ಕಾಂಗ್ರೆಸ್ - ಬಿಜೆಪಿ ನಡುವೆ ದಳ ಸಪ್ಪಳ

First Published Apr 29, 2018, 12:24 PM IST
Highlights

ಬಿಸಿಲು ನಾಡು ಕೊಪ್ಪಳ ಜಿಲ್ಲೆಯಲ್ಲಿ ರಣಕಣ ರಂಗೇರುತ್ತಿದೆ. ಬಿಸಿಲಿನ ತಾಪದ ಜತೆಗೆ ಚುನಾವಣೆಯ ಜ್ವರವೂ ಏರಿಕೆಯಾಗುತ್ತಿದೆ. ಜಿಲ್ಲಾದ್ಯಂತ ಕಾಂಗ್ರೆಸ್- ಬಿಜೆಪಿ ಆರ್ಭಟಿಸುತ್ತಿದ್ದರೆ, ಜೆಡಿಎಸ್ ತನ್ನ ಬಾವುಟ ಹಾರಿಸಲು ಹವಣಿಸುತ್ತಿದೆ. ಇನ್ನು ಇಲ್ಲಿ ಬಂಡಾಯದ ಬಿಸಿಯೂ ಇಲ್ಲ ಮತ್ತು ಪಕ್ಷೇತರ ಅಭ್ಯರ್ಥಿಗಳ ಸಪ್ಪಳವೂ ಇಲ್ಲ.

ಕೊಪ್ಪಳ : ಬಿಸಿಲು ನಾಡು ಕೊಪ್ಪಳ ಜಿಲ್ಲೆಯಲ್ಲಿ ರಣಕಣ ರಂಗೇರುತ್ತಿದೆ. ಬಿಸಿಲಿನ ತಾಪದ ಜತೆಗೆ ಚುನಾವಣೆಯ ಜ್ವರವೂ ಏರಿಕೆಯಾಗುತ್ತಿದೆ. ಜಿಲ್ಲಾದ್ಯಂತ ಕಾಂಗ್ರೆಸ್- ಬಿಜೆಪಿ ಆರ್ಭಟಿಸುತ್ತಿದ್ದರೆ, ಜೆಡಿಎಸ್ ತನ್ನ ಬಾವುಟ ಹಾರಿಸಲು ಹವಣಿಸುತ್ತಿದೆ. ಇನ್ನು ಇಲ್ಲಿ ಬಂಡಾಯದ ಬಿಸಿಯೂ ಇಲ್ಲ ಮತ್ತು ಪಕ್ಷೇತರ ಅಭ್ಯರ್ಥಿಗಳ ಸಪ್ಪಳವೂ ಇಲ್ಲ.

ಸೋಮರೆಡ್ಡಿ ಅಳವಂಡಿ 

ಕನಕಗಿರಿ : ಮಾಜಿ ಸಚಿವ ಶಿವರಾಜ ತಂಗಡಗಿ ಕಾಂಗ್ರೆಸ್‌ನಿಂದ, ಬಿಜೆಪಿಯಿಂದ ಯಡಿಯೂರಪ್ಪ ಅವರ ಪರಮ ಶಿಷ್ಯ ಬಸವರಾಜ ದಡೆಸ್ಗೂರು ಅಭ್ಯರ್ಥಿಗಳು. ಇನ್ನು ಜೆಡಿಎಸ್‌ನಿಂದ ಮಂಜುಳಾ ಡಿ. ರವಿ ಅಖಾಡದಲ್ಲಿದ್ದಾರೆ. ಬಿಜೆಪಿ ಮತ್ತು ಗ್ರೆಸ್ ನಡುವೆಯೇ ಜಿದ್ದಾಜಿದ್ದಿ ಕಂಡುಬರುತ್ತಿದೆ. ಕಳೆದ ಬಾರಿ ಬಿಜೆಪಿ ಮೂರು ಹೋಳಾಗಿದ್ದರಿಂದ ತಂಗಡಗಿ ಅವರು ಜಯ ಸಾಧಿಸಿದ್ದರು. ಆದರೆ, ಈ ಬಾರಿ ಕೆಜೆಪಿ, ಬಿಜೆಪಿ ಮತ್ತು ಬಿಎಸ್‌ಆರ್ ಒಂದಾಗಿವೆ. ಈ ಲೆಕ್ಕಾಚಾರವನ್ನು ತಲೆಕೆಳಗೆ ಮಾಡಬೇಕು ಎಂದು ಬಿಎಸ್‌ಆರ್ ಅಭ್ಯರ್ಥಿ ಯಾಗಿದ್ದ ಮುಕುಂದರಾವ್ ಭವಾನಿಮಠ ಅವರನ್ನು ತಂಗಡಗಿ ಸೆಳೆದಿದ್ದಾರೆ. ಮೀಸಲು ಕ್ಷೇತ್ರವಾಗಿದ್ದರೂ ಇಲ್ಲಿಯ ಫಲಿತಾಂಶ ಮಾತ್ರ ಲಿಂಗಾಯತ ಸಮುದಾಯದವರ ಮೇಲೆ ನಿಂತಿದೆ.

ಕೊಪ್ಪಳ : ಕಳೆದ 25 ವರ್ಷಗಳಿಂದ ಹಿಟ್ನಾಳ ಮತ್ತು ಕರಡಿ ಕುಟುಂಬಗಳ ನಡುವೆಯೇ ಫೈಟ್. ಅಪ್ಪಂದಿರ ಕದನ ಮುಗಿದಿದ್ದು, ಈಗ ಮಕ್ಕಳ ನಡುವೆ ಪ್ರಾರಂಭವಾಗಿದೆ. ಕೆ. ಬಸವರಾಜ ಹಿಟ್ನಾಳ ಮತ್ತು ಸಂಸದ ಸಂಗಣ್ಣ ಕರಡಿ ನಡುವಿನ  ಹೋರಾಟದ ನಂತರ ಈಗ ಅನು ಕ್ರಮವಾಗಿ ಅವರ ಪುತ್ರರಾದ ರಾಘವೇಂದ್ರ ಹಿಟ್ನಾಳ ಮತ್ತು ಅಮರೇಶ ಕರಡಿ ಅವರ ನಡುವೆ ಪ್ರಥಮ ಹೋರಾಟ ಶುರುವಾಗಿದೆ. ಜೆಡಿಎಸ್ ಅಭ್ಯರ್ಥಿ ಕೆ.ಎಂ. ಸಯ್ಯದ್ ಮತ್ತೆ ಅದೃಷ್ಟ ಪರೀಕ್ಷೆಗೆ  ದಾಗಿದ್ದಾರೆ. ಅಪ್ಪನ ಸೋಲಿನ ಸೇಡನ್ನು ಕಳೆದ ಬಾರಿ ರಾಘವೇಂದ್ರ ಹಿಟ್ನಾಳ ತೀರಿಸಿಕೊಂಡು ಶಾಸಕರಾಗಿದ್ದರು. ಈ ಬಾರಿ ತಮ್ಮ ಅಪ್ಪನ ಸೋಲಿನ ಸೇಡನ್ನು ತೀರಿಸಿಕೊಳ್ಳಲು ಅಮರೇಶ ಕರಡಿ ಅಖಾಡಕ್ಕೆ ಇಳಿದಿದ್ದಾರೆ. ಬಿಜೆಪಿಯಲ್ಲಿನ  ಟಿಕೆಟ್ ಹಂಚಿಕೆ ಗೊಂದಲ ಕಾಂಗ್ರೆಸ್‌ಗೆ ಪ್ಲಸ್. ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಗುದ್ದಾಟವಿದ್ದರೂ ಜೆಡಿಎಸ್ ಪಕ್ಷವನ್ನು ಅಲ್ಲಗಳೆಯುವಂತೆ ಇಲ್ಲ. ಆ ಪಕ್ಷ ಎಷ್ಟು ಮತಗಳನ್ನು ಪಡೆಯುತ್ತಾರೆ ಎನ್ನುವುದು ಫಲಿತಾಂಶದ ಮೇಲೆ ಪರಿಣಾಮ ಬೀರುತ್ತದೆ.

ಯಲಬುರ್ಗಾ : ಉನ್ನತ ಶಿಕ್ಷಣ ಸಚಿವ ಬಸವರಾಜ  ರಾಯರಡ್ಡಿ ಅವರು ಹ್ಯಾಟ್ರಿಕ್ ಬಾರಿಸುವ ತವಕದಲ್ಲಿದ್ದರೆ, ಈ ಬಾರಿಯಾದರೂ ಗೆದ್ದೇ ಗೆಲ್ಲಬೇಕು ಎನ್ನುವುದಕ್ಕಾಗಿ ಮಾಡು ಇಲ್ಲವೇ ಮಡಿ ಹೋರಾಟವನ್ನು ಬಿಜೆಪಿ ಅಭ್ಯರ್ಥಿ ಹಾಲಪ್ಪ  ಆಚಾರ್ ನಡೆಸಿದ್ದಾರೆ. ಇದರ ನಡುವೆ ಕಾಂಗ್ರೆಸ್‌ನಿಂದ ಸಿಡಿದು ಬಂದಿರುವ ವೀರನಗೌಡ ಪಾಟೀಲ ಅವರು ಜೆಡಿಎಸ್ ಅಭ್ಯರ್ಥಿಯಾಗಿದ್ದು, ತಮ್ಮ ಶಕ್ತಿಯನುಸಾರ ಶ್ರಮಿಸುತ್ತಿದ್ದಾರೆ. ರಾಯರಡ್ಡಿ ಅವರ ಗೆಲುವಿನ ನಾಗಾಲೋಟಕ್ಕೆ ವೀರನ ಗೌಡ ಅವರು ಅಡ್ಡಿಯಾಗುವ ಸಾಧ್ಯತೆ ಇದೆ. ಇವರು ಹೆಚ್ಚು ಹೆಚ್ಚು ಮತಗಳನ್ನು ತೆಗೆದು ಕೊಳ್ಳುವುದು ಬಿಜೆಪಿಗೆ ಪ್ಲಸ್ ಪಾಯಿಂಟ್ ಆಗುತ್ತದೆ. ಹೀಗಾಗಿ, ವೀರನಗೌಡ ಅವರನ್ನು ಕಟ್ಟಿ ಹಾಕುವುದರ ಮೇಲೆ ಕಾಂಗ್ರೆಸ್ ಗೆಲುವು ನಿರ್ಧಾರವಾಗುತ್ತದೆ. ಹಾಲಪ್ಪ ಆಚಾರ್ ಮತ್ತು ವೀರನಗೌಡ ಪಾಟೀಲ ಇವರಿಬ್ಬರೂ ರಾಯರಡ್ಡಿ ಗರಡಿಯಲ್ಲಿಯೇ ಪಳಗಿದವರು. ತಮ್ಮ ರಾಜಕೀಯ ಜೀವನವನ್ನು ರಾಯರಡ್ಡಿ ಬಳಿಯೇ ಪ್ರಾರಂಭಿಸಿದ ಅವರು ಈಗ ಗುರುವಿನ  ವಿರುದ್ಧವೇ ಹೋರಾಡುತ್ತಿದ್ದಾರೆ. 


ಕುಷ್ಟಗಿ : ಇಲ್ಲಿಯ ಮತದಾರರು ಯಾರನ್ನೂ ಸತತ ವಾಗಿ ಗೆಲ್ಲಿಸದೆ ಕಟ್ಟಿ ಹಾಕುತ್ತಾ ಬಂದಿದ್ದಾರೆ. 1952 ರಿಂದಲೂ ಇಲ್ಲಿಯವರೆಗೂ ಇದನ್ನು ಬಿಟ್ಟುಕೊಟ್ಟಿಲ್ಲ. ಇದುವೇ ಅರ್ಧ ಫಲಿತಾಂಶವನ್ನು ನಿರ್ಧರಿಸುತ್ತದೆ ಪ್ರತಿ ಬಾರಿ. ಮಾಜಿ ಸಚಿವ ಅಮರೇಗೌಡ ಬಯ್ಯಾಪುರ ಅವರು ಕಾಂಗ್ರೆಸ್ ಪಕ್ಷದಿಂದ ಕಣಕ್ಕೆ ಇಳಿದಿದ್ದರೆ ಬಿಜೆಪಿಯಿಂದ ಶಾಸಕ ದೊಡ್ಡನಗೌಡ ಪಾಟೀಲ ಅವರು ಸ್ಪರ್ಧಿಸಿದ್ದಾರೆ. ಜೆಡಿಎಸ್ ನಿಂದ ಎಚ್.ಸಿ. ನೀರಾವರಿ ಅಖಾಡಕ್ಕೆ ಇಳಿದಿದ್ದಾರೆ. ಈಗಿರುವ ಲೆಕ್ಕಚಾರದ  ಪ್ರಕಾರ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆಯೇ ನೇರ ಹಣಾಹಣಿ ಇದೆ. ಇಲ್ಲಿ ಈ ಬಾರಿ ಉಳಿದಂತೆ ಅಂತಹ ಪ್ರಭಾವ ಇರುವ ಪಕ್ಷೇತರರು ಯಾರು ಕಣದಲ್ಲಿ ಇಲ್ಲ. ಕಳೆದ ಬಾರಿಗೆ ಹೋಲಿಕೆ ಮಾಡಿದರೆ ಒಂದಿಷ್ಟು ನಾಯಕರು ಅತ್ತಿತ್ತಗಿದ್ದಾರೆ. ಈಗ ಚುನಾವಣೆ ಹಿನ್ನೆಲೆಯಲ್ಲಿ ಅಂಥ ಗಮನಾರ್ಹ ಪಕ್ಷಾಂತರ ಆಗಿಲ್ಲ. ಕಾಂಗ್ರೆಸ್ ಮತ್ತು ಬಿಜೆಪಿಯ ಪೈಪೋ ಟಿಯಲ್ಲಿ ಜೆಡಿಎಸ್ ಪಕ್ಷ ತೆಗೆದುಕೊಳ್ಳುವ  ಮತಗಳು ಒಂಚೂರು ಫಲಿತಾಂಶದ ಮೇಲೆ ಏರುಪೇರು ಮಾಡಬಹುದು. 

click me!