
ನವದೆಹಲಿ[ಮಾ.12]: ದಿಲ್ಲಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆ ಹಿಂಸಾಚಾರದಲ್ಲಿ ಯಾರೇ ಭಾಗಿಯಾಗಿರಲಿ, ಅವರು ಯಾವುದೇ ಪಕ್ಷ ಮತ್ತು ಜಾತಿ-ಧರ್ಮಕ್ಕೆ ಸೇರಿದವರಗಿರಲಿ. ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.
ದಿಲ್ಲಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಲೋಕಸಭೆಯಲ್ಲಿ ಬುಧವಾರ ನಡೆದ ಚರ್ಚೆಗೆ ಉತ್ತರಿಸಿದ ಅವರು, ‘ಮೇಲ್ನೋಟಕ್ಕೆ ಇದು ಪೂರ್ವನಿಯೋಜಿತ ಹಿಂಸಾಚಾರ ಎನ್ನಿಸುತ್ತದೆ. ಆದರೆ ಗಲಭೆಯು ಮಿತಿ ಮೀರದಂತೆ ಪೊಲೀಸರು ಶ್ರಮ ವಹಿಸಿದ್ದಾರೆ. ಗಲಭೆ ಸಂಭವಿಸಿದ 36 ತಾಸಿನಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದಾರೆ’ ಎಂದರು.
ಇನ್ನು ಕಾಂಗ್ರೆಸ್ ಮೇಲೆ ಹರಿಹಾಯ್ದ ಅವರು, ‘ಶೇ.76ರಷ್ಟುಜನರು ಕಾಂಗ್ರೆಸ್ ಅವಧಿಯಲ್ಲಿ ನಡೆದ ಗಲಭೆಗಳಲ್ಲಿ ಸಾವನ್ನಪ್ಪಿದ್ದಾರೆ. ಹೀಗಾಗಿ ನಮ್ಮನ್ನು ಪ್ರಶ್ನಿಸುವ ಹಕ್ಕು ಕಾಂಗ್ರೆಸ್ಗಿಲ್ಲ’ ಎಂದು ತಿರುಗೇಟು ನೀಡಿದರು.
‘ಪೌರತ್ವ ಕಾಯ್ದೆ ವಿರೋಧಿ ಹಿಂಸಾ ಘಟನೆಗಳಲ್ಲಿ 52 ಮಂದಿ ಸಾವನ್ನಪ್ಪಿದ್ದಾರೆ. 2647 ಜನರನ್ನು ಬಂಧಿಸಲಾಗಿದೆ ಅಥವಾ ವಶಕ್ಕೆ ತೆಗೆದುಕೊಳ್ಳಲಾಗಿದೆ. ಗಲಭೆಕೋರರು ಯಾವುದೇ ಜಾತಿ, ಧರ್ಮ, ಪಕ್ಷಕ್ಕೆ ಸೇರಿದವರಾಗಿರಲು. ಅವರನ್ನು ಬಿಡುವುದಿಲ್ಲ. ಆದರೆ ಮುಗ್ಧರಿಗೆ ಕಿರುಕುಳ ನೀಡುವುದಿಲ್ಲ’ ಎಂದರು.
ಇದೇ ವೇಳೆ ಟ್ರಂಪ್ಗೆ ದೆಹಲಿಗೆ ಆಗಮಿಸಿದ ವೇಳೆ ನಾನು ಅಲ್ಲಿಗೆ ಹೋಗದೆ, ಹಿಂಸಾಚಾರ ನಿಯಂತ್ರಣ ಉಸ್ತುವಾರಿ ವಹಿಸಿದ್ದೆ ಎಂದು ಸ್ಪಷ್ಟನೆ ನೀಡಿದ ಅಮಿತ್ ಶಾ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹಿಂಸಾಪೀಡಿತ ಪ್ರದೇಶಗಳಿಗೆ ತೆರಳಿ ಜನರಿಗೆ ಸಾಂತ್ವಾನ ಹೇಳಿದ್ದನ್ನು ಸಮರ್ಥಿಸಿಕೊಂಡರು.
‘ಹೋಳಿ ಹಬ್ಬಕ್ಕೆ ಮೊದಲೇ ಈ ಬಗ್ಗೆ ಸಂಸತ್ತಿನಲ್ಲಿ ಚರ್ಚೆ ನಡೆಸಿದ್ದರೆ ಹೋಳಿ ವೇಳೆ ದಿಲ್ಲಿಯಲ್ಲಿ ಮತ್ತೆ ಸ್ಥಿತಿ ತ್ವೇಷಮಯವಾಗುವ ಸಾಧ್ಯತೆ ಇತ್ತು. ಹೀಗಾಗಿ ಹೋಳಿ ನಂತರ ಈ ವಿಷಯವನ್ನು ಸಂಸತ್ತಿನಲ್ಲಿ ಚರ್ಚಿಸಲು ಸರ್ಕಾರ ಮುಂದೆಬಂತು’ ಎಂದು ಶಾ ಸ್ಪಷ್ಟಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ