Karnataka Assembly Election- 2018
ಅತಂತ್ರ ವಿಧಾನಸಭೆ ಸೃಷ್ಟಿ ಆದ ನಂತರ ಕರ್ನಾಟಕದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಕಾಂಗ್ರೆಸ್ ಹಾಗೂ ಜೆಡಿಎಸ್ನ ಹೋರಾಟ ಹೇಗಿರಬೇಕೆಂಬ ತಂತ್ರಗಾರಿಕೆ ರೂಪಿಸಿದ್ದು ಸ್ವತಃ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಪುತ್ರಿ ಪ್ರಿಯಾಂಕಾ ಎಂಬ ಸಂಗತಿ ಬೆಳಕಿಗೆ ಬಂದಿದೆ.
ನವದೆಹಲಿ: ಅತಂತ್ರ ವಿಧಾನಸಭೆ ಸೃಷ್ಟಿ ಆದ ನಂತರ ಕರ್ನಾಟಕದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಕಾಂಗ್ರೆಸ್ ಹಾಗೂ ಜೆಡಿಎಸ್ನ ಹೋರಾಟ ಹೇಗಿರಬೇಕೆಂಬ ತಂತ್ರಗಾರಿಕೆ ರೂಪಿಸಿದ್ದು ಸ್ವತಃ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಪುತ್ರಿ ಪ್ರಿಯಾಂಕಾ ಎಂಬ ಸಂಗತಿ ಬೆಳಕಿಗೆ ಬಂದಿದೆ. ಈ ವಿಷಯ ದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಅವರ ಪಾತ್ರ ವೇನು? ಅದು ಸ್ಪಷ್ಟವಾಗಿಲ್ಲ.
ಅನಾರೋಗ್ಯ, ವಯಸ್ಸು ಹಾಗೂ ಪುತ್ರನಿಗೆ ಎಐಸಿಸಿ ಅಧ್ಯಕ್ಷನ ಹುದ್ದೆ ನೀಡಿದ ಕಾರಣ ಸೋನಿಯಾ ಇತ್ತೀಚೆಗೆ ರಾಜಕೀಯದಿಂದ ದೂರವುಳಿದಿದ್ದರು.
ಪುತ್ರಿ ಪ್ರಿಯಾಂಕಾ ಬಹಿರಂಗ ರಾಜಕೀಯ ಚಟುವಟಿಕೆಗಳಲ್ಲಿ ಕಾಣಿಸಿ ಕೊಳ್ಳುವುದಿಲ್ಲ. ಆದರೆ, ಕರ್ನಾಟಕದ ವಿಧಾನಸಭೆ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬರುತ್ತಿದ್ದಂತೆ ಜೆಡಿಎಸ್ ಜೊತೆ ಶರವೇಗದಲ್ಲಿ ಮೈತ್ರಿ ಅಂತಿಮಗೊಳಿಸಿ ದ್ದರಿಂದ ಹಿಡಿದು ಕರ್ನಾಟಕದ ರಾಜಕೀಯ ಹಂಗಾಮವನ್ನು ರಾಷ್ಟ್ರಮಟ್ಟ ದ ವಿವಾದವನ್ನಾಗಿ ಪರಿವರ್ತಿ ಸಿದ್ದರವರೆಗೆ ಸೋನಿಯಾ, ಪ್ರಿಯಾಂಕಾರ ಕಾರ್ಯ ತಂತ್ರ ಕೆಲಸ ಮಾಡಿದೆ ಎನ್ನಲಾಗಿದೆ.
ಅತಂತ್ರ ವಿಧಾನಸಭೆ ಸೃಷ್ಟಿಯಾಗುವ ಸುಳಿವು ಸಿಗುತ್ತಿದ್ದಂತೆ ಸ್ವತಃ ಸೋನಿಯಾ ಜೆಡಿಎಸ್ ವರಿಷ್ಠ ದೇವೇಗೌಡರಿಗೆ ಫೋನ್ ಮಾಡಿ ಬೆಂಬಲ ನೀಡುವ ಪ್ರಸ್ತಾಪ ಮಾಡಿದ್ದರು. ಅದಕ್ಕೆ ದೇವೇಗೌಡರು ಒಪ್ಪಿ ದರು. ಕರ್ನಾಟಕದಲ್ಲಿ ಹೇಗಾದರೂ ಮಾಡಿ ಬಿಜೆಪಿಯನ್ನು ಅಧಿಕಾರ ದಿಂದ ದೂರವಿಡುವ ಏಕೈಕ ಅಜೆಂಡಾ ಇದರ ಹಿಂದಿತ್ತು.
ಅದಕ್ಕಾಗಿ ಈ ಅವಕಾಶವನ್ನು ಪಕ್ಷ ಬಾಚಿ ಕೊಂಡಿತು ಎನ್ನಲಾಗಿದೆ. ಅದಕ್ಕೂ ಮೊದಲು ಹಾಗೂ ನಂತರ ಸೋನಿಯಾ ಜೊತೆಗೆ ಮತ್ತು ಕಾಂಗ್ರೆಸ್ನ ಉನ್ನತ ನಾಯಕರ ಜೊತೆಗೆ ಪಶ್ಚಿಮ ಬಂಗಾಳದ ಸಿಎಂ ಮಮತಾ , ಯುಪಿ ಮಾಜಿ ಸಿಎಂ ಮಾಯಾವತಿ ಕೂಡ ಸಂಪರ್ಕ ದಲ್ಲಿದ್ದುಕೊಂಡು ರಾಜಕೀಯ ತಂತ್ರಗಾರಿ ಕೆಯನ್ನು ರೂಪಿಸಿದರು.
ಹೀಗಾಗಿ ಇದು ರಾಷ್ಟ್ರಮಟ್ಟಕ್ಕೆ ವಿಸ್ತರಿಸಿತು ಎನ್ನಲಾಗಿದೆ. ಸುಪ್ರೀಂಕೋರ್ಟ್ ವಿಚಾರಣೆಗೂ ಮುನ್ನ ಪಕ್ಷದ ಪರವಾಗಿ ಸುಪ್ರೀಂಕೋರ್ಟ್ ನಲ್ಲಿ ಹೇಗೆ ವಾದ ಮಂಡಿಸಬೇಕು ಎಂಬ ಬಗ್ಗೆಯೂ ಸೋನಿಯಾ, ಪ್ರಿಯಾಂಕ ಹಾಗೂ ಇತರ ಉನ್ನತ ನಾಯಕರ ಜೊತೆ ಅಭಿಷೇಕ್ ಮನು ಸಿಂಘ್ವಿ ಚರ್ಚಿಸಿದ್ದರು. ಸಿಂಘ್ವಿ ಅವರಿಗೆ ಇತರ ಕಾಂಗ್ರೆಸ್ ನಾಯಕರೂ ವಕೀಲರೂ ಆದ ಕಪಿಲ್ ಸಿಬಲ್, ಪಿ.ಚಿದಂಬರಂ, ವಿವೇಕ್
ತಂಖಾ ಅವರು ಅಗತ್ಯ ಮಾಹಿತಿ ಒದಗಿಸುತ್ತಿದ್ದರು ಎಂದು ತಿಳಿದುಬಂದಿದೆ.