
ಒಡಿಶಾ (ಆ.25) ಯೂಟ್ಯೂಬರ್ ತಮ್ಮ ಲೈಕ್ಸ್, ವೀವ್ಸ್ಗಾಗಿ ಏನೂ ಬೇಕಾದರು ಮಾಡುತ್ತಾರೆ. ಅಪಾಯಾಕಾರಿ ಸ್ಟಂಟ್, ಪ್ರಾಣ ಲೆಕ್ಕಿಸದೇ ವಿಡಿಯೋ ಶೂಟ್ ಮಾಡುತ್ತಾರೆ. ಹೀಗೆ ಜಲಪಾತದ ವಿಡಿಯೋ ಶೂಟ್, ರೀಲ್ಸ್ ಮಾಡಿ ಯೂಟ್ಯೂಬ್ ಮೂಲಕ ವೈರಲ್ ಆಗಲು ಯತ್ನಿಸಿದ ಯೂಟ್ಯೂಬರ್ ನೀರಿನಲ್ಲಿ ಕೊಚ್ಚಿ ಹೋದ ಘಟನೆ ಒಡಿಶಾದ ಕೊರಾಪುಟ್ ಜಿಲ್ಲೆಯ ದುದುಮಾ ಜಲಪಾತದ ಬಳಿ ನಡೆದಿದೆ. 22 ವರ್ಷದ ಸಾಗರ್ ತುಡು ನೀರಿನಲ್ಲಿ ಕೊಚ್ಚಿ ಹೋದ ಯೂಟ್ಯೂಬರ್. ಈತನಿಗಾಗಿಗ ತೀವ್ರ ಹುಡುಕಾಟ ನಡೆಸಲಾಗುತ್ತಿದೆ.
ಗಂಜಮ್ ಜಿಲ್ಲೆ ಬೆರ್ಮಾಪರ್ನ ಸಾಗರ್ ತನ್ನ ಗೆಳೆಯರ ಜೊತೆ ದುದುಮಾ ಜಲಪಾತಕ್ಕೆ ತೆರಳಿದ್ದಾನೆ. ಯೂಟ್ಯೂಬ್ ಮೂಲಕ ಹಲವು ಪ್ರೇಕ್ಷಣೀಯ ಸ್ಥಳಗಳ ವಿಡಿಯೋ ಶೂಟ್ ಮಾಡಿ ಪೋಸ್ಟ್ ಮಾಡುತ್ತಿದ್ದ ಸಾಗರ್, ಇದೇ ರೀತಿ ದುದುಮಾ ಜಲಪಾತಕ್ಕೆ ತೆರಳಿದ್ದಾನೆ. ಡ್ರೋನ್ ಕ್ಯಾಮೆರಾ ಸೇರಿದಂತೆ ಹಲವು ಕ್ಯಾಮೆರಾಗಳ ತೆಗೆದುಕೊಂಡು ಜಲಪಾತದ ಅದ್ಭುತ ದೃಶ್ಯ ಸೆರೆ ಹಿಡಿಯಲು ಮುಂದಾಗಿದ್ದಾನೆ. ಆದರೆ ಸ್ಥಳೀಯ ಜಿಲ್ಲಾಡಳಿತ ಹಾಗೂ ಸಿಬ್ಬಂದಿ ಸ್ಪಷ್ಟ ಸೂಚನೆ ಇದ್ದರೂ ನದಿಗೆ ಇಳಿದು ಕಲ್ಲು ಬಂಡೆಗಳ ಮೇಲೆ ನಿಂತು ವಿಡಿಯೋ ಮಾಡುವ ಸಾಹಸ ಮಾಡಿದ್ದಾನೆ. ಡ್ರೋನ್ ಮೂಲಕ ವಿಡಿಯೋ ಶೂಟ್ ಮಾಡಿದ್ದರೆ, ರೀಲ್ಸ್ ಮಾಡಲು ಈತ ನದಿಯ ಬಂಡೆಗಳ ಮೇಲೆ ನಿಂತು ಮೊಬೈಲ್ ಮೂಲಕವೂ ವಿಡಿಯೋ ಶೂಟ್ ಮಾಡಿದ್ದಾನೆ.
ನದಿ ಜಲಪಾತವಾಗಿ ಧುಮ್ಮಿಕ್ಕಿ ಹರಿಯುವ ದುದುಮಾ ವಾಟರ್ಫಾಲ್ ಬಳಿ ಹಲವು ಸೂಚನಾ ಫಲಕ ಅಳವಡಿಸಲಾಗಿದೆ. ಯಾರೂ ಕೂಡ ನದಿಗೆ ಇಳಿಯಬಾರದು ಎಂದು ಸೂಚಿಸಲಾಗಿದೆ. ಆದರೆ ರೀಲ್ಸ್ಗಾಗಿ ಯೂಟ್ಯೂಬರ್ ಸಾಗರ್ ಇಳಿದಿದ್ದಾನೆ. ಇದು ಈತನ ಜೀವಕ್ಕೆ ಕುತ್ತು ತಂದಿದೆ.
ಭಾರಿ ಮಳೆಯಾಗುತ್ತಿರುವ ಕಾರಣ ಜಲಪಾತದ ಕೆಲ ದೂರದಲ್ಲಿರುವ ಡ್ಯಾಮ್ ನೀರು ಹೆಚ್ಛಳವಾಗಿದೆ. ಡ್ಯಾಮ್ ಮೇಲಿನಿಂದ ನೀರು ಬರಲು ಆಗಮಿಸಿದೆ. ಹೀಗಾಗಿ ಅಧಿಕಾರಿಗಳು ಡ್ಯಾಮ್ ಗೇಟ್ಗಳನ್ನು ತೆರೆದಿದ್ದಾರೆ. ಇದೇ ವೇಳೆ ಸೈರನ್ ಮೊಳಗಿಸಿದ್ದಾರ. ಇಷ್ಟೇ ಅಲ್ಲ ನದಿ ಪಾತ್ರದಲ್ಲಿ ಯಾರೂ ನಿಲ್ಲದಂತೆ ಸೂಚಿಸಿದ್ದಾರೆ. ಆದರೆ ಯೂಟ್ಯೂಬರ್ ಸಾಗರ್ ಬಂಡೆ ಮೇಲೆ ನಿಂತು ರೀಲ್ಸ್ ಶೂಟ್ ಮಾಡುತ್ತಿದ್ದ. ಇತ್ತ ತಕ್ಷಣವೇ ನೀರು ಏರಿಕೆಯಾಗಿದೆ. ಸಾಗರ್ ನಿಂತಿದ್ದ ಬಂಡೆ ಕಲ್ಲುಗಳ ಮೇಲಿನಿಂದಲೂ ರಭಸವಾಗಿ ನೀರು ಹರಿಯಲು ಆರಂಭಿಸಿದೆ. ದಡದಲ್ಲಿದ್ದ ಸ್ನೇಹಿತರು ಹಾಗೂ ಡ್ಯಾಮ್ ಸಿಬ್ಬಂದಿಗಳು ಹಗ್ಗ ತಂದು ಸಾಗರ್ ರಕ್ಷಿಸಲು ಕೆಲಸಕ್ಕೆ ಮುಂದಾಗಿದ್ದಾರೆ. ಆದರೆ ಕ್ಷಣ ಕ್ಷಣಕ್ಕೂ ನೀರು ಹೆಚ್ಚಾಗುತ್ತಿದ್ದ ಕಾರಣ ಸಾಗರ್ ನಿಂತಿದ್ದ ಬಂಡೆಯಲ್ಲಿ ಗಟ್ಟಿಯಾಗಿ ನಿಲ್ಲಲು ಸಾಧ್ಯವಾಗಲಿಲ್ಲ. ರಕ್ಷಣೆ ಮಾಡುವ ಮೊದಲೇ ಯೂಟ್ಯೂಬರ್ ಸಾಗರ್ ಕೊಚ್ಚಿ ಹೋಗಿದ್ದಾನೆ.
ಇತರ ಪ್ರವಾಸಿಗರು, ಸ್ಥಳೀಯರು ಯೂಟ್ಯೂಬರ್ ರಕ್ಷಿಸವು ಪ್ರಯತ್ನ ಮಾಡಿದ್ದಾರೆ. ಆದರೆ ನೀರಿನ ರಭಸ ಹೆಚ್ಚಾದ ಕಾರಣ ಪ್ರಯತ್ನಗಳು ಕೈಗೂಡಲಿಲ್ಲ. ಕ್ಷಣ ಕ್ಷಣಕ್ಕೂ ನೀರಿನ ಹರಿವು ಹೆಚ್ಚಾಗಿತ್ತು. ಇತ್ತ ಒಡಿಶಾದ ಕಳೆದ ಕೆಲ ದಿನಗಳಿಂದ ಭಾರಿ ಮಳೆಯಾಗುತ್ತಿದೆ.
ಸಾಗರ್ ನಿಂತಿದ್ದ ಕೆಲ ದೂರಗಳಲ್ಲೇ ನೀರು ಪ್ರಪಾತಕ್ಕೆ ಧುಮ್ಮಿಕ್ಕಿ ಜಲಪಾತವಾಗಿ ಹರಿಯುತ್ತದೆ. ಈ ಪ್ರಪಾತಕ್ಕೆ ಬಿದ್ದಿರುವ ಯೂಟ್ಯೂಬರ್ ಸಾಗರ್ ಸುಳಿವಿಲ್ಲ. ಸಿಬ್ಬಂದಿಗಳು, ಸ್ನೇಹಿತರು ಹುಡುಕಾಟ ಆರಂಭಿಸಿದ್ದಾರೆ. ಪೊಲೀಸರು, ರಕ್ಷಣಾ ತಂಡ ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ನಡೆಸುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ