ಮಹಾರಾಷ್ಟ್ರ ಮಾದರಿಯ ಸರ್ಕಾರಕ್ಕೆ ಕಾಂಗ್ರೆಸ್ ಒಲವು

First Published May 22, 2018, 8:05 AM IST
Highlights

ಅಧಿಕಾರ ಹಂಚಿಕೆಗೆ ಮಹಾರಾಷ್ಟ್ರ ಮಾದರಿ ಸೂತ್ರ ಅರ್ಥಾತ್ ಮುಖ್ಯಮಂತ್ರಿ ಹುದ್ದೆಯನ್ನು ಒಂದು ಪಕ್ಷ ಪಡೆದರೆ, ಉಪ ಮುಖ್ಯಮಂತ್ರಿ ಹಾಗೂ ಇತರೆ ಪ್ರಮುಖ ಖಾತೆಗಳು ಮತ್ತೊಂದು ಮಿತ್ರ ಪಕ್ಷಕ್ಕೆ ಸಿಗಬೇಕು ಎಂಬ ಸೂತ್ರವನ್ನು ಜೆಡಿಎಸ್‌ನ ಮುಂದಿಡಲು ಕಾಂಗ್ರೆಸ್ ನಾಯಕತ್ವ ಚಿಂತನೆ ನಡೆಸಿದೆ. 

ಬೆಂಗಳೂರು : ಅಧಿಕಾರ ಹಂಚಿಕೆಗೆ ಮಹಾರಾಷ್ಟ್ರ ಮಾದರಿ ಸೂತ್ರ ಅರ್ಥಾತ್ ಮುಖ್ಯಮಂತ್ರಿ ಹುದ್ದೆಯನ್ನು ಒಂದು ಪಕ್ಷ ಪಡೆದರೆ, ಉಪ ಮುಖ್ಯಮಂತ್ರಿ ಹಾಗೂ ಇತರೆ ಪ್ರಮುಖ ಖಾತೆಗಳು ಮತ್ತೊಂದು ಮಿತ್ರ ಪಕ್ಷಕ್ಕೆ ಸಿಗಬೇಕು ಎಂಬ ಸೂತ್ರವನ್ನು ಜೆಡಿಎಸ್‌ನ ಮುಂದಿಡಲು ಕಾಂಗ್ರೆಸ್ ನಾಯಕತ್ವ ಚಿಂತನೆ ನಡೆಸಿದೆ. 

ಕನ್ನಡಪ್ರಭದೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಾ| ಜಿ.ಪರಮೇ ಶ್ವರ್ ಈ ವಿಷಯ ತಿಳಿಸಿದ್ದು, ಈ ಹಿಂದೆ ಎನ್‌ಸಿಪಿ ಹಾಗೂ ಕಾಂಗ್ರೆಸ್ ನಡುವೆ ಅಧಿಕಾರ ಹಂಚಿಕೆಯಾದಾಗ ಅಳವಡಿಸಿಕೊಂಡಿದ್ದ ಸೂತ್ರವನ್ನು ಇಲ್ಲೂ ಅನ್ವಯ ಮಾಡುವಂತೆ ಕೇಳುವ  ಚಿಂತನೆಯನ್ನು ಹೊಂದಿದ್ದೇವೆ ಎಂದು ಹೇಳಿದರು.

ವಾಸ್ತವವಾಗಿ ಅಧಿಕಾರ ಹಂಚಿಕೆ, ಯಾರಿಗೆ ಯಾವ ಖಾತೆ, ಸ್ಪೀಕರ್ ಯಾರಾಗಬೇಕು ಎಂಬಿತ್ಯಾದಿ ಯಾವುದರ ಬಗ್ಗೆಯೂ ಜೆಡಿಎಸ್ ಜತೆಗೆ ಅಧಿಕೃತ ಮಾತುಕತೆ ಇನ್ನೂ ನಡೆದಿಲ್ಲ.  ಬಹುಮತ ಸಾಬೀತಾಗುವ ವರೆಗೂ ಈ ಮಾತುಕತೆ ನಡೆಯುವುದೂ ಇಲ್ಲ. ಆದರೆ, ಕೆಲವೊಂದು ಸೂತ್ರ ಅಳವಡಿಕೆ ಬಗ್ಗೆ ಚಿಂತನೆಯಿದೆ. ಇದೆಲ್ಲವನ್ನೂ ಬಹುಮತ ಸಾಬೀತು ಮಾಡಿದ ನಂತರ ಜೆಡಿಎಸ್ ನಾಯಕರಾದ ಕುಮಾರಸ್ವಾಮಿ ಅವರೊಂ ದಿಗೆ ಚರ್ಚೆ ಮಾಡುತ್ತೇವೆ. ಸದ್ಯಕ್ಕಂತೂ ಇವೆಲ್ಲ ಕಾರಿಡಾರ್ ಚರ್ಚೆಗಳ ಮಟ್ಟದಲ್ಲಿದೆ ಎಂದು ಸ್ಪಷ್ಟಪಡಿಸಿದರು. 

ಮಹಾರಾಷ್ಟ್ರ ರೀತಿ ಅಧಿಕಾರ ಹಂಚಿಕೊಂಡರೆ ಉತ್ತಮ ಎಂಬುದು ನಮ್ಮ ಚಿಂತನೆ. ಈಗ ಸಿಎಂ ಹುದ್ದೆ ಜೆಡಿಎಸ್‌ಗೆ ಗಿರುವುದರಿಂದ ಡಿಸಿಎಂ ಹುದ್ದೆ ಹಾಗೂ ಇತರೆ ಖಾತೆಗಳು ಕಾಂಗ್ರೆಸ್‌ಗೆ ದೊರೆಯ ಬೇಕಾಗುತ್ತದೆ. ಆದರೆ, ಇದು ಚಿಂತನೆಯಷ್ಟೇ ಎಂದರು. ಇದೇ ರೀತಿ  2 ಪಕ್ಷಗಳ ನಡುವೆ ಹೊಂದಾಣಿಕೆಗೆ ಸಮನ್ವಯ ಸಮಿತಿ ರಚನೆಯಾಗಬೇಕು ಮತ್ತು ಎರಡು ಪಕ್ಷಗಳ ಪ್ರಣಾಳಿಕೆಯನ್ನು ಒಗ್ಗೂಡಿಸಿ ಕಾಮನ್ ಮಿನಿಮಮ್ ಪ್ರೋಗ್ರಾಂ ರೂಪಿಸಬೇಕು ಎಂಬುದು ಸಹ ಚಿಂತನೆಯ ಮಟ್ಟದಲ್ಲೇ ಇದೆ. ಈ ಯಾವ ವಿಚಾರಗಳ ಬಗ್ಗೆಯೂ ನಾವು ಜೆಡಿಎಸ್ ನಾಯಕತ್ವದೊಂದಿಗೆ ಮಾತುಕತೆ ನಡೆಸಿಲ್ಲ. ಬಹುಮತ ಸಾಬೀತು ಪಡಿಸಿದ ನಂತರ ನಮ್ಮ ಪಕ್ಷದ ನಾಯಕರು ಹಾಗೂ ಜೆಡಿಎಸ್‌ನ ನಾಯಕರು ಒಂದೆಡೆ ಕುಳಿತು ಚರ್ಚೆ ನಡೆಸುತ್ತೇವೆ ಎಂದರು.

ಏನಿದು ಮಹಾ ಮಾದರಿ..?

ಮಹಾರಾಷ್ಟ್ರದಲ್ಲಿ1999 ರಲ್ಲಿ ಕಾಂಗ್ರೆಸ್ ಮತ್ತು ಎನ್‌ಸಿಪಿ ಮೈತ್ರಿ ಸರ್ಕಾರ ರಚನೆ ವೇಳೆ ಅನುಸರಿಸಿದ್ದ ಸೂತ್ರವೇ ಮಹಾರಾಷ್ಟ್ರ ಸೂತ್ರ. ಮಹಾರಾಷ್ಟ್ರದಲ್ಲಿ 99 ರ ಚುನಾವಣೆಯಲ್ಲಿ ಕಾಂಗ್ರೆಸ್ 82 ಸ್ಥಾನ, ಎನ್‌ಸಿಪಿ 62 ಸ್ಥಾನದಲ್ಲಿ ಗೆದ್ದಿತ್ತು. ಈ ಎರಡು ಪಕ್ಷಗಳು ಸಮ್ಮಿಶ್ರ ಸರ್ಕಾರ ರಚಿಸಿದಾಗ ಕಾಂಗ್ರೆಸ್‌ಗೆ ಮುಖ್ಯಮಂತ್ರಿ ಸ್ಥಾನ ನೀಡಲಾಗಿತ್ತು. ಇದಕ್ಕೆ ಪ್ರತಿಯಾಗಿ ಎನ್‌ಸಿಪಿಗೆ ಉಪಮುಖ್ಯಮಂತ್ರಿ ಸ್ಥಾನ ಹಾಗೂ ಗೃಹ, ಹಣಕಾಸು, ಇಂಧನ ಮತ್ತು ಲೋಕೋಪಯೋಗಿ ಖಾತೆಗಳನ್ನು ನೀಡಲಾಗಿತ್ತು. ಇದೇ ಸೂತ್ರಕ್ಕೆ ಕಾಂಗ್ರೆಸ್ ಈಗ ಬೇಡಿಕೆಯಿಟ್ಟಿದೆ. ಅದರಂತೆ, ಸಿಎಂಹುದ್ದೆ ಪಡೆದಿರುವ ಜೆಡಿಎಸ್, ಇತರ ಪ್ರಮುಖ ಹುದ್ದೆಗಳನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡಬೇಕು ಎಂಬುದು ವಾದ.

click me!