
ಲಖನೌ: ಶ್ರೀರಾಮಮಂದಿರದ ಪ್ರಾಣಪ್ರತಿಷ್ಠಾಪನೆಗೆ ಅಂತಿಮ ಹಂತದ ಸಿದ್ಧತೆಗಳು ನಡೆಯುತ್ತಿರುವ ನಡುವೆಯೇ ಧರ್ಮಾತೀತವಾಗಿ ಸಮಸ್ತರೂ ಈ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. ಅದರಲ್ಲೂ ಪ್ರಮುಖವಾಗಿ ಅಯೋಧ್ಯೆಯಲ್ಲಿ 1992ರಲ್ಲಿ ಕರಸೇವೆಯಲ್ಲಿ ಭಾಗವಹಿಸಿದ್ದ ಮುಸ್ಲಿಂ ಬಿಜೆಪಿ ಕಾರ್ಯಕರ್ತ ಮೊಹಮ್ಮದ್ ಹಬೀಬ್ ಶ್ರೀರಾಮ ನಮ್ಮ ಪೂರ್ವಜನೆಂದು ನಂಬಿರುವುದಾಗಿ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಹಬೀಬ್, ಶ್ರೀರಾಮಮಂದಿರದೊಂದಿಗೆ ನನಗೆ ಭಾವನಾತ್ಮಕ ಸಂಬಂಧವಿದೆ. ಆತನನ್ನು ನಮ್ಮ ಪೂರ್ವಜ ಎಂದೇ ನಂಬಿದ್ದು, ಪೂರ್ವಜರನ್ನು ನೆನೆಯುವುದೇ ಭಾರತೀಯತೆಯ ತತ್ವ ಎಂದು ಪರಿಗಣಿಸಿದ್ದೇನೆ. 1992ರಲ್ಲಿ ಕರಸೇವೆ ನಡೆದಾಗ ಡಿ.2 ರಿಂದ 4-5 ದಿನ ಅಯೋಧ್ಯೆಯಲ್ಲಿದ್ದು ಅದರಲ್ಲಿ ಪಾಲ್ಗೊಂಡಿದ್ದೇನೆ. 32 ವರ್ಷದ ನಂತರ ಈಗ ನಮ್ಮ ಹೋರಾಟಕ್ಕೆ ಜಯ ಸಿಕ್ಕಿದ್ದು, ನಗರದಲ್ಲಿ ಶ್ರೀರಾಮಮಂದಿರ ಲೋಕಾರ್ಪಣೆಯಾಗುತ್ತಿರುವುದು ಧನ್ಯತಾ ಭಾವ ಮೂಡಿಸಿದೆ. ಅದಕ್ಕಾಗಿ ಕಾರ್ಯಕರ್ತರು ನಮಗೆ ಅಕ್ಷತೆ, ಪತ್ರ ಮತ್ತು ಶ್ರೀರಾಮಂದಿರದ ಚಿತ್ರಪಟವನ್ನು ನಮ್ಮ ಮನೆಗೆ ಗೌರವಪೂರ್ವಕವಾಗಿ ಕೊಟ್ಟು ಹೋಗಿದ್ದಾರೆ. ಜ.22ರ ನಂತರ ಖಂಡಿತ ಅಯೋಧ್ಯೆಗೆ ಹೋಗಿ ರಾಮಲಲ್ಲಾನ ದರ್ಶನ ಪಡೆಯುತ್ತೇನೆ ಎಂದು ತಿಳಿಸಿದರು.
ಶ್ರೀ ರಾಮ ಮಂದಿರ ಪ್ರವೇಶ ದ್ವಾರದ ಬಳಿ ಹನುಮಾನ್, ಗರುಡಾ ಸೇರಿ 4 ಮೂರ್ತಿಗಳ ಸ್ಥಾಪನೆ!
ಶ್ರೀರಾಮ ಪ್ರತಿಯೊಬ್ಬರ ಕಣಕಣದಲ್ಲೂ ಇದ್ದಾನೆ: ಕಾಶಿಯ ನಜ್ಮಾ
ಲಖನೌ: ವಾರಾಣಸಿಯಲ್ಲಿ ಮುಸ್ಲಿಂ ಮಹಿಳಾ ಫೌಂಡೇಷನ್ ಮೂಲಕ ಮುಸ್ಲಿಂ ಮಹಿಳೆಯರ ಶ್ರೇಯೋಭಿವೃದ್ಧಿಗೆ ದುಡಿಯುತ್ತಿರುವ ನಜ್ಮಾ ಮತ್ತು ನಜ್ನೀನ್ ಅಯೋಧ್ಯೆಯಿಂದ ರಾಮಜ್ಯೋತಿ ತಂದು ವಾರಾಣಸಿಯಲ್ಲಿ ಎಲ್ಲ ಸಮುದಾಯದ 500 ಮನೆಗಳಿಗೆ ವಿತರಣೆ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ.
ಈ ಕುರಿತು ಮಾತನಾಡಿದ ನಜ್ಮಾ, ಶ್ರೀರಾಮನನ್ನು ವಾರಾಣಸಿಯಲ್ಲಿ ನೆಲೆಸಿರುವ ಪ್ರತಿಯೊಬ್ಬರೂ ತಮ್ಮ ಪೂರ್ವಜನೆಂದೇ ಭಾವಿಸಿ ಗೌರವಿಸುತ್ತಾರೆ. ನಾನೂ ಕೂಡ 2006ರಲ್ಲಿ ಸಂಕಟ ಮೋಚನ ದೇವಾಲಯದಲ್ಲಿ ದುರಂತ ನಡೆದಾಗಿನಿಂದ ಶ್ರೀರಾಮನ ಭಕ್ತೆಯಾಗಿದ್ದೇನೆ. ಇಲ್ಲಿನ ಪ್ರತಿಯೊಬ್ಬರ ಕಣಕಣದಲ್ಲೂ ರಾಮನಿದ್ದಾನೆ. ನಾವು ಅಯೋಧ್ಯೆಯಿಂದ ತಂದ ರಾಮಜ್ಯೋತಿಯನ್ನು ಎಲ್ಲರ ಮನೆಗಳಿಗೆ ವಿತರಿಸಿ ಜ.22ರವರೆಗೆ ನಂದಾದೀಪ ಆರದಂತೆ ಬೆಳಗಿಸಬೇಕೆಂದು ಮನವಿ ಮಾಡಿಕೊಳ್ಳುತ್ತಿದ್ದೇವೆ. ಜೊತೆಗೆ ಜ.22ರ ನಂತರ ಅಯೋಧ್ಯೆಗೆ ತೆರಳಿ ಶ್ರೀರಾಮನ ದರ್ಶನ ಪಡೆಯಲಿದ್ದೇವೆ ಎಂದು ತಿಳಿಸಿದರು.
ರಾಮ ಮಂದಿರ ಉದ್ಘಾಟನೆಗೆ ಸಿಎಂ ಸಿದ್ದರಾಮಯ್ಯಗೇ ಆಹ್ವಾನ ಸಿಗದಿದ್ದರೂ, ಲಕ್ಷ್ಮೀ ಹೆಬ್ಬಾಳ್ಕರ್ಗೆ ಸಿಕ್ಕಿದ್ಹೇಗೆ?
ಅಲ್ಲದೆ ಅಯೋಧ್ಯೆ ರಾಮಮಂದಿರ ಕುರಿತ ಪ್ರಕರಣದಲ್ಲಿ ಬಾಬ್ರಿ ಮಸೀದಿ ಪರ ದೂರುದಾರ ಇಕ್ಬಾಲ್ ಅನ್ಸಾರಿಗೆ ಕೂಡ ಪ್ರಾಣಪ್ರತಿಷ್ಠಾಪನೆಗೆ ಆಹ್ವಾನ ನೀಡಲಾಗಿದ್ದು, ಅವರು ಅದನ್ನು ಸಂತೋಷದಿಂದ ಸ್ವೀಕರಿಸಿ ಪಾಲ್ಗೊಳ್ಳುವುದಾಗಿ ತಿಳಿಸಿದ್ದಾರೆ. ಅಲ್ಲದೆ 2019ರಲ್ಲಿ ನ್ಯಾಯಾಲಯ ತೀರ್ಪು ನೀಡಿದ ದಿನವೇ ನಮ್ಮ ಎಲ್ಲ ಗೊಂದಲಗಳು ದೂರವಾಗಿದ್ದು, ತೀರ್ಪನ್ನು ದೇಶದ ಸಮಸ್ತ ಮುಸ್ಲಿಂ ಬಾಂಧವರು ಯಾವುದೇ ಅಹಿತಕರ ಘಟನೆ ನಡೆಸದೆ ಸ್ವಾಗತಿಸಿದ್ದರು. ಈಗ ಅಯೋಧ್ಯೆಯು ಶ್ರೀರಾಮಮಂದಿರದ ನೆಪದಲ್ಲಿ ಸಂಪೂರ್ಣ ಅಭಿವೃದ್ಧಿಯಾಗುತ್ತಿರುವುದು ಸಂಸತಸದಾಯಕ ವಿಷಯವಾಗಿದೆ ಎಂದು ತಿಳಿಸಿದರು.
ಅಯೋಧ್ಯೆಯ ಶ್ರೀರಾಮನ ಪ್ರಾಣಪ್ರತಿಷ್ಠೆಗೆ 'ಸೀತೆ'ಗೂ ಆಹ್ವಾನ: ನನ್ನ ಪಾಲಿನ ದೀಪಾವಳಿ ಇದು ಎಂದ ನಟಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ