ರಾಹುಲ್‌ ಭವಿಷ್ಯಕ್ಕಾಗಿ ಸಿಂಗ್‌ಗೆ ಪಟ್ಟ ಕಟ್ಟಿದ್ದ ಸೋನಿಯಾ!

Published : Nov 18, 2020, 08:23 AM ISTUpdated : Nov 18, 2020, 11:03 AM IST
ರಾಹುಲ್‌ ಭವಿಷ್ಯಕ್ಕಾಗಿ ಸಿಂಗ್‌ಗೆ ಪಟ್ಟ ಕಟ್ಟಿದ್ದ ಸೋನಿಯಾ!

ಸಾರಾಂಶ

ರಾಹುಲ್‌ ಭವಿಷ್ಯಕ್ಕಾಗಿ ಸಿಂಗ್‌ಗೆ ಪಟ್ಟಕಟ್ಟಿದ್ದ ಸೋನಿಯಾ!| ಡಾ. ಸಿಂಗ್‌ ಪ್ರಗತಿಯ ಸಂಕೇತ ಹೌದು ಆದರೆ ಜನಪ್ರಿಯತೆಯಿಂದ ಪ್ರಧಾನಿಯಾಗಿದ್ದಲ್ಲ| ವೃದ್ಧ ಮನಮೋಹನ್‌ರಿಂದ ರಾಹುಲ್‌ಗೆ ಅಪಾಯವಾಗದು ಎಂದು ಭಾವಿಸಿದ್ದ ಸೋನಿಯಾ| ಅಮೆರಿಕ ಮಾಜಿ ಅಧ್ಯಕ್ಷ ಒರಾಕ್‌ ಒಬಾಮಾ ಪುಸ್ತಕದಲ್ಲಿ ಮತ್ತಷ್ಟುಕುತೂಹಲಕಾರಿ ಮಾಹಿತಿ

ವಾಷಿಂಗ್ಟನ್‌(ನ.18): 2004ರಲ್ಲಿ ಮನೆ ಬಾಗಿಲಿಗೆ ಬಂದ ಪ್ರಧಾನಿ ಪಟ್ಟವನ್ನು ನಿರಾಕರಿಸಿ, ಡಾ| ಮನಮೋಹನ ಸಿಂಗ್‌ ಅವರಿಗೆ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಪಟ್ಟಕಟ್ಟಿದ್ದಕ್ಕೆ ಹಲವಾರು ವಿಶ್ಲೇಷಣೆಗಳನ್ನು ಕೇಳಿರಬಹುದು. ಆದರೆ ಅಮೆರಿಕದ ಮೊದಲ ಕಪ್ಪು ವರ್ಣೀಯ ಅಧ್ಯಕ್ಷ ಬರಾಕ್‌ ಒಬಾಮಾ ಪ್ರಕಾರ, ಸೋನಿಯಾ ಕೈಗೊಂಡ ಆ ನಿರ್ಧಾರಕ್ಕೆ ಪ್ರಮುಖವಾಗಿ ಪುತ್ರ ವಾತ್ಸಲ್ಯ ಕಾರಣ!

ಭಾರತದ ಆರ್ಥಿಕ ಪ್ರಗತಿಯ ಹೆಗ್ಗುರುತು ಡಾ| ಮನಮೋಹನ ಸಿಂಗ್‌ ಅವರಾಗಿದ್ದರೂ, ಅವರು ಪ್ರಧಾನಿ ಪಟ್ಟಕ್ಕೆ ಏರಿದ್ದಕ್ಕೆ ಅವರಿಗಿದ್ದ ಜನಪ್ರಿಯತೆಯಂತೂ ಕಾರಣವಲ್ಲ. ವೃದ್ಧ ಮನಮೋಹನ ಸಿಂಗ್‌ಗೆ ರಾಷ್ಟ್ರ ಮಟ್ಟದಲ್ಲಿ ರಾಜಕೀಯ ನೆಲೆ ಇಲ್ಲ. ಅವರು ಪ್ರಧಾನಿಯಾದರೂ ತಮ್ಮ 40 ವರ್ಷದ ಸುಪುತ್ರ ರಾಹುಲ್‌ ಗಾಂಧಿಗೆ ಯಾವುದೇ ಅಪಾಯವನ್ನು ಅವರು ಒಡ್ಡುವುದಿಲ್ಲ ಎಂಬುದು ಸೋನಿಯಾ ಅವರ ಎಣಿಕೆಯಾಗಿತ್ತು. ಕಾಂಗ್ರೆಸ್‌ ಪಕ್ಷವನ್ನು ಮುನ್ನಡೆಸುವ ಸ್ಥಾನಕ್ಕೆ ರಾಹುಲ್‌ರನ್ನು ತರಲು ಸೋನಿಯಾ ಸಜ್ಜಾಗಿದ್ದರು ಎಂದು ಒಬಾಮಾ ಅವರು ತಮ್ಮ ಪುಸ್ತಕದಲ್ಲಿ ಬರೆದುಕೊಂಡಿರುವುದು ಭಾರಿ ಸಂಚಲನಕ್ಕೆ ಕಾರಣವಾಗಿದೆ.

ಬಾಲ್ಯದಲ್ಲಿ ರಾಮಾಯಣ, ಮಹಾಭಾರತ ಕೇಳಿದ್ದೇನೆ, ಭಾರತಕ್ಕಿದೆ ವಿಶೇಷ ಸ್ಥಾನ: ಒಬಾಮಾ

ರಾಹುಲ್‌ ಗಾಂಧಿ ಅಂಜುಬುರುಕ, ಶಿಕ್ಷಕರಿಗೆ ಗಿಣಿಪಾಠದಂತೆ ವಿಷಯ ಒಪ್ಪಿಸುವ ವ್ಯಕ್ತಿ. ಅವರಿಗೆ ಆಳವಾದ ಜ್ಞಾನವಿಲ್ಲ ಎಂದು ಒಬಾಮಾ ಅವರು ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ ಎಂಬ ಸಂಗತಿ ಬಹಿರಂಗವಾಗಿ ಕಾಂಗ್ರೆಸ್‌ ತೀವ್ರ ಮುಜುಗರ ಅನುಭವಿಸಿತ್ತು. ಇದೀಗ ಬಹಿರಂಗವಾಗಿರುವ ಹೊಸ ಮಾಹಿತಿಗಳು ಕಾಂಗ್ರೆಸ್‌ ಪಕ್ಷಕ್ಕೆ ಮತ್ತಷ್ಟುಮುಖಭಂಗ ಉಂಟು ಮಾಡಿದ್ದು, ರಾಜಕೀಯ ವಿರೋಧಿಗಳ ಟೀಕೆಗೆ ಆಹಾರವಾಗುವುದು ಖಚಿತವಾಗಿದೆ.

ಪುತ್ರ ವಾತ್ಸಲ್ಯದಿಂದ ಪಟ್ಟ:

ಒಬಾಮಾ ಅವರು ‘ಎ ಪ್ರಾಮಿಸ್ಡ್‌ ಲ್ಯಾಂಡ್‌’ ಎಂಬ ಎರಡು ಸಂಪುಟಗಳ ಪುಸ್ತಕವನ್ನು ಬರೆದಿದ್ದಾರೆ. 2008ರಲ್ಲಿ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಪ್ರಚಾರದಿಂದ ಹಿಡಿದು ಅಲ್‌ಖೈದಾ ಉಗ್ರ ಸಂಘಟನೆಯ ಮುಖ್ಯಸ್ಥ ಒಸಾಮಾ ಬಿನ್‌ ಲಾಡೆನ್‌ ಹತ್ಯೆ ಕಾರ್ಯಾಚರಣೆವರೆಗಿನ ಸಂಗತಿಗಳನ್ನು ಮೊದಲ ಸಂಪುಟ ಒಳಗೊಂಡಿದೆ. ಇದು ಮಂಗಳವಾರ ವಿಶ್ವಾದ್ಯಂತ ಬಿಡುಗಡೆಯಾಗಿದೆ.

'ಪ್ರಧಾನಿಯಾಗಿ ಸಿಂಗ್‌ರನ್ನು ಸೋನಿಯಾ ಆಯ್ಕೆ ಮಾಡಿದ್ಯಾಕೆ' ಒಬಾಮಾ ಸತ್ಯ!

ಮನಮೋಹನ ಸಿಂಗ್‌ ಅವರು ಪ್ರಧಾನಿಯಾಗಿದ್ದಕ್ಕೆ ಮುಖ್ಯ ಕಾರಣ ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಅವರ ವಿಧವಾ ಪತ್ನಿ ಹಾಗೂ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ. 2004ರ ಲೋಕಸಭೆ ಚುನಾವಣೆ ವಿಜಯದ ಬಳಿಕ ಪಟ್ಟವನ್ನು ನಿರಾಕರಿಸಿದ್ದ ಅವರು ಡಾ| ಸಿಂಗ್‌ ಅವರನ್ನು ಪ್ರಧಾನಿಯಾಗಿಸಿದ್ದರು. ಸಿಂಗ್‌ ಅವರಿಗೆ ರಾಜಕೀಯ ನೆಲೆ ಇಲ್ಲ. ಪುತ್ರನಿಗೆ ಅಪಾಯವೊಡ್ಡುವುದಿಲ್ಲ ಎಂಬ ಕಾರಣದಿಂದಾಗಿಯೇ ಅವರಿಗೆ ಪ್ರಧಾನಿ ಹುದ್ದೆ ನೀಡಲಾಯಿತು ಎಂದು ಒಂದಕ್ಕಿಂತ ಹೆಚ್ಚು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ ಎಂದು ಒಬಾಮಾ ತಿಳಿಸಿದ್ದಾರೆ.

ಮಾತನಾಡಿದ್ದೂ ಪುತ್ರನ ಬಗ್ಗೆ..:

ಒಮ್ಮೆ ಭಾರತ ಭೇಟಿ ವೇಳೆ ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿ ಅವರನ್ನು ಔತಣ ಕೂಟದ ಸಂದರ್ಭ ಭೇಟಿಯಾಗಿದ್ದೆ. ಸೋನಿಯಾ ಅವರು ಮಾತನಾಡಿದ್ದಕ್ಕಿಂತ ಕೇಳಿಸಿಕೊಂಡಿದ್ದೇ ಹೆಚ್ಚು. ನೀತಿ ನಿರೂಪಣೆ ವಿಷಯಗಳು ಬಂದಾಗ ಡಾ| ಸಿಂಗ್‌ ಅವರಿಗೆ ಬಿಟ್ಟುಬಿಡುತ್ತಿದ್ದರು. ಪುತ್ರನ ಬಗ್ಗೆಯೇ ಮಾತನಾಡುತ್ತಿದ್ದರು. ರಾಹುಲ್‌ ಗಾಂಧಿ ಬುದ್ಧಿವಂತನಂತೆ ಕಾಣುತ್ತಿದ್ದರು. ಅವರ ತಾಯಿಯಂತೆ ಅವರ ಲಕ್ಷಣವಿತ್ತು. 2008ರ ನನ್ನ ಚುನಾವಣಾ ಪ್ರಚಾರದ ಬಗ್ಗೆ ವಿವರ ಕೆದಕುತ್ತಿದ್ದರು. ಅವರು ಒಂದು ರೀತಿ ಅಂಜಿಕೆ ಸ್ವಭಾವದವರಂತೆ ಕಂಡುಬಂದರು. ಶಿಕ್ಷಕರನ್ನು ಓಲೈಸಲು ಅವರು ಹೇಳಿದ್ದನ್ನೆಲ್ಲಾ ಮಾಡುವ, ಆದರೆ ಆಳವಾದ ಜ್ಞಾನ ಅಥವಾ ಪರಿಣತಿ ಇಲ್ಲದವರಂತೆ ಕಂಡರು ಎಂದು ಒಬಾಮಾ ಬರೆದುಕೊಂಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮೆಹಬೂಬಾ...ಹಾಡಿಗೆ ನೃತ್ಯದ ವೇಳೆ ಗೋವಾ ಪಬ್‌ ದುರಂತ!
₹500 ಕೋಟಿ ಕೊಟ್ರೆ ಕಾಂಗ್ರೆಸ್‌ನಲ್ಲಿ ಸಿಎಂ ಕುರ್ಚಿ : ಸಿಧು ಪತ್ನಿ ಆರೋಪ