'ಎಚ್ಚರ.. 3ನೇ ಅಲೆ ಸನ್ನಿಹಿತ: ಪ್ರವಾಸ, ಯಾತ್ರೆ, ಧಾರ್ಮಿಕ ಉತ್ಸವ ಮುಂದೂಡಿ!'

By Suvarna NewsFirst Published Jul 13, 2021, 7:14 AM IST
Highlights

* 2ನೇ ಅಲೆ ಬಳಿಕ ​ಜನರ ನಿರ್ಲಕ್ಷ್ಯ ನೋಡಿದರೆ ನೋವಾಗ್ತಿದೆ

* ಎಚ್ಚರ.. 3ನೇ ಅಲೆ ಸನ್ನಿಹಿತ: ಐಎಂಎ

* ಪ್ರವಾಸ, ಯಾತ್ರೆ, ಧಾರ್ಮಿಕ ಉತ್ಸವಗಳನ್ನು ಮುಂದೂಡಿ

ನವದೆಹಲಿ(ಜು.13): ಕೊರೋನಾ 2ನೇ ಅಲೆ ಇಳಿಕೆಯ ನಂತರ ಜನರು ಪ್ರವಾಸಿ ತಾಣಗಳಿಗೆ ಮುಗಿಬೀಳುತ್ತಿರುವ ಬಗ್ಗೆ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಆತಂಕ ವ್ಯಕ್ತಪಡಿಸಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಇದಕ್ಕೆ ಕಡಿವಾಣ ಹಾಕಬೇಕು ಎಂದು ಮನವಿ ಮಾಡಿದೆ.

‘3ನೇ ಅಲೆ ಬರುವುದು ಸನ್ನಿಹಿತ. ಜಗತ್ತಿನಲ್ಲಿ ಲಭ್ಯವಿರುವ ಸಾಕ್ಷ್ಯಗಳನ್ನು ನೋಡಿದರೆ ಹಾಗೂ ಯಾವುದೇ ಸಾಂಕ್ರಾಮಿಕ ರೋಗದ ಇತಿಹಾಸವನ್ನು ಗಮನಿಸಿದರೆ ಕೊರೋನಾದ 3ನೇ ಅಲೆ ಕೂಡ ಬಂದೇ ಬರುತ್ತದೆ ಎಂದು ಅನುಮಾನವಿಲ್ಲದೆ ಹೇಳಬಹುದು. ದೇಶದ ವೈದ್ಯಕೀಯ ಸಮುದಾಯದ ಅವಿರತ ಪರಿಶ್ರಮ ಹಾಗೂ ರಾಜಕೀಯ ನಾಯಕತ್ವದ ಇಚ್ಛಾಶಕ್ತಿಯಿಂದಾಗಿ ಈಗಷ್ಟೇ ಎರಡನೇ ಅಲೆಯಿಂದ ಹೊರಗೆ ಬಂದಿದ್ದೇವೆ. ಈ ಹಂತದಲ್ಲಿ ಜನರು ಹಾಗೂ ಸರ್ಕಾರಗಳು ಕೋವಿಡ್‌ ಜೊತೆ ಮಾಡಿಕೊಳ್ಳುತ್ತಿರುವ ರಾಜಿಯನ್ನು ನೋಡಿದರೆ ಆತಂಕವಾಗುತ್ತದೆ’ ಎಂದು ಐಎಂಎ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ.

‘ಪ್ರವಾಸ, ಯಾತ್ರೆ, ಧಾರ್ಮಿಕ ಉತ್ಸವಗಳು ನಮಗೆ ಬೇಕು ಎಂಬುದು ನಿಜ. ಆದರೆ ಇನ್ನೂ ಕೆಲ ತಿಂಗಳು ಅವುಗಳನ್ನು ಮುಂದೂಡಬೇಕು. ಸರಿಯಾಗಿ ಎಲ್ಲರಿಗೂ ಲಸಿಕೆ ಸಿಗದೆ ಸಾಮೂಹಿಕವಾಗಿ ಜನರು ಒಂದೆಡೆ ಸೇರಲು ಅವಕಾಶ ಮಾಡಿಕೊಟ್ಟರೆ ಅಲ್ಲಿ ಸೇರುವ ಜನರೆಲ್ಲ 3ನೇ ಅಲೆಗೆ ಸೂಪರ್‌ ಸೆ್ೊ್ರಡರ್‌ಗಳಾಗಬಹುದು. ಕಳೆದ ಒಂದೂವರೆ ವರ್ಷದ ಅನುಭವದಲ್ಲಿ ಹೇಳುವುದಾದರೆ ಎಲ್ಲರಿಗೂ ಲಸಿಕೆ ನೀಡುವುದು ಹಾಗೂ ಕೋವಿಡ್‌ ಸನ್ನಡತೆಯನ್ನು ಅಳವಡಿಸಿಕೊಳ್ಳುವುದರಿಂದ 3ನೇ ಅಲೆಯ ತೀವ್ರತೆಯನ್ನು ಕಡಿಮೆ ಮಾಡಲು ಸಾಧ್ಯವಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕು’ ಎಂದು ಐಎಂಎ ಹೇಳಿದೆ.

click me!