Ram Janma Bhoomi: ರಾಮ ಜನ್ಮಭೂಮಿಯನ್ನು ಮೆಕ್ಕಾ, ವ್ಯಾಟಿಕಾನ್‌ ಸಿಟಿಯಂತೆ ಅಭಿವೃದ್ಧಿಪಡಿಸಲಾಗುವುದು : ವಿಹೆಚ್‌ ಮುಖ್ಯಸ್ಥ

By Suvarna NewsFirst Published Dec 13, 2021, 1:19 PM IST
Highlights
  • ರಾಮ ಜನ್ಮ ಭೂಮಿಯನ್ನು ಮೆಕ್ಕಾ, ವ್ಯಾಟಿಕಾನ್‌ ಸಿಟಿಯಂತೆ ಅಭಿವೃದ್ಧಿಪಡಿಸಲಾಗುವುದು
  • ವಿಹೆಚ್‌ಪಿ ಅಧ್ಯಕ್ಷ  ರವೀಂದ್ರ ನಾರಾಯಣ್ ಸಿಂಗ್ ಹೇಳಿಕೆ
  • ರಾಮ ಜನ್ಮಭೂಮಿ ಹಿಂದುತ್ವದ ಸಂಕೇತವಾಗಲಿದೆ ಎಂದ ಸಿಂಗ್‌

ನಾಗಪುರ(ಡಿ.13): ಅಯೋಧ್ಯೆಯ ರಾಮಜನ್ಮಭೂಮಿ ತೀರ್ಥ ಕ್ಷೇತ್ರವನ್ನು ವ್ಯಾಟಿಕನ್ ಸಿಟಿ(Vatican City) ಮತ್ತು ಮೆಕ್ಕಾ(Mecca) ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಅಧ್ಯಕ್ಷ ರವೀಂದ್ರ ನಾರಾಯಣ್ ಸಿಂಗ್(Rabindra Narain Singh) ಭಾನುವಾರ ಹೇಳಿದ್ದಾರೆ. ನಾಗ್ಪುರದಲ್ಲಿ ದಾರ್ಶನಿಕರು ಮತ್ತು ವಿಎಚ್‌ಪಿ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ರವೀಂದ್ರ ನಾರಾಯಣ್‌ ಸಿಂಗ್‌, ರಾಮ ಮಂದಿರ ಮತ್ತು ರಾಮ ಜನ್ಮಭೂಮಿ ಹಿಂದುತ್ವದ ಸಂಕೇತವಾಗಿ ಹೊರಹೊಮ್ಮಲಿದೆ ಎಂದು ಹೇಳಿದರು.

ಅಯೋಧ್ಯೆಯ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರವನ್ನು ರೋಮನ್ ಕ್ಯಾಥೋಲಿಕ್ ಚರ್ಚ್‌ನ ಪ್ರಧಾನ ಕೇಂದ್ರವಾದ ವ್ಯಾಟಿಕನ್ ಸಿಟಿ ಮತ್ತು ಇಸ್ಲಾಂನ ಪವಿತ್ರ ನಗರವಾದ ಮೆಕ್ಕಾ  ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುವುದು. ಇದು ಹಿಂದುತ್ವದ ಸಂಕೇತವಾಗಲಿದೆ ಎಂದು ಜೈನ್ ಹೇಳಿದರು. ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಂದ ಶ್ರೀ ಕಾಶಿ ವಿಶ್ವನಾಥ ಧಾಮ ಎಂಬ ಮತ್ತೊಂದು ಐಕಾನಿಕ್ ಯೋಜನೆ ಉದ್ಘಾಟನೆಗೂ ಮೊದಲು ನಾಗ್ಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.

ರಾಹುಲ್ ಗಾಂಧಿಗೆ ಹಿಂದೂಗಳ ಬಗ್ಗೆ ಆಗಲಿ ಹಿಂದುತ್ವದ ಬಗ್ಗೆಯಾಗಲಿ  ತಿಳುವಳಿಕೆ ಇಲ್ಲ

ಇನ್ನೊಂದೆಡೆ ಸಬ್ ಕೆ ರಾಮ್ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ವಿಹೆಚ್‌ಪಿ ರಾಷ್ಟ್ರೀಯ ಜಂಟಿ ಪ್ರಧಾನ ಕಾರ್ಯದರ್ಶಿ(VHP national joint general secretary) ಸುರೇಂದ್ರ ಜೈನ್( Surendra Jain) 1947ರಲ್ಲಿ ಭಾರತಕ್ಕೆ ರಾಜಕೀಯ ಸ್ವಾತಂತ್ರ್ಯ ಸಿಕ್ಕರೂ ರಾಮಮಂದಿರ ಚಳವಳಿಯ ಮೂಲಕ ಧಾರ್ಮಿಕ ಮತ್ತು ಸಾಂಸ್ಕೃತಿಕ ಸ್ವಾತಂತ್ರ್ಯ ಲಭಿಸಿತು ಎಂದರು. ಜಾತ್ಯಾತೀತ ರಾಜಕೀಯವು ರಾಷ್ಟ್ರವನ್ನು ವಿಭಜಿಸಿದೆ ಎಂದು ಅವರು ಹೇಳಿದರು. 


ಶಿವ, ವಿಷ್ಣು ಸೇರಿ ಅಯೋಧ್ಯೆ ರಾಮ ಮಂದಿರ ಪ್ರಾಂಗಣದಲ್ಲಿ ತಲೆ ಎತ್ತಲಿದೆ 6 ದೇವಸ್ಥಾನ!

ಈ ಹಿಂದೆ ಜೈಪುರದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ  ಕಾಂಗ್ರೆಸ್ ನಾಯಕ(Congress leader) ರಾಹುಲ್ ಗಾಂಧಿ(Rahul Gandhi) ದೇಶವು ಹಿಂದೂಗಳಿಗೆ ಸೇರಿದ್ದು, ಹಿಂದುತ್ವವಾದಿಗಳಿಗೆ ಅಲ್ಲ ಎಂದು ಹೇಳಿದ್ದರು. ಈ ಹೇಳಿಕೆಗೆ ತಿರುಗೇಟು ನೀಡಿದ ಸುರೇಂದ್ರ ಜೈನ್‌(Surendra Jain), ಭಾರತೀಯ ರಾಜಕೀಯದ ಅತ್ಯಂತ ಗೊಂದಲಮಯ ನಾಯಕರಲ್ಲಿ ರಾಹುಲ್ ಗಾಂಧಿ ಒಬ್ಬರು. ವಯನಾಡಿ(Wayanad)ನ ಕಾಂಗ್ರೆಸ್ ಸಂಸದರಾಗಿರುವ ರಾಹುಲ್‌ಗೆ, ಅವರು ಏನು ಹೇಳುತ್ತಾರೆ ಎಂಬುದರ ಬಗ್ಗೆಯೇ ತಿಳಿದಿಲ್ಲ  ಎಂದರು. 

ಅವರಿಗೆ ಹಿಂದುಗಳ ಬಗ್ಗೆಯಾಗಲಿ  ಹಿಂದುತ್ವದ ಬಗ್ಗೆಯಾಗಲಿ ತಿಳುವಳಿಕೆ ಇಲ್ಲ. ಅವರಿಗೆ ತಾಯಿಯ ತಂದೆಯಿಂದ ಬಂದ  ಗೋತ್ರವನ್ನು ತಾನು ಬಳಸಬೇಕೆ ಅಥವಾ ತನ್ನ ಅಪ್ಪನ ತಂದೆಯಿಂದ ಬಂದ  ಗೋತ್ರವನ್ನು ಬಳಸಬೇಕೇ ಎಂಬುದು ಗೊತ್ತಿಲ್ಲ. ಹಿಂದೂಗಳು ಯಾವಾಗಲೂ ತನ್ನ ಅಜ್ಜನ ಗೋತ್ರಕ್ಕೆ ತಾವು ಸೇರಿದೆಂದು ಅಂದುಕೊಳ್ಳುತ್ತಾರೆ. ಹಾಗಾಗಿ ರಾಹುಲ್‌ ಅವರು ತಮ್ಮ ಗೋತ್ರ ಯಾವುದು ಕುಲ ಯಾವುದೆಂದು ಅವರೇ ಹೇಳಬೇಕು ಎಂದು ಹೇಳಿದರು. 

ರಾಮಮಂದಿರ ಹಿನ್ನೆಲೆ
ಹಲವು ದಶಕಗಳ ಕಾನೂನು ಹೋರಾಟದ ಬಳಿಕ ರಾಮಜನ್ಮ ಭೂಮಿ ಆಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಸುಪ್ರೀಂಕೋರ್ಟ್‌ ಗ್ರೀನ್‌ ಸಿಗ್ನಲ್‌ ನೀಡಿತ್ತು. ರಾಮ ಜನ್ಮಭೂಮಿ ಮತ್ತು ಬಾಬರಿ ಮಸೀದಿ ವಿಷಯದ ವಿವಾದ ದಶಕಗಳ ಇತಿಹಾಸ ಹೊಂದಿದೆ. ಇದಕ್ಕೆ ಕೊನೆಗೂ ಮುಕ್ತಿ ಸಿಕ್ಕಿದ್ದು ನವೆಂಬರ್‌ 9, 2019ರಲ್ಲಿ. ಈಗ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಚಾಲನೆ ಕೂಡ ಸಿಕ್ಕಿದೆ.  2002ರಲ್ಲಿ ಅಯೋಧ್ಯಾ ಭೂ ವಿವಾದದ ಕುರಿತು ವರದಿ ನೀಡಲು ಪುರಾತತ್ವ ಇಲಾಖೆಗೆ ಲಖನೌ ಅಲಹಾಬಾದ್ ಪೀಠ ಸೂಚನೆ ನೀಡಿತ್ತು. 2003ರಲ್ಲಿ ಮಸೀದಿಯ ಕೆಳಗೆ ದೇವಾಲಯ ಇರುವ ವಿಚಾರವನ್ನು  ಪುರಾತತ್ವ ಇಲಾಖೆ ನ್ಯಾಯಾಲಯದ ಮುಂದಿಟ್ಟಿತ್ತು. ನಂತರ 2019ರ ನವೆಂಬರ್ 9ರಂದು  ಐತಿಹಾಸಿಕ ತೀರ್ಪು ಪ್ರಕಟಿಸಿದ ಸುಪ್ರೀಂಕೋರ್ಟ್  2.77 ಎಕರೆ ವಿವಾದಿತ ಜಮೀನು ರಾಮ್‌ಲಲ್ಲಾಗೆ ಸೇರಿದ್ದು , ಮೂರು ತಿಂಗಳೊಳಗೆ ಟ್ರಸ್ಟ್‌ ರಚಿಸಿ ಸರಕಾರವೇ ಮಂದಿರ ನಿರ್ಮಿಸಬೇಕು . ಜೊತೆಗೆ ಸುನ್ನಿ ವಕ್ಫ್‌ ಬೋರ್ಡ್‌ಗೆ ಮಸೀದಿ ನಿರ್ಮಾಣ ಮಾಡಲು 5 ಎಕರೆ ಭೂಮಿ ನೀಡಬೇಕು ಎಂದಿತ್ತು. ಪ್ರಸ್ತುತ ರಾಮ ಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. 

ರಾಮ ಮಂದಿರ ಭೂ ಖರೀದಿಯಲ್ಲಿ ಅಕ್ರಮ: ಆಪ್‌ ಆರೋಪಕ್ಕೆ ಟ್ರಸ್ಟ್‌ ತಿರುಗೇಟು!

click me!