ಕೊರೋನಾ ಆತಂಕ, ಅಗತ್ಯ ಸೇವೆಯ ಅಡಿ ಮಾಧ್ಯಮ!

By Suvarna NewsFirst Published Mar 19, 2020, 1:28 PM IST
Highlights

ಅಗತ್ಯ ಸೇವೆಯ ಅಡಿ ಮಾಧ್ಯಮ ಕೂಡಾ ಸೇರ್ಪಡೆ| ಈ ಸೇವೆಯ ಮೇಲಿನ ಕೆಲಸಕ್ಕೆ ನಿರ್ಬಂಧ ಇಲ್ಲ| ಕರ್ನಾಟಕದಲ್ಲಿ ಯಾವಾಗ ಈ ನಿಯಮ ಜಾರಿಗೆ?

ಮುಂಬೈ[ಮಾ.19]: ಕೊರೋನಾ ವೈರಾಣು ವ್ಯಾಪಕವಾಗಿರುವ ಮುಂಬೈನಲ್ಲಿ ಮಾಧ್ಯಮ ಸೇರಿದಂತೆ ಹಲವು ಸೇವೆಗಳನ್ನು ‘ಅಗತ್ಯ ಸೇವೆ’ಗಳ ವ್ಯಾಪ್ತಿಗೆ ತರಲಾಗಿದೆ. ನೀರು, ವೈದ್ಯಕೀಯ ಸೇವೆ, ಸಾರಿಗೆ, ಪಡಿತರ ಸೇವೆ ಹೇಗೆ ಅತ್ಯಗತ್ಯವೋ ಜನರಿಗೆ ಸುದ್ದಿ ತಲುಪಿಸುವ ಮಾಧ್ಯಮವನ್ನು ಕೂಡ ಅಷ್ಟೇ ಅಗತ್ಯ ಎಂದು ಪರಿಗಣಿಸಿ ಅದನ್ನು ಅಗತ್ಯ ಸೇವಾ ವ್ಯಾಪ್ತಿಗೆ ತರಲಾಗಿದೆ.

ಇದರಿಂದಾಗಿ ಮಾಧ್ಯಮವು ಯಾವುದೇ ನಿರ್ಬಂಧ ಇಲ್ಲದೇ ಕಾರ್ಯನಿರ್ವಹಿಸಲು ಅನುವಾಗಲಿದೆ. ಮಾಧ್ಯಮಗಳ ಮಹತ್ವ ಮನಗಂಡು ಮುಂಬೈನಲ್ಲಿ ಇಂತಹ ನಿಯಮ ಜಾರಿಗೊಳಿಸಿರುವ ಕಾರಣ, ಕರ್ನಾಟಕದಲ್ಲಿ ಯಾವಾಗ ಸರ್ಕಾರವು ಇಂಥ ನಿಯಮ ಜಾರಿಗೆ ತರುತ್ತದೆ ಎಂಬುದು ಈಗಿನ ಪ್ರಶ್ನೆ.

ಕೊರೋನಾ ವೈರಸ್ ಸಂಬಂಧಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮುಂಬೈನಲ್ಲಿ ಇದಕ್ಕಾಗಿ ‘ಸಾಂಕ್ರಾಮಿಕ ರೋಗ ಕಾಯ್ದೆ-1897’ನ 10ನೇ ನಿಯಮಕ್ಕೆ ಕೆಲವು ತಿದ್ದುಪಡಿ ಮಾಡಲಾಗಿದೆ. ಈ ಪ್ರಕಾರ, ಅಗತ್ಯವಲ್ಲದ (ನಾನ್‌ ಎಸೆನ್ಷಿಯಲ್‌) ಕೆಲವು ಖಾಸಗಿ ಹಾಗೂ ಸಾರ್ವಜನಿಕ ವಲಯದ ಕಂಪನಿಗಳು ಕೊರೋನಾ ಹರಡಿರುವ ಈ ಸಂದರ್ಭದಲ್ಲಿ ಶೇ.50ರಷ್ಟು ಉದ್ಯೋಗಿಗಳನ್ನು ಮಾತ್ರ ಕಚೇರಿಯಲ್ಲಿ ಕೆಲಸ ಮಾಡಲು ಅವಕಾಶ ನೀಡಿ, ಉಳಿದವರನ್ನು ಕಚೇರಿಯಿಂದ ದೂರ ಇರಿಸಿ ಮನೆಯಿಂದಲೇ ಕೆಲಸ ಮಾಡಿಸಿಕೊಳ್ಳಬಹುದು. ಆದರೆ ಅಗತ್ಯ ಸೇವೆ ಒದಗಿಸುವ ಮಾಧ್ಯಮ ಸೇರಿದಂತೆ ಈ ಕೆಳಕಂಡ ಕ್ಷೇತ್ರಗಳಿಗೆ ಈ ಆದೇಶ ಅನ್ವಯಿಸದು ಎಂದು ಮುಂಬೈ ಮಹಾನಗರ ಪಾಲಿಕೆ ತಿಳಿಸಿದೆ.

ನೀರಿನ ಸೇವೆ, ಒಳಚರಂಡಿ ಸೇವೆ, ರಿಸವ್‌ರ್‍ ಬ್ಯಾಂಕ್‌ ಹಾಗೂ ಬ್ಯಾಂಕಿಂಗ್‌ ಸೇವೆ, ದೂರವಾಣಿ ಹಾಗೂ ಇಂಟರ್ನೆಟ್‌ ಸೇವೆ, ರೈಲು ಹಾಗೂ ಸಾರಿಗೆ ಸೇವೆ, ಆಹಾರ-ತರಕಾರಿ-ಪಡಿತರ ಸೇವೆ, ಆಸ್ಪತ್ರೆ ಹಾಗೂ ಮೆಡಿಕಲ್‌ ಸ್ಟೋರ್‌ಗಳು, ವಿದ್ಯುತ್‌/ಪೆಟ್ರೋಲಿಯಂ/ಇಂಧನ ಸೇವೆ, ಮಾಧ್ಯಮ (ದಿನಪತ್ರಿಕೆ, ಟೀವಿ, ಅಂತರ್ಜಾಲ ಮಾಧ್ಯಮಗಳು) ಸೇವೆ ಹಾಗೂ ಬಂದರು ಅಗತ್ಯ ಸೇವೆಗಳ ಅಡಿ ಬರುತ್ತವೆ. ಇವುಗಳಿಗೆ ನಿರ್ಬಂಧ ಅನ್ವಯಿಸದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

click me!