ಬಿಜೆಪಿ ಗೆದ್ದಲ್ಲಿ ಇರಲಿದೆಯಾ ಉಪಮುಖ್ಯಮಂತ್ರಿ ಸ್ಥಾನ..?

First Published May 15, 2018, 6:14 AM IST
Highlights

ಫಲಿತಾಂಶ ಹೊರಬೀಳುವ ಮೊದಲೇ ಬಿಜೆಪಿ ಪಾಳೆಯದಲ್ಲಿ ಉಪಮುಖ್ಯಮಂತ್ರಿ ಸ್ಥಾನದ ಬಗ್ಗೆ ತೀವ್ರ ಚರ್ಚೆ ನಡೆದಿದೆ. ಪೂರ್ಣ ಬಹುಮತದ ಸರ್ಕಾರ ರಚನೆಯಾದಲ್ಲಿ ಮುಂಬರುವ ಲೋಕಸಭಾ ಚುನಾವಣೆಯನ್ನು ಮನದಲ್ಲಿ ರಿಸಿಕೊಂಡು ಜಾತಿ ಸಮೀಕರಣದ ಆಧಾರದ ಮೇಲೆ ಒಂದು ಅಥವಾ ಎರಡು ಉಪಮುಖ್ಯಮಂತ್ರಿ ಸ್ಥಾನಗಳನ್ನು ಸೃಷ್ಟಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಬೆಂಗಳೂರು [ಮೇ 15] ಫಲಿತಾಂಶ ಹೊರಬೀಳುವ ಮೊದಲೇ ಬಿಜೆಪಿ ಪಾಳೆಯದಲ್ಲಿ ಉಪಮುಖ್ಯಮಂತ್ರಿ ಸ್ಥಾನದ ಬಗ್ಗೆ ತೀವ್ರ ಚರ್ಚೆ ನಡೆದಿದೆ. ಪೂರ್ಣ ಬಹುಮತದ ಸರ್ಕಾರ ರಚನೆಯಾದಲ್ಲಿ ಮುಂಬರುವ ಲೋಕಸಭಾ ಚುನಾವಣೆಯನ್ನು ಮನದಲ್ಲಿ ರಿಸಿಕೊಂಡು ಜಾತಿ ಸಮೀಕರಣದ ಆಧಾರದ ಮೇಲೆ ಒಂದು ಅಥವಾ ಎರಡು ಉಪಮುಖ್ಯಮಂತ್ರಿ ಸ್ಥಾನಗಳನ್ನು ಸೃಷ್ಟಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಬಿಜೆಪಿಗೆ ತಮ್ಮ ಸರ್ಕಾರ ಬಂದರೆ ಯಾರನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಬೇಕು ಎಂಬ ಚಿಂತೆಯಿಲ್ಲ. ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರನ್ನೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಪಕ್ಷದ ವರಿಷ್ಠರು ಅಧಿಕೃತವಾಗಿ ಮತ್ತು ಒಕ್ಕೊರಲಿನ ಧ್ವನಿಯಿಂದ ಘೋಷಿಸಿರುವುದರಿಂದ ಅದರ ಬಗ್ಗೆ ಎರಡನೇ ಮಾತೇ ಇಲ್ಲ. ಆದರೆ, ಉಪಮುಖ್ಯಮಂತ್ರಿ ಸ್ಥಾನ ಸೃಷ್ಟಿಸಬೇಕೆ? ಸಷ್ಟಿಸುವುದಾದರೆ ಎಷ್ಟು? ಯಾರನ್ನು ಆ ಸ್ಥಾನಕ್ಕೆ ಆಯ್ಕೆ ಮಾಡಬೇಕು ಎಂಬುದು ತುಸು ಕಗ್ಗಂಟಾಗುವ ಸಾಧ್ಯತೆಯೂ ಇದೆ. 

ಪ್ರಸಕ್ತ ಚುನಾವಣೆಯಲ್ಲಿ ಬಿಜೆಪಿಯಿಂದ ಉಪಮುಖ್ಯಮಂತ್ರಿ ಸ್ಥಾನಕ್ಕೆ ಸಹಜವಾಗಿಯೇ ಚರ್ಚೆಗೆ ಬಂದಿರುವ ಹೆಸರು ಸಂಸದ ಹಾಗೂ ಸದ್ಯ ಎರಡು ಕ್ಷೇತ್ರಗಳಲ್ಲಿ ಕಣಕ್ಕಿಳಿದಿರುವ ಬಿ.ಶ್ರೀರಾಮುಲು. ರಾಜ್ಯವ್ಯಾಪಿ ಇರುವ ಪರಿಶಿಷ್ಟ ಪಂಗಡದ ಮತಗಳ ಮೇಲೆ ಕಣ್ಣಿಟ್ಟು ಅವರನ್ನು ಕಣಕ್ಕಿಳಿಸಿರುವುದರಿಂದ ಆ ಸಮುದಾಯದ ಬೆಂಬಲದೊಂದಿಗೆ ಹೆಚ್ಚಿನ ಸ್ಥಾನ ಗಳಿಸಿದಲ್ಲಿ ಮತ್ತು ರಾಮುಲು ಕೂಡ ಗೆದ್ದಲ್ಲಿ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕಾದ ಅನಿವಾರ್ಯ ಬಂದೊದಗಬಹುದು.

ಅದೇ ರೀತಿ ಪರಿಶಿಷ್ಟ ಜಾತಿಗೂ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದಾದಲ್ಲಿ ಬಿಜೆಪಿಗೆ ಬೆಂಬಲ ನೀಡಿರುವ ಎಡಗೈ ಗುಂಪಿಗೆ  ಸೇರಿದ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಗೋವಿಂದ ಕಾರಜೋಳ ಅವರ ಹೆಸರೂ  ಪರಿಶೀಲನೆ ಯಲ್ಲಿದೆ. ಸರಳ ಹಾಗೂ ಸಜ್ಜನ ರಾಜಕಾರಣಿ ಎಂದೇ ಹೆಸರು ಗಳಿಸಿರುವ ಕಾರಜೋಳ ಅವರನ್ನು ಉಪಮುಖ್ಯಮಂತ್ರಿಯನ್ನಾಗಿಸುವ ಮೂಲಕ ಆ ಸಮುದಾಯದ ಒಲವು ಗಳಿಸಬಹುದು ಎಂಬ ಲೆಕ್ಕಾಚಾರವೂ ಇದೆ.

click me!