
ಮುಂಬೈ: ಛತ್ರಪತಿ ಶಿವಾಜಿ ಅವರನ್ನು ಟಿಪ್ಪು ಸುಲ್ತಾನ್ ಜತೆಗೆ ಸಮೀಕರಿಸಿ ಕಾಂಗ್ರೆಸ್ ನಾಯಕ ಹರ್ಷವರ್ಧನ್ ಸಪ್ಕಲ್ ನೀಡಿದ ಹೇಳಿಕೆ ಮಹಾರಾಷ್ಟ್ರದ ಪುಣೆಯಲ್ಲಿ ಹಿಂಸಾಚಾರಕ್ಕೆ ಕಾರಣವಾಗಿದೆ. ಹೇಳಿಕೆ ವಿರೋಧಿಸಿ ಬಿಜೆಪಿ ನಡೆಸಿದ ಪ್ರತಿಭಟನೆ ವೇಳೆ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರು ಪರಸ್ಪರ ಕಲ್ಲುತೂರಾಟ ನಡೆಸಿದ್ದು, ಈ ವೇಳೆ 9 ಜನರು ಗಾಯಗೊಂಡಿದ್ದಾರೆ.
ಪ್ರಕರಣ ಸಂಬಂಧ ಉಭಯ ಪಕ್ಷಗಳ ನಾಯಕರು, ಕಾರ್ಯಕರ್ತರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಾಲೇಗಾಂವ್ನ ಉಪಮೇಯರ್ ಶಾನ್ ಎ ಹಿಂದ್ ನಿಹಾಲ್ ಅಹಮದ್ ಇತ್ತೀಚೆಗೆ ತಮ್ಮ ಕಚೇರಿಯಲ್ಲಿ ಕಾರ್ಪೊರೇಟರ್ ಒಬ್ಬರು ನೀಡಿದ್ದ ಟಿಪ್ಪು ಫೋಟೋ ಅಳವಡಿಸಿದ್ದರು. ಇದಕ್ಕೆ ಶಿವಸೇನೆ ಮತ್ತು ಹಿಂದೂ ಸಂಘಟನೆ ಕಾರ್ಯಕರ್ತರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು.
ಆದರೆ ಟಿಪ್ಪು ಫೋಟೋ ಅಳವಡಿಕೆ ಸಮರ್ಥಿಸಿಕೊಂಡಿದ್ದ ಕಾಂಗ್ರೆಸ್ ನಾಯಕ ಹರ್ಷವರ್ಧನ್ ಸಪ್ಕಲ್, ಟಿಪ್ಪು ಸುಲ್ತಾನ್ನನ್ನು ಶಿವಾಜಿ ಮಹಾರಾಜರಿಗೆ ಹೋಲಿಸಿದ್ದರು. ಶಿವಾಜಿ ಸ್ವರಾಜ್ಯಕ್ಕೆ ಕರೆಕೊಟ್ಟಂತೆ, ಟಿಪ್ಪು ಬ್ರಿಟಿಷರ ವಿರುದ್ಧ ಹೋರಾಟಕ್ಕೆ ಕರೆ ನೀಡಿದ್ದ ಎಂದಿದ್ದರು.
ಸಪ್ಕಲ್ ಹೇಳಿಕೆ ಖಂಡಿಸಿ ಬಿಜೆಪಿ ಕಾರ್ಯಕರ್ತರು, ಮುಖಂಡರು ಪುಣೆಯ ಕಾಂಗ್ರೆಸ್ ಭವನ ಎದುರು ಭಾನುವಾರ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ದಿಢೀರ್ ಕಲ್ಲು ತೂರಾಟ ನಡೆದಿದೆ. ಇದರಲ್ಲಿ ಕಾಂಗ್ರೆಸ್ನ ಮೂವರು, ಬಿಜೆಪಿ ಇಬ್ಬರು, ಇಬ್ಬರು ಪೊಲೀಸ್ ಸಿಬ್ಬಂದಿ ಹಾಗೂ ಇಬ್ಬರು ಪತ್ರಕರ್ತರಿಗೆ ಗಾಯಗಳಾಗಿವೆ.
- ಮಹಾರಾಷ್ಟ್ರದ ಮಾಲೇಗಾಂವ್ ಉಪಮೇಯರ್ ತಮ್ಮ ಕಚೇರಿಯಲ್ಲಿ ಟಿಪ್ಪು ಫೋಟೋ ಅಳವಡಿಸಿದ್ದರು- ಶಿವಸೇನೆ, ಹಿಂದೂ ಸಂಘಟನೆಗಳ ಕಾರ್ಯಕರ್ತರಿಂದ ತೀವ್ರ ವಿರೋಧ. ಕಾಂಗ್ರೆಸ್ ನಾಯಕ ಸಮರ್ಥನೆ- ಟಿಪ್ಪು ಕೂಡ ಶಿವಾಜಿ ರೀತಿ ಹೋರಾಟಗಾರ ಎಂದಿದ್ದ ಹರ್ಷವರ್ಧನ್. ಕಾಂಗ್ರೆಸ್ ಕಚೇರಿ ಎದುರು ಬಿಜೆಪಿ ಧರಣಿ- ಆ ವೇಳೆ ಕಾಂಗ್ರೆಸ್ಸಿಗರ ಜತೆ ಘರ್ಷಣೆ. ಪರಸ್ಪರ ಕಲ್ಲು ತೂರಾಟ ನಡೆಸಿದ್ದರಿಂದ 9 ಜನರಿಗೆ ಗಾಯ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ