'ಬಿಜೆಪಿಗರು ಸತ್ತರೆ ಕಾಂಗ್ರೆಸ್ಸಿಂದ 1 ಕೋಟಿ ಪರಿಹಾರ'

By Kannadaprabha NewsFirst Published Oct 7, 2021, 7:16 AM IST
Highlights
  • ಬಿಜೆಪಿ ಮುಖಂಡರು ಯಾರಾದರೂ ಸತ್ತರೆ ಅವರಿಗೆ ಕಾಂಗ್ರೆಸ್‌ನಿಂದ 1 ಕೋಟಿ ರು. ಪರಿಹಾರ 
  • ಶಾಸಕ ಅಮರೇಗೌಡ ಪಾಟೀಲ್‌ ಬಯ್ಯಾಪುರ ಹೇಳಿಕೆ ನೀಡಿದ್ದು, ವಿವಾದ ಸೃಷ್ಟಿಸಿದೆ

ಕುಷ್ಟಗಿ (ಅ.07): ಬಿಜೆಪಿ (BJP) ಮುಖಂಡರು ಯಾರಾದರೂ ಸತ್ತರೆ ಅವರಿಗೆ ಕಾಂಗ್ರೆಸ್‌ನಿಂದ 1 ಕೋಟಿ ರು. ಪರಿಹಾರ ನೀಡುವುದಾಗಿ ಶಾಸಕ ಅಮರೇಗೌಡ ಪಾಟೀಲ್‌ (Amaregowda patil) ಬಯ್ಯಾಪುರ ಹೇಳಿಕೆ ನೀಡಿದ್ದು, ವಿವಾದ ಸೃಷ್ಟಿಸಿದೆ. ಅಲ್ಲದೆ ಅವರಾಡಿದ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಉತ್ತರ ಪ್ರದೇಶ (uttara pradesh) ರೈತರ ಹತ್ಯೆ ಖಂಡಿಸಿ ಮಂಗಳವಾರ ರಾತ್ರಿ ಕಾಂಗ್ರೆಸ್‌ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು. ಯುಪಿ ಸರ್ಕಾರ (UP govt)ಮೃತ ರೈತರಿಗೆ ಕೇವಲ .45 ಲಕ್ಷ ಪರಿಹಾರ ನೀಡಿದೆ. ಬಿಜೆಪಿಯ ಮುಖಂಡರು ಯಾರಾದ್ರೂ ಸತ್ತರೆ ನಾವು .1 ಕೋಟಿ ಪರಿಹಾರ ಕೊಡ್ತೀವಿ ಎಂದರು.

'ಬಿಜೆಪಿಗರು ಹಿಂದೂ ಎಂಬ ಡ್ರೆಸ್ ಕೋಡ್ ಹಾಕೊಂಡು ಜನರ ದಾರಿ ತಪ್ಪಿಸ್ತಿದ್ದಾರೆ'

ತಿರುಗೇಟು: ಬಯ್ಯಾಪುರ ಅವರು ದುಡ್ಡಿನ ಮದದಿಂದ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಕೊಪ್ಪಳ ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡನಗೌಡ ಪಾಟೀಲ ಕಿಡಿಕಾರಿದರು.

ಬಯ್ಯಾಪುರ ಮನಬಂದಂತೆ ಮಾತನಾಡುವುದನ್ನು ನಿಲ್ಲಿಸಲಿ

ಬಿಜೆಪಿ ಮುಖಂಡರು ಯಾರೇ ಸತ್ತರೂ ಕಾಂಗ್ರೆಸ್‌ನಿಂದ .1 ಕೋಟಿ ನೀಡಲಾಗುವುದು ಎಂದು ಕಾಂಗ್ರೆಸ್‌ ಶಾಸಕ ಅಮರೇಗೌಡ ಪಾಟೀಲ್‌ ಬಯ್ಯಾಪುರ ಹೇಳಿಕೆ ಖಂಡನೀಯವಾಗಿದ್ದು, ಶಾಸಕರು ಮನಬಂದಂತೆ ಮಾತನಾಡುವುದನ್ನು ನಿಲ್ಲಿಸಬೇಕು ಎಂದು ಬಿಜೆಪಿ (BJP) ತಾಲೂಕು ಅಧ್ಯಕ್ಷ ಬಸವರಾಜ ಹಳ್ಳೂರು ಗುಡುಗಿದರು.

ಗ್ರಾಮದ ಎಪಿಎಂಸಿ (APMC) ಆವರಣದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಉತ್ತರ ಪ್ರದೇಶದಲ್ಲಿ ಕಾರು ಹರಿದು ರೈತರು ಸಾವನ್ನಪ್ಪಿರುವುದನ್ನು ಖಂಡಿಸಿ ಕುಷ್ಟಗಿ ಬಸವೇಶ್ವರ ವೃತ್ತದಲ್ಲಿ ಕಾಂಗ್ರೆಸ್‌ ಪಕ್ಷದ ಪಂಜಿನ ಮೆರವಣಿಗೆ ಸಂದರ್ಭದಲ್ಲಿ ಶಾಸಕರು ಮಾತಿನ ಬರದಲ್ಲಿ ಬಿಜೆಪಿ ಮುಖಂಡರು ಯಾರೇ ಸತ್ತರೂ ಕಾಂಗ್ರೆಸ್‌ನಿಂದ .1 ಕೋಟಿ ನೀಡಲಾಗುವುದು ಎಂದು ಹೇಳಿಕೆ ನೀಡಿದ್ದಾರೆ. ಇದು ಸರಿಯಲ್ಲ. ಮನಃ ಬಂದಂತೆ ಮಾತನಾಡುವುದನ್ನು ಶಾಸಕರು ನಿಲ್ಲಿಸಬೇಕು.

ಉತ್ತರ ಪ್ರದೇಶದ ಲಖಿಪುರ ಖೆರಿಯಲ್ಲಿ ನಡೆದದ್ದು ರೈತರ ಕೊಲೆಯಲ್ಲ ಅದು ಒಂದು ಅವಘಡ, ಅಪಘಾತ ಅದು ಕೊಲೆ ಎಂದು ತಿರುಚಿ ಮಾತನಾಡುತ್ತಿರುವುದು ಸರಿಯಲ್ಲ. ಅಪಘಾತಗಳು ಸಂಭವಿಸುವುದು ಸಹಜ. ಅದಕ್ಕೆ ರಾಜಕೀಯ ಬಣ್ಣ ಬಳಿಯುವ ಕಾರ್ಯವನ್ನು ಕಾಂಗ್ರೆಸ್‌ ಮಾಡುತ್ತಿದೆ. ಹಿರಿಯ ರಾಜಕಾರಣಿಗಳಾದ ಬಯ್ಯಾಪುರ ಅವರು ಏನು ಮಾತನಾಡುತ್ತಿದ್ದೇನೆ ಎಂದು ಯೋಚಿಸಿ ಮಾತನಾಡಬೇಕು. ಬಿಜೆಪಿ ನಾಯಕರು ಸತ್ತರೆ ಕಾಂಗ್ರೆಸ್‌ನಿಂದ ಕೋಟಿ ಕೊಡುತ್ತೇವೆ ಎಂಬ ಹೇಳಿಕೆಯನ್ನು ಶಾಸಕರು ಕೂಡಲೇ ಹಿಂಪಡೆಯಬೇಕು. ಬಹಿರಂಗವಾಗಿ ಕ್ಷಮೆಯಾಚಿಸಬೇಕು ಇಲ್ಲದಿದ್ದರೆ ಮುಂದಾಗುವ ಪರಿಣಾಮವನ್ನು ಶಾಸಕರು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಎಪಿಎಂಸಿ ಅಧ್ಯಕ್ಷ ಹನುಮಂತಪ್ಪ ಬಿಂಗಿ, ಬಿಜೆಪಿ ಮುಖಂಡರಾದ ಬಸವರಾಜ ಬಾಚಲಾಪುರ, ರುದ್ರಗೌಡ ಗೌಡಪ್ಪನವರ, ರಮೇಶ ಬಡಿಗೇರ, ಚಂದ್ರು ಬೆಳಗಲ್‌, ಮರಿಗೌಡ ಬೋದುರು ಇತರರಿದ್ದರು.

click me!