
ತೆಲಂಗಾಣ ರಾಜ್ಯದ ನಾಗರ್ಕರ್ನೂಲ್ ಜಿಲ್ಲೆಯ ಅಮ್ರಾಬಾದ್ನಲ್ಲಿ ಸುರಂಗ ಮಾರ್ಗವೊಂದು ಕುಸಿದು ಬಿದ್ದಿದೆ. ಶ್ರೀಶೈಲಂ ಜಲಾಶಯದ ಬಳಿಯಿರುವ ಸುರಂಗದಲ್ಲಿ ಕಾರ್ಮಿಕರು ನಿನ್ನೆ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದಾಗ, ಅದರ ಒಂದು ಭಾಗ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದೆ. 500 ಅಡಿ ಆಳದ ಈ ಸುರಂಗದ ಒಳಗೆ ಸುಮಾರು 200 ಮೀಟರ್ ದೂರದಲ್ಲಿ ಕುಸಿತ ಉಂಟಾಗಿದೆ.
ಫೆಬ್ರವರಿ 22 ರಂದು ತೆಲಂಗಾಣದ ನಾಗರ್ಕರ್ನೂಲ್ ಜಿಲ್ಲೆಯಲ್ಲಿ ನಿರ್ಮಾಣ ಹಂತದ ಸುರಂಗದ ಮೇಲ್ಛಾವಣಿಯ ಭಾಗ ಕುಸಿದು ಬಿದ್ದಿದ್ದು, ಅದರಲ್ಲಿ ಸಿಲುಕಿರುವ ಎಂಟು ಜನರನ್ನು ರಕ್ಷಿಸಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್) ತಂಡಗಳು ಭಾನುವಾರ ರಕ್ಷಣಾ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ. ಶನಿವಾರ ರಾತ್ರಿಯಿಂದ 150 ಸಿಬ್ಬಂದಿಯನ್ನು ಒಳಗೊಂಡ ನಾಲ್ಕು ತಂಡಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದವು. ಶ್ರೀಶೈಲಂ ಎಡದಂಡೆ ಕಾಲುವೆಯ (SLBC) ಭಾಗವಾಗಿ ಅಗೆಯಲಾಗುತ್ತಿದ್ದ ಸುರಂಗದ ಒಂದು ಭಾಗದ ದೋಮಲಪೆಂಟಾ ಬಳಿ ಕುಸಿದು ಕನಿಷ್ಠ ಇಬ್ಬರು ಕಾರ್ಮಿಕರು ಗಾಯಗೊಂಡರು ಮತ್ತು ಎಂಟು ಮಂದಿ ಸಿಕ್ಕಿಹಾಕಿಕೊಂಡರು.
ಬೆಂಗಳೂರು: ಹೆಬ್ಬಾಳ-ಸಿಲ್ಕ್ಬೋರ್ಡ್ ಸುರಂಗ ರಸ್ತೆಗೆ ಸಿದ್ಧತೆ
42 ಕಾರ್ಮಿಕರು ಸುರಂಗದಿಂದ ಹೊರಬಂದರೆ, ಉಳಿದ ಎಂಟು ಮಂದಿ ಸಿಲುಕಿದ್ದಾರೆ. ಇದರಲ್ಲಿ ಇಬ್ಬರು ಎಂಜಿನಿಯರ್ಗಳು ಮತ್ತು ಇಬ್ಬರು ಯಂತ್ರ ನಿರ್ವಾಹಕರು ಸೇರಿದ್ದಾರೆ. ಲೋಕೋ ರೈಲಿನಲ್ಲಿ 11 ನೇ ಕಿ.ಮೀ ವರೆಗೆ ತಲುಪಿದ NDRF ತಂಡವು ಈ ಹಂತದ ಆಚೆ ನೀರು ಮತ್ತು ಮಣ್ಣನ್ನು ಕಂಡುಕೊಂಡಿದೆ. ಸುಮಾರು ಮೂರು ಅಡಿಗಳಷ್ಟು ನೀರು ಸಂಗ್ರಹವಾಗಿರುವ ಪರಿಣಾಮ ವಿಪರೀತ ಕೆಸರು ತುಂಬಿದ್ದು, ಕೆಸರೇ ಕಾರ್ಯಾಚರಣೆಗೆ ಅಡ್ಡಿಯಾಗಿದೆ.
ಅಪಘಾತದಲ್ಲಿ ಸುರಂಗ ಕೊರೆಯುವ ಯಂತ್ರವು ತೀವ್ರವಾಗಿ ಹಾನಿಗೊಳಗಾಗಿದೆ. ಸುರಂಗದ ಛಾವಣಿಯಿಂದ ಹೊರಬಂದ ನೀರು ಮತ್ತು ಮಣ್ಣು ಯಂತ್ರವನ್ನು 80 ಮೀಟರ್ಗಳವರೆಗೆ ಹಿಂದಕ್ಕೆ ತಳ್ಳಿದೆ.ಯಂತ್ರದ ಎರಡೂ ಬದಿಗಳಲ್ಲಿ ನೀರು ಮತ್ತು ಮಣ್ಣು ಸಂಗ್ರಹವಾಗಿರುವುದರಿಂದ ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗಿದೆ. ಅಧಿಕಾರಿಗಳ ಪ್ರಕಾರ, ರಕ್ಷಣಾ ಕಾರ್ಯ ಮತ್ತಷ್ಟು ಮುಂದುವರಿಯಲು ನೀರನ್ನು ಪಂಪ್ ಮಾಡಿ ಮಣ್ಣನ್ನು ತೆರವುಗೊಳಿಸುತ್ತಿದ್ದಾರೆ.
ಶ್ರೀಶೈಲಂ ಕಾಲುವೆ ಸುರಂಗ ಕುಸಿತಕ್ಕೆ ಕಾರಣವೇನು? ಸಂಪರ್ಕಕ್ಕೆ ಸಿಗದ 14 ಕಿ.ಮೀ ಒಳಗಿರೋ 8 ಕಾರ್ಮಿಕರು
ಇದಕ್ಕೂ ಮೊದಲು, ಎನ್ಡಿಆರ್ಎಫ್ನ ಮೂರು ತಂಡಗಳು ವಿಜಯವಾಡದಿಂದ ಅಪಘಾತ ಸ್ಥಳಕ್ಕೆ ತಲುಪಿದರೆ, ನಾಲ್ಕು ತಂಡಗಳು ಹೈದರಾಬಾದ್ನಿಂದ ಆಗಮಿಸಿದವು. ಭಾರತೀಯ ಸೇನೆ ಮತ್ತು ಸಿಂಗರೇಣಿ ಕೊಲಿಯರೀಸ್ ಕಂಪನಿ ಲಿಮಿಟೆಡ್ನ ತಂಡಗಳು ಮತ್ತು ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ (ಎಸ್ಡಿಆರ್ಎಫ್) ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದೆ.
ಸುರಂಗದೊಳಗೆ ಸಿಲುಕಿರುವ ಕಾರ್ಮಿಕರು ಜಾರ್ಖಂಡ್, ಉತ್ತರ ಪ್ರದೇಶ, ಪಂಜಾಬ್ ಮತ್ತು ಜಮ್ಮು ಮತ್ತು ಕಾಶ್ಮೀರದವರಾಗಿದ್ದಾರೆ. ಘಟನೆಯ ಬಗ್ಗೆ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಆಘಾತ ವ್ಯಕ್ತಪಡಿಸಿದ್ದು, ಸಂತ್ರಸ್ತರ ಕುಟುಂಬಗಳಿಗೆ ಸರ್ಕಾರ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಘಟನೆಯ ಬಗ್ಗೆ ವಿಚಾರಿಸಿದ್ದಾರೆ.
ದೀರ್ಘ ಕಾಲದಿಂದ ಬಾಕಿ ಉಳಿದಿದ್ದ ಸುರಂಗ ಮಾರ್ಗದ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಲು ರಾಜ್ಯ ಸರ್ಕಾರ ಇತ್ತೀಚೆಗೆ ಸುರಂಗ ಮಾರ್ಗದ ನಿರ್ಮಾಣ ಕಾರ್ಯವನ್ನು ಪುನರಾರಂಭಿಸಿತ್ತು. ನಿರ್ಮಾಣ ಸಂಸ್ಥೆಯು ನಾಲ್ಕು ದಿನಗಳ ಹಿಂದೆಯೇ ಕೆಲಸವನ್ನು ಪ್ರಾರಂಭಿಸಿತ್ತು ಮತ್ತು ಶನಿವಾರ ಬೆಳಿಗ್ಗೆ 50 ಕಾರ್ಮಿಕರು ಕೆಲಸಕ್ಕಾಗಿ ಸುರಂಗ ಮಾರ್ಗವನ್ನು ಪ್ರವೇಶಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ