ಕಾಂಗ್ರೆಸ್‌ ಅಧ್ಯಕ್ಷರಾಗಿ ಮರಳಲು ರಾಹುಲ್‌ ಗಾಂಧಿಯನ್ನೇ ಒತ್ತಾಯಿಸುತ್ತೇವೆ: ಖರ್ಗೆ

By BK AshwinFirst Published Aug 27, 2022, 3:16 PM IST
Highlights

ರಾಹುಲ್‌ ಗಾಂಧಿಯೇ ಪಕ್ಷದ ಮುಂದಿನ ಅಧ್ಯಕ್ಷರಾಗಬೇಕು. ಇದಕ್ಕೆ ನಾವು ಅವರನ್ನು ಮನವಿ ಮಾಡುತ್ತೇವೆ, ಒತ್ತಾಯಿಸುತ್ತೇವೆ ಎಂದು ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. 

ಕಾಂಗ್ರೆಸ್‌ ಮುಂದಿನ ಅಧ್ಯಕ್ಷರ ಆಯ್ಕೆ ಶೀಘ್ರದಲ್ಲೇ ಚುನಾವಣೆ ನಡೆಯುತ್ತದೆ ಎಂಬ ಮಾತುಗಳು ಕೇಳಿಬರುತ್ತಿದ್ದವು. ಅಲ್ಲದೆ, ಈ ಸಂಬಂಧ ಚುನಾವಣಾ ದಿನಾಂಕವನ್ನು ಶೀಘ್ರದಲ್ಲೇ ಘೋಷಣೆ ಮಾಡಲಾಗುತ್ತದೆ. ಆದರೆ, ರಾಹುಲ್‌ ಗಾಂಧಿಯನ್ನೇ ಕಾಂಗ್ರೆಸ್‌ ಅಧ್ಯಕ್ಷರಾಗಿ ವಾಪಸ್‌ ಬರಲು ನಾವು ಒತ್ತಾಯಿಸುತ್ತೇವೆ ಎಂದು ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಶನಿವಾರ ಹೇಳಿದ್ದಾರೆ. ಈ ಹಿಂದೆ ರಾಹುಲ್‌ ಗಾಂಧಿ ಕಾಂಗ್ರೆಸ್‌ ಅಧ್ಯಕ್ಷರಾಗಿದ್ದರು. ಆದರೆ, ಲೋಕಸಭೆ ಚುನಾವಣೆಯಲ್ಲಿ ಸೋಲಿನ ಬಳಿಕ ರಾಜೀನಾಮೆ ನೀಡಿದ್ದರು. ನಂತರ ಪಕ್ಷದ ತಾತ್ಕಾಲಿಕ ಅಧ್ಯಕ್ಷೆಯಾಗಿ ಸೋನಿಯಾ ಗಾಂಧಿ ಆಯ್ಕೆಯಾಗಿದ್ದಾರೆ. ಈಗ, ಮತ್ತೆ ರಾಹುಲ್‌ ಗಾಂಧಿಯನ್ನೇ ನೂತನ ಅಧ್ಯಕ್ಷರನ್ನಾಗಿ ವಾಪಸ್‌ ಬರಲು ಒತ್ತಾಯಿಸುತ್ತೇವೆ ಎಂದು ಖರ್ಗೆ ಹೇಳಿದ್ದಾರೆ. ಅವರಂತೆ ದೇಶಾದ್ಯಂತ ಗುರುತಿಸಲ್ಪಟ್ಟ ವ್ಯಕ್ತಿ ಬೇರೆ ಯಾರೂ ಇಲ್ಲವೆಂಬ ಹಿನ್ನೆಲೆ ಅವರೇ ಅಧ್ಯಕ್ಷರಾಗಬೇಕೆಂದು ಖರ್ಗೆ ಹೇಳಿದ್ದಾರೆ.

ಅಲ್ಲದೆ, ಪಕ್ಷವನ್ನು ಮುನ್ನಡೆಸುವವರು ಯಾರಾದರೂ ದೇಶಾದ್ಯಂತ ಹೆಚ್ಚು ಗುರುತಿಸಲ್ಪಟ್ಟ ವ್ಯಕ್ತಿಯಾಗಿರಬೇಕು, ಹಾಗೂ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಮತ್ತು ಪಶ್ಚಿಮ ಬಂಗಾಳದಿಂದ ಗುಜರಾತ್‌ವರೆಗೆ ಬೆಂಬಲವನ್ನು ಹೊಂದಿರಬೇಕು ಎಂದೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕನಾಗಿರುವ ಮಲ್ಲಿಕಾರ್ಜುನ ಖರ್ಗೆ ಅಭಿಪ್ರಾಯಪಟ್ಟಿದ್ದಾರೆ. 

ಕಾಂಗ್ರೆಸ್‌ ಯೂಟ್ಯೂಬ್‌ ಚಾನೆಲ್‌ ಡಿಲೀಟ್: ತಾಂತ್ರಿಕ ತೊಂದರೆ ಅಥವಾ ಕುತಂತ್ರದ ಬಗ್ಗೆ ತನಿಖೆ..!

ಕಾಂಗ್ರೆಸ್‌ ಅಧ್ಯಕ್ಷ ಹುದ್ದೆಗೆ ಚುನಾವಣೆ ನಡೆಯಲಿರುವ ಹಿನ್ನೆಲೆ ಹಲವು ಕಾಂಗ್ರೆಸ್‌ ನಾಯಕರು ರಾಹುಲ್‌ ಗಾಂಧಿಯೇ ಮತ್ತೆ ಈ ಹುದ್ದೆಯನ್ನು ವಹಿಸಿಕೊಳ್ಳಬೇಕೆಂದು ಆಗ್ರಹಿಸುತ್ತಿದ್ದಾರೆ. ಆದರೆ, ಪಕ್ಷದ ಮುಂದಿನ ಅಧ್ಯಕ್ಷರು ಯಾರೆಂಬುದರ ಬಗ್ಗೆ ಈಗಲೂ ಸಹ ಗೊಂದಲ ಮುಂದುವರಿದಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ಸೋಲುಂಟಾದ ಬಳಿಕ ಹಾಗೂ ಸತತ 2 ಚುನಾವಣೆಗಳಲ್ಲಿ ಸೋತ ನಂತರ ರಾಹುಲ್‌ ಗಾಂಧಿ ಕಾಂಗ್ರೆಸ್‌ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿದ್ದರು. ಬಳಿಕ ಸೋನಿಯಾ ಗಾಂಧಿ ಪಕ್ಷದ ತಾತ್ಕಾಲಿಕ ಅಧ್ಯಕ್ಷರಾಗಿದ್ದರು. 
ಇನ್ನು, ಈ ಹುದ್ದೆಯನ್ನು ವಹಿಸಿಕೊಳ್ಳಲು ರಾಹುಲ್‌ ಗಾಂಧಿ ಮನಸ್ಸು ಮಾಡುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಮಲ್ಲಿಕಾರ್ಜುನ್‌ ಖರ್ಗೆ,  ಪಕ್ಷದ ಹಿತಾಸಕ್ತಿಗಾಗಿ, ದೇಶದ ಹಿತಾಸಕ್ತಿಗಾಗಿ, ಆರ್‌ಎಸ್‌ಎಸ್‌ - ಬಿಜೆಪಿ ವಿರುದ್ಧ ಹೋರಾಡಲು ಹಾಗೂ ದೇಶವನ್ನು ಒಗ್ಗಟ್ಟಾಗಿರಿಸಲು ನಾವು ರಾಹುಲ್‌ ಗಾಂಧಿ ಅವರಿಗೆ ಪಕ್ಷದ ಅಧ್ಯಕ್ಷ ಹುದ್ದೆಯನ್ನು ವಹಿಸಿಕೊಳ್ಳಲು ಒಪ್ಪಿಕೊಳ್ಳುವಂತೆ ಮನವಿ ಮಾಡುತ್ತೇವೆ ಎಂದೂ ಖರ್ಗೆ ಹೇಳಿದ್ದಾರೆ. 

ಕಾಂಗ್ರೆಸ್‌ ಮುಂದಿನ ಅಧ್ಯಕ್ಷರಾಗ್ತಾರಾ ಅಶೋಕ್‌ ಗೆಹ್ಲೋಟ್‌..? ಕೈ ಪಕ್ಷದಲ್ಲಿ ಗುಸುಗುಸು..!

ಅಲ್ಲದೆ, ನಾವು ಅವರನ್ನು ಕೇಳುತ್ತೇವೆ, ನಾವು ಅವರನ್ನು ಒತ್ತಾಯಿಸುತ್ತೇವೆ ಹಾಗೂ ಕಾಂಗ್ರೆಸ್‌ ಅಧ್ಯಕ್ಷ ಹುದ್ದೆಗೆ ವಾಪಸ್‌ ಬರಲು ಮನವಿ ಮಾಡುತ್ತೇವೆ. ನಾವು, ಅವರ ಹಿಂದೆ ನಿಲ್ಲುತ್ತೇವೆ,  ನಾವು ಅವರನ್ನು ಒಪ್ಪಿಕೊಳ್ಳುವಂತೆ ಮಾಡಲು ಪ್ರಯತ್ನಿಸುತ್ತೇವೆ ಎಂದೂ ಕೇಂದ್ರದ ಮಾಜಿ ಸಚಿವ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಈ ಮಧ್ಯೆ, ಭಾನುವಾರ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ (Congress Working Committee) (CWC) ವರ್ಚುಯಲ್‌ ಸಭೆ ನಡೆಯಲಿದ್ದು, ಈ ವೇಳೆ ಕಾಂಗ್ರೆಸ್‌ ಅಧ್ಯಕ್ಷ ಹುದ್ದೆಗೆ ಚುನಾವಣೆ ನಡೆಯಲು ವೇಳಾಪಟ್ಟಿಯನ್ನು ಅಂತಿಮಗೊಳಿಸಲಾಗುತ್ತದೆ ಎಂದು ತಿಳಿದುಬಂದಿದೆ. ಅಲ್ಲದೆ, ಸೆಪ್ಟೆಂಬರ್‌ 20ರೊಳಗೆ ಮುಗಿಯಬೇಕಿದ್ದ ಚುನಾವಣೆಯು ಇನ್ನೂ ಕೆಲ ವಾರಗಳ ಕಾಲ ಮುಂದೂಡಿಕೆಯಾಗುವ ಸಾಧ್ಯತೆ ಹೆಚ್ಚಿದೆ ಎಂದೂ ಪಕ್ಷದ ಮೂಲಗಳು ಗುರುವಾರ ಮಾಹಿತಿ ನೀಡಿದೆ. 

ಈ ಹಿಂದೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಸಹ ರಾಹುಲ್‌ ಗಾಂಧಿ ಪಕ್ಷದ ಮುಖ್ಯಸ್ಥ ಸ್ಥಾನವನ್ನು ವಹಿಸಿಕೊಳ್ಳದಿರುವ ಅವರ ನಿರ್ಧಾರವನ್ನು ಮರುಪರಿಶೀಲಿಸಬೇಕು, ಅಲ್ಲದೆ ಅವರು ಮರು ಪರಿಶೀಲನೆ ಮಾಡದಿದ್ದರೆ, ದೇಶಾದ್ಯಂತ ಪಕ್ಷದ ಸದಸ್ಯರಿಗೆ ನಿರಾಶೆಯಾಗುತ್ತದೆ ಎಂದು ಹೇಳಿದ್ದರು. ಅಲ್ಲದೆ, ರಾಹುಲ್‌ ಗಾಂಧಿ ಈ ಹುದ್ದೆಯನ್ನು ಅಧಿಕಾರ ವಹಿಸಿಕೊಳ್ಳುವ ಪರವಾಗಿ ಪಕ್ಷದ ಸರ್ವಾನುಮತ ಬೆಂಬಲವಿದೆ. ಈ ಹಿನ್ನೆಲೆ ದೇಶಾದ್ಯಂತ ಕಾಂಗ್ರೆಸ್‌ ಕಾರ್ಯಕರ್ತರ ಭಾವನೆಗಳನ್ನು ಪರಿಗಣಿಸಿ ರಾಹುಲ್‌ ಗಾಂಧಿ ಈ ಹುದ್ದೆಯನ್ನು ವಹಿಸಿಕೊಳ್ಳಬೇಕೆಂದೂ ಅಶೋಕ್‌ ಗೆಹ್ಲೋಟ್‌ ಹೇಳಿದ್ದರು. 

click me!