ಆಕ್ಸಿಜನ್ ಮಾಸ್ಕ್ ಜೊತೆ ಸುರಂಗದೊಳ ಪ್ರವೇಶಿಸಿದ ರಕ್ಷಣಾ ತಂಡ, ಶೀಘ್ರದಲ್ಲೇ ಕಾರ್ಮಿಕರ ರಕ್ಷಣೆ!

By Suvarna NewsFirst Published Nov 22, 2023, 10:47 PM IST
Highlights

ಉತ್ತರಾಖಂಡದ ಸಿಲ್‌ಕ್ಯಾರಾದ ಸುರಂಗ ಕುಸಿದಲ್ಲಿ 41 ಕಾರ್ಮಿಕರು ಸಿಲುಕಿ ಇದೀಗ 10ನೇ ದಿನ. ಸತತ ರಕ್ಷಣಾ ಕಾರ್ಯದಿಂದ  ಇದೀಗ ಅಂತಿಮ ಹಂತದ ಕಾರ್ಯಾಚರಣೆ ನಡೆಯುತ್ತಿದೆ. ರಕ್ಷಣಾ ತಂಡದ ಸದಸ್ಯರು ಆಕ್ಸಿಜನ್ ಮಾಸ್ಕ್ ಜೊತೆ ಇದೀಗ ಸುರಂಗದೊಳಗೆ ಪ್ರವೇಶಿಸಿದ್ದಾರೆ. ಇಂದು ರಾತ್ರಿಯೇ ಕಾರ್ಮಿಕರ ರಕ್ಷಣೆ ನಡೆಯಲಿದೆ.

ಉತ್ತರಕಾಶಿ(ನ.22) ಉತ್ತರಾಖಂಡದ ಸಿಲ್‌ಕ್ಯಾರಾ ಸುರಂಗದಲ್ಲಿ ಸಿಕ್ಕಿಬಿದ್ದ 41 ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ಅಂತಿಮ ಹಂತ ತಲುಪಿದೆ. ಕಳೆದ 10 ದಿನದಿಂದ ಕುಸಿದ ಸುರಂಗದೊಳಗೆ ಸಿಲುಕಿರುವ ಕಾರ್ಮಿಕರ ರಕ್ಷಣೆಗೆ ಸತತ ಪ್ರಯತ್ನ ನಡೆಯುತ್ತಿದೆ. ಇದೀಗ 45 ಕ್ಕೂ ಹೆಚ್ಚು ಮೀಟರ್ ಕೊರೆಯಲಾಗಿದ್ದು. ಇನ್ನು ಕೆಲವೇ ಮೀಟರ್ ದೂರ ಬಾಕಿದೆ. ಇತ್ತ ಕಾರ್ಮಿಕರ ರಕ್ಷಣೆಗೆ ರಕ್ಷಣಾ ತಂಡದ 21 ಸಿಬ್ಬಂದಿಗಳು ಆಮ್ಲಜನಕ ಮಾಸ್ಕ್ ಧರಿಸಿ ಟ್ಯೂಬ್ ಮೂಲಕ ಸುರಂಗದೊಳಗೆ ಪ್ರವೇಶಿಸಿದ್ದಾರೆ. ಇಂದು ರಾತ್ರಿಯೇ ಕಾರ್ಮಿಕರ ರಕ್ಷಣೆ ನಡೆಯಲಿದೆ. ಇತ್ತ 41 ಕಾರ್ಮಿಕರನ್ನು ರಕ್ಷಿಸಿ ಅವರಿಗೆ ಸೂಕ್ತ ಚಿಕಿತ್ಸೆ ನೀಡಲು ಸಿಲ್‌ಕ್ಯಾರಾದಲ್ಲಿ 41 ಹಾಸಿಕೆಗಳ ಆಸ್ಪತ್ರೆ ಸಜ್ಜಾಗಿದೆ.

60 ಮೀಟರ್ ದೂರದಲ್ಲಿರುವ ಕಾರ್ಮಿಕರ ತಲುಪುವ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ.  ಕಾರ್ಮಿಕರ ರಕ್ಷಣೆಗೆ ಭಾರತೀಯ ಸೇನೆ, NDRF, SDRF ವಿದೇಶಿ ಎಜೆನ್ಸಿ ಸೇರಿದಂತೆ ಹಲವು ರಕ್ಷಣಾ ತಂಡಗಳು ಕಾರ್ಯನಿರ್ವಹಿಸುತ್ತಿದೆ. ಈಗಾಗಲೊ ಕೊರೆದಿರುವ 45 ಮೀಟರ್ ದೂರಕ್ಕೆ ಸ್ಟೀಲ್ ಪೈಪ್ ಅಳವಡಿಸಲಾಗಿದೆ. ಮುಂದಿನ ಕಾರ್ಯಾಚರಣೆ ಅತ್ಯಂತ ಮಹತ್ವದ್ದಾಗಿದೆ. ಎಲ್ಲಾ ತಯಾರಿಯೊಂದಿಗೆ ಮುನ್ನುಗ್ಗತ್ತಿರುವ ರಕ್ಷಣಾ ತಂಡ ಕೆಲವೇ ಗಂಟೆಗಳಲ್ಲಿ ಕಾರ್ಮಿಕರ ತಲುಪುವ ಸಾಧ್ಯತೆ ಇದೆ.

ಸುರಂಗದಲ್ಲಿ ಸಿಲುಕಿದ ಕಾರ್ಮಿಕರ ರಕ್ಷಣೆಗೆ ರೋಬೋಟ್‌: ಸುರಂಗದಲ್ಲಿರುವವರಿಗೆ 9 ದಿನ ಬಳಿಕ ಬಿಸಿಯೂಟ

ರಿಷಿಕೇಶದಲ್ಲಿರುವ ಏಮ್ಸ್ ಆಸ್ಪತ್ರೆಗೆ ಹೈ ಅಲರ್ಟ್ ಸೂಚನೆ ನೀಡಲಾಗಿದೆ. ಯಾವುದೇ ಕಾರ್ಮಿಕರಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರೆ ತಕ್ಷಣವೇ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇತ್ತ ಸಿಲ್‌ಕ್ಯಾರಾದಲ್ಲಿ ಸಜ್ಜುಗೊಳಿಸಿರುವ 41 ಬೆಡ್ ಆಸ್ಪತ್ರೆಯಲ್ಲಿ 15 ವೈದ್ಯರನ್ನು ನಿಯೋಜಿಸಲಾಗಿದೆ. ತುರ್ತು ಸೇವೆಗೆ ಹಲವು ಆ್ಯಂಬುಲೆನ್ಸ್, ಹೆಲಿಕಾಪ್ಟರ್ ನಿಯೋಜಿಸಲಾಗಿದೆ. 

ಪೈಪ್‌ ಮೂಲಕ ರವಾನಿಸಿದ ಎಂಡೋಸ್ಕೋಪಿಕ್‌ ಕ್ಯಾಮೆರಾದ ಮೂಲಕ ಕಾರ್ಮಿಕರನ್ನು 10 ದಿನಗಳಲ್ಲಿ ಮೊದಲ ಬಾರಿಗೆ ನೋಡಿದ ಅಧಿಕಾರಿಗಳು, ‘ನೀವೆಲ್ಲಾ ಚೆನ್ನಾಗಿದ್ದೀರಿ ತಾನೆ? ಶೀಘ್ರವೇ ನಾವು ನಿಮ್ಮನ್ನು ರಕ್ಷಣೆ ಮಾಡಲಿದ್ದೇವೆ, ದಯವಿಟ್ಟು ಯಾವುದೇ ಕಾರಣಕ್ಕೂ ಆತಂಕಕ್ಕೆ ಒಳಗಾಗಬೇಡಿ. ನಿಮಗೆಲ್ಲಾ ಏನೂ ತೊಂದರೆ ಇಲ್ಲಾ ಎಂದಾದಲ್ಲಿ ದಯವಿಟ್ಟು ಕ್ಯಾಮೆರಾ ಮುಂದೆ ಬಂದು ನಿಮ್ಮ ಮುಖ ತೋರಿಸಿ; ನಿಮ್ಮ ಕೈ ಎತ್ತಿ ಮತ್ತು ಒಮ್ಮೆ ನಗಿ. ನಾವು ನಿಮ್ಮನ್ನು ನಿಮ್ಮ ಕುಟುಂಬ ಸದಸ್ಯರಿಗೆ ತೋರಬಯಸುತ್ತೇವೆ’ ಎಂದು ಹೇಳಿ ಧೈರ್ಯ ತುಂಬಲಾಗಿತ್ತು. 

ಸುರಂಗದಲ್ಲಿ ಸಿಲುಕಿರುವ 41 ಜನರ ನೆರವಿಗೆ ಪೈಪ್‌: ಘನಾಹಾರ ಪೂರೈಕೆ, ರಕ್ಷಣಾ ಕಾರ್ಯಕ್ಕೆ ಮೊದಲ ಯಶಸ್ಸು
 

click me!