
ಆಂಧ್ರಪ್ರದೇಶ(ಜು.31): ಮಂಕಿಪಾಕ್ಸ್ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಈಗಾಗಲೇ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಿದೆ. 80ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಮಂಕಿಪಾಕ್ಸ್ ಪ್ರಕರಣ ಪತ್ತೆಯಾಗಿದೆ. ಭಾರತದಲ್ಲಿ ಈಗಾಗಲೇ 4 ಪ್ರಕರಣ ಪತ್ತೆಯಾಗಿದೆ. ಇದೀಗ ಆಂಧ್ರಪ್ರದೇಶದ ಗುಂಟೂರಿನ 8 ವರ್ಷದ ಬಾಲಕ ಮಂಕಿಪಾಕ್ಸ್ ರೋಗಲಕ್ಷಣಗಳೊಂದಿಗೆ ಆಸ್ಪತ್ರೆ ದಾಖಲಾಗಿದ್ದಾನೆ. ಈ ಬಾಲಕನ ಮಾದರಿ ಸಂಗ್ರಹಿಸಿ ಪುಣೆಯಲ್ಲಿರುವ ವಿರೋಲಜಿ ಕೇಂದ್ರಕ್ಕೆ ಕಳುಹಿಸಲಾಗಿದೆ. ಆಂಧ್ರ ಪ್ರದೇಶದ ಗುಂಟೂರಿನಲ್ಲಿ ಇದೀಗ ಹೈ ಅಲರ್ಟ್ ಘೋಷಿಸಲಾಗಿದೆ. ಈ ಕುರಿತು ಆಂಧ್ರ ಪ್ರದೇಶ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದ್ದು, ವರದಿ ಬಂದ ಬಳಿಕ ಸ್ಪಷ್ಟ ಉತ್ತರ ಸಿಗುವುದಾಗಿ ಹೇಳಿದೆ. ಆದರೆ ರೋಗಲಕ್ಷಣಗಳು ಪತ್ತೆಯಾಗಿರುವ ಕಾರಣ, ಅತೀವ ಎಚ್ಚರಿಕೆ ವಹಿಸಲು ಆದೇಶ ಹೊರಡಿಸಲಾಗಿದೆ.
ಒಡಿಶಾ ಮೂಲಕ ಕಾರ್ಮಿಕರ ದಂಪತಿಯ 8 ವರ್ಷದ ಬಾಲಕ ತೀವ್ರ ಜ್ವರ, ಕಜ್ಜಿ, ತುರಿಕೆಯಿಂದ ಬಳಲಿದ್ದಾನೆ. ಹೀಗಾಗಿ ಪೋಷಕರು ಗುಂಟೂರು ಸರ್ಕಾರಿ ಆಸ್ಪತ್ರೆ ವೈದ್ಯರನ್ನು ಸಂಪರ್ಕಿಸಿದ್ದಾರೆ. ಈ ವೇಳೆ ಬಾಲಕನಲ್ಲಿ ಮಂಕಿಪಾಕ್ಸ್ ರೋಗ ಲಕ್ಷಣ ಗುರುತಿಸಿ ವೈದ್ಯರು ಆಸ್ಪತ್ರೆಯಲ್ಲಿ ದಾಖಲಿಸಿದ್ದಾರೆ. ಚಿಕಿತ್ಸೆ ಆರಂಭಿಸಿರುವ ವೈದ್ಯರು, ಮಾದರಿ ಸಂಗ್ರಹಿಸಿ ಪುಣೆಗೆ ಕಳುಹಿಸಿದ್ದಾರೆ. ಸೋಮವಾರ(ಆಗಸ್ಟ್ 1) ವರದಿ ಲಭ್ಯವಾಗಲಿದೆ ಎಂದು ವೈದ್ಯರು ಹೇಳಿದ್ದಾರೆ.
ಬೆಂಗಳೂರಿಗೂ ವಕ್ಕರಿಸಿತೇ ಮಂಕಿಪಾಕ್ಸ್ ? ಆಫ್ರಿಕಾ ಮೂಲದ ಪ್ರಜೆಯಲ್ಲಿ ಸೋಂಕಿನ ಲಕ್ಷಣ
15 ದಿನಗಳ ಹಿಂದೆ ಒಡಿಶಾದಿಂದ ಕೆಲಸಕ್ಕಾಗಿ ಆಂಧ್ರ ಪ್ರದೇಶದ ಗುಂಟೂರಿಗಾಗಿ ಆಗಮಿಸಿದ್ದಾರೆ. ಕಳೆದ 5 ದಿನಗಳಿಂದ ಜ್ವರದಿಂದ ಬಳಲಿದ ಬಾಲಕನಲ್ಲಿ ತುರಿಕೆ ಹಾಗೂ ಮಂಕಿಪಾಕ್ಸ್ ರೀತಿಯ ಗುಳ್ಳೆಗಳು ಕಾಣಿಸಿಕೊಂಡಿದೆ. ಒಂದು ವಾರದಿಂದ ಜ್ವರ ಕಡಿಮೆಯಾಗಿಲ್ಲ. ಇತ್ತ ಇತರ ರೋಗಲಕ್ಷಣಗಳು ಕಾಣಿಸಿಕೊಂಡ ಕಾರಣ ಆತಂಕಗೊಂಡ ಪೋಷಕರು ಆಸ್ಪತ್ರೆಗೆ ಧಾವಿಸಿದ್ದಾರೆ. ಸದ್ಯ ಬಾಲಕನನ್ನು ಐಸೋಲೇಶನ್ ವಾರ್ಡ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಜುಲೈ ತಿಂಗಳಲ್ಲಿ ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಎರಡು ಮಂಕಿಪಾಕ್ಸ್ ರೋಗಲಕ್ಷಣಗಳ ಸೋಂಕಿತರು ಆಸ್ಪತ್ರೆ ದಾಖಲಾಗಿದ್ದರು. ಆದರೆ ಈ ವರದಿ ನೆಗಟೀವ್ ಆದ ಕಾರಣ ಆತಂಕ ದೂರವಾಗಿತ್ತು. ಇದೀಗ ಬಾಲಕನಲ್ಲಿ ಮಂಕಿಪಾಕ್ಸ್ ಪ್ರಕರಣ ಕಾಣಿಸಿಕೊಂಡಿರುವುದು ಆತಂಕ ಹೆಚ್ಚಿಸಿದೆ. ಏಮ್ಸ್ ವೈದ್ಯರು ಮಕ್ಕಳಿಗೆ ಮಂಕಿಪಾಕ್ಸ್ ಪ್ರಕರಣ ಮಾರಕವಾಗಬಹುದು ಎಂಬ ಎಚ್ಚರಿಕೆ ನೀಡಿದ್ದಾರೆ. ಕೋವಿಡ್ಗಿಂತ ಮಕ್ಕಳಿಗೆ ಮಂಕಿಪಾಕ್ಸ್ ಸೋಂಕು ಹೆಚ್ಚಿನ ಅಪಾಯ ತಂದೊಡ್ಡಲಿದೆ ಎಂದಿದ್ದಾರೆ.
ಮಂಕಿಪಾಕ್ಸ್ನಿಂದ ಬ್ರೆಜಿಲ್ನಲ್ಲಿ ಮೊದಲ ಸಾವು; ವಿಶ್ವದಾದ್ಯಂತ ಸಾವಿನ ಸಂಖ್ಯೆ 6ಕ್ಕೆ ಏರಿಕೆ
ಮಂಕಿ ಪಾಕ್ಸ್ ಮಾರಣಾಂತಿಕವಲ್ಲ
ಕರ್ನಾಟಕದಲ್ಲಿ ಕೂಡ ಮಂಕಿಪಾಕ್ಸ್ ರೋಗದ ಗುಣಲಕ್ಷಣವುಳ್ಳ ವ್ಯಕ್ತಿ ಪತ್ತೆಯಾಗಿದ್ದಾರೆ ಎಂದು ತಿಳಿಸಿದ ಆರೋಗ್ಯ ಸಚಿವ ಡಾ.ಸುಧಾಕರ್, ರೋಗಿಯ ವೈಯಕ್ತಿಕ ವಿವರಣೆ ನೀಡಲು ನಿರಾಕರಿಸಿದರು. ಚಿಕ್ಕಬಳ್ಳಾಪುರದಲ್ಲಿ ಶನಿವಾರ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಕಿಪಾಕ್ಸ್ ಮಾರಣಾಂತಿಕ ಕಾಯಿಲೆ ಅಲ್ಲ. ಯಾರು ಕೂಡ ಈ ಬಗ್ಗೆ ವಿಶೇಷ ಆತಂಕ ವ್ಯಕ್ತಪಡಿಸಬೇಕಿಲ್ಲ ಎಂದು ತಿಳಿಸಿದರು. ಮಂಕಿಪಾಕ್ಸ್ ಬಗ್ಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವುದು ಅಗತ್ಯ. ಒಂದು ವೇಳೆ ರೋಗ ಕಾಣಿಸಿಕೊಂಡರೆ ಸೂಕ್ತ ಚಿಕಿತ್ಸೆ ಲಭ್ಯವಿದೆ. ಇದರಿಂದ ಸಾವು ಸಂಭವಿಸಿವುದು ಬಹಳ ಅಪರೂಪ. ಇದು ಅಷ್ಟೊಂದು ಮರಣಾಂತಿಕ ಕಾಯಿಲೆ ಅಲ್ಲ. ಅದನ್ನು ಚಿಕಿತ್ಸೆ ನೀಡಿ ಗುಣಪಡಿಸಬಹುದು. ಮಂಕಿಪಾಕ್ಸ್ ಬಾರದಂತೆ ಅಗತ್ಯ ಲಸಿಕೆ ಪಡೆದುಕೊಳ್ಳಬೇಕೆಂದು ಸಚಿವರು ಮನವಿ ಮಾಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ