* ಅಸ್ಸಾಂನಲ್ಲಿ ಪೊಲೀಸರ ದುರ್ವರ್ತನೆ
* ಹೆಲ್ಮೆಟ್ ಯಾಕೆ ಧರಿಸಿಲ್ಲ ಎಂದು ಪ್ರಶ್ನಿಸಿದ ಪತ್ರಕರ್ಥನಿಗೆ ಥಳಿತ
* ಪೊಲೀಸರಿಬ್ಬರ ವಿರುದ್ಧ ಪ್ರಕರಣ ದಾಖಲು
ಡಿಸ್ಪುರ್(ಫೆ.08): ಅಸ್ಸಾಂನ ಬಸುಗಾಂವ್ನಲ್ಲಿ ಸೋಮವಾರ ಪತ್ರಕರ್ತರೊಬ್ಬರು ಹೆಲ್ಮೆಟ್ ಧರಿಸದಿರುವ ಬಗ್ಗೆ ಬೈಕ್ನಲ್ಲಿ ಬಂದ ಇಬ್ಬರು ಪೊಲೀಸರನ್ನು ಪ್ರಶ್ನಿಸಿದ್ದು, ಕೋಪಗೊಂಡ ಆರಕ್ಷಕರು ಪತ್ರಕರ್ತನೊಂದಿಗೆ ಅನುಚಿತವಾಗಿ ವರ್ತಿಸಲು ಪ್ರಾರಂಭಿಸಿದ್ದಾರೆ. ಘಟನೆಯ ಬಗ್ಗೆ ತಿಳಿದ ಪೊಲೀಸ್ ಇಲಾಖೆಯು ಆರೋಪಿಗಳಿಬ್ಬರು ಪೊಲೀಸ್ ಪೇದೆಗಳ ವಿರುದ್ಧ ಎಫ್ಐಆರ್ ದಾಖಲಿಸಿದೆ.
ಸುದ್ದಿ ಸಂಸ್ಥೆ ಎಎನ್ಐ ಜೊತೆ ಮಾತನಾಡಿದ ಪತ್ರಕರ್ತ ಜಯಂತ್ ದೇಬನಾಥ್, “ಬೈಕ್ನಲ್ಲಿ ಬಂದ ಇಬ್ಬರು ಪೊಲೀಸರು ಹೆಲ್ಮೆಟ್ ಧರಿಸಿರಲಿಲ್ಲ, ನನ್ನ ಏಕೈಕ ತಪ್ಪು ಎಂದರೆ ಇದು ಸಾರ್ವಜನಿಕರಿಗೆ ಏನು ಸಂದೇಶ ನೀಡುತ್ತದೆ ಎಂದು ನಾನು ಅವರನ್ನು ಕೇಳಿದೆ? ಕೂಡಲೇ ಅವರು ನನ್ನನ್ನು ನಿಂದಿಸಿದರು ಮತ್ತು ನನ್ನನ್ನು ಥಳಿಸಲಾರಂಭಿಸಿದರು. ನಾನು ಪತ್ರಕರ್ತ ಎಂದು ಅವರಿಗೆ ಹೇಳಿದಾಗ, ಕೋಪಗೊಂಡರು ಎಂದಿದ್ದಾರೆ.
ದೇಬನಾಥ್, "ಅಸ್ಸಾಂನಲ್ಲಿ ಪೊಲೀಸರಿಗೆ ಬಹಳಷ್ಟು ಸ್ವಾತಂತ್ರ್ಯ ನೀಡಲಾಗಿದೆ. ಹೀಗಿರುವಾಗ ಅವರು ಅದನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ನೀವು ಕಾನೂನುಗಳನ್ನು ರಚಿಸುತ್ತೀರಿ ಮತ್ತು ನಿಮ್ಮ ಸ್ವಂತ ಜನರು ಅದನ್ನು ಉಲ್ಲಂಘಿಸುತ್ತಾರೆ ಎಂದು ನಾನು ಅಸ್ಸಾಂ ಸರ್ಕಾರಕ್ಕೆ ಹೇಳಲು ಬಯಸುತ್ತೇನೆ . ಈ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳುವಂತೆ ನಾನು ಸರ್ಕಾರವನ್ನು ಒತ್ತಾಯಿಸುತ್ತೇನೆ" ಎಂದು ಹೇಳಿದ್ದಾರೆ. ರಾತ್ರಿ ವೇಳೆ ಹೀಗಾಗಿದ್ದರೆ, ಅವರು ನನಗೆ ಗುಂಡು ಹಾರಿಸಿ ಹತ್ಯೆಗೈಯ್ಯುತ್ತಿದ್ದರು. ಪೊಲೀಸರ ವರ್ತನೆಯಿಂದ ನಾನು ಆಘಾತಕ್ಕೊಳಗಾಗಿದ್ದೇನೆ ಎಂದು ಪತ್ರಕರ್ತ ತಿಳಿಸಿದ್ದಾರೆ.
ಏತನ್ಮಧ್ಯೆ, ಚಿರಾಂಗ್ನ ಉಪ ಪೊಲೀಸ್ ಅಧೀಕ್ಷಕ (ಡಿಎಸ್ಪಿ) ಲಾಬಾ ಕ್ರಿ ದೇಕಾ ಅವರು ಈ ವಿಷಯದಲ್ಲಿ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಖಚಿತಪಡಿಸಿದ್ದಾರೆ. ಇಬ್ಬರು ಕಾನ್ಸ್ಟೆಬಲ್ಗಳ ವಿರುದ್ಧ ಜಯಂತ್ ದೇಬನಾಥ್ ಅವರು ನೀಡಿರುವ ಎಫ್ಐಆರ್ ಆಧರಿಸಿ, ಈ ಸಂಬಂಧ ಅಗತ್ಯ ಕ್ರಮ ಕೈಗೊಳ್ಳುತ್ತಿದ್ದೇವೆ, ಇಬ್ಬರು ಕಾನ್ಸ್ಟೆಬಲ್ಗಳನ್ನು ಬಂಧಿಸಿದ್ದೇವೆ. ಈ ವಿಚಾರದಲ್ಲಿ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದಿದ್ದಾರೆ.