ಸುಳ್ಳು ಭ್ರಷ್ಟಾಚಾರ ಆರೋಪ, ಆಪ್‌ ಸಂಸದ ಸಂಜಯ್‌ ಸಿಂಗ್‌ಗೆ 1 ಲಕ್ಷ ದಂಡ ವಿಧಿಸಿದ ಕೋರ್ಟ್‌!

By Santosh NaikFirst Published Jan 3, 2024, 2:40 PM IST
Highlights

ಉತ್ತರ ಪ್ರದೇಶದ ಮಾಜಿ ಸಚಿವ ಮಹೇಂದ್ರ ಸಿಂಗ್‌ ವಿರುದ್ಧ ಸುಳ್ಳು ಭ್ರಷ್ಟಾಚಾರ ಆರೋಪ ಮಾಡಿದ್ದ ಆಪ್‌ ಸಂಸದ ಸಂಜಯ್‌ ಸಿಂಗ್‌ಗೆ ಉತ್ತರ ಪ್ರದೇಶದ ಕೋರ್ಟ್‌ 1 ಲಕ್ಷ ರೂಪಾಯಿ ದಂಡ ವಿಧಿಸಿದೆ.

ನವದೆಹಲಿ (ಜ.3): ಪ್ರಸ್ತುತ ಜೈಲಿನಲ್ಲಿರುವ ಆಮ್‌ ಆದ್ಮಿ ಪಾರ್ಟಿಯ ರಾಜ್ಯಸಭಾ ಸಂಸದ ಸಂಜಯ್‌ ಸಿಂಗ್‌ಗೆ ಉತ್ತರ ಪ್ರದೇಶದ ಕೋರ್ಟ್‌ ದೋಷಿ ಎಂದು ಹೇಳಿದೆ. ಉತ್ತರ ಪ್ರದೇಶದ ಬಿಜೆಪಿ ಮಾಜಿ ಸಚಿವ ಮಹೇಂದ್ರ ಸಿಂಗ್‌ ಅವರು ಹಾಕಿದ್ದ ಮಾನನಷ್ಟ ಮೊಕದ್ದಮೆ ಕೇಸ್‌ನಲ್ಲಿ ಸಂಜಯ್‌ ಸಿಂಗ್‌ ಅವರನ್ನು ದೋಷಿ ಎಂದು ಕೋರ್ಟ್‌ ತೀರ್ಪು ನೀಡಿದೆ.  ಅದರೊಂದಿಗೆ ಶಿಕ್ಷೆ ರೂಪದಲ್ಲಿ 1 ಲಕ್ಷ ರೂಪಾಯಿ ದಂಡ ವಿಧಿಸಿದ್ದು, ಬೇಷರತ್‌ ಆಗಿ ಕ್ಷಮೆ ಕೇಳುವಂತೆ ಸೂಚನೆ ನೀಡಿದೆ. ಅದರೊಂದಿಗೆ ಮಹೇಂದ್ರ ಸಿಂಗ್‌ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿರುವ ಎಲ್ಲಾ ವಿಡಿಯೋಗಳನ್ನು ಸೋಶಿಯಲ್‌ ಮೀಡಿಯಾಗಳಿಂದ ಡಿಲೀಟ್‌ ಮಾಡುವಂತೆ ಅವರಿಗೆ ತಿಳಿಸಿದೆ. ಅದಲ್ಲದೆ,  ಆಧಾರರಹಿತ ಆರೋಪಗಳನ್ನು ಮಾಡುವುದು, ಸಂಜಯ್‌ ಸಿಂಗ್‌ ಅವರ ಅಭ್ಯಾಸವಾಗಿರುವಂತೆ ತೋರುತ್ತಿದೆ ಎಂದೂ ಕೋರ್ಟ್‌ ಅಭಿಪ್ರಾಯವ್ಯಕ್ತಪಡಿಸಿದೆ.

ಉತ್ತರ ಪ್ರದೇಶದ ಮಾಜಿ ಜಲಶಕ್ತಿ ಸಚಿವರಾಗಿದ್ದ ಮಹೇಂದ್ರ ಸಿಂಗ್‌ 2021ರ ಅಕ್ಟೋಬರ್‌ನಲ್ಲಿ ತಮ್ಮ ಮೇಲೆ ಭ್ರಷ್ಟಾಚಾರ ಆರೋಪ ಮಾಡಿದ್ದ ಸಂಜಯ್‌ ಸಿಂಗ್‌ ವಿರುದ್ಧ 21 ಲಕ್ಷ ರೂಪಾಯಿಯ ಮಾನನಷ್ಟ ಮೊಕದ್ದಮೆ ಹೂಡಿದ್ದರು. ತಮ್ಮ ವಿರುದ್ಧ ಅವರು ಸಂಪೂರ್ಣವಾಗಿ ಸುಳ್ಳಾಗಿರುವ ಆರೋಪ ಮಾಡಿದ್ದಾರೆ ಎಂದು ಮಹೇಂದ್ರ ಸಿಂಗ್‌ ದೂರಿದ್ದರು.  2021ರ ಆಗಸ್ಟ್ 8 ರಂದು ರಾಜ್ಯ ರಾಜಧಾನಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಂಜಯ್ ಸಿಂಗ್ ಅವರು ಮಹೇಂದ್ರ ಸಿಂಗ್ ವಿರುದ್ಧ ಭ್ರಷ್ಟಾಚಾರದ ಆರೋಪಗಳನ್ನು ಮಾಡಿದ್ದರು.

ಈ ಕುರಿತಾಗಿ ಲಕ್ನೋದ ಸಿವಿಲ್ ನ್ಯಾಯಾಧೀಶರಾದ (ಹಿರಿಯ ವಿಭಾಗ) ಶ್ರದ್ಧಾ ಭಾರ್ತಿ ಅವರು ಸಂಜಯ್ ಸಿಂಗ್ ಅವರಿಗೆ ನವೆಂಬರ್ 25 ರೊಳಗೆ ಉತ್ತರವನ್ನು ಸಲ್ಲಿಸುವಂತೆ ಸೂಚಿಸಿ ನೋಟಿಸ್ ಜಾರಿ ಮಾಡಿದರು. ಪ್ರಕರಣದ ವಿಚಾರದಲ್ಲಿ ಎರಡು ವರ್ಷಕ್ಕೂ ಅಧಿಕ ಕಾಲ ವಿಚಾರಣೆ ನಡೆಸಿದ ಕೋರ್ಟ್‌, ಮಂಗಳವಾರ ತೀರ್ಪು ನೀಡಿದೆ. ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ, ಸಚಿವರನ್ನು ಪ್ರತಿನಿಧಿಸುತ್ತಿರುವ ವಕೀಲ ಪ್ರಶಾಂತ್ ಸಿಂಗ್, ಪ್ರತಿವಾದಿ (ಸಂಜಯ್ ಸಿಂಗ್) ತನ್ನ ರಾಜಕೀಯ ಪ್ರತಿಸ್ಪರ್ಧಿಗಳು ಮತ್ತು ಸಮಾಜದ ಪ್ರತಿಷ್ಠಿತ ಜನರ ವಿರುದ್ಧ ಅವಹೇಳನಕಾರಿ ಮತ್ತು ಮಾನಹಾನಿಕರ ಹೇಳಿಕೆಗಳನ್ನು ನೀಡುವ ಅಭ್ಯಾಸವನ್ನು ಹೊಂದಿದ್ದಾನೆ ಎಂದು ವಾದ ಮಾಡಿದ್ದರು.

ರೈತರ ಪರಿಹಾರ ಹಿಂದಿರುಗಿಸಿದರೆ ಪಾಟೀಲ್‌ ಆತ್ಮಹತ್ಯೆ ಮಾಡಿಕೊಳ್ತಾರಾ?: ಎಎಪಿ

“ನಾವು ಸಂಜಯ್ ಸಿಂಗ್ ವಿರುದ್ಧ ₹21 ಲಕ್ಷ ಮಾನನಷ್ಟ ಮೊಕದ್ದಮೆ ಹೂಡಿದ್ದೇವೆ. ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಕಕ್ಷಿದಾರ (ಸಚಿವ) ವಿರುದ್ಧ ಅವಹೇಳನಕಾರಿ ವಿಷಯಗಳನ್ನು ಪೋಸ್ಟ್ ಮಾಡದಂತೆ ಮತ್ತು ಈಗಾಗಲೇ ಪೋಸ್ಟ್ ಮಾಡಿರುವುದನ್ನು ತೆಗೆದುಹಾಕುವಂತೆ ನಾವು ನ್ಯಾಯಾಲಯವನ್ನು ಕೋರಿದ್ದೇವೆ ಎಂದು ಸಚಿವರ ವಕೀಲ ಪ್ರಶಾಂತ್ ಸಿಂಗ್ ಹೇಳಿದ್ದರು.

ಅಬ್ಬಬ್ಬಾ.. 2 ಡಜನ್‌ ವಾಹನದ ಬೆಂಗಾವಲಿನೊಂದಿಗೆ ಬಂದ ಪಂಜಾಬ್‌ ಸಿಎಂ ಪತ್ನಿ!

click me!