ರೆಡ್ಡಿ ಆಪರೇಷನ್ ನಿಂದ ಬಿಜೆಪಿಗೆ ಹಿನ್ನಡೆ..?

First Published May 20, 2018, 8:53 AM IST
Highlights

ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ಶಾಸಕರನ್ನು ಸೆಳೆಯುವ ಬಿಜೆಪಿಯ ತಂತ್ರ ವಿಫಲ ವಾಗಿರುವುದಕ್ಕೆ ಮಾಜಿ ಸಚಿವ ಗಾಲಿ ಜನಾರ್ದ ನರೆಡ್ಡಿ ಪಾಳೆಯವನ್ನು ಮುಂದೆ ಬಿಟ್ಟಿದ್ದೇ ಕಾರಣ ಎಂಬ ಸುದ್ದಿಯೊಂದು ಇದೀಗ ರಾಜ್ಯ ರಾಜಕಾರಣದಲ್ಲಿ ಬಲವಾಗಿ ಕೇಳಿಬರುತ್ತಿದೆ. 

ಬೆಂಗಳೂರು(ಮೇ 20)  : ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ಶಾಸಕರನ್ನು ಸೆಳೆಯುವ ಬಿಜೆಪಿಯ ತಂತ್ರ ವಿಫಲ ವಾಗಿರುವುದಕ್ಕೆ ಮಾಜಿ ಸಚಿವ ಗಾಲಿ ಜನಾರ್ದ ನರೆಡ್ಡಿ ಪಾಳೆಯವನ್ನು ಮುಂದೆ ಬಿಟ್ಟಿದ್ದೇ ಕಾರಣ ಎಂಬ ಸುದ್ದಿಯೊಂದು ಇದೀಗ ರಾಜ್ಯ ರಾಜಕಾರಣದಲ್ಲಿ ಬಲವಾಗಿ ಕೇಳಿಬರುತ್ತಿದೆ. 

ಒಂದು ವೇಳೆ ರೆಡ್ಡಿ ಪಾಳೆಯದ ಬದಲು ಬೇರೆಯವರನ್ನು ಮುಂದೆ ಬಿಟ್ಟಿದ್ದರೆ ಕಾಂಗ್ರೆಸ್ ಮತ್ತು ಜೆಡಿಎಸ್‌ನ ಹಲವು ಶಾಸಕರು ಬಿಜೆಪಿ ಯತ್ತ ಹೆಜ್ಜೆ ಹಾಕುವ ಸಾಧ್ಯತೆಯಿತ್ತು ಎಂಬ ಮಾಹಿತಿ ಹೊರಬಿದ್ದಿದೆ. ಹಿಂದೆ 2008 ರ ಚುನಾವಣೆಯಲ್ಲಿ ಬಿಜೆಪಿ 110 ಸ್ಥಾನಗಳನ್ನು ಗಳಿಸಿತ್ತು. ಬಹುಮತಕ್ಕೆ ಮೂರು ಶಾಸಕರ ಕೊರತೆಯಿತ್ತು. ಆಗ ರಂಗ ಪ್ರವೇಶ ಮಾಡಿದ್ದ ರೆಡ್ಡಿ ಪಾಳೆಯ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಹಲವು ಶಾಸಕರನ್ನು ‘ಆಪರೇಷನ್ ಕಮಲ’ದ ಮೂಲಕ ಸೆಳೆಯುವಲ್ಲಿ ಯಶಸ್ವಿಯಾಗಿತ್ತು. 

ಆ ಪೈಕಿ ಕೆಲವರಿಗೆ ಮಂತ್ರಿ ಸ್ಥಾನವನ್ನೂ ಕೊಡಲಾಗಿತ್ತು. ಆದರೆ, ಹಣಕಾಸಿನ ನೆರವಿಗೆ ಸಂಬಂಧಿಸಿದಂತೆ ಆಗ ರೆಡ್ಡಿ ಪಾಳೆಯ ತಾನು ನೀಡಿದ್ದ ವಾಗ್ದಾನವನ್ನು ಪೂರ್ಣ ಪ್ರಮಾಣದಲ್ಲಿ ಈಡೇರಿಸಿರಲಿಲ್ಲ ಎಂಬ ಮಾತು ಕೇಳಿಬಂದಿದೆ. ಇದು ರಾಜಕೀಯ ವಲಯದಲ್ಲಿ ಬಲವಾಗಿಯೇ ಹಬ್ಬಿದ್ದರಿಂದ ಈಗ ಅದೇ ರೆಡ್ಡಿ ಪಾಳೆಯ ಮತ್ತೊಮ್ಮೆ ಆಪರೇಷನ್ ಕಮಲಕ್ಕೆ ಮುಂದಾಗಿದ್ದರಿಂದ ಬಹುತೇಕ ಶಾಸಕರು ಹಿಂಜರಿದರು. ದೊಡ್ಡ ಮೊತ್ತದ ಆಮಿಷ ಒಡ್ಡಲಾಗಿದೆ ಎನ್ನಲಾಗಿದ್ದರೂ ಅದನ್ನು ನೀಡುವ ಬಗ್ಗೆ ಶಾಸಕರಿಗೆ ಯಾವುದೇ ನಂಬಿಕೆ ಮೂಡಲಿಲ್ಲ.

ಹೀಗಾಗಿಯೇ ಅನೇಕ ಶಾಸಕರು ಬಿಜೆಪಿಗೆ ಬೆಂಬಲಿಸುವ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಲಿಲ್ಲ ಎನ್ನಲಾಗಿದೆ. ರೆಡ್ಡಿ ಪಾಳೆಯ ಕಾಂಗ್ರೆಸ್ ಮತ್ತು ಜೆಡಿಎಸ್‌ನ ಹಲವು ಶಾಸಕರನ್ನು ಸಂಪರ್ಕಿಸಿ ದೊಡ್ಡ ಪ್ರಮಾಣದ ಹಣಕಾಸಿನ ನೆರವಿನ ಆಮಿಷ ಒಡ್ಡಿದೆ ಎನ್ನಲಾದ ವಿಷಯ ಈಗ ಕೇಳಿಬರುತ್ತಿದೆ. ಅವರೇ ಮುಂಚೂಣಿಯಲ್ಲಿ ನಿಂತು ಶಾಸಕರಿಗೆ ಆಹ್ವಾನ ನೀಡಿದರು. ಆದರೆ, ಯಾರೊಬ್ಬರೂ ಅವರ ಮಾತಿಗೆ ಸ್ಪಂದಿಸಲಿಲ್ಲ ಎಂದು ಹೇಳಲಾಗುತ್ತಿದೆ.

click me!