
ಇಂಫಾಲ: ಜನಾಂಗೀಯ ಸಂಘರ್ಷ ಪೀಡಿತ ಮಣಿಪುರದಲ್ಲಿ ಭಾನುವಾರ ಕೂಡ ಉದ್ವಿಗ್ನ ಸ್ಥಿತಿ ಮುಂದುವರೆದಿದೆ. ಒಂದು ಕಡೆ ಚುರಾಚಾಂದ್ಪುರದಲ್ಲಿ ಶಾಲೆಗೆ ಬೆಂಕಿ ಹಚ್ಚಲಾಗಿದ್ದು, ಗುಂಡಿನ ಕಾಳಗ ನಡೆದಿದೆ. ಇನ್ನೊಂದು ಕಡೆ ರಾಜ್ಯದ ಅನೇಕ ಕಡೆ ಗ್ರಾಮಸ್ಥರು ಹಾಗೂ ಮಹಿಳೆಯರು ಮನೆಯೊಳಗೆ ಮತ್ತು ರಸ್ತೆಯ ಪಕ್ಕ ಬಂಕರ್ಗಳನ್ನು ನಿರ್ಮಿಸಿಕೊಂಡಿದ್ದು, ಸಮಾಜಘಾತುಕ ಶಕ್ತಿಗಳ ಸಂಚಾರದ ಮೇಲೆ ತಾವೇ ನಿಗಾ ವಹಿಸಲು ಆರಂಭಿಸಿದ್ದಾರೆ.
ಏತನ್ಮಧ್ಯೆ, ತ್ವೇಷಮಯ ವಾತಾವರಣ ಇರುವ ಥೌಬಾಲ್ ಜಿಲ್ಲೆಯಲ್ಲಿ ಮಹಿಳೆಯರು ರಸ್ತೆಗೆ ಅಡ್ಡಲಾಗಿ ನಿಂತು, ರಕ್ಷಣೆಗೆ ಬಂದಿದ್ದ ಸೇನಾ ವಾಹನಗಳನ್ನು (Army vehicles) ವಾಪಸ್ ಕಳಿಸಿ ತಮ್ಮ ಆತ್ಮರಕ್ಷಣೆಯನ್ನು ತಾವೇ ಮಾಡಿಕೊಳ್ಳುವುದಾಗಿ ಘೋಷಿಸಿದ್ದಾರೆ.
ಮಣಿಪುರದ 18 ವರ್ಷದ ಯುವತಿ ಮೇಲೆ ಗ್ಯಾಂಗ್ ರೇಪ್, ದುರಂತಕ್ಕೆ ಮಹಿಳೆಯರ ನೆರವು!
ಆತ್ಮರಕ್ಷಣೆಗೆ ಬಂಕರ್:
ಥೌಬಾಲ್ ಸೇರಿದಂತೆ ರಾಜ್ಯದ ಅನೇಕ ಕಡೆ ಗ್ರಾಮಸ್ಥರು ಅದರಲ್ಲೂ ವಿಶೇಷವಾಗಿ ಮಹಿಳೆಯರು ರಸ್ತೆ ಪಕ್ಕ ಮರಳು ತುಂಬಿದ ಚೀಲ, ಬಿದಿರಿನ ಕೋಲು ಹಾಗೂ ತಗಡುಗಳನ್ನು ಬಳಸಿ ಬಂಕರ್ಗಳನ್ನು (ಚೆಕ್ಪೋಸ್ಟ್ ರೀತಿ) ನಿರ್ಮಿಸಿಕೊಂಡಿದ್ದಾರೆ ಹಾಗೂ ರಸ್ತೆಯ ಅನೇಕ ಕಡೆ ಕಟ್ಟಿಗೆಯ ಬ್ಯಾರಿಕೇಡುಗಳನ್ನು ಹಾಕಿಕೊಂಡಿದ್ದಾರೆ. ಇಲ್ಲಿ ದಿನದ 24 ತಾಸು ಸಹ ರಸ್ತೆಯಲ್ಲಿ ಸಂಚರಿಸುವ ವಾಹನಗಳನ್ನು ತಪಾಸಣೆ ಮಾಡಲಾಗುತ್ತದೆ. ಈ ಮೂಲಕ ಸಮಾಜಘಾತಕರ ಸಂಚಾರ, ಶಸ್ತ್ರಧಾರಿಗಳ ಓಡಾಟ, ಶಸ್ತ್ರಾಸ್ತ್ರ ಹಾಗೂ ಈ ಭಾಗಕ್ಕೆ ಸಾಕಷ್ಟು ಕಳಂಕ ಮೆತ್ತಿರುವ ಡ್ರಗ್ಸ್ ಕಳ್ಳಸಾಗಣೆಯ ಮೇಲೆ ನಿಗಾ ವಹಿಸಲಾಗಿದೆ.
ಅಲ್ಲದೆ ಇತ್ತೀಚೆಗೆ ದುಷ್ಕರ್ಮಿಗಳು ಮನೆಯನ್ನು ಹೊರಗಡೆಯಿಂದ ಲಾಕ್ ಮಾಡಿ ಬೆಂಕಿ ಹಚ್ಚಿದ ಘಟನೆಯಿಂದ ಎಚ್ಚೆತ್ತುಕೊಂಡಿರುವ ಮಹಿಳೆಯರು ಮನೆಯೊಳಗೂ ಬಂಕರ್ಗಳನ್ನು ನಿರ್ಮಿಸಿಕೊಂಡು ಜೀವ ಉಳಿಸಿಕೊಳ್ಳುವ ಯತ್ನ ಮಾಡಿದ್ದಾರೆ ಎಂದು ವರದಿಗಳು ತಿಳಿಸಿವೆ.
ಮಣಿಪುರ: ದೇಶದ ನಂ.1 ಠಾಣೆ ಬಳಿಯೇ ನಗ್ನ ಪರೇಡ್: ಪ್ರಧಾನಿ ಹೇಳಿಕೆಗೆ ಆಗ್ರಹಿಸಿ ನಾಳೆ ವಿಪಕ್ಷ ಪ್ರತಿಭಟನೆ
ಸೇನೆಗೆ ಮಹಿಳೆಯರ ಅಡ್ಡಿ:
ಇನ್ನು ಥೌಬಾಲ್ ಜಿಲ್ಲೆಗೆ ಹಲವು ಸೇನಾ ವಾಹನಗಳು ರಕ್ಷಣಾ ಕಾರ್ಯಕ್ಕೆಂದು ಭಾನುವಾರ ಆಗಮಿಸಿದ್ದವು. ಆದರೆ ರಸ್ತೆಗೆ ಅಡ್ಡಲಾಗಿ ನಿಂತ ಮಹಿಳೆಯರು, ‘ನಮ್ಮ ರಕ್ಷಣೆ ನಾವೇ ಮಾಡಿಕೊಳ್ಳುತ್ತೇವೆ. ಸೇನೆ ಬೇಡ’ ಎಂದು ಪಟ್ಟು ಹಿಡಿದರು. ಆಗ ಸೇನಾ ವಾಹನಗಳು ಯೂ-ಟರ್ನ್ ತೆಗೆದುಕೊಂಡು ತಮ್ಮ ನೆಲೆಗಳಿಗೆ ವಾಪಸ್ ಹೋದವು.
ಶಾಲೆಗೆ ಬೆಂಕಿ, ಕ್ರಾಸ್ ಫೈರಿಂಗ್:
ಇನ್ನೊಂದು ಕಡೆ ಮತ್ತೊಂದು ಪ್ರಕ್ಷುಬ್ಧ ನಗರವಾದ ಚುರಾಚಾಂದ್ಪುರದಲ್ಲಿ ಶಾಲೆಯೊಂದಕ್ಕೆ ಶನಿವಾರ ತಡರಾತ್ರಿ ಬೆಂಕಿ ಹಚ್ಚಲಾಗಿದೆ ಮತ್ತು ಮನೆ ಹಾಗೂ ವಾಹನಗಳನ್ನು ಧ್ವಂಸಗೊಳಿಸಲಾಗಿದೆ. ಇಲ್ಲಿ ಮೈತೇಯಿ ಹಾಗೂ ಕುಕಿ ಸಮುದಾಯಗಳು ಶನಿವಾರ ರಾತ್ರಿಯಿಂದ ಭಾನುವಾರ ಬೆಳಗ್ಗೆಯವರೆಗೂ ಇಡೀ ಗುಂಡಿನ ಚಕಮಕಿ ನಡೆಸಿವೆ. ಹಲವು ಪತ್ರಕರ್ತರು ಈ ಚಕಮಕಿಗೆ ಪ್ರತ್ಯಕ್ಷ ಸಾಕ್ಷಿಯಾದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ