ಆಂಧ್ರದಲ್ಲಿ ಮುಂದುವರೆದ ದೇಗುಲಗಳ ಮೇಲಿನ ದಾಳಿ, ವಿಗ್ರಹ ಧ್ವಂಸ!

By Suvarna NewsFirst Published Jan 3, 2021, 8:04 AM IST
Highlights

ಆಂಧ್ರದಲ್ಲಿ ಮುಂದುವರೆದ ದೇಗುಲಗಳ ಮೇಲಿನ ದಾಳಿ| ರಾಮ, ಸುಬ್ರಹ್ಮಣ್ಯ, ಕೋಮಲಮ್ಮನ ಪಾದ ವಿಗ್ರಹ ಧ್ವಂಸ| ಜಗನ್‌ ಸರ್ಕಾರದ ವಿರುದ್ಧ ಟಿಡಿಪಿ, ಬಿಜೆಪಿ ಆಕ್ರೋಶ| ದಾಳಿಕೋರರ ಮೇಲೆ ಕ್ರಮಕ್ಕೆ ಜಗನ್‌ ಖಡಕ್‌ ಸೂಚನೆ

ಅಮರಾವತಿ(ಜ.03): ಆಂಧ್ರಪ್ರದೇಶದಲ್ಲಿ ದೇವಾಲಯಗಳ ಮೇಲೆ ದಾಳಿಗಳು ಮುಂದುವರೆದಿದ್ದು, ವಿಶಾಖಪಟ್ಟಣದಲ್ಲಿ 400 ವರ್ಷ ಹಳೆಯದಾದ ರಾಮತೀರ್ಥ ದೇಗುಲದಲ್ಲಿನ ರಾಮನ ವಿಗ್ರಹ, ಕೋಮಲಮ್ಮನ ಪಾದ ಹಾಗೂ ರಾಜಮಂಡ್ರಿಯ ವಿಘ್ನೇಶ್ವರ ದೇವಾಲಯದ ಸುಬ್ರಹ್ಮಣ್ಯ ವಿಗ್ರಹವನ್ನು ದುಷ್ಕರ್ಮಿಗಳು 3 ದಿನದ ಅಂತರದಲ್ಲಿ ಧ್ವಂಸಗೊಳಿಸಿದ್ದಾರೆ.

ಮಂಗಳವಾರ ವಿಶಾಖಪಟ್ಟಣದ ರಾಮತೀರ್ಥ ಸೀತಾ ಲಕ್ಷ್ಮಣ ಕೋದಂಡರಾಮ ದೇವಾಲಯಕ್ಕೆ ನುಗ್ಗಿದ ಅಪರಿಚಿತ ದುಷ್ಕರ್ಮಿಗಳು ರಾಮನ ವಿಗ್ರಹ ಧ್ವಂಸಗೊಳಿಸಿದರು. ರಾಮನ ವಿಗ್ರಹದ ತುಂಡಾದ ತಲೆ ಸನಿಹದ ಕೆರೆಯಲ್ಲಿ ಮರುದಿನ ಪತ್ತೆಯಾಗಿದೆ. ಇನ್ನು ಗುರುವಾರ ಮಧ್ಯರಾತ್ರಿ ರಾಜಮಂಡ್ರಿಯ ವಿಘ್ನೇಶ್ವರ ದೇವಾಲಯದಲ್ಲಿ ದುಷ್ಕರ್ಮಿಗಳು ಸುಬ್ರಹ್ಮಣ್ಯ ಪ್ರತಿಮೆಯನ್ನು ಧ್ವಂಸಗೊಳಿಸಿದ್ದಾರೆ. ಇದೇ ವೇಳೆ ವಿಶಾಖಪಟ್ಟಣ ಏಜೆನ್ಸಿ ಪ್ರದೇಶದ ಕೋಮಲಮ್ಮನ ಪಾದಗಳನ್ನು ಭಗ್ನಗೊಳಿಸಿರುವುದು ಕಂಡುಬಂದಿದೆ. ಕಳೆದ ವಾರ ಕೂಡ ದಾಸರಿ ಪಟ್ಟಣದ ಕೃಷ್ಣ ದೇವಾಲಯದ ಮೇಲೆ ದಾಳಿ ನಡೆದಿತ್ತು. ದೇಗುಲದ ಗೋಡೆ ಮೇಲೆ ಮಾಂಸ ಹಾಗೂ ರಕ್ತದ ಕಲೆಗಳು ಕಂಡುಬಂದಿದ್ದವು. ಸೆಪ್ಟೆಂಬರ್‌ನಲ್ಲಿ ಚಿತ್ತೂರು ಜಿಲ್ಲೆಯ ನಂದಿ ವಿಗ್ರಹ ಧ್ವಂಸಗೊಳಿಸಲಾಗಿತ್ತು.

ವಿಪಕ್ಷಗಳ ಆಕ್ರೋಶ:

ಈ ನಡುವೆ, ಶನಿವಾರ ರಾಮನ ವಿಗ್ರಹ ಧ್ವಂಸಗೊಂಡ ಘಟನಾ ಸ್ಥಳಕ್ಕೆ ಟಿಡಿಪಿ ನೇತಾರ ಚಂದ್ರಬಾಬು ನಾಯ್ಡು ಅವರು ಭೇಟಿ ನೀಡಿ ರಾಜ್ಯ ಸರ್ಕಾರವು ದೇಗುಲಗಳ ರಕ್ಷಣೆಯಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು. ಜಗನ್‌ ಸರ್ಕಾರದ ವಿರುದ್ಧ ಬಿಜೆಪಿ ಕೂಡ ಕಿಡಿಕಾರಿದ್ದು, ಶುಕ್ರವಾರ ರಾಮತೀರ್ಥ ಚಲೋ ನಡೆಸಿತು. ಈ ನಡುವೆ ಮುಖ್ಯಮಂತ್ರಿ ಜಗನ್‌ ಅವರು ಇಂಥ ಘಟನೆಗಳನ್ನು ಸಹಿಸುವುದಿಲ್ಲ ಎಂದಿದ್ದು, ದುಷ್ಕರ್ಮಿಗಳ ಶೀಘ್ರ ಬಂಧನಕ್ಕೆ ಪೊಲೀಸರಿಗೆ ಸೂಚಿಸಿದ್ದಾರೆ.

click me!