ ನೀಡಿದರು. 

ಮುಖ್ಯಮಂತ್ರಿ 12ರಂದು ಹನೂರಿನಲ್ಲಿ ಅಭಿವೃದ್ಧಿ ಕಾಮಗಾರಿ ಉದ್ಘಾಟನೆ, ಶಂಕುಸ್ಥಾಪನೆ ನೆರವೇರಿಸುವ ವೇಳೆ ಅಧಿಕೃತವಾಗಿ ಈ ಎಲ್ಲಾ ಮೂರು ಕೆರೆಗಳ ಅಭಿವೃದ್ಧಿಗೆ ಚಾಲನೆ ನೀಡಲಿದ್ದಾರೆ. ಪುರಾತನ ಕೆರೆಗಳ ಸಂರಕ್ಷಿಸುವಲ್ಲಿ ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ 10 ಕೋಟಿ ರು.ವೆಚ್ಚ ಮಾಡಲಾಗುತ್ತದೆ ಎಂದರು. ಜನರಿಗೆ ಅನುಕೂಲವಾಗಲೆಂದು ನಿರ್ಮಿಸಲಾದ ಕೆರೆಗಳಿಂದ ಉತ್ತಮ, ನೈರ್ಮಲ್ಯ, ಗಾಳಿ ಬರಲಿ ಎಂಬುದು ಆಶಯವಾಗಿತ್ತು. ಆದರೆ, ಇಂದು ಕಲುಷಿತ ನೀರು ಕೆರೆಗಳಿಗೆ ಸೇರಿ ದುರ್ವಾಸನೆ ಬೀರುತ್ತಿದೆ. ಇದನ್ನು ತಪ್ಪಿಸಿ ನೈರ್ಮಲ್ಯವನ್ನೇ ಉಳಿಸಿ ಉತ್ತಮವಾಗಿ ಪೋಷಣೆ ಮಾಡುವ ಉದ್ದೇಶದಿಂದ ಕೆರೆಗಳ ಅಭಿವೃದ್ಧಿಗೆ ಅನುದಾನ ನೀಡಲಾಗಿದೆ ಎಂದರು. 

Chamarajanagar: ಚರ್ಮಗಂಟು ರೋಗಕ್ಕೆ 26 ಜಾನುವಾರು ಬಲಿ

ಕಲುಷಿತ ನೀರನ್ನು ಹೊರ ಬಿಟ್ಟು ಮತ್ತೆ ಹೊಸದಾಗಿ ನೀರು ತುಂಬಿಸಬೇಕು. ಇನ್ನೂ ಹಣ ಹೆಚ್ಚಾದರೂ ಪರವಾಗಿಲ್ಲ, ಕೆರೆಗಳು ಅಚ್ಚುಕಟಾಗಿ ಅಬಿವೃದ್ದಿಯಾಗಬೇಕು. ಪ್ರಕೃತಿ ಸಂಪತ್ತನ್ನು ಉಳಿಸಿಕೊಂಡು ಜನರ ಆಕರ್ಷಣೀಯ ಕೇಂದ್ರಗಳನ್ನಾಗಿಸಬೇಕೆಂದು ಸಚಿವರು ತಿಳಿಸಿದರು. ಕೊಳ್ಳೇಗಾಲದ ಮುರುಳೇಶ್ವರ ದೇವಸ್ಥಾನದ ಜೀರ್ಣೋದ್ದಾರಕ್ಕಾಗಿ ಮುಖ್ಯಮಂತ್ರಿ ವಿಶೇಷ ಅನುದಾನದಡಿ 1.5 ಕೋಟಿ ರೂ. ಬಿಡುಗಡೆಯಾಗಿದ್ದು, ಕಾಮಗಾರಿಗೆ ಪೂಜೆ ನೆರವೇರಿಸಲಾಗಿದೆ ಎಂದು ಸಚಿವರು ತಿಳಿಸಿದರು. ಇಲ್ಲಿನ ಜಗಜೀವನ್‌ ರಾಮ್‌ ಭವನ ನಿರ್ಮಾಣಕ್ಕೂ 12ಲಕ್ಷ ರು. ಕೊಟ್ಟಿದ್ದೇವೆ. 

ಈ ಭವನದ ನಿರ್ಮಾಣ ಕಾರ್ಯ ಹಮ್ಮಿಕೊಳ್ಳಬೇಕೆಂದು ಸೋಮಣ್ಣ ತಿಳಿಸಿದರು. ಶಾಸಕ ಮಹೇಶ್‌, ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ ಕೆರೆಗಳ ಪುನರುಜ್ಜೀವನಕ್ಕೆ 10 ಕೋಟಿ ರೂ. ಹಾಗೂ ಮುರುಳೇಶ್ವರ ದೇವಾಲಯ ಜೀರ್ಣೋದ್ದಾರಕ್ಕೆ 1.5 ಕೋಟಿ ರೂ. ಬಿಡುಗಡೆಯಾಗಿದ್ದು, ಇದಕ್ಕಾಗಿ ಮುಖ್ಯಮಂತ್ರಿಯವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ತಾವು ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು. ಚಿಕ್ಕರಂಗನಾಥ ಕೆರೆ ವಿಸ್ತಾರವಾಗಿದ್ದು, ಆಟದ ಮೈದಾನ, ದ್ವೀಪ ಮಾದರಿಯಾಗಿಸುವುದರಿಂದ ಜನರ ಆಕರ್ಷಣೀಯ ತಾಣಗಳಲ್ಲಿ ಒಂದಾಗಿಸಬಹುದು ಎಂದರು. 

Chamarajanagar: ಮುಖ್ಯಮಂತ್ರಿಗಳ ಜಿಲ್ಲಾ ಭೇಟಿ ಹಿನ್ನೆಲೆ ಪೂರ್ವ ಸಿದ್ದತಾ ಸಭೆ

ನಗರಸಭೆ ಅಧ್ಯಕ್ಷೆ ರೇಖಾ, ಉಪಾಧ್ಯಕ್ಷೆ ಸುಶೀಲ, ಸದಸ್ಯರಾದ ನಾಸಿರ್‌ ಷರೀಫ್‌, ನಾಗಸುಂದ್ರಮ್ಮ, ಪವಿತ್ರ, ಮಾನಸ, ಸ್ಥಾಯಿ ಸಮಿತಿ ಅಧ್ಯಕ್ಷ ಶಂಕರನಾರಾಯಣ ಗುಪ್ತ, ನಾಮ ನಿರ್ದೇಶಿತ ಸದಸ್ಯರಾದ ಸೋಮಣ್ಣ, ಉಪವಿಭಾಗಾಧಿಕಾರಿ ಗೀತಾ ಹುಡೇದ, ತಹಶೀಲ್ದಾರ್‌ ಮಂಜುಳಾ, ಪೌರಾಯುಕ್ತ ನಂಜುಂಡಸ್ವಾಮಿ, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಇದಕ್ಕೂ ಮೊದಲು ಕೊಳ್ಳೇಗಾಲದಲ್ಲಿ ಅಂಬೇಡ್ಕರ್‌ ಪುತ್ಥಳಿಗೆ ಜಿಲ್ಲಾ ಉಸ್ತುವಾರಿ ಸಚಿವರು ಮಾಲಾರ್ಪಣೆ ಮಾಡಿದರು. ಶಾಸಕ ಎನ್‌. ಮಹೇಶ್‌ ಇತರರು ಇದ್ದರು.

click me!