ಪಂಚರಾಜ್ಯ ಚುನಾವಣೆ ಗುರುವಾರ ಮುಕ್ತಾಯಗೊಂಡಿದ್ದು ಇದರ ಬೆನ್ನಲ್ಲೇ ಚುನಾವಣೋತ್ತರ ಸಮೀಕ್ಷೆಗಳು ಪ್ರಕಟವಾಗಿದೆ. ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದೆ.
ನವದೆಹಲಿ (ಏ. 30): ಕೊರೋನಾ ಸಂಕಟದಿಂದ ಬಂಗಾಳದಲ್ಲಿ ಕೊನೆಯ ಮೂರು ಹಂತದ ಚುನಾವಣೆ ಪೇಲವವಾಗಿತ್ತು. ಜೊತೆಗೆ ಸ್ವಲ್ಪ ಶೇಕಡಾವಾರು ಮತದಾನ ಕೂಡ ಕಡಿಮೆ ಆಗಿದೆ. ಈಗಿನ ಪ್ರಕಾರ ಒಂದು ವೇಳೆ ಬಿಜೆಪಿ ಮತ್ತು ತೃಣಮೂಲ 40:40 ಶೇಕಡಾ ಮತ ಪಡೆದರೆ ಇಬ್ಬರ ಸೀಟುಗಳು ಕೂಡ 135ರ ಆಸುಪಾಸು ಇರಬಹುದು. ಆದರೆ, ಒಂದು ವೇಳೆ ಒಂದು ಪಕ್ಷ ಶೇಕಡಾ 42 ಪಡೆದು ಇನ್ನೊಂದು 38 ಪಡೆದರೂ ಕೂಡ 4 ಪರ್ಸೆಂಟ್ ಅಂತರಕ್ಕೆ ಸೀಟುಗಳ ಅಂತರ 60ರಿಂದ 70ಕ್ಕೆ ಹೋಗಬಹುದು ಎನ್ನುವ ಅಂದಾಜಿದೆ.
ಮುಸ್ಲಿಂ ಬಾಹುಳ್ಯದ 80 ಕ್ಷೇತ್ರಗಳಲ್ಲಿ ಮತ್ತು ಕೊಲ್ಕತ್ತಾ ಆಸುಪಾಸು ಮಮತಾ ಎಷ್ಟುಸೀಟು ಗೆಲ್ಲುತ್ತಾರೆ ಎನ್ನುವುದು ಮತ್ತು ಉತ್ತರ ಬಂಗಾಳ ಹಾಗೂ ಜಂಗಲ್ ಮಹಲ್ನಲ್ಲಿ ಬಿಜೆಪಿ ಎಷ್ಟುಗೆಲ್ಲಬಹುದು ಎನ್ನುವುದು ಸೀಟುಗಳ ಅಂತರ ನಿರ್ಧರಿಸಲಿದೆ. ಫಲಿತಾಂಶ ಏನೇ ಇರಲಿ ಹಿಂದುತ್ವ ಮತ್ತು ಮೋದಿ ಮೂಲಕ ಬಿಜೆಪಿ ಇಷ್ಟರವರೆಗೆ ಅಭೇದ್ಯವಾಗಿದ್ದ ಬಂಗಾಳದಲ್ಲಿ ಆಟಗಾರನಾಗಿ ಪ್ರವೇಶ ಪಡೆದಿರುವುದಂತೂ ಸ್ಪಷ್ಟ.
ಖಡಕ್ ಉತ್ತರದ ಸಂತೋಷ್
ಬೆಂಗಳೂರಿನಿಂದ ದಿಲ್ಲಿಗೆ ಹೋಗಿದ್ದೇ ಹೋಗಿದ್ದು ಬಿಜೆಪಿ ಸಂಘಟನಾ ಕಾರ್ಯದರ್ಶಿ ಸಂತೋಷ್ ಟ್ವೀಟರ್ನಲ್ಲಿ ಸದಾ ಆಕ್ರಮಣಕಾರಿ ಮೂಡ್ನಲ್ಲಿ ಕಾಣುತ್ತಾರೆ. ಗಂಟೆಗೆ ಕನಿಷ್ಠ ಎರಡು ಟ್ವೀಟ್ ಮಾಡುವ ಸಂತೋಷ್ ಸರ್ಕಾರ ಮತ್ತು ಬಿಜೆಪಿಯನ್ನು ಯಾರಾದರೂ ಟೀಕಿಸಿದರೆ ತಕ್ಷಣ ಉತ್ತರ ನೀಡುತ್ತಾರೆ. ಸಂತೋಷ್ರ ಮುಖ್ಯ ಟಾರ್ಗೆಟ್ ಎಂದರೆ ದಿಲ್ಲಿಯ ಆಂಗ್ಲ ಭಾಷೆಯ ಪತ್ರಕರ್ತರು. ಹಾಗೆ ನೋಡಿದರೆ ಮೋದಿ, ಶಾ, ನಡ್ಡಾ ಸೇರಿದಂತೆ ಪಕ್ಷದ ಶೀರ್ಷ ಸ್ಥಾನದಲ್ಲಿರುವ ನಾಯಕರು ತಮ್ಮ ಬಗೆಗಿನ ಮಾಹಿತಿ ಬಿಟ್ಟು ಟೀಕೆಗಳಿಗೆ ಅಲ್ಲೇ ಖಾರ ಉತ್ತರ ಕೊಡುವುದು ಅಪರೂಪ. ಆದರೆ ಸಂತೋಷ್ರ ಟ್ವೀಟ್ ನೋಡಿದರೆ ಮನಸ್ಸಲ್ಲಿ ಇದ್ದುದನ್ನು ಹೊರಗೆ ನೇರವಾಗಿ ಹೇಳಿಬಿಡುವುದು ಕಾಣಿಸುತ್ತದೆ.
ಕೇವಲ 2 ಲಸಿಕೆ ಉತ್ಪಾದಕ ಕಂಪನಿಗಳ ಮೇಲೆ ಅವಲಂಬಿತವಾಗಿದ್ದೇ ತಪ್ಪಾಯಿತೇ?
ಸಿಎಂ ಯೋಗಿಯ ಚಿಂತೆ
ಕೊರೋನಾದ ಮೊದಲ ಅಲೆಯಲ್ಲಿ ಉತ್ತರ ಪ್ರದೇಶ ಬಚಾವಾಗಿತ್ತು. ವಲಸೆ ಕಾರ್ಮಿಕರು ದೊಡ್ಡ ಸಂಖ್ಯೆಯಲ್ಲಿ ಮುಂಬೈನಿಂದ ಗುಳೆ ಹೋದರೂ ಕೂಡ ಯುಪಿಗೆ ಸೋಂಕು ದೊಡ್ಡ ಸಮಸ್ಯೆ ತಂದಿರಲಿಲ್ಲ. ಆದರೆ, ಕುಂಭಮೇಳದ ಕಾರಣದಿಂದ ಉತ್ತರ ಪ್ರದೇಶದ ಬಹುತೇಕ ಜಿಲ್ಲೆಗಳಿಗೆ ಸೋಂಕು ವ್ಯಾಪಿಸುತ್ತಿದೆ. ಲಕ್ನೋ, ಗಾಜಿಯಾಬಾದ್, ನೋಯಿಡಾ, ಕಾನ್ಪುರ್, ಗೋರಖ್ಪುರಗಳಲ್ಲಂತೂ ಬೆಡ್ ಸಿಗದೇ ಆಮ್ಲಜನಕ ಪೂರೈಕೆ ಇಲ್ಲದೇ ಹಾಹಾಕಾರದ ಸ್ಥಿತಿಯಿದೆ. ಪಶ್ಚಿಮ ಮತ್ತು ದಕ್ಷಿಣದ ರಾಜ್ಯಗಳ ಜಿಲ್ಲಾ ಕೇಂದ್ರಗಳಲ್ಲಿ ಒಳ್ಳೆ ಖಾಸಗಿ ಅಸ್ಪತ್ರೆಗಳಾದರೂ ಇವೆ.
ಆದರೆ ಉತ್ತರ ಪ್ರದೇಶದಲ್ಲಿ ಹಾಗಿಲ್ಲ. ಜನ ದಿಲ್ಲಿ ಆಸ್ಪತ್ರೆಗಳಿಗೆ ನುಗ್ಗುತ್ತಾರೆ. ಯೋಗಿ ಆದಿತ್ಯನಾಥ್ರಿಗೆ ಚುನಾವಣಾ ವರ್ಷದಲ್ಲಿ ಇದೊಂದು ದೊಡ್ಡ ಪರೀಕ್ಷೆ. ಒಂದು ವೇಳೆ ಈ ಸೋಂಕು ಹರಡುವಿಕೆಯನ್ನು ಸರಿಯಾಗಿ ನಿಭಾಯಿಸದೆ ಇದ್ದರೆ ಅದೇ ಆಡಳಿತ ವಿರೋಧಿ ಅಲೆ ಆಗುವ ಸಾಧ್ಯತೆಗಳು ಕೂಡ ಇದ್ದೇ ಇರುತ್ತವೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ
ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ