ಪರಮೇಶ್ವರ್ ಒಬ್ಬರಿಗೆ ಡಿಸಿಎಂ ಹುದ್ದೆ

First Published May 23, 2018, 7:12 AM IST
Highlights

ಜಾತಿ ಆಧಾರದಲ್ಲಿ ಉಪ ಮುಖ್ಯಮಂತ್ರಿ ಸ್ಥಾನ ಕೇಳುವ ನಾಯಕರ ಸಂಖ್ಯೆ ಹೆಚ್ಚಾಗುತ್ತಾ ಸಾಗುತ್ತಿದ್ದಂತೆಯೇ ಎಚ್ಚೆತ್ತಿರುವ ಕಾಂಗ್ರೆಸ್ ನಾಯಕತ್ವ , ಎರಡು ಡಿಸಿಎಂ ಪದವಿ ಸೃಷ್ಟಿಯಿಂದ ಹಿಂದಕ್ಕೆ ಸರಿಯುವ ಲಕ್ಷಣವಿದ್ದು, ಒಂದೇ ಡಿಸಿಎಂ ಪದವಿಗೆ ಸೀಮಿತಗೊಳ್ಳುವ ಸಾಧ್ಯತೆ ಹೆಚ್ಚಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ಬೆಂಗಳೂರು : ಜಾತಿ ಆಧಾರದಲ್ಲಿ ಉಪ ಮುಖ್ಯಮಂತ್ರಿ ಸ್ಥಾನ ಕೇಳುವ ನಾಯಕರ ಸಂಖ್ಯೆ ಹೆಚ್ಚಾಗುತ್ತಾ ಸಾಗುತ್ತಿದ್ದಂತೆಯೇ ಎಚ್ಚೆತ್ತಿರುವ ಕಾಂಗ್ರೆಸ್ ನಾಯಕತ್ವ , ಎರಡು ಡಿಸಿಎಂ ಪದವಿ ಸೃಷ್ಟಿಯಿಂದ ಹಿಂದಕ್ಕೆ ಸರಿಯುವ ಲಕ್ಷಣವಿದ್ದು, ಒಂದೇ ಡಿಸಿಎಂ ಪದವಿಗೆ ಸೀಮಿತಗೊಳ್ಳುವ ಸಾಧ್ಯತೆ ಹೆಚ್ಚಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ತನ್ಮೂಲಕ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಬಹು ದಿನಗಳ ಕನಸು ನನಸಾಗಿದ್ದು, ಅವರು ಬುಧವಾರ ರಾಜ್ಯದ ೯ನೇ ಉಪ ಮುಖ್ಯಮಂತ್ರಿಯಾಗಲಿದ್ದಾರೆ. ವಾಸ್ತವವಾಗಿ ಸಂವಿಧಾನದಲ್ಲಿ ಉಪ ಮುಖ್ಯಮಂತ್ರಿ ಎಂಬ ಹುದ್ದೆಯಿಲ್ಲ. ಹೀಗಾಗಿ ಬುಧವಾರ ಅವರುಕುಮಾರಸ್ವಾಮಿ ಸಂಪುಟ ಸದಸ್ಯರಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದು, ತಾಂತ್ರಿಕವಾಗಿ ಉಪ  ಮುಖ್ಯಮಂತ್ರಿ ಯೆನಿಸಿಕೊಳ್ಳಲಿದ್ದಾರೆ.

ಲಿಂಗಾಯತರಿಗೆ ಒಂದು ಡಿಸಿಎಂ ಹುದ್ದೆ ಸೃಷ್ಟಿಸಬೇಕು ಎಂದು ಕಾಂಗ್ರೆಸ್ ನಿರ್ಧರಿಸಿತ್ತು. ಆದರೆ, ಪಕ್ಷದ ಲಿಂಗಾಯತ ಶಾಸಕರಲ್ಲಿ ಈ ಹುದ್ದೆಗೆ ಭಾರಿ ಪೈಪೋಟಿ ನಿರ್ಮಾಣವಾಗಿ, ನಿರ್ದಿಷ್ಟ ನಾಯಕರಿಗೆ ಹುದ್ದೆ ನೀಡಿದರೆ ಸಾಮೂಹಿಕ ರಾಜೀನಾಮೆಯ ಬೆದರಿಕೆಯೊಡ್ಡುವ ಹಂತವನ್ನು ಮುಟ್ಟಿದೆ. ಶಾಮನೂರು ಶಿವಶಂಕರಪ್ಪ, ಎಸ್.ಆರ್. ಪಾಟೀಲ್ ಮತ್ತು ಎಂ.ಬಿ. ಪಾಟೀಲ್ ನಡುವೆ ತೀವ್ರ ಪೈಪೋಟಿಯಿದೆ. 

ಶಾಮನೂರು ಶಿವಶಂಕರಪ್ಪ ಅವರ ಪರ ಶಾಸಕರು ಹಾಗೂ ಸಮುದಾಯದ ಮುಖಂಡರು  ಒತ್ತಡ ನಿರ್ಮಾಣ ಮಾಡುತ್ತಿದ್ದಾರೆ. ಇನ್ನು ಮಾಜಿ ಸಿಎಂ ಸಿದ್ದರಾಮಯ್ಯ ಎಸ್. ಆರ್. ಪಾಟೀಲ್ ಪರ ನಿಂತಿದ್ದಾರೆ. ಅತ್ತ ಹೈಕಮಾಂಡ್‌ನಲ್ಲಿ ಪ್ರಭಾವಿ ಯಾಗಿರುವ ಎಂ.ಬಿ. ಪಾಟೀಲ್ ಡಿಸಿಎಂ ಪದವಿಗೆ ಶತಾಯಗತಾಯ ಪ್ರಯತ್ನ ನಡೆಸಿದ್ದಾರೆ. ಇಷ್ಟಾದರೂ ಲಿಂಗಾಯತ ನಾಯಕರ ಸಭೆ ನಡೆಸಿ ಅವರಲ್ಲಿ ಒಮ್ಮತ ಮೂಡಿಸುವ ವಿಶ್ವಾಸ ಕಾಂಗ್ರೆಸ್ ನಾಯಕರಿಗೆ ಇತ್ತು. ಆದರೆ, ಲಿಂಗಾಯತರ ಒತ್ತಡ ತಂತ್ರವನ್ನು ಗಮನಿಸಿದ ಇತರ ಸಮುದಾಯಗಳ ನಾಯಕರು ಸಹ ಇದೇ ಹುದ್ದೆಗೆ ಬೇಡಿಕೆಯಿಡಲು ಆರಂಭಿಸುತ್ತಿದ್ದಂತೆಯೇ ಕಾಂಗ್ರೆಸ್ ನಾಯಕತ್ವ ಎರಡನೇ ಡಿಸಿಎಂ ಹುದ್ದೆ ಸೃಷ್ಟಿ ಬಗ್ಗೆ ಆತಂಕಗೊಂಡಿದೆ ಎನ್ನಲಾಗಿದೆ. 

click me!