ಬಿಜೆಪಿಯೊಂದಿಗೆ ಜೆಡಿಎಸ್‌ ಒಳ ಒಪ್ಪಂದ: ಜಮೀರ್‌ ಆರೋಪ

First Published Apr 22, 2018, 8:34 AM IST
Highlights

ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರೊಂದಿಗೆ ನಾನು ದಿನವೆಲ್ಲ ಇರುತ್ತಿದ್ದೆ. ಆದರೂ, ನನಗೆ ಅವರು ಪ್ಯಾಂಟ್‌ ಒಳಗೆ ಖಾಕಿ ಚಡ್ಡಿ ಹಾಕಿದ್ದಾರೆ ಎಂಬುದನ್ನು ನೋಡಲು ಸಾಧ್ಯವಾಗಿರಲಿಲ್ಲ. ಆದರೆ, ಈಗದು ನಿಜವಾಗಿದ್ದು, ಹಾಗಾಗಿ, ಬಿಜೆಪಿಯೊಂದಿಗೆ ಒಳಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಶಾಸಕ ಜಮೀರ್‌ ಅಹಮ್ಮದ್‌ ಲೇವಡಿ ಮಾಡಿದರು.

ಮಳವಳ್ಳಿ : ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರೊಂದಿಗೆ ನಾನು ದಿನವೆಲ್ಲ ಇರುತ್ತಿದ್ದೆ. ಆದರೂ, ನನಗೆ ಅವರು ಪ್ಯಾಂಟ್‌ ಒಳಗೆ ಖಾಕಿ ಚಡ್ಡಿ ಹಾಕಿದ್ದಾರೆ ಎಂಬುದನ್ನು ನೋಡಲು ಸಾಧ್ಯವಾಗಿರಲಿಲ್ಲ. ಆದರೆ, ಈಗದು ನಿಜವಾಗಿದ್ದು, ಹಾಗಾಗಿ, ಬಿಜೆಪಿಯೊಂದಿಗೆ ಒಳಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಶಾಸಕ ಜಮೀರ್‌ ಅಹಮ್ಮದ್‌ ಲೇವಡಿ ಮಾಡಿದರು.

ಮಂಡ್ಯ ಜಿಲ್ಲೆ ಮಳವಳ್ಳಿಯಲ್ಲಿ ಶನಿವಾರ ಕಾಂಗ್ರೆಸ್‌ ಅಭ್ಯರ್ಥಿ ಪಿ.ಎಂ.ನರೇಂದ್ರಸ್ವಾಮಿ ಅವರ ಪರ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿ, ಕುಮಾರಸ್ವಾಮಿ ಅವರು ಏನು ಮಾಡುತ್ತಾರೋ ಎಲ್ಲವನ್ನೂ ನಾನು ನೋಡಿದ್ದೇನೆ. ನಾನು ನಿತ್ಯ 16 ತಾಸು ಅವರೊಂದಿಗೆ ಇರುತ್ತಿದ್ದೆ.

ಅವರ ಎಲ್ಲ ವಿದ್ಯೆಗಳು ನನಗೆ ಗೊತ್ತು. ಆದರೆ, ಅವರ ಪ್ಯಾಂಟ್‌ ಒಳಗಿನ ಖಾಕಿ ಚಡ್ಡಿ ಒಂದನ್ನು ಮಾತ್ರ ನೋಡಲು ಸಾಧ್ಯವಾಗಲಿಲ್ಲ. ಆದರೆ, ಈಗ ಬಿಜೆಪಿಯೊಂದಿಗೆ ಒಳಒಪ್ಪಂದ ಮಾಡಿಕೊಂಡಿದ್ದಾರೆ. ದೇವೇಗೌಡರಿಗೆ ಜಾತ್ಯಾತೀತ ಮನೋಭಾವ ಇದ್ದರೂ, ಕುಮಾರಸ್ವಾಮಿ ಅವರಿಗೆ ಆ ಮನೋಭಾವ ಇಲ್ಲ. ಅವರಿಗೆ ಜೆಡಿಎಸ್‌ ಎಂದರೆ ‘ಜನತಾದಳ-ಸಂಘ ಪರಿವಾರ’ ಎಂಬಂತಾಗಿದೆ ಎಂದು ಕಿಡಿಕಾರಿದರು.

ಮುಸ್ಲಿಮರನ್ನು ಹಣ ಕೊಟ್ಟು ಖರೀದಿಸಬಹುದು ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಹಾಗಾದರೆ, ನೀವು ಮಾರಾಟಕ್ಕೀದ್ದೀರಾ ಎಂದು ಜನರನ್ನು ಪ್ರಶ್ನಿಸಿದ ಅವರು, ಯಾವುದೇ ಕಾರಣಕ್ಕೂ ಜೆಡಿಎಸ್‌ ಹಣದ ವ್ಯಾಮೋಹಕ್ಕೆ ಬಲಿಯಾಗಬೇಡಿ. ಹಣ ಕೊಟ್ಟು ಖರೀದಿಸುವ ಮಾತನಾಡಿರುವ ಜೆಡಿಎಸ್‌ ನಾಯಕರಿಗೆ ತಕ್ಕ ಪಾಠ ಕಲಿಸಿ. ಇನ್ನು ಬಿಜೆಪಿ ಕೋಮುವಾದದಿಂದ ಗಲಭೆಗಳನ್ನು ಸೃಷ್ಟಿಸುತ್ತಿದೆ. ಸಿಎಂ ಸಿದ್ದರಾಮಯ್ಯ ಅವರು ಮುಸ್ಲಿಂರಿಗೆ ಎಲ್ಲ ಸೌಲಭ್ಯ ಕೊಟ್ಟಿದ್ದಾರೆ. ಅವರ ಕೈ ಬಲಪಡಿಸಲು ಈ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಸಬೇಕು ಎಂದರು.

click me!