ಜಡ್ಜ್‌ ನೇಮಕಾತಿ ಆಯೋಗ ರಚನೆ ರದ್ದು: ಸಿಜೆ ಎದುರೇ ಸುಪ್ರೀಂಗೆ ಉಪರಾಷ್ಟ್ರಪತಿ ಚಾಟಿ

By Kannadaprabha NewsFirst Published Dec 4, 2022, 12:31 PM IST
Highlights

ನ್ಯಾಯಾಧೀಶರ ನೇಮಕಾತಿ ಮಾಡುವ ಕೊಲಿಜಿಯಂ ವ್ಯವಸ್ಥೆಯನ್ನು ಕೈ ಬಿಟ್ಟು, ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗದ ಮೂಲಕ ನೇಮಕಗೊಳಿಸಲು ಕೇಂದ್ರ ಸರ್ಕಾರ ರೂಪಿಸಿದ್ದ ಕಾಯ್ದೆಯನ್ನು 7 ವರ್ಷಗಳ ಹಿಂದೆ ರದ್ದುಗೊಳಿಸಿದ್ದ ಸುಪ್ರೀಂಕೋರ್ಟ್ ವಿರುದ್ಧ ಉಪರಾಷ್ಟ್ರಪತಿ ಜಗದೀಪ್‌ ಧನಖಡ್‌ ತೀವ್ರ ಆಕ್ರೋಶ ಹೊರಹಾಕಿದ್ದಾರೆ.

ನವದೆಹಲಿ: ನ್ಯಾಯಾಧೀಶರ ನೇಮಕಾತಿ ಮಾಡುವ ಕೊಲಿಜಿಯಂ ವ್ಯವಸ್ಥೆಯನ್ನು ಕೈ ಬಿಟ್ಟು, ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗದ ಮೂಲಕ ನೇಮಕಗೊಳಿಸಲು ಕೇಂದ್ರ ಸರ್ಕಾರ ರೂಪಿಸಿದ್ದ ಕಾಯ್ದೆಯನ್ನು 7 ವರ್ಷಗಳ ಹಿಂದೆ ರದ್ದುಗೊಳಿಸಿದ್ದ ಸುಪ್ರೀಂಕೋರ್ಟ್ ವಿರುದ್ಧ ಉಪರಾಷ್ಟ್ರಪತಿ ಜಗದೀಪ್‌ ಧನಖಡ್‌ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಮುಖ್ಯ ನ್ಯಾಯಮೂರ್ತಿಗಳ ಸಮ್ಮುಖವೇ ಈ ಅಪರೂಪದ ಘಟನೆ ನಡೆದಿದೆ. ಜನರ ಇಚ್ಛಾಶಕ್ತಿಯ ಪ್ರತಿಬಿಂಬವಾಗಿ ಸಂಸತ್ತು ಕಾಯ್ದೆ ಅಂಗೀಕರಿಸಿತ್ತು. ಆದರೆ ಅದನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿತು. ಇಂತಹ ನಿದರ್ಶನವನ್ನು ಪ್ರಪಂಚ ನೋಡಿಯೇ ಇಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಸಮ್ಮುಖವೇ ಜಗದೀಪ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೊಲಿಜಿಯಂ ಕಾರ್ಯವೈಖರಿ ಬಗ್ಗೆ ಕೇಂದ್ರ ಕಾನೂನು ಸಚಿವ (Union Law Minister) ಕಿರಣ್‌ ರಿಜಿಜು (Kiren Rijiju) ನೀಡಿದ ಹೇಳಿಕೆ ಬಗ್ಗೆ ಸುಪ್ರೀಂಕೋರ್ಟ್ ಆಕ್ರೋಶ ವ್ಯಕ್ತಪಡಿಸಿದ ಹಾಗೂ ನ್ಯಾಯಾಧೀಶರ ನೇಮಕಾತಿ ಕುರಿತು ಸರ್ಕಾರ- ನ್ಯಾಯಾಂಗದ ನಡುವೆ ಸಂಘರ್ಷ ನಡೆಯುತ್ತಿರುವ ಹೊತ್ತಿನಲ್ಲೇ ಈ ಬೆಳವಣಿಗೆ ನಡೆದಿದೆ. ಇದೀಗ ಉಪರಾಷ್ಟ್ರಪತಿಗಳೇ ಸುಪ್ರೀಂಕೋರ್ಟ್ ಅನ್ನು ಟೀಕಿಸಿರುವುದರಿಂದ ನ್ಯಾಯಾಲಯ ಏನು ಮಾಡುತ್ತದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಇತಿಹಾಸದಲ್ಲಿ ಮೂರನೇ ಬಾರಿಗೆ ಸುಪ್ರೀಂಕೋರ್ಟ್‌ನಲ್ಲಿ ಸರ್ವ ಮಹಿಳಾ ಪೀಠ

ಶುಕ್ರವಾರ ಎಲ್‌.ಎಂ.ಸಿಂಘ್ವಿ ಸ್ಮಾರಕ (LM Singhvi) ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಉಪರಾಷ್ಟ್ರಪತಿ ಅವರು, ಸುಪ್ರೀಂಕೋರ್ಟ್‌ (Supreme Court) ಕಾಯ್ದೆ ರದ್ದುಗೊಳಿಸಿದ ಬಳಿಕ ಅದರ ಬಗ್ಗೆ ಸಂಸತ್ತಿನಲ್ಲಿ ಗುಸುಗುಸು ಕೂಡ ವ್ಯಕ್ತವಾಗುತ್ತಿಲ್ಲ. ಇದು ಚಕಿತಗೊಳಿಸುವಂತಾಗಿದೆ. ಇದು ಒಂದು ವಿಷಯಕ್ಕಿಂತ ಗಂಭೀರವಾಗಿದೆ ಎಂದು ಹೇಳಿದರು.

ಸಂವಿಧಾನದ ಪೀಠಿಕ್ಕೆ ‘ಪ್ರಜೆಗಳಾದ ನಾವು’ ಎಂದು ಉಲ್ಲೇಖಿಸುತ್ತದೆ. ಸಂಸತ್ತು ಎಂಬುದು ಜನರ ಇಚ್ಛಾಶಕ್ತಿಯನ್ನು ಪ್ರತಿಬಿಂಬಿಸುತ್ತದೆ. ಇದರರ್ಥ ಅಧಿಕಾರ ಜನರ ಬಳಿ ಇದೆ. ಅವರ ಜನಮತ ಹಾಗೂ ವಿವೇಕದಲ್ಲಿದೆ. 2015-16ರಲ್ಲಿ ಸಂಸತ್ತು ಸಾಂವಿಧಾನಿಕ ತಿದ್ದುಪಡಿ ಕಾಯ್ದೆ (Constitutional Amendment) (ನ್ಯಾಯಾಂಗ ನೇಮಕಾತಿ ಆಯೋಗ) ತಂದಿತ್ತು. ಇಡೀ ಲೋಕಸಭೆಯೇ ಸರ್ವಾನುಮತದಿಂದ ಮತ ಚಲಾವಣೆ ಮಾಡಿತ್ತು. ರಾಜ್ಯಸಭೆಯಲ್ಲೂ ಸರ್ವಾನುಮತದಿಂದ ಮತ ಚಲಾವಣೆಯಾಗಿ, ಒಬ್ಬರು ಮಾತ್ರ ಗೈರು ಹಾಜರಾಗಿದ್ದರು. ಜನರ ಆಜ್ಞೆಯನ್ನು ಸಂವಿಧಾನಿಕ ಅಂಶವಾಗಿ ಸೇರ್ಪಡೆ ಮಾಡಲಾಗಿತ್ತು. ಶಾಸನಬದ್ಧ ವೇದಿಕೆಯಲ್ಲಿ ಜನರ ಅಧಿಕಾರವನ್ನು ವ್ಯಕ್ತಪಡಿಸಿದಾಗ ಅದನ್ನು ರದ್ದುಗೊಳಿಸಲಾಯಿತು. ಇಂತಹ ನಿದರ್ಶನವನ್ನು ವಿಶ್ವ ಕಂಡಿಲ್ಲ ಎಂದು ಜಗದೀಪ್‌ ಹೇಳಿದರು.

ಸಿಎಎ ತಮಿಳರ ವಿರುದ್ಧ; ಶ್ರೀಲಂಕಾ ತಮಿಳು ನಿರಾಶ್ರಿತರನ್ನು ಹೊರಗಿಡುವುದು ಸರಿಯಲ್ಲ: ಸುಪ್ರೀಂಗೆ ಡಿಎಂಕೆ ಹೇಳಿಕೆ

ಕಾರ್ಯಕ್ರಮದಲ್ಲಿ ನ್ಯಾಯಾಂಗ ಕ್ಷೇತ್ರದ ಅತ್ಯುತ್ಕೃಷ್ಟಪರಿಣತರು, ಬುದ್ಧಿಜೀವಿಗಳು, ಚಿಂತಕರು ಇದ್ದೀರಿ. ಸಂವಿಧಾನಿಕ ಅಂಶವನ್ನೇ ರದ್ದುಗೊಳಿಸಿದ ಬೆಳವಣಿಗೆ ವಿಶ್ವದಲ್ಲಿ ಎಲ್ಲಿ ನಡೆದಿದೆ ಎಂದು ದಯಮಾಡಿ ಪತ್ತೆ ಮಾಡಿ ಎಂದು ಬಿನ್ನವಿಸಿಕೊಂಡರು. ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್ ನ್ಯಾಯಮೂರ್ತಿಗಳ ನೇಮಕಾತಿಗಾಗಿ ಇದ್ದ ಕೊಲಿಜಿಯಂ ವ್ಯವಸ್ಥೆ ರದ್ದುಗೊಳಿಸಿ ಹೊಸ ವ್ಯವಸ್ಥೆ ರೂಪಿಸುವ ಸಂಬಂಧ ಕೇಂದ್ರ ಸರ್ಕಾರ ರೂಪಿಸಿದ್ದ ಕಾಯ್ದೆಯನ್ನು ಸುಪ್ರೀಂಕೋರ್ಟ್ ಅಸಂವಿಧಾನಿಕ ಎಂದು ಬಣ್ಣಿಸಿ ವಜಾಗೊಳಿಸಿತ್ತು.


 

click me!