ಪೂಂಚ್ ಸೆಕ್ಟರ್ನಲ್ಲಿ ಸೇನಾ ವಾಹನದ ಮೇಲೆ ನಡೆದ ಉಗ್ರ ದಾಳಿಗೆ ಐವರು ಯೋಧರು ಹುತಾತ್ಮರಾಗಿದ್ದಾರೆ. ಇಫ್ತಾರ್ ಕೂಟಕ್ಕೆ ಆಹಾರ ಸಾಗಿಸುತ್ತಿದ್ದ ವೇಳೆ ಈ ದಾಳಿ ನಡೆದಿದೆ. ಇದರ ಪರಿಣಾಮ ಗ್ರಾಮದ ಜನತೆ ಈದ್ ಆಚರಣೆ ಕೈಬಿಟ್ಟಿದ್ದಾರೆ.
ಶ್ರೀನಗರ(ಏ.22): ಕಣಿವೆ ರಾಜ್ಯದಲ್ಲಿ ಮತ್ತೆ ಉಗ್ರರ ಅಟ್ಟಹಾಸಕ್ಕೆ ಐವರು ಯೋಧರು ಹುತಾತ್ಮರಾದ ಪೂಂಚ್ ಘಟನೆಗೆ ಸೇಡು ತೀರಿಸಿಕೊಳ್ಳಲು ಭಾರತೀಯ ಸೇನೆ ಸಜ್ಜಾಗಿದೆ. ಪೂಂಚ್ ಜಿಲ್ಲೆಯಲ್ಲಿ ಸೇನಾ ವಾಹನದ ಮೇಲೆ ಉಗ್ರರು ಗ್ರೆನೇಡ್ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಐವರು ಯೋಧರು ಹುತಾತ್ಮರಾದರೆ, ಓರ್ವ ಯೋಧ ಗಂಭೀರವಾಗಿ ಗಾಯಗೊಂಡಿದ್ದಾನೆ. ಇತ್ತ ಸೇನಾ ವಾಹನ ಹೊತ್ತಿ ಉರಿದಿದೆ. ಭಾರಿ ಮಳೆ ನಡುವೆ ಅಡಗಿಕುಳಿತ ಉಗ್ರರು ದಾಳಿ ಮಾಡಿದ್ದರು. ಸಂಗೊಯಿಟೆ ಗ್ರಾಮದಲ್ಲಿ ಭಾರತೀಯ ಸೇನೆ ಆಯೋಜಿಸಿದ್ದ ಇಫ್ತಾರ್ ಕೂಟಕ್ಕೆ ಆಹಾರ ಸಾಮಾಗ್ರಿ ಸಾಗಿಸುತ್ತಿದ್ದ ವೇಳೆ ಈ ದಾಳಿ ನಡೆದಿದೆ. ಯೋಧರು ಹುತಾತ್ಮರಾದ ಕಾರಣ ಇದೀಗ ಸಂಗೊಯಿಟೆ ಗ್ರಾಮದ ಜನತೆ ಈದ್ ಆಚರಣೆ ಕೈಬಿಟ್ಟಿದ್ದಾರೆ.
ಎಪ್ರಿಲ್ 20 ರಂದು ಭಾರತೀಯ ಸೇನೆಯ ರಾಷ್ಟ್ರೀಯ ರೈಫಲ್ಸ್ನ ಭಯೋತ್ಪಾದಕ ವಿರೋಧಿ ದಳ, ಸಂಗೊಯಿಟೆ ಗ್ರಾಮದಲ್ಲಿ ಆಯೋಜಿಸಿದ್ದ ಇಫ್ತಾರ್ ಕೂಟಕ್ಕೆ ಡ್ರೈಫ್ರುಟ್ಸ್ ಸೇರಿದಂತೆ ಇತರ ಆಹಾರ ಸಾಮಾಗ್ರಿಗಳನ್ನು ಸಾಗಿಸುತ್ತಿತ್ತು. ರಾಷ್ಟ್ರೀಯ ರೈಫಲ್ಸ್ ಬ್ರಿಗೇಡ್, ಗ್ರಾಮ ಪಂಚಾಯಿತ ಸರಪಂಚ್ ಮುಖ್ತಿಯಾಜ್ ಖಾನ್ ಸೇರಿದಂತೆ ಗ್ರಾಮದ ನಿವಾಸಿಗಳು ಈ ಇಫ್ತಾರ್ ಕೂಟದಲ್ಲಿ ಪಾಲ್ಗೊಳ್ಳಲು ತಯಾರಿ ನಡೆಸಿದ್ದರು. ಸಂಗೊಯಿಟೆ ಗ್ರಾಮದಲ್ಲಿ 4,000 ನಿವಾಸಿಗಳಿದ್ದಾರೆ. ಈ ನಿವಾಸಿಗಳಿಗಾಗಿ ಭಾರತೀಯ ಸೇನೆ ಇಫ್ತಾರ್ ಕೂಟ ಆಯೋಜಿಸಿತ್ತು.
ಉಗ್ರ ದಾಳಿ ಖಚಿತಪಡಿಸಿದ ಭಾರತೀಯ ಸೇನೆ, ಗ್ರೆನೇಡ್ ಆ್ಯಟಾಕ್ಗೆ ಐವರು ಯೋಧರು ಹುತಾತ್ಮ!
ಆಹಾರ ಸಾಮಾಗ್ರಿ ಹೊತ್ತು ಸಾಗಿದ ಸೇನಾ ವಾಹನ ತೀವ್ರ ಮಳೆಯಿಂದಾಗ ನಿಧಾನವಾಗಿ ಸಾಗಿತ್ತು. ಸಂಜೆ 7 ಗಂಟೆ ಹೊತ್ತಿಗೆ ಅಡಗಿ ಕುಳಿತ ಉಗ್ರರು ಸೇನಾ ವಾಹನದ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದರು. ಇದರಿಂದ ಐವರು ಯೋಧರು ಹುತಾತ್ಮರಾದರೆ, ಓರ್ವ ತೀವ್ರಗಾಯಗೊಂಡಿದ್ದ. ಇತ್ತ ಈ ಸುದ್ಧಿ ತಿಳಿದ ಸಂಗೊಯಿಟೆ ಗ್ರಾಮದ ಜನತೆ ಆಘಾತಕ್ಕೆ ಒಳಗಾಗಿದ್ದಾರೆ. ಇಫ್ತಾರ್ ಕೂಟ ಕೈಬಿಟ್ಟ ಗ್ರಾಮದ ಜನ ಇದೀಗ ಈದ್ ಹಬ್ಬ ಆಚರಣೆಯನ್ನು ಕೈಬಿಟ್ಟಿದ್ದಾರೆ. ಯೋಧರು ಹುತಾತ್ಮಾರಾಗಿದ್ದಾರೆ. ಹೀಗಾಗಿ ಈ ನೋವಿನಲ್ಲಿ ಈದ್ ಆಚರಣೆ ಬೇಡ ಎಂದು ಗ್ರಾಮದ ನಿವಾಸಿಗಳು ನಿರ್ಧರಿಸಿದ್ದಾರೆ.
ಉಗ್ರರ ವಿರುದ್ಧ ಭಾರತೀಯ ಸೇನೆ ಕಾರ್ಯಾಚರಣೆ ತೀವ್ರಗೊಳಿಸಿದೆ. ಹೆಲಿಕಾಪ್ಟರ್, ಡ್ರೋನ್ ಬಳಸಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಘಟನೆ ನಡೆದ ಸ್ಥಲ ಸಂಪೂರ್ಣ ಕಾಡಿನಿಂದ ಆವೃತ್ತವಾಗಿದೆ. ಹೀಗಾಗಿ ಉಗ್ರರು ಸುಲಭವಾಗಿ ಪರಾರಿಯಾಗಿದ್ದಾರೆ. ಈ ದಾಳಿ ಸಂಬಂಧ ಹಲವರನ್ನು ವಿಚಾರಣೆಗೆ ಒಳಪಡಿಸಲಾಗಿದೆ.
ಸಂಚರಿಸುತ್ತಿದ್ದ ಸೇನಾ ವಾಹನದ ಮೇಲೆ ಉಗ್ರರ ಗ್ರೇನೇಡ್ ದಾಳಿ, ನಾಲ್ವರು ಯೋಧರು ಸಜೀವ ದಹನ!
ಭಾರಿ ಮಳೆ ನಡುವೆ ದಾಳಿ
ಗುರುವಾರ ಮಧ್ಯಾಹ್ನ 3 ಗಂಟೆಯ ವೇಳೆಗೆ ಸೇನೆಗೆ ಸೇರಿ ಟ್ರಕ್ಕೊಂದು ರಜೌರಿ ವಲಯದ ಭಿಂಬರ್ ಗಾಲಿಯಿಂದ ಸಂಗೋಯ್್ಟಗೆ ಪ್ರಯಾಣಿಸುತ್ತಿತ್ತು. ಈ ವೇಳೆ ಏಕಾಏಕಿ ವಾಹನದ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ಯೋಧರು ಎಚ್ಚೆತ್ತುಕೊಂಡು ಪ್ರತಿದಾಳಿ ನಡೆಸುವಷ್ಟರಲ್ಲಿ ಉಗ್ರರು ಭಾರೀ ಪ್ರಮಾಣದ ಗ್ರೆನೇಡ್ ದಾಳಿ ನಡೆಸಿದ್ದಾರೆ. ಹೀಗಾಗಿ ವಾಹನ ಬೆಂಕಿ ಹೊತ್ತಿ ಉರಿದು ಸ್ಥಳದಲ್ಲೇ 5 ಯೋಧರು ಸಾವನ್ನಪ್ಪಿದ್ದಾರೆ. ಭಾರೀ ಮಳೆ ಮತ್ತು ಮಂಜು ಕವಿದ ವಾತಾವರಣವನ್ನೇ ಬಳಸಿಕೊಂಡು ಉಗ್ರರು ಈ ದುಷ್ಕೃತ್ಯ ಎಸಗಿದ್ದಾರೆ.
ಘಟನೆಯನ್ನು ರಕ್ಷಣಾ ಸಚಿವ ರಾಜ್ನಾಥ್ ಖಂಡಿಸಿದ್ದು, ಮಡಿದ ಯೋಧರಿಗೆ ಕಂಬನಿ ಮಿಡಿದಿದ್ದಾರೆ. ‘ಪೂಂಚ್ ಜಿಲ್ಲೆಯಲ್ಲಿ ನಡೆದ ದುರ್ಘಟನೆಯಲ್ಲಿ ನಮ್ಮ ಸೇನಾಪಡೆಯ ಐವರು ವೀರಯೋಧರು ಸಾವನ್ನಪ್ಪಿದ್ದಾರೆ. ಯೋಧರ ಕುಟುಂಬಕ್ಕೆ ನನ್ನ ಸಾಂತ್ವನಗಳು’ ಎಂದು ರಕ್ಷಣಾ ಸಚಿವರು ಸಂತಾಪ ಸೂಚಿಸಿದ್ದಾರೆ. ಭಾರೀ ಮಳೆ ಮತ್ತು ಮಂಜು ಕವಿದ ವಾತಾವರಣವನ್ನೇ ಬಳಸಿಕೊಂಡು ಉಗ್ರರು ಈ ದುಷ್ಕೃತ್ಯ ಎಸಗಿದ್ದು, ಮೃತ ಯೋಧರೆಲ್ಲಾ ರಾಷ್ಟ್ರೀಯ ರೈಫಲ್ಸ್ಗೆ ಸೇರಿದವರಾಗಿದ್ದಾರೆ ಎಂದು ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ.