
ನವದೆಹಲಿ(ಸೆ.09): ಪೂಜಾ ಸ್ಥಳ ಕಾಯ್ದೆ ಹಲವು ಕಾರಣಗಳಿಂದ ವಿವಾದಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಸರ್ಕಾರ ತಂದ ಈ ಕಾಯ್ದೆಗೆ ಬಿಜೆಪಿ ಹಲವು ಬಾರಿ ವಿರೋಧ ವ್ಯಕ್ತಪಡಿಸಿದೆ. ಇತ್ತೀಚೆಗಿನ ಗ್ಯಾನವ್ಯಾಪಿ ಮಸೀದಿ ಸೇರಿದಂತೆ ಹಲವು ಮಸೀದಿಗಳು, ದರ್ಗಾಗಳು ಹಿಂದೂ ದೇವಾಲಯಗಳ ಮೇಲೆ ಕಟ್ಟಲಾಗಿದೆ. ಇಲ್ಲಿ ಪೂಜೆಗೆ ಅವಕಾಶ ನೀಡಬೇಕು ಅನ್ನೋ ವಾದ ಬಂದಾಗ, ಇದು ಪೂಜಾ ಸ್ಥಳ ಕಾಯ್ದೆ 1991ಕ್ಕೆ ವಿರುದ್ಧವಾಗಿದೆ ಅನ್ನೋ ಪ್ರಮುಖ ಕಾನೂನಾತ್ಮಕ ಅಂಶ ಕೇಳಿಬರುತ್ತಿದೆ. ಹೀಗಾಗಿ ದಶಕಗಳ ಹಿಂದೆ ಪೂಜಾ ಸ್ಥಳ ಕಾಯ್ದೆಯನ್ನು ಮರುಪರೀಶಿಲಿಸಲು ಕೋರಿ ಅರ್ಜಿಗಳು ಸಲ್ಲಿಕೆಯಾಗಿದೆ. ಇದರ ವಿರುದ್ಧ ಹಲವು ಹೋರಾಟಗಳು ನಡೆದಿದೆ. ಇದೀಗ ಸುಪ್ರೀಂ ಕೋರ್ಟ್ 1991ರ ಪೂಜಾ ಸ್ಥಳ ಕಾಯ್ದೆ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ಸಮ್ಮತಿಸಿಸಿದೆ. ಮೂವರು ನ್ಯಾಯಮೂರ್ತಿಗಳ ತ್ರಿದಸ್ಯ ಪೀಠ ಈ ಅರ್ಜಿಯನ್ನು ವಿಚಾರಣೆ ನಡೆಸಲಿದೆ ಎಂದಿದೆ. ಇಷ್ಟೇ ಅಲ್ಲ ಅಕ್ಟೋಬರ್ 11ಕ್ಕೆ ಪೂಜಾ ಸ್ಥಳ ಕಾಯ್ದೆ ಸಿಂಧುತ್ವ ಪರೀಕ್ಷೆ ಅರ್ಜಿ ವಿಚಾರಣೆ ನಡೆಸಲಾಗುವುದು ಎಂದಿದೆ.
ಪೂಜಾ ಸ್ಥಳ 1991 ಕಾಯ್ದೆ(Places of Worship Act ) ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ವಿಚಾರಣೆಯಲ್ಲಿ ಮಧ್ಯಪ್ರವೇಶಿಸಲು ಅರ್ಜಿದಾರರಿಗೆ ಸುಪ್ರೀಂ ಕೋರ್ಟ್(Supreme Court) ಅನುಮತಿ ನೀಡಿದೆ. ಈ ಕುರಿತು ಎರಡು ವಾರಗಳಲ್ಲಿ ಪ್ರತಿಕ್ರಿಯೆ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಈಗಾಗಲೇ ಜಮಾತ್ ಉಲೇಮಾ ಐ ಹಿಂದ್ ಹಾಗೂ ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಬೋರ್ಡ್ ಈಗಾಗಲೇ 1991ರ ಪೂಜಾ ಸ್ಥಳ ಕಾಯ್ದೆ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ತಿರಸ್ಕರಿಸಿ ಯಥಾ ಸ್ಥಿತಿ ಕಾಪಾಡಿಕೊಳ್ಳಬೇಕು ಎಂದು ಅರ್ಜಿ ಸಲ್ಲಿಸಿದೆ.
1991ರ ಧಾರ್ಮಿಕ ಕಾಯ್ದೆ ರದ್ದಾಗುತ್ತಾ.? ರದ್ದಾದರೆ ಪರಿಣಾಮವೇನು..?
ಸುಪ್ರೀಂ ಕೋರ್ಟ್ ಈ ಕಾಯ್ದೆಯನ್ನು ಪ್ರಶ್ನಿಸಿ ಬಂದಿರುವ ಅರ್ಜಿಯನ್ನು ಪುರಸ್ಕರಿಸಿದರೆ, ದೇಶದಲ್ಲಿನ ಅಸಂಖ್ಯಾತ ಮಸೀದಿಗಳು ಅಸ್ತಿತ್ವ ಕಳೆದುಕೊಳ್ಳಲಿದೆ. ಕಾನೂನು ಸಂಕಷ್ಟ ಎದುರಿಸಲಿದೆ ಎಂದು ಜಮಾತ್ ಉಲೇಮಾ ಐ ಹಿಂದ್ ಅರ್ಜಿಯಲ್ಲಿ ಹೇಳಿದೆ.
ಮಥುರಾದಲ್ಲಿರುವ ಕೃಷ್ಣ ಜನ್ಮ ಭೂಮಿ(Shri Krishna Janmabhoomi) ವಿವಾದ, ಕಾಯಿ ಗ್ಯಾನವ್ಯಾಪಿ ಮಸೀದಿ(gyanvapi mosque ) ವಿವಾದ, ಶ್ರೀರಂಗ ಪಟ್ಟಣದ ಜಾಮಿಯಾ ಮಸೀದಿ ಸೇರಿದಂತೆ ಹಲವು ಮಸೀದಿಗಳು ವಿವಾದಗಳು ತಾರಕಕ್ಕೇರಿರುವ ಸಂದರ್ಭದಲ್ಲೇ ಸುಪ್ರೀಂ ಕೋರ್ಟ್ ಪೂಜಾ ಸ್ಥಳ ಕಾಯ್ದೆ ಪರಿಶೀಲಿಸಲು ಮುಂದಾಗಿದೆ. 1991ರ ಪೂಜಾ ಸ್ಥಳ ಕಾಯ್ದೆ ಪ್ರಕಾರ, ಸದ್ಯ ಇರುವ ಪೂಜಾ ಸ್ಥಳಗಳ ಬದಲಾವಣೆ ಅಸಾಧ್ಯವಾಗಿದೆ. ಅಂದರೆ ಕಾಶೀ ವಿಶ್ವನಾಥನ ನಂದಿ ಮಂಟಪ ಕೆಡವಿ ಕಟ್ಟಲಾಗಿರುವ ಮಸೀದಿಯನ್ನು ಅದೆಷ್ಟೆ ದಾಖಲೆ ಸಲ್ಲಿಸಿದರೂ ಮರಳಿ ಹಿಂದೂ ದೇಗುಲವಾಗಿ ಪರಿವರ್ತಿಸಲು ಅಸಾಧ್ಯ. ಇದು ಪೂಜಾ ಸ್ಥಳ ಕಾಯ್ದೆಗೆ ವಿರುದ್ಧವಾಗಿದೆ. ಆದರೆ ಈ ಕಾಯ್ದೆ ಸಿಂಧುತ್ವ ಪರೀಕ್ಷಿಸಲು ಸುಪ್ರೀಂ ಕೋರ್ಟ್ ಸಮ್ಮತಿಸಿದೆ.
ಕೃಷ್ಣ ಜನ್ಮಭೂಮಿ ಪ್ರಕರಣದಲ್ಲಿ ಪೂಜಾ ಸ್ಥಳಗಳ ಕಾಯ್ದೆ ಅನ್ವಯವಾಗೋದಿಲ್ಲ ಎಂದ ಮಥುರಾ ಕೋರ್ಟ್!
ಈ ಕಾಯ್ದೆ ಜಾರಿಗೆ ತರುವಾಗ ರಾಮ ಜನ್ಮ ಭೂಮಿ(Ram Janma Bhoomi) ವಿವಾದವನ್ನು ಈ ಕಾಯ್ದೆಯಿಂದ ಹೊರಗಿಡಲಾಗಿತ್ತು. ಹೀಗಾಗಿ ರಾಮ ಜನ್ಮ ಭೂಮಿ ಕುರಿತು ಸುಪ್ರೀಂ ಕೋರ್ಟ್ ತೀರ್ಪು ನೀಡಿದಾಗಲು ಇದು ಪೂಜಾ ಸ್ಥಳ ಕಾಯ್ದೆ ವಿರುದ್ದವಾಗಿದೆ ಅನ್ನೋ ಮಾತುಗಳು ಕೇಳಿಬಂದಿತ್ತು. ಆದರೆ ಪೂಜಾ ಸ್ಥಳ ಕಾಯ್ದೆಯಲ್ಲಿ ಅಯೋಧ್ಯೆಯನ್ನು ಹೊರಗಿಟ್ಟಿರುವುದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ