ಸ್ವಾಮೀಜಿಗಳಿಗೆ ಸಿಎಂ ಎಚ್‌.ಡಿ ಕುಮಾರಸ್ವಾಮಿ ಎಚ್ಚರಿಕೆ

First Published May 24, 2018, 8:56 AM IST
Highlights

‘ಸ್ವಾಮೀಜಿಗಳು ರಾಜಕೀಯವಾಗಿ ಹೇಳಿಕೆಗಳನ್ನು ನೀಡುವುದು ಸರಿಯಲ್ಲ. ಅವರು ಧರ್ಮದ ಕಾರ್ಯ ಮಾಡಬೇಕೇ ಹೊರತು ರಾಜಕೀಯ ಮಾಡಲು ಸಲಹೆ ನೀಡುವುದು ಸೂಕ್ತವಲ್ಲ. ರಾಜಕೀಯ ಟೀಕೆ ಮಾಡುವುದಾದರೆ ಅವರು ರಾಜಕೀಯಕ್ಕೆ ಬರಲಿ.!’ ಇತ್ತೀಚೆಗೆ ಕೆಲ ಸ್ವಾಮೀಜಿಗಳು ನೀಡಿದ ಹೇಳಿಕೆಗೆ ನೂತನ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದು ಹೀಗೆ.

ಬೆಂಗಳೂರು :  ‘ಸ್ವಾಮೀಜಿಗಳು ರಾಜಕೀಯವಾಗಿ ಹೇಳಿಕೆಗಳನ್ನು ನೀಡುವುದು ಸರಿಯಲ್ಲ. ಅವರು ಧರ್ಮದ ಕಾರ್ಯ ಮಾಡಬೇಕೇ ಹೊರತು ರಾಜಕೀಯ ಮಾಡಲು ಸಲಹೆ ನೀಡುವುದು ಸೂಕ್ತವಲ್ಲ. ರಾಜಕೀಯ ಟೀಕೆ ಮಾಡುವುದಾದರೆ ಅವರು ರಾಜಕೀಯಕ್ಕೆ ಬರಲಿ.!’ ಇತ್ತೀಚೆಗೆ ಕೆಲ ಸ್ವಾಮೀಜಿಗಳು ನೀಡಿದ ಹೇಳಿಕೆಗೆ ನೂತನ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದು ಹೀಗೆ.

ಬುಧವಾರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಯಾವುದೇ ಜಾತಿ ರಾಜಕಾರಣ ಮಾಡುವುದಿಲ್ಲ. ಸ್ವಾಮೀಜಿಗಳು ರಾಜಕೀಯವಾಗಿ ಹೇಳಿಕೆ ಕೊಡುವುದು ಸರಿಯಲ್ಲ. ಅವರ ಹೇಳಿಕೆಗಳು ಮನಸ್ಸಿಗೆ ನೋವು ತಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸ್ವಾಮೀಜಿಗಳು ರಾಜಕೀಯವಾಗಿ ಟೀಕೆ ಮಾಡುವುದರ ಬದಲು ಸರ್ಕಾರಕ್ಕೆ ಗುರುಗಳ ಸ್ಥಾನದಲ್ಲಿ ನಿಂತು ಮಾರ್ಗದರ್ಶನ ನೀಡಬೇಕು. ಅವರೇ ದಾರಿ ತಪ್ಪಿದರೆ ಸರ್ಕಾರಕ್ಕೆ ಯಾರು ಸಲಹೆ ಕೊಡುತ್ತಾರೆ? ಒಂದು ವೇಳೆ ರಾಜಕೀಯ ಟೀಕೆ ಮಾಡುವುದಾದರೆ ಅವರಿಗೆ ಆಹ್ವಾನ ನೀಡುತ್ತೇನೆ, ಅವರು ರಾಜಕೀಯಕ್ಕೆ ಬರಲಿ. ನಮಗೆ ನಮ್ಮದೇ ಆದ ಕಟ್ಟುಪಾಡುಗಳಿದ್ದು, ಸ್ವಾಮೀಜಿಗಳು ಸಂಕುಚಿತ ಮನೋಭಾವ ಬಿಡಬೇಕು. ದೇವರು ನನಗೆ ಅವಕಾಶ ಕೊಟ್ಟಿದ್ದಾನೆ. ಆರೂವರೆ ಕೋಟಿ ಜನರ ರಕ್ಷಣೆ ನಮ್ಮ ಮೊದಲ ಆದ್ಯತೆ ಎಂದು ಹೇಳಿದರು.

ನಮಗೂ ದುಡಿಮೆ ಇದೆ. ಎಲ್ಲಾ ಸಮಾಜದ ಬಗ್ಗೆ ಗೌರವ ಇದೆ. ಬಡವರ ಪರವಾಗಿ ಕೆಲಸ ಮಾಡುತ್ತಿದ್ದೇನೆ. ಬಸವಣ್ಣ, ಕುವೆಂಪು ಅವರ ನಾಣ್ಣುಡಿಗಳನ್ನು ನಂಬಿ, ಅವುಗಳ ಮೇಲೆ ವಿಶ್ವಾಸ ಇಟ್ಟು ಜೀವನದಲ್ಲಿ ಅಳವಡಿಸಿಕೊಂಡಿದ್ದೇನೆ. ಯಾವುದೋ ಒಂದು ಸಮಾಜವನ್ನು ಮೆಚ್ಚಿಸಲು ಮುಖ್ಯಮಂತ್ರಿಯಾಗಿ ಈ ಸ್ಥಾನದಲ್ಲಿಲ್ಲ. ಸ್ವಾಮೀಜಿಗಳ ಹೇಳಿಕೆಯು ಸಂಘರ್ಷಕ್ಕೆ ಎಡೆ ಮಾಡಿಕೊಡುವಂತಹದ್ದಾಗಿದೆ. ಅಂತಹ ಹೇಳಿಕೆ ನೀಡಿ ಸಂಘರ್ಷಕ್ಕೆ ಕಾರಣವಾಗಬಾರದು ಎಂದು ತಿಳಿಸಿದರು.

click me!