
ಇತ್ತೀಚೆಗಷ್ಟೇ ಅಸ್ಸಾಂನಲ್ಲಿ ಅಲ್ಖೈದಾ (Al Qaeda) ಉಗ್ರ ಸಂಘಟನೆಗಳೊಂದಿಗೆ ಸಂಬಂಧ ಹೊಂದಿದ ಆರೋಪದ ಮೇಲೆ 3 ಮದರಸಾಗಳನ್ನು (Madrassa) ನೆಲಸಮ ಮಾಡಲಾಗಿದೆ. ಈ ಬೆನ್ನಲ್ಲೇ ಉತ್ತರ ಪ್ರದೇಶದಲ್ಲಿ (Uttar Pradesh) ಮಾನ್ಯತೆ ಪಡೆಯದ ಮದರಸಾಗಳ ಸಮೀಕ್ಷೆ ನಡೆಸಲು ಯೋಗಿ ಆದಿತ್ಯನಾಥ್ ಸರ್ಕಾರ ನಿರ್ಧರಿಸಿದೆ. ಇದಕ್ಕೆ ಎಐಎಂಐಎಂ (AIMIM) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ, ಅನುದಾನಿತ ಮದರಸಾಗಳ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯನ್ನು ವರ್ಗಾವಣೆ ಮಾಡಲು ಯುಪಿ ಸರ್ಕಾರ ಬುಧವಾರ ಅನುಮತಿ ನೀಡಿದೆ. ಅಲ್ಲದೆ, ಉತ್ತರ ಪ್ರದೇಶ ರಾಜ್ಯ ಮದರಸಾ ಮಂಡಳಿಯ ಮಹಿಳಾ ಸಿಬ್ಬಂದಿಗೆ ಈಗ ಹೆರಿಗೆ ಮತ್ತು ಮಕ್ಕಳ ಆರೈಕೆ ರಜೆ ಸಹ ಸಿಗಲಿದೆ. ಮದರಸಾಗಳ ಸಿಬ್ಬಂದಿ ಮತ್ತು ಶಿಕ್ಷಕರೊಂದಿಗೆ ಸಮಾಲೋಚನೆ ನಡೆಸಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ರಾಜ್ಯ ಸಚಿವ (ಅಲ್ಪಸಂಖ್ಯಾತ ಕಲ್ಯಾಣ) (Minority Development) ಡ್ಯಾನಿಶ್ ರಾಜಾ ಅನ್ಸಾರಿ ತಿಳಿಸಿದ್ದಾರೆ.
"ಅನುದಾನಿತ ಮದರಸಾಗಳ ಶಿಕ್ಷಕ/ಬೋಧಕೇತರ ಸಿಬ್ಬಂದಿಯನ್ನು ಮದರಸಾಗಳ ವ್ಯವಸ್ಥಾಪಕರ ಅನುಮೋದನೆಯೊಂದಿಗೆ ಮತ್ತು ಯುಪಿ ಮದರಸಾ ಎಜುಕೇಶನ್ ಕೌನ್ಸಿಲ್ ರಿಜಿಸ್ಟ್ರಾರ್ (Uttar Pradesh Madrassa Education Council) ಅವರ ಅನುಮೋದನೆಯೊಂದಿಗೆ ವರ್ಗಾವಣೆ ಮಾಡಲು ಕಾರ್ಯಕಾರಿ ಆದೇಶವನ್ನು ಹೊರಡಿಸಲಾಗಿದೆ" ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹಾಗೂ, "ಇದುವರೆಗೆ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ಮಂಡಳಿಯಲ್ಲಿ ವರ್ಗಾವಣೆಯನ್ನು ಅನುಮತಿಸಲಾಗಿಲ್ಲ" ಎಂದೂ ಸಚಿವರು ಹೇಳಿದರು. ಅಲ್ಲದೆ, “ಹೊಸ ಆದೇಶದ ಪ್ರಕಾರ ಮರಣ ಹೊಂದಿದ ಸಿಬ್ಬಂದಿಯ ಅವಲಂಬಿತ ವ್ಯಕ್ತಿಗೆ ಮರಣ ಹೊಂದಿದ ವ್ಯಕ್ತಿಯ ಸ್ಥಳದಲ್ಲಿ ಕೆಲಸ ಪಡೆಯಲು ನಿಯಮಗಳು ಅವಕಾಶ ನೀಡುತ್ತದೆ. ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಅಧಿಕಾರಿ ಅಥವಾ ಮದರಸಾದ ಪ್ರಾಂಶುಪಾಲರಿಂದ ಒಪ್ಪಿಗೆ ಪಡೆದ ನಂತರ ಇದನ್ನು ಮಾಡಲಾಗುತ್ತದೆ. ಹೊಸ ನಿಯಮಗಳ ಪ್ರಕಾರ, ಪ್ರೌಢ ಶಿಕ್ಷಣ ಮತ್ತು ಮೂಲ ಶಿಕ್ಷಣ ಇಲಾಖೆಯಲ್ಲಿ ಅನ್ವಯವಾಗುವ ನಿಯಮಗಳ ಹಿನ್ನೆಲೆ ಮದರಸಾಗಳಲ್ಲಿ ಕೆಲಸ ಮಾಡುವ ಮಹಿಳಾ ಉದ್ಯೋಗಿಗಳಿಗೆ ಹೆರಿಗೆ ರಜೆ (Maternity Leave) ಮತ್ತು ಮಕ್ಕಳ ಆರೈಕೆ ರಜೆ (Child Care Leave) ಸಿಗುತ್ತದೆ ಎಂದು ಸಚಿವರು ಹೇಳಿದರು.
ಅಲ್ ಖೈದಾ ಉಗ್ರ ಸಂಘಟನೆ ಜೊತೆಗೆ ಸಂಪರ್ಕ: ಮತ್ತೊಂದು ಮದರಸಾ ನೆಲಸಮ..!
ಮಾನ್ಯತೆ ಪಡೆಯದ ಮದರಸಾಗಳ ಸಮೀಕ್ಷೆ
ಇನ್ನು, ಶಿಕ್ಷಕರ ಸಂಖ್ಯೆ, ಪಠ್ಯಕ್ರಮ ಮತ್ತು ಅಲ್ಲಿ ಲಭ್ಯವಿರುವ ಮೂಲ ಸೌಕರ್ಯಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ರಾಜ್ಯದಲ್ಲಿ ಮಾನ್ಯತೆ ಪಡೆಯದ ಮದರಸಾಗಳ ಸಮೀಕ್ಷೆ ನಡೆಸುವುದಾಗಿಯೂ ಉತ್ತರ ಪ್ರದೇಶದ ಬಿಜೆಪಿ ಸರ್ಕಾರ ಘೋಷಿಸಿತು. ಮದರಸಾಗಳಲ್ಲಿ ವಿದ್ಯಾರ್ಥಿಗಳಿಗೆ ಮೂಲ ಸೌಕರ್ಯಗಳ ಲಭ್ಯತೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಗತ್ಯಕ್ಕೆ ಅನುಗುಣವಾಗಿ ಸರ್ಕಾರ ಸಮೀಕ್ಷೆ ನಡೆಸಲಿದೆ. ಸಮೀಕ್ಷೆ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ಸಚಿವ ಡ್ಯಾನಿಶ್ ರಾಜಾ ಅನ್ಸಾರಿ ಹೇಳಿದರು. ಸಮೀಕ್ಷೆಯ ಸಮಯದಲ್ಲಿ, ಮದರಸಾದ ಹೆಸರು ಮತ್ತು ಅದನ್ನು ನಿರ್ವಹಿಸುವ ಸಂಸ್ಥೆ, ಅದು ಖಾಸಗಿ ಅಥವಾ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದೆಯೇ, ಅಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಮತ್ತು ಕುಡಿಯುವ ನೀರು, ಪೀಠೋಪಕರಣಗಳು, ವಿದ್ಯುತ್ ಸರಬರಾಜು ಮತ್ತು ಶೌಚಾಲಯದ ಸೌಲಭ್ಯಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುವುದು ಎಂದು ರಾಜ್ಯ ಸಚಿವ (ಅಲ್ಪಸಂಖ್ಯಾತ ಕಲ್ಯಾಣ) ಡ್ಯಾನಿಶ್ ರಾಜಾ ಅನ್ಸಾರಿ ಹೇಳಿದ್ದಾರೆ.
ಮದರಸಾಗಳ ಸಮೀಕ್ಷೆಗೆ ಓವೈಸಿ ವಿರೋಧ
ಉತ್ತರ ಪ್ರದೇಶದಲ್ಲಿ ಮಾನ್ಯತೆ ಪಡೆಯದ ಮದರಸಾಗಳ ಸಮೀಕ್ಷೆ ನಡೆಸುತ್ತಿರುವುದಕ್ಕೆ ಅಸಾದುದ್ದೀನ್ ಓವೈಸಿ ವಿರೋಧ ವ್ಯಕ್ತಪಡಿಸಿದ್ದಾರೆ. ಮದರಸಾಗಳು ಸಂವಿಧಾನದ ಆರ್ಟಿಕಲ್ 30 ರಡಿ ಬರುತ್ತದೆ. ಹಾಗಾದರೆ ಯುಪಿ ಸರ್ಕಾರ ಸಮೀಕ್ಷೆಗೆ ಏಕೆ ಆದೇಶಿಸಿದೆ..? ಇದು ಸಮೀಕ್ಷೆಯಲ್ಲ, ಮಿನಿ-ಎನ್ಆರ್ಸಿ ಎಂದು ಓವೈಸಿ ಆರೋಪಿಸಿದ್ದಾರೆ. ಕೆಲವು ಮದರಸಾಗಳು ಉತ್ತರ ಪ್ರದೇಶ ಮದರಸಾ ಮಂಡಳಿಯ ಅಡಿಯಲ್ಲಿವೆ. ಆದರೆ, 30ನೇ ವಿಧಿಯ ಅಡಿಯಲ್ಲಿರುವ ನಮ್ಮ ಹಕ್ಕುಗಳ ಬಗ್ಗೆ ಯೋಗಿ ಆದಿತ್ಯನಾಥ್ ಸರ್ಕಾರವು ಮಧ್ಯಪ್ರವೇಶಿಸಲು ಸಾಧ್ಯವಿಲ್ಲ. ಅವರು ಮುಸ್ಲಿಮರಿಗೆ ಕಿರುಕುಳ ನೀಡಲು ಬಯಸುತ್ತಾರೆ ಎಂದೂ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೈದರಾಬಾದ್ನಲ್ಲಿ ವಿರೋಧ ವ್ಯಕ್ತಪಡಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಮದರಸಾಗಳಿಗೆ ಆಧುನಿಕ ಶಿಕ್ಷಣ ಮೊಬೈಲ್ ಅಪ್ಲಿಕೇಷನ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ