ಮುಸಲ್ಮಾನರಿಂದ ಜತರಕಾರಿ ಖರೀದಿ ಮಾಡಬೇಡಿ ಎಂದ ಬಿಜೆಪಿ ಶಾಸಕ/ ಉತ್ತರ ಪ್ರದೇಶದ ಶಾಸಕನ ಹೇಳಿಕೆಗೆ ಟೀಕೆ/ ಹೇಳಿಕೆ ಹಿಂದಿನ ಕಾರಣವನ್ನು ಕೊಟ್ಟ ಸುರೇಶ್ ತಿವಾರಿ
ಲಕ್ನೋ(ಏ.28) 'ಮುಸ್ಲಿಮರಿಂದ ಯಾವ ಕಾರಣಕ್ಕೂ ತರಕಾರಿ ಖರೀದಿ ಮಾಡಬೇಡಿ' ಉತ್ತರ ಪ್ರದೇಶದ ಬಿಜೆಪಿ ನಾಯಕರೊಬ್ಬರು ನೀಡಿರುವ ಈ ಹೇಳಿಕೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ದೇವರಿಯಾ ಜಿಲ್ಲೆಯ ಬರಹಜ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಸುರೇಶ್ ತಿವಾರಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಕ್ಷೇತ್ರದ ನಗರ ಪಾಲಿಕೆಗೆ ಭೇಟಿ ನೀಡಿದ್ದ ವೇಳೆ ಅಲ್ಲಿಯ ಸದಸ್ಯರಿಗೆ ಕೊರೊನಾಗೆ ಸಂಬಂಧಿಸಿದ ಸಲಹೆಗಳನ್ನು ನೀಡುತ್ತಿದ್ದರು. ನೀವೆಲ್ಲರೂ ಒಂದು ಮಾತನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಯಾರು ಮುಸ್ಲಿಮರ ಬಳಿ ತರಕಾರಿ ಖರೀದಿಸಬೇಡಿ ಎಂದು ಈ ಸಂದರ್ಭದಲ್ಲಿ ಹೇಳಿದ್ದರು.
ವಿಡಿಯೋ ವೈರಲ್ ಆಗ್ತಿದ್ದಂತೆ ಶಾಸಕರು ಇದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಸಭೆಯಲ್ಲಿದ್ದವರ ಪ್ರಶ್ನೆಗಳಿಗೆ ಉತ್ತರ ನೀಡುತ್ತಿದ್ದೆ. ಕೆಲ ಮುಸ್ಲಿಮರು ತರಕಾರಿ ಮೇಲೆ ಉಗುಳಿ ಮಾರುತ್ತಿದ್ದಾರೆ ಏನ್ ಮಾಡೋದು ಎಂಬ ಪ್ರಶ್ನೆ ಎದುರಾದಾಗ ' ನಿಮಗೆ ಅವರ ಮೇಲೆ ನಂಬಿಕೆ ಮತ್ತು ವಿಶ್ವಾಸ ಇಲ್ಲದಿದ್ರೆ ಅಂತಹವರ ಬಳಿ ತರಕಾರಿ ಖರೀದಿ ಮಾಡಬೇಡಿ' ಎಂದಿದ್ದೆ ಎನ್ನುತ್ತ ಹೇಳಿಕೆಗೆ ಕಾರಣ ನೀಡಿದ್ದಾರೆ.
ತಬ್ಲಿಘಿ ಜಮಾತ್ ಪ್ರಶ್ನೆ ಮಾಡಿದರೆ ಮುಸ್ಲಿಂ ಸಮುದಾಯ ಟಾರ್ಗೆಟ್ ಮಾಡಿದಂತೆಯಾ?
ತಬ್ಲಿಘಿ ಜಮಾತ್ ಸಂಘಟನೆಗೆ ಸೇರಿದವರು ದೇಶಾದ್ಯಂತ ಸೃಷ್ಟಿಸಿದ ಆತಂಕದ ಬಗ್ಗೆ ಹೊಸದಾಗಿ ಹೇಳಬೇಕಾಗಿಲ್ಲ ಎಂದು ಇದೇ ವೇಳೆ ಹೇಳಿದ್ದರು. ಶಾಸಕರ ಈ ಹೇಳಿಕೆಗೆ ಉತ್ತರ ಪ್ರದೇಶ ಬಿಜೆಪಿ ಜವಾಬ್ದಾರನಲ್ಲ. ಅದು ಅವರ ವೈಯಕ್ತಿಕ ವಿಚಾರ ಎಂದು ಉತ್ತರ ಪ್ರದೇಶ ಬಿಜೆಪಿ ವಕ್ತಾರ ರಾಕೇಶ್ ತ್ರಿಪಾಠಿ ಹೇಳಿದ್ದಾರೆ.
ಏಪ್ರಿಲ್ 14 ರಂದು ಉತ್ತರ ಪ್ರದೇಶದಲ್ಲಿ ದುಷ್ಕರ್ಮಿಗಳ ಗುಂಪೊಂದು ಮುಸ್ಲಿಂ ವರ್ತಕರೊಂದಿಗೆ ಕೆಟ್ಟದಾಗಿ ನಡೆದುಕೊಂಡಿತ್ತು. ಮುಸ್ಲಿಂ ವರ್ತಕರು ತಬ್ಲಿಘಿ ಜಮಾತ್ ಗೆ ಸೇರಿದವರಾಗಿದ್ದಾರೆ ಎಂದು ಆರೋಪ ಮಾಡಿತ್ತು.
ಎಐಎಂಐ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಬಹಿರಂಗವಾಗಿಯೇ ಹಿಂದೂಗಳನ್ನು ಟೀಕಿಸುತ್ತಾರೆ. ಆದ್ರೆ ಯಾರು ಈ ಬಗ್ಗೆ ಮಾತನಾಡಲ್ಲ. ಕ್ಷೇತ್ರದ ಜನತೆಗೆ ಸಲಹೆ ನೀಡೋದು ತಪ್ಪಾ ಎಂದು ಸುರೇಶ್ ತಿವಾರಿ ಮರುಪ್ರಶ್ನೆ ಮಾಡಿದ್ದರು. ತರಕಾರಿ ಮತ್ತು ಹಣ್ಣುಗಳ ಮೇಲೆ ಉಗುಳುವುದು, ಭಾರತದ ನೋಟ್ ಗಳಿಗೆ ಎಂಜಲು ಹಚ್ಚುವುದು ಸೇರಿದಂತೆ ಕೆಲ ವಿಕೃತ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು .