ಠಾಕ್ರೆ ಶಪಥ: ಆಹ್ವಾನವಿದ್ದರೂ ಸೋನಿಯಾ, ರಾಹುಲ್ ಗೈರು?

By Web DeskFirst Published Nov 28, 2019, 7:47 AM IST
Highlights

ಠಾಕ್ರೆ ಶಪಥಕ್ಕೆ ಸೋನಿಯಾ, ರಾಹುಲ್‌ ಬರಲ್ಲ?| ಉದ್ಧವ್‌ ಆಹ್ವಾನಿಸಿದ್ದರೂ ಇಬ್ಬರೂ ನಾಯಕರು ಗೈರು: ಮೂಲಗಳು| ರಾಹುಲ್‌ಗೆ ಶಿವಸೇನೆ ಜತೆಗಿನ ಮೈತ್ರಿಗೆ ಮನಸ್ಸಿಲ್ಲ?| ಎಚ್‌ಡಿಕೆ ಪದಗ್ರಹಣಕ್ಕೆ ಬಂದಿದ್ದ ಇಬ್ಬರೂ ಮುಖಂಡರು

ಮುಂಬೈ[ನ.28]: ಶಿವಸೇನೆ ಪ್ರಮುಖ ಉದ್ಧವ್‌ ಠಾಕ್ರೆ ಅವರ ಪ್ರಮಾಣವಚನ ಸಮಾರಂಭಕ್ಕೆ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಅವರ ಪುತ್ರ, ವಯನಾಡು ಸಂಸದ ರಾಹುಲ್‌ ಗಾಂಧಿ ಆಗಮಿಸುವುದಿಲ್ಲ ಎಂದು ಮೂಲಗಳು ಹೇಳಿವೆ.

ಕಾಂಗ್ರೆಸ್‌-ಎನ್‌ಸಿಪಿ ಜತೆ ಉದ್ಧವ್‌ ಮೈತ್ರಿ ಮಾಡಿಕೊಂಡಿದ್ದಾರೆ. ಹೀಗಾಗಿ ಈ ಇಬ್ಬರೂ ನಾಯಕರು ಉದ್ಧವ್‌ ಪದಗ್ರಹಣಕ್ಕೆ ಆಗಮಿಸುವುದು ರಾಜಕೀಯ ದೃಷ್ಟಿಯಿಂದ ಮಹತ್ವದ್ದಾಗಿತ್ತು. ಇವರಿಗೆ ಖುದ್ದು ಉದ್ಧವ್‌ ಅವರೇ ಆಹ್ವಾನ ನೀಡಿದ್ದಾರೆ. ಆದರೆ ‘ಇಬ್ಬರೂ ನಾಯಕರು ಸಮಾರಂಭಕ್ಕೆ ಆಗಮಿಸಲ್ಲ’ ಎಂದು ಮೂಲಗಳು ಹೇಳಿದ್ದು, ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಅವ್ರೂ ಬರ್ಲಿ: ಪ್ರಮಾಣವಚನಕ್ಕೆ ಮೋದಿ, ಶಾಗೂ ಆಮಂತ್ರಣ ಇರ್ಲಿ!

‘ರಾಹುಲ್‌ಗೆ ಶಿವಸೇನೆ ಜತೆ ಮೈತ್ರಿ ಇಷ್ಟವಿಲ್ಲ. ಹೀಗಾಗಿಯೇ ಅವರು ಆಗಮಿಸುತ್ತಿಲ್ಲ’ ಎಂದು ಹೇಳಲಾಗಿದೆ. ಆದರೆ ಸೋನಿಯಾ ಅವರು ಬರದೇ ಇರಲು ಏಕೆ ನಿರ್ಧರಿಸಿದ್ದಾರೆ ಎಂಬ ಬಗ್ಗೆ ತಿಳಿದುಬಂದಿಲ್ಲ.

ಇನ್ನೂ ಕೆಲವು ಮೂಲಗಳು, ‘ಶಿವಸೇನೆ ಕಾಂಗ್ರೆಸ್‌ ಸಿದ್ಧಾಂತಕ್ಕೆ ವಿರುದ್ಧವಾದ ಪಕ್ಷ. ಹೀಗಾಗಿ ಉದ್ಧವ್‌ ಪದಗ್ರಹಣಕ್ಕೆ ಆಗಮಿಸಿದರೆ ಅದು ತಪ್ಪು ಸಂದೇಶ ರವಾನಿಸಬಹುದು ಎಂಬುದು ರಾಹುಲ್‌ ಹಾಗೂ ಸೋನಿಯಾ ಲೆಕ್ಕಾಚಾರ. ಹೀಗಾಗಿಯೇ ಅವರು ಗೈರಾಗಲಿದ್ದಾರೆ’ ಎಂದು ಹೇಳಿವೆ.

ಎಚ್‌ಡಿಕೆ ಪದಗ್ರಹಣಕ್ಕೆ ಬಂದಿದ್ದರು:

ಕಳೆದ ವರ್ಷ ಕರ್ನಾಟಕದಲ್ಲಿ ಕಾಂಗ್ರೆಸ್‌ ಜತೆಗೆ ಮೈತ್ರಿ ಮಾಡಿಕೊಂಡು ಜೆಡಿಎಸ್‌ನ ಎಚ್‌.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದಾಗ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ, ಬಿಎಸ್‌ಪಿಯ ಮಾಯಾವತಿ, ಎಸ್‌ಪಿಯ ಅಖಿಲೇಶ್‌ ಯಾದವ್‌, ಎನ್‌ಸಿಪಿಯ ಶರದ್‌ ಪವಾರ್‌, ತೃಣಮೂಲ ಕಾಂಗ್ರೆಸ್‌ನ ಮಮತಾ ಬ್ಯಾನರ್ಜಿ, ಸಿಪಿಎಂನ ಸೀತಾರಾಂ ಯೆಚೂರಿ ಮೊದಲಾದವರು ಭಾಗವಹಿಸಿ, ‘ಜಾತ್ಯತೀತ ಪಕ್ಷಗಳ’ ಶಕ್ತಿ ಪ್ರದರ್ಶನ ನಡೆಸಿದ್ದರು.

ಮಹಾರಾಷ್ಟ್ರ ರಾಜಕೀಯದಲ್ಲಿ ಕ್ಷಿಪ್ರ ಕ್ರಾಂತಿ: ಒಂದೇ ಕ್ಲಿಕ್‌ನಲ್ಲಿ ಎಲ್ಲಾ ಸುದ್ದಿಗಳು

click me!