Karnataka Assembly Election- 2018
ಬಿಜೆಪಿ ಮುಖಂಡ ಕೆ.ಎಸ್ ಈಶ್ವರಪ್ಪ ಶಿವಮೊಗ್ಗ ನಗರದಲ್ಲಿ ಕೆಲವು ಕಾಂಗ್ರೆಸ್ ,ಜೆಡಿಎಸ್ ಪ್ರಮುಖರು ಬಿಜೆಪಿಯತ್ತ ಮುಖ ಮಾಡಿದ್ದರಿಂದ ಬಿಜೆಪಿ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಲಿದೆ. ಇಲ್ಲಿ ನಮ್ಮ ಗೆಲುವು ಶತಸಿದ್ಧ ಎಂದು ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗ: ರಾಜ್ಯದಲ್ಲಿ ಚುನಾವಣಾ ಭರಾಟೆ ಜೋರಾದ ಬೆನ್ನಲ್ಲೇ ವಿವಿಧ ನಾಯಕರು ಪಕ್ಷಾಂತರಿಗಳಾದರು. ಶಿವಮೊಗ್ಗದಲ್ಲಿಯೂ ಕೂಡ ಅನೇಕ ನಾಯಕರು ಪಕ್ಷ ಬಿಟ್ಟು ಪಕ್ಷಕ್ಕೆ ಜಿಗಿದರು.
ಈ ಬಗ್ಗೆ ಮಾತನಾಡಿದ ಬಿಜೆಪಿ ಮುಖಂಡ ಕೆ.ಎಸ್ ಈಶ್ವರಪ್ಪ ಶಿವಮೊಗ್ಗ ನಗರದಲ್ಲಿ ಕೆಲವು ಕಾಂಗ್ರೆಸ್, ಜೆಡಿಎಸ್ ಪ್ರಮುಖರು ಬಿಜೆಪಿಯತ್ತ ಮುಖ ಮಾಡಿದ್ದರಿಂದ ಬಿಜೆಪಿ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಲಿದೆ. ಇಲ್ಲಿ ನಮ್ಮ ಗೆಲುವು ಶತಸಿದ್ಧ ಎಂದು ಹೇಳಿದ್ದಾರೆ.
ತಮ್ಮ ಪಕ್ಷವೇ ಅಧಿಕಾರಕ್ಕೆ ಬರುವ ವಿಶ್ವಾಸ ವ್ಯಕ್ತಪಡಿಸಿದ ನಾಯಕ, ಕೊಳಚೆ ಪ್ರದೇಶಗಳ ಬಡವರ ಹಿತಾಸಕ್ತಿಯ ಬಗ್ಗೆ ಗಮನಹರಿಸಿ, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಅವರಿಗೆ ಹಕ್ಕು ಪತ್ರ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಇನ್ನು ಇದೇ ವೇಳೆ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿ, ಈ ಹಿಂದೆ ಸಿಎಂ ಇನ್ನು ಮುಂದೆ ತಾವು ಸಮಾಜವಾದಿ ಯಾವುದೇ ಕಾರಣಕ್ಕೂ ಜಾತಿವಾದಕ್ಕೆ ಒತ್ತು ನೀಡುವುದಿಲ್ಲ ಎಂದು ಹೇಳಿದ್ದರು. ಆದರೆ ಬಾದಾಮಿಯಲ್ಲಿ ಹೆಚ್ಚು ಕುರುಬರಿದ್ದಾರೆಂದು ಸ್ಪರ್ಧೆ ಮಾಡುತ್ತಿರುವ ಸಿದ್ದರಾಮಯ್ಯ ಸಮಾಜವಾದಿಯೋ ಜಾತಿವಾದಿಯೋ ? ಅಲ್ಲದೇ ಹಿಂದುಳಿದ ವರ್ಗದ ಅಭಿವೃದ್ಧಿಗಾಗಿ ಅವರು ಮಾಡಿರುವ ಕೆಲಸವಾದರೂ ಏನು ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನು ಚಾಮುಂಡೇಶ್ವರಿಯಲ್ಲಿ ಸೋಲಿನ ಭೀತಿಯಿಂದಲೇ ಅವರು ಬೇರೆ ಕ್ಷೇತ್ರ ಹುಡುಕಿಕೊಂಡು ಹೊರಟಿದ್ದಾರೆ ಎಂದು ಈಶ್ವರಪ್ಪ ಹೇಳಿದ್ದಾರೆ.
ಇನ್ನು ಬಿಜೆಪಿಯ ನಾಯಕತ್ವದ ಬಗ್ಗೆ ಮಾತನಾಡಿ ಮದುವೆಗೆ ಹೆಣ್ಣು ಸಿಗದವರೂ ನಮ್ಮೂರಲ್ಲಿ ಯಾವ ಹೆಣ್ಣು ಇಲ್ಲ ಅಂದ ಹಾಗೆ ಕಾಂಗ್ರೆಸ್ ಪಕ್ಷದಲ್ಲಿ ರಾಹುಲ್ ಗಾಂಧಿಯವರನ್ನು ಬಿಟ್ಟರೆ ಮತ್ತೊಬ್ಬ ನಾಯಕರಿಲ್ಲ. ಬಿಜೆಪಿಗೆ ಬೇಕಾದಷ್ಟು ನಾಯಕರಿದ್ದಾರೆ ಎಂದು ಹೇಳಿದ್ದಾರೆ.
ಮತದಾನ ನಿಮ್ಮ ಹಕ್ಕು, ನಿಮ್ಮ ಜವಾಬ್ದಾರಿ ಕೂಡಾ | ತಪ್ಪದೇ ಮತ ಹಾಕಿ – ಮೇ 12, 2018