ಜೆಡಿಎಸ್ - ಕಾಂಗ್ರೆಸ್ ಮೈತ್ರಿಗೆ ಸಿದ್ದರಾಮಯ್ಯ ಆಪ್ತ ಗರಂ

First Published May 17, 2018, 9:53 AM IST
Highlights

ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ರಚನೆ ಸಂಬಂಧ ಬೆಳವಣಿಗೆಗಳು ನಡೆಯುತ್ತಿರುವ ವೇಳೆಯಲ್ಲೇ ಹೊಳೆನರಸೀಪುರ ಕ್ಷೇತ್ರದ ಕಾಂಗ್ರೆಸ್‌ನ ಪರಾಜಿತ ಅಭ್ಯರ್ಥಿ ಬಿ.ಪಿ. ಮಂಜೇಗೌಡ ಅವರು ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು (ಮೇ 17) : ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ರಚನೆ ಸಂಬಂಧ ಬೆಳವಣಿಗೆಗಳು ನಡೆಯುತ್ತಿರುವ ವೇಳೆಯಲ್ಲೇ ಹೊಳೆನರಸೀಪುರ ಕ್ಷೇತ್ರದ ಕಾಂಗ್ರೆಸ್‌ನ ಪರಾಜಿತ ಅಭ್ಯರ್ಥಿ ಬಿ.ಪಿ. ಮಂಜೇಗೌಡ ಅವರು ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಹುಮತ ಬರದಿದ್ದರೆ ವಿರೋಧ ಪಕ್ಷದಲ್ಲಿ ಕೂತು ಹೋರಾಟ ಮಾಡಬೇಕು. ಅದನ್ನು ಬಿಟ್ಟು ಮೈತ್ರಿ ಮಾಡಿಕೊಳ್ಳುವುದು ಸೂಕ್ತವಲ್ಲ. ಇದರಿಂದ ಜಿಲ್ಲೆಯಲ್ಲಿಕಾಂಗ್ರೆಸ್ ಕಾರ‌್ಯಕರ್ತರ ಕಗ್ಗೊಲೆಯಾಗಲಿದೆ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ. ಇದೇವೇಳೆ ನಿರ್ಗಮಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ಷೇತ್ರಕ್ಕೆ ಚುನಾವಣಾ ಪ್ರಚಾರಕ್ಕೆ ಆಗಮಿಸದ್ದಕ್ಕೂ ಅವರು ಅಸಮಾಧಾನ ಹೊರಗೆಡವಿದರು. 

ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ಪೂರಕವಾದ ವಾತಾವರಣ ನಿರ್ಮಾಣವಾಗಿತ್ತು. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಸನ ಜಿಲ್ಲೆಗೆ ಮತ್ತು ನನ್ನ ಕ್ಷೇತ್ರಕ್ಕೆ ಪ್ರಚಾರಕ್ಕೆ 3 ಬಾರಿ ಬರುವುದಾಗಿ ಭರವಸೆ ನೀಡಿದ್ದರು. ಸಿದ್ದರಾಮಯ್ಯ ನವರಿಗೆ ಯಾವ ಬಗೆಯ ಒತ್ತಡ ಇತ್ತೋ ನನಗೆ ಗೊತ್ತಿಲ್ಲ. ಅವರು ಪ್ರಚಾರಕ್ಕೆ ಬಾರದ ಕಾರಣ ತೀವ್ರ ಹಿನ್ನಡೆಯಾಗಿದ್ದು ಬಹಳ ಬೇಸರವಾಗಿದೆ ಎಂದು ಹೇಳಿದರು. 

ಹರಕೆಯೆ ಕುರಿ ಆಗಿಲ್ಲ: ನಾನು ಹರಕೆಯ ಕುರಿ ಆಗಿಲ್ಲ, ಬಲಿಪಶು ಆಗಿಲ್ಲ. ರಾಜಕೀಯದಲ್ಲಿ ಏನು ಬೇಕಾದ್ರೂ ಆಗಬಹುದು. ಕುಮಾರಸ್ವಾಮಿ ಸಿಎಂ ಆಗಲ್ಲ ಅಂತ ಸಿದ್ದರಾಮಯ್ಯ ಹೇಳುತ್ತಿದ್ದರು. ಆದರೆ, ಅವರೇ ಎಚ್.ಡಿ. ಕುಮಾರಸ್ವಾಮಿಯನ್ನು ಸಿಎಂ ಮಾಡಲು ಹೊರಟಿಲ್ಲವೇ, ಸಾಂದರ್ಭಿಕವಾಗಿ ಕೆಲ ಬದಲಾವಣೆಗಳು ಆಗಿದೆ ಎಂದರು. 

ರೇವಣ್ಣನದು ಭಾವನಾತ್ಮಕ ಗೆಲುವು: ಹೊಳೆನರಸೀಪುರ ಕ್ಷೇತ್ರದಲ್ಲಿ ಚುನಾವಣೆ ಸಂದರ್ಭದಲ್ಲಿ  ಹಳ್ಳಿಗಳಲ್ಲಿ ದೇವಾಲಯಗಳ ನಿರ್ಮಾಣ ಮಾಡಲು ಅಡಿಪಾಯವನ್ನು ಹಾಕಿದ ಪರಿಣಾಮವಾಗಿ ರೇವಣ್ಣ ಅವರಿಗೆ ಭಾವನಾತ್ಮಕ ವಾಗಿ ಅವರಿಗೆ ಗೆಲುವಾಗಿದೆ. 270 ಗ್ರಾಮಗಳಲ್ಲಿ ದೇವಾಲಯ ಅಪೂರ್ಣವಾಗುತ್ತದೆ ಎಂಬ ಕಾರಣಕ್ಕೆ ಜನ ಅವರಿಗೆ ವೋಟ್ ಹಾಕಿದ್ದಾರೆ ಅಷ್ಟೇ ಎಂದರು.

click me!