ಇತ್ತೀಚೆಗೆ ಸಾಲಕ್ಕೆ ಹೆದರಿ ಇಡೀ ಕುಟುಂಬವೇ ಆತ್ಮಹತ್ಯೆ ಮಾಡಿಕೊಳ್ಳುವಂತಹ ಘಟನೆಗಳು ಹೆಚ್ಚೆಚ್ಚು ನಡೆಯುತ್ತಿವೆ. ಕೊರೊನಾದಿಂದ ಇಳಿಕೆಯಾದ ವ್ಯವಹಾರ, ಕಳೆದು ಹೋದ ಕೆಲಸ ಹಾಗೂ ಮಾನಸಿಕ ಕಿರುಕುಳದಿಂದಾಗಿ ಆತ್ಮಹತ್ಯೆಗೆ ಶರಣಾಗುವವರ ಸಂಖ್ಯೆ ಹೆಚ್ಚಾಗಿದೆ. ಭೋಪಾಲ್ನಲ್ಲಿ ಸಾಲಕ್ಕೆ ಹೆದರಿ ಇಡೀ ಕುಟುಂಬವೇ ಸಾವಿಗೆ ಶರಣಾಗಿದೆ.
ಭೋಪಾಲ್: ಸಾಲ ತೀರಿಸಲಾಗದೇ ಇಡೀ ಕುಟುಂಬವೇ ಆತ್ಮಹತ್ಯೆ ಮಾಡಿಕೊಂಡಂತಹ ಘಟನೆ ಮಧ್ಯಪ್ರದೇಶದ ಭೋಪಾಲ್(Bhopal)ನಲ್ಲಿ ನಡೆದಿದ್ದು, ಸಾಲ ತೀರಿಸುವಂತೆ ಕಿರುಕುಳ ನೀಡುತ್ತಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ನವಂಬರ್ 25ರಂದು ಭೋಪಾಲ್ನಲ್ಲಿ ಒಂದೇ ಕುಟುಂಬದ ಐವರು ಸಾಲಗಾರರ ಕಿರುಕುಳ ತಾಳಲಾರದೇ ವಿಷ ಸೇವಿಸಿದ್ದರು. ಆದರೆ ಈಗ ಚಿಕಿತ್ಸೆ ಫಲಕಾರಿಯಾಗದೇ ಎಲ್ಲರೂ ಸಾವಿಗೀಡಾಗಿದ್ದಾರೆ. ಕುಟುಂಬದ ಯಜಮಾನ 45 ವರ್ಷದ ಸಂಜೀವ್ ಜೋಷಿ( Sanjeev Joshi), 48 ಗಂಟೆಗಳ ಕಾಲ ಸಾವು ಬದುಕಿನ ಮಧ್ಯೆ ಹೋರಾಡಿ ನವಂಬರ್27ರಂದು ಮೃತಪಟ್ಟಿದ್ದರು. ಸಂಜೀವ್ ಅವರ ತಾಯಿ 67 ವರ್ಷದ ನಂದಿನಿ(Nandini) ಹಾಗೂ ಸಂಜೀವ್ ಅವರ ಇಬ್ಬರು ಮಕ್ಕಳಾದ 19 ವರ್ಷದ ಗ್ರೀಷ್ಮಾ(Grishma) ಹಾಗೂ 16 ವರ್ಷದ ಪೂರ್ವಿ(Purvi)ಆಸ್ಪತ್ರೆಯಲ್ಲಿ ಚಿಕಿತ್ಸೆ ವೇಳೆ ಮೃತಪಟ್ಟಿದ್ದರು. ಇಂದು ಸಂಜೀವ್ ಅವರ ಪತ್ನಿ 45 ವರ್ಷದ ಅರ್ಚನಾ ಜೋಷಿ(Archana Joshi) ಸಾವಿಗೀಡಾಗುವ ಮೂಲಕ ಇಡೀ ಕುಟುಂಬವೇ ಸಾವಿಗೆ ಶರಣಾಗುವಂತಾಗಿದೆ.
ಘಟನೆ ಸಂಬಂಧ ಪಿಪ್ಲಾನಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಬಗ್ಗೆ ಠಾಣೆಯ ಹಿರಿಯ ಅಧಿಕಾರಿ ಅಜಯ್ ನಾಯರ್(Ajay Nair) ಮಾತನಾಡಿ, ಘಟನೆಗೆ ಸಂಬಂಧಿಸಿದಂತೆ ಕಿರುಕುಳ ನೀಡುತ್ತಿದ್ದ ನಾಲ್ವರು ಮಹಿಳೆಯರನ್ನು ಬಂಧಿಸಲಾಗಿದೆ. ಬಂಧಿತರೆಲ್ಲರೂ ಮಹಿಳೆಯರಾಗಿದ್ದು, ಬಬ್ಲಿ, ಆಕೆಯ ಮಗಳಾದ ರಾಣಿ, ಪರಿಮಳಾ ಹಾಗೂ ಆಕೆಯ ಸಹೋದರಿ ಉರ್ಮಿಳಾ ಬಂಧಿತ ಆರೋಪಿಗಳು, ಇವರನ್ನು ಕೋರ್ಟ್ಗೆ ಹಾಜರುಪಡಿಸಿ ಜೈಲಿಗೆ ಕಳುಹಿಸಲಾಗಿದೆ. ಘಟನೆ ಬಗ್ಗೆ ತನಿಖೆ ಮುಂದುವರೆದಿದೆ ಎಂದು ಹೇಳಿದರು. ಮೃತ ಸಂಜೀವ್ ಆಟೋ ಮೊಬೈಲ್ ಬಿಡಿ ಭಾಗಗಳ ಶಾಪ್ ಇಟ್ಟುಕೊಂಡಿದ್ದರು ಹಾಗೂ ಇವರ ಪತ್ನಿ ಅರ್ಚನಾ ದಿನಸಿ ಅಂಗಡಿಯೊಂದನ್ನು ನಡೆಸುತ್ತಿದ್ದರು. ಸಾಲಗಾರರ ಕಿರುಕುಳ ಹೆಚ್ಚಾದಂತೆ ಇಡೀ ಕುಟುಂಬವೇ ಒಟ್ಟಿಗೆ ಸಾಯಲು ನಿರ್ಧರಿಸಿತ್ತು.
ಈ ವರ್ಷ ರಾಜ್ಯದಲ್ಲಿ 750 ರೈತರ ಆತ್ಮಹತ್ಯೆ
ಸಾಲ ನೀಡಿದ್ದ ಬಬ್ಲಿ ದುಬೆ(Babli Dubey), ಯಾವಾಗಲೂ ನಮ್ಮ ಮನೆಗೆ ಬಂದು ನನ್ನ ಪತ್ನಿ ಜೊತೆ ಆಕೆ ನೀಡಿದ 3.70 ಲಕ್ಷ ಹಣವನ್ನು ಹಿಂದಿರುಗಿಸುವಂತೆ ಗಲಾಟೆ ಮಾಡುತ್ತಿದ್ದಳು. ನನ್ನ ಪತ್ನಿ ಮಗಳ ಶಿಕ್ಷಣಕ್ಕೆಂದು ಸಾಲ ಮಾಡಿದ್ದಳು ಎಂದು ಸಾಯುವ ಮುನ್ನ ಸಂಜೀವ್ ದುಬೆ ಪೊಲೀಸರ ಎದುರು ಹೇಳಿಕೆ ನೀಡಿದ್ದರು. ಅಕ್ಟೋಬರ್ನಲ್ಲಿ ನಾನು ಅದ್ಹೇಗೋ 80 ಸಾವಿರ ರೂಪಾಯಿಯನ್ನು ಸಂಗ್ರಹಿಸಿ ಬಬ್ಲಿಗೆ ನೀಡಿದ್ದೆ. ಈ ವೇಳೆ ಆಕೆ ನನ್ನ ಕುಟುಂಬದವರಲ್ಲಿ ಈ ಹಣ ಕೇವಲ ಬಡ್ಡಿಯಷ್ಟೇ, ಮೂಲ ಸಾಲದ ಹಣ ಹಾಗೆಯೇ ಇದೆ ಎಂದು ಹೇಳಿದಳು. ಈ ವೇಳೆ ನಮಗೆ ಸ್ವಲ್ಪ ಸಮಯ ನೀಡುವಂತೆ ನಾವು ಆಕೆಯನ್ನು ಕೇಳಿದ್ದೆವು. ಆದರೆ ಆಕೆ ಅದನ್ನು ತಿರಸ್ಕರಿಸಿದಳು. ಅಲ್ಲದೇ ಇದೇ ರೀತಿ ವ್ಯವಹಾರ ನಡೆಸುತ್ತಿದ್ದ ಹಲವು ಮಹಿಳೆಯರನ್ನು ಮನೆಗೆ ಕರೆತಂದು ಗಲಾಟೆ ಮಾಡಿ ಅವಾಚ್ಯವಾಗಿ ನಿಂದಿಸುತ್ತಿದ್ದಳು. ಈ ಮಧ್ಯೆ ಸಾಲ ತೀರಿಸುವುದಕ್ಕಾಗಿ ನಾವು ಮನೆ ಮಾರಲು ನಿರ್ಧರಿಸಿದೆವು. ಆದರೆ ಹಲವು ಪ್ರಯತ್ನಗಳ ನಂತರವೂ ಆ ಮನೆಯನ್ನು ಮಾರಾಟ ಮಾಡಲು ಸಾಧ್ಯವಾಗಲಿಲ್ಲ.
ಎಷ್ಟು ಹೇಳಿದ್ರೂ ಬಿಡದ ಅಕ್ರಮ ಸಂಬಂಧ: ವಿವಾಹಿತ ಪುರುಷನ ಪರಸ್ತ್ರೀ ಸಂಗ, ಕೊನೆಗೆ ಆಗಿದ್ದೇನು?
ನಂತರ ನವಂಬರ್ 23 ರಂದು ಬಬ್ಲಿ ಹಾಗೂ ಆಕೆಯ ತಂಡ ಸಂಜೆ 5 ಗಂಟೆ ಸುಮಾರಿಗೆ ನಮ್ಮ ಮನೆಗೆ ಬಂದಿದ್ದರು. ಈ ವೇಳೆ ನಾನು ಕೆಲಸದ ಮೇಲಿದ್ದೆ ಹಾಗೂ ನನ್ನ ಪತ್ನಿ ಬ್ಯಾಂಕ್ಗೆ ಹೋಗಿದ್ದಳು. ಈ ವೇಳೆ ಮನೆಯಲ್ಲಿದ್ದ ನಮ್ಮ ಮಕ್ಕಳನ್ನು ಅಪಹರಿಸುವುದಾಗಿ ಬೆದರಿಕೆಯೊಡ್ಡಿದರು. ಅಲ್ಲದೇ ಸಾರ್ವಜನಿಕವಾಗಿ ಅವಮಾನಿಸಿದರು. ಈ ವೇಳೆ ನಾವು ದಿನಾ ಈ ರೀತಿ ಅವಮಾನಕ್ಕೊಳಗಾಗುವುದಕ್ಕಿಂತ ಎಲ್ಲರೂ ಜೊತೆಯಾಗಿ ಸಾಯುವುದು ಒಳ್ಳೆಯದು ಎಂದು ನಿರ್ಧರಿಸಿದೆವು ಎಂದು ಸಂಜೀವ್ ತಾವು ಸಾಯುವುದಕ್ಕೂ ಮುನ್ನ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.