
ನವದೆಹಲಿ(ಮೇ.11): ‘ದೇಶದ್ರೋಹ ಕಾಯ್ದೆಯ ಮರುಪರಿಶೀಲನೆ ಮುಗಿಯುವವರೆಗೆ ಕಾಯ್ದೆಯನ್ನು ತಡೆ ಹಿಡಿಯಲು ಸಾಧ್ಯವೇ?’ ಎಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಚ್ ಪ್ರಶ್ನೆ ಹಾಕಿದೆ ಹಾಗೂ ಬುಧವಾರ ಈ ಬಗ್ಗೆ ಉತ್ತರಿಸುವಂತೆ ಸೂಚಿಸಿದೆ.
ದೇಶದ್ರೋಹ ಕಾಯ್ದೆಯ ಸೆಕ್ಷನ್ 124 ಎ ರದ್ದುಪಡಿಸಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ವೇಳೆ ಸೋಮವಾರ ವಾದ ಮಂಡಿಸಿದ್ದ ಕೇಂದ್ರ ಸರ್ಕಾರ, ಕಾಯ್ದೆ ಮರು ಪರಿಶೀಲನೆಗೆ ತಾನು ಸಿದ್ಧ ಎಂದಿತ್ತು. ಇದಕ್ಕೆ ಮಂಗಳವಾರದ ವಿಚಾರಣೆಯಲ್ಲಿ ಪ್ರತಿಕ್ರಿಯಿಸಿದ ಮುಖ್ಯ ನ್ಯಾ ಎನ್.ವಿ. ರಮಣ ಅವರ ಪೀಠ, ‘ದೇಶದ್ರೋಹ ಕಾಯ್ದೆಯನ್ನು ಮರುಪರಿಶೀಲನೆಗೆ ಒಳಪಡಿಸುವುದಾದರೆ, ಈಗಾಗಲೇ ದಾಖಲಾಗಿರುವ ಪ್ರಕರಣಗಳು ಮತ್ತು ಮುಂದೆ ದಾಖಲಾಗುವ ಪ್ರಕರಣಗಳ ಕಥೆ ಏನು?’ ಎಂಬುದರ ಬಗ್ಗೆ ಸ್ಪಷ್ಟನೆ ಬಯಸಿತು ಹಾಗೂ ಬುಧವಾರಕ್ಕೆ ವಿಚಾರಣೆ ನಿಗದಿಪಡಿಸಿತು.
ದೇಶದ್ರೋಹಿ ಲೇಖನ ಬರೆದ ಆರೋಪ: ಕಾಶ್ಮೀರದ ಪಿಎಚ್ಡಿ ಸ್ಕಾಲರ್ ಆಲಾ ಫಾಜಿಲಿ ಬಂಧನ
‘ನಮಗೆ ಹಳೆಯ ಮತ್ತು ಭವಿಷ್ಯದ ಕೇಸುಗಳ ಬಗ್ಗೆ ಪ್ರಕರಣಗಳ ಬಗ್ಗೆ ಕಳವಳವಿದೆ. ಹೀಗಾಗಿ ಈ ಪುರಾತನ ಕಾಯ್ದೆಯನ್ನು ಮರುಪರಿಶೀಲನೆಗೆ ಒಳಪಡಿಸುವವರೆಗೂ ಈ ಕಾಯ್ದೆಯನ್ನೇ ಅಮಾನತ್ತಿನಲ್ಲಿ ಇಡಬಹುದೇ ಮತ್ತು ಈ ಕಾಯ್ದೆಯಡಿ ಆರೋಪ ಹೊತ್ತವರಿಗೆ ರಕ್ಷಣೆ ನೀಡಬಹುದೇ? ಎಂಬುದನ್ನು ಸ್ಪಷ್ಟಪಡಿಸಿ’ ಎಂದು ಸರ್ಕಾರಕ್ಕೆ ಕೇಳಿತು.
ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಅಭಿಪ್ರಾಯ ಪಡೆದು ಬುಧವಾರ ಉತ್ತರ ನೀಡುವುದಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ನ್ಯಾಯಾಲಯಕ್ಕೆ ಭರವಸೆ ನೀಡಿದರು.
ದೇಶದ್ರೋಹ ಕಾಯ್ದೆ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳನ್ನು ವಜಾಗೊಳಿಸುವಂತೆ ಶನಿವಾರದವರೆಗೂ ವಾದ ಮಂಡಿಸಿ ಆ ಕಾಯ್ದೆಯನ್ನು ಬಲವಾಗಿ ಸಮರ್ಥಿಸಿಕೊಂಡಿದ್ದ ಕೇಂದ್ರ ಸರ್ಕಾರ ಈಗ ದಿಢೀರ್ ತನ್ನ ನಿಲುವು ಬದಲಿಸಿಕೊಂಡಿದೆ. ಕಾಯ್ದೆಯ ಬಗ್ಗೆ ಮರುಪರಿಶೀಲನೆ ನಡೆಸುವುದಾಗಿ ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದೆ.
ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಗೆ ಅನುಗುಣವಾಗಿ ಐಪಿಸಿ ಸೆಕ್ಷನ್ 124 ಎ ಅನ್ನು ಮರುಪರಿಶೀಲನೆ ನಡೆಸಲು ನಿರ್ಧರಿಸಲಾಗಿದೆ. ಈ ಬಗ್ಗೆ ಸಕ್ಷಮ ವೇದಿಕೆಯೊಂದು ನಿಷ್ಕರ್ಷೆ ನಡೆಸಲಿದೆ. ಅಲ್ಲಿವರೆಗೂ ಸುಪ್ರೀಂಕೋರ್ಚ್ ಕಾಯಬೇಕು. ದೇಶದ್ರೋಹ ಕಾಯ್ದೆಯ ಸಂವಿಧಾನಿಕ ಸಿಂಧುತ್ವ ಪರಿಶೀಲನೆಗೆ ಸಮಯ ವಿನಿಯೋಗಿಸಬಾರದು ಎಂದು ಪ್ರಮಾಣಪತ್ರವೊಂದನ್ನು ಕೇಂದ್ರ ಗೃಹ ಸಚಿವಾಲಯ ಸಲ್ಲಿಕೆ ಮಾಡಿದೆ.
ಆಪ್ ಬೆಂಬಲಿಗರು 'ದೇಶದ್ರೋಹಿ'ಗಳು, ಹಾಡಿನಿಂದ ವಿವಾದ ಸೃಷ್ಟಿಸಿದ ಸಿಧು ಮೂಸೆವಾಲಾ!
ದೇಶದ್ರೋಹ ಕಾಯ್ದೆ ವ್ಯಾಪಕವಾಗಿ ದುರ್ಬಳಕೆಯಾಗುತ್ತಿದೆ ಎಂದು ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ, ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಮತ್ತಿತರರು ಸುಪ್ರೀಂಕೋರ್ಚ್ಗೆ ಅರ್ಜಿ ಸಲ್ಲಿಸಿದ್ದರು. ಮಹಾತ್ಮ ಗಾಂಧಿ ಅವರಂತಹ ಸ್ವಾತಂತ್ರ್ಯದ ಹೆಗ್ಗುರುತುಗಳ ಧ್ವನಿಯನ್ನೇ ಅಡಗಿಸಲು ಬ್ರಿಟಿಷರು ಈ ಕಾಯ್ದೆ ಬಳಸಿಕೊಂಡಿದ್ದರು. ಅಂತಹ ಕಾಯ್ದೆಯನ್ನೇಕೆಗೆ ಸರ್ಕಾರ ರದ್ದುಗೊಳಿಸುತ್ತಿಲ್ಲ ಎಂದು ಕಳೆದ ಜುಲೈನಲ್ಲಿ ಸುಪ್ರೀಂಕೋರ್ಚ್ ಪ್ರಶ್ನಿಸಿತ್ತು.
ಈ ನಡುವೆ, ಕಾಯ್ದೆಯನ್ನು ಎತ್ತಿಹಿಡಿದ 1962ರ ಸುಪ್ರೀಂಕೋರ್ಚ್ನ ತೀರ್ಪು ಮರುಪರಿಶೀಲಿಸಬೇಕೆಂಬ ಕೋರಿಕೆಯನ್ನು ವಿಸ್ತೃತ ಪೀಠಕ್ಕೆ ಹಸ್ತಾಂತರಿಸಬೇಕೆ ಎಂಬ ಕುರಿತು ಮೇ 10ರಿಂದ ವಿಚಾರಣೆ ಆರಂಭಿಸುವುದಾಗಿ ಮೇ 5ರಂದು ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ, ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಹಾಗೂ ಹಿಮಾ ಕೊಹ್ಲಿ ಅವರು ಹೇಳಿದ್ದರು. ಅದಕ್ಕೆ ಒಂದು ದಿನ ಮುನ್ನ ಕಾಯ್ದೆ ಮರುಪರಿಶೀಲಿಸುವುದಾಗಿ ಸರ್ಕಾರ ಹೇಳಿದೆ.
1962ರ ತೀರ್ಪು ಆಯಾ ಕಾಲಕ್ಕೆ ಅನುಗುಣವಾಗಿ ಪರೀಕ್ಷೆಗೆ ಒಳಪಟ್ಟಿದೆ. ಅದನ್ನು ಮರು ವಿಮರ್ಶಿಸಬೇಕಾದ ಅಗತ್ಯವಿಲ್ಲ. ದೇಶದ್ರೋಹ ಕಾಯ್ದೆ ದುರ್ಬಳಕೆಯಾಗುತ್ತಿದೆ ಎಂದು ಅರ್ಜಿದಾರರು ಹೇಳುತ್ತಿದ್ದಾರೆ. ಕಾಯ್ದೆ ರದ್ದುಗೊಳಿಸಲು ಅದು ಆಧಾರವಾಗುವುದಿಲ್ಲ. ಬದಲಾಗಿ, ದುರ್ಬಳಕೆ ತಡೆಯಲು ಪರಿಹಾರ ಹುಡುಕಬೇಕು ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಶನಿವಾರದ ವಿಚಾರಣೆ ವೇಳೆ ಹೇಳಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ