ಉಕ್ರೇನ್ ನಿಂದ ಮರಳಿದ ವೈದ್ಯ ವಿದ್ಯಾರ್ಥಿಗಳಿಗೆ ಸರ್ಕಾರದ ವೆಚ್ಚದಲ್ಲೇ ವಿದ್ಯಾಭ್ಯಾಸ!

By Suvarna NewsFirst Published Mar 15, 2022, 6:40 PM IST
Highlights

ಉಕ್ರೇನ್ ನಿಂದ ಮರಳಿದ ತೆಲಂಗಾಣದ 700 ವೈದ್ಯಕೀಯ ವಿದ್ಯಾರ್ಥಿಗಳು

ಎಲ್ಲರಿಗೂ ಸರ್ಕಾರದ ವೆಚ್ಚದಲ್ಲಿಯೇ ವೈದ್ಯಕೀಯ ಶಿಕ್ಷಣ

ತೆಲಂಗಾಣ ಮುಖ್ಯಮಂತ್ರಿ ಕೆಸಿ ಚಂದ್ರಶೇಖರ್ ರಾವ್ ಘೋಷಣೆ

ಹೈದರಾಬಾದ್ (ಮಾ. 15): ವೈದ್ಯಕೀಯ ಅಧ್ಯಯನಕ್ಕಾಗಿ (medicine study) ಉಕ್ರೇನ್‌ಗೆ (Ukraine) ತೆರಳಿದ್ದ ತೆಲಂಗಾಣದ ( Telangana ) ವಿದ್ಯಾರ್ಥಿಗಳಿಗೆ ಈಗ ರಾಜ್ಯ ಸರ್ಕಾರದಿಂದ ಅವರ ಅಧ್ಯಯನಕ್ಕೆ ಧನಸಹಾಯ ನೀಡಲಾಗುವುದು ಎಂದು ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ( K Chandrashekar Rao ) ಘೋಷಣೆ ಮಾಡಿದ್ದಾರೆ. ಭಾರತೀಯ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣಕ್ಕಾಗಿ ವಿದೇಶಕ್ಕೆ ಯಾಕೆ ಹೋಗುತ್ತಾರೆ ಎನ್ನುವ ವಿಚಾರದಲ್ಲಿ ವಿಧಾನಸಭೆಯಲ್ಲಿ ನಡೆದ ದೊಡ್ಡ ಮಟ್ಟದ ಚರ್ಚೆಯ ವೇಳೆ ಅವರು ಇದನ್ನು ಘೋಷಿಸಿದರು. ರಾಜ್ಯದ 740 ವಿದ್ಯಾರ್ಥಿಗಳು ಉಕ್ರೇನ್‌ನಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದಾರೆ ಮತ್ತು ಈಗ ಯುದ್ಧ ಪೀಡಿತ ರಾಷ್ಟ್ರದಿಂದ ಮರಳಿದ್ದಾರೆ ಎಂದು ಹೇಳಿದರು. ಈ ಮಕ್ಕಳ ಶಿಕ್ಷಣದ ವೆಚ್ಚವನ್ನು ಸರ್ಕಾರ ಭರಿಸಲಿದೆ ಆ ನಿಟ್ಟಿನಲ್ಲಿ ಕೇಂದ್ರಕ್ಕೆ ಪತ್ರ ಬರೆಯಲಿದ್ದೇವೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರ (Central Govt) ಇತ್ತೀಚೆಗೆ ಯುದ್ಧ ಪೀಡಿತ ಉಕ್ರೇನ್‌ನಿಂದ 18,000ಕ್ಕೂ ಹೆಚ್ಚು ಭಾರತೀಯರನ್ನು ಸ್ಥಳಾಂತರಿಸಿದೆ. ಅವರಲ್ಲಿ ಹೆಚ್ಚಿನವರು ವೈದ್ಯಕೀಯ ಅಧ್ಯಯನಕ್ಕೆ ಹೋಗಿದ್ದ ವಿದ್ಯಾರ್ಥಿಗಳಾಗಿದ್ದಾರೆ. ಈ ಹಿಂದೆ ಸೋವಿಯತ್ ಒಕ್ಕೂಟದ ಪ್ರದೇಶವಾಗಿದ್ದ ಉಕ್ರೇನ್ ನಲ್ಲಿ ವೈದ್ಯಕೀಯ ಶಿಕ್ಷಣದ ವೆಚ್ಚ ಗಣನೀಯವಾಗಿ ಕಡಿಮೆ ಇದೆ.

ಫೆಬ್ರವರಿ ಕೊನೆಯಲ್ಲಿ ಉಕ್ರೇನ್ ದೇಶದ ಮೇಲೆ ಆಕ್ರಮಣ ಮಾಡಿದ್ದ ರಷ್ಯಾದ (Russia) ನಿರ್ಧಾರ ವಿದ್ಯಾರ್ಥಿಗಳಿಗೆ ಅಘಾತವನ್ನುಂಟು ಮಾಡಿತ್ತು. ವಸತಿ, ಆಹಾರ, ನೀರು ಇಲ್ಲದೆ ಬಂಕರ್ ಗಳಲ್ಲಿ ಉಳಿಯಬೇಕಾದ ಅನಿವಾರ್ಯತೆಗೆ ಸಿಲುಕಿಕೊಂಡಿದ್ದರು. ಖಾರ್ಕೀವ್ ನಲ್ಲಿ ರಷ್ಯಾದ ಶೆಲ್ ದಾಳಿಗೆ ಕರ್ನಾಟಕದ ವಿದ್ಯಾರ್ಥಿ ನವೀನ್ ಶೇಖರಪ್ಪ ಗ್ಯಾನಪ್ಪಗೌಡರ್ ಸಾವಿಗೀಡಾದ ಬಳಿಕವಂತೂ ಅಲ್ಲಿದ್ದ ಭಾರತೀಯ ವಿದ್ಯಾರ್ಥಿಗಳಿಗೆ ಆತಂಕ ಇನ್ನಷ್ಟು ಹೆಚ್ಚಾಗಿತ್ತು. ಇನ್ನೊಂದೆಡೆ ಭಾರತದಲ್ಲಿ, ನಮ್ಮ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣಕ್ಕಾಗಿ ಹೊರದೇಶಗಳಿಗೆ ಹೋಗುವುದೇಕೆ ಎನ್ನುವ ವಿಚಾರದಲ್ಲಿ ಚರ್ಚೆ ಆರಂಭವಾಗಿತ್ತು.

ಭಾರತದಲ್ಲಿ ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ಫೇಲ್ ಆದ ವಿದ್ಯಾರ್ಥಿಗಳು ಮಾತ್ರ ವಿದೇಶಕ್ಕೆ ಹೋಗುತ್ತಾರೆ ಎಂದು ಕೆಲವರು ವಾದಿಸಿದರೆ, ಅರ್ಹ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸಲು ಭಾರತದಲ್ಲಿ ಸಾಕಷ್ಟು ವೈದ್ಯಕೀಯ ಸೀಟುಗಳಿಲ್ಲ ಎಂದು ಇತರರು ವಾದಿಸಿದರು. ಭಾರತದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು "ಅರ್ಹತೆ ಗಳಿಸಲು ವಿಫಲರಾದ ನಂತರ" ವಿದೇಶದಲ್ಲಿ ಓದುತ್ತಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರ ( Union Minister Pralhad Joshi )ಹೇಳಿಕೆಯ ದೊಡ್ಡ ಮಟ್ಟದಲ್ಲಿ ವಿವಾದ ಸೃಷ್ಟಿಸಿತ್ತು.

ಅದರಲ್ಲೂ ನವೀನ್ ಶೇಖರಪ್ಪ ( Naveen Shekharappa Gyanagowdar )ಅವರ ತಂದೆ, ಭಾರತದಲ್ಲಿ ವೈದ್ಯಕೀಯ ಅಧ್ಯಯನಕ್ಕೆ ( studying medicine in India ) ಇರುವ ದುಬಾರಿ ವೆಚ್ಚದ ಬಗ್ಗೆ ಹೇಳುವ ಮೂಲಕ ಪ್ರಲ್ಹಾದ್ ಜೋಶಿ ಅವರ ಮಾತಿಗೆ ಕಿಡಿಕಾರಿದ್ದರು. ತನ್ನ ಮಗ ಬುದ್ಧಿವಂತ ವಿದ್ಯಾರ್ಥಿಯಾಗಿದ್ದ, ಆದರೆ, ಇಲ್ಲಿನ ವೈದ್ಯಕೀಯ ಶಿಕ್ಷಣಕ್ಕೆ ಇರುವ ದುಬಾರಿ ಹಣದ ಕಾರಣದಿಂದಾಗಿ, ಸಾಕಷ್ಟು ಕಡಿಮೆ ವೆಚ್ಚದಲ್ಲಿ ಅಧ್ಯಯನ ಪೂರೈಸಲು ಸಾಧ್ಯವಾಗುವ ಉಕ್ರೇನ್ ಗೆ ತೆರಳಿದ್ದ ಎಂದು ಹೇಳಿದ್ದರು.

ಇಲ್ಲಿ ಮೆಡಿಕಲ್ ಓದಲು ಬಯಸುವ ವಿದ್ಯಾರ್ಥಿ ದೊಡ್ಡ ಮೊತ್ತದ ಡೊನೇಷನ್ ನೀಡಬೇಕು. ಆ ಕಾರಣಕ್ಕಾಗಿ ಬುದ್ಧಿವಂಥ ವಿದ್ಯಾರ್ಥಿಗಳು ವಿದೇಶಕ್ಕೆ ಹೋಗಿ ಓದುತ್ತಾರೆ. ಕರ್ನಾಟಕಕ್ಕೆ ಹೋಲಿಸಿದರೆ ಅವರು ಕಡಿಮೆ ಮೊತ್ತವನ್ನು ಉಕ್ರೇನ್ ನಲ್ಲಿ ಖರ್ಚು ಮಾಡುತ್ತಾರೆ. ಇಲ್ಲಿ ಕೋಟಾದಡಿ ವೈದ್ಯಕೀಯ ಸೀಟು ಪಡೆಯಲು ಒಬ್ಬ ವಿದ್ಯಾರ್ಥಿ ಕೋಟಿಗಳಲ್ಲಿ ಪಾವತಿಸಬೇಕಾಗುತ್ತದೆ. ," ಅವರು ಹೇಳಿದರು.

click me!