
ನವದೆಹಲಿ (ಜು.18): ಹವಾಮಾನ ಬದಲಾವಣೆಯಿಂದ ಆಗುತ್ತಿರುವ ನೈಸರ್ಗಿಕ ವಿಪತ್ತುಗಳ ಬಗ್ಗೆ ಜಗತ್ತು ಆತಂಕಗೊಂಡಿರುವಾಗಲೇ ಈ ವಿದ್ಯಮಾನವು ಭೂಮಿಯ ಚಲನೆಯನ್ನು ಕೂಡ ಅಲ್ಪ ಪ್ರಮಾಣದಲ್ಲಿ ಬದಲಾಯಿಸಿದೆ ಎಂಬ ಆಘಾತಕಾರಿ ಸಂಗತಿಯನ್ನು ವಿಜ್ಞಾನಿಗಳು ಬಹಿರಂಗಪಡಿಸಿದ್ದಾರೆ.
ದಕ್ಷಿಣ ಮತ್ತು ಉತ್ತರ ಧ್ರುವದಲ್ಲಿರುವ ಹಿಮಗಡ್ಡೆಗಳು ಜಾಗತಿಕ ತಾಪಮಾನ ಏರಿಕೆಯಿಂದಾಗಿ ಕರಗುತ್ತಿವೆ. ಅದರ ಪರಿಣಾಮ ಅಲ್ಲಿನ ನೀರು ಭೂಮಧ್ಯರೇಖೆಯತ್ತ ಹರಿಯುತ್ತಿದೆ. ಇದು ಭೂಮಿಯ ಆಂತರಿಕ ಸಮತೋಲನವನ್ನು ತಪ್ಪಿಸಿದೆ. ಹೀಗಾಗಿ ಭೂಮಿಯ ಸುತ್ತುವಿಕೆ ಕೊಂಚ ನಿಧಾನವಾಗಿದ್ದು, ಭೂಮಿಯು ತಿರುಗುವ ಕಕ್ಷೆ ಕೂಡ ಬದಲಾವಣೆಯಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
40 ವರ್ಷದ ಹಿಂದೆ ಏಲಿಯನ್ ಭೂಮಿಗೆ ಕಳುಹಿಸಿದ ಸಂದೇಶವೇನು? ಡಿಕೋಡ್ ಮಾಡಿದ ಸೈಂಟಿಸ್ಟ್!
ಸ್ವಿಜರ್ಲೆಂಡ್ನ ಇಟಿಎಚ್ ಜೂರಿಚ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ನಡೆಸಿರುವ ಅಧ್ಯಯನದಲ್ಲಿ ಈ ಸಂಗತಿಗಳು ಬೆಳಕಿಗೆ ಬಂದಿವೆ. ವಿಜ್ಞಾನಿಗಳು ತಮ್ಮ ಶೋಧನೆಯನ್ನು ನೇಚರ್ ಜಿಯೋಸೈನ್ಸ್ ಮ್ಯಾಗಜೀನ್ನಲ್ಲಿ ಪ್ರಕಟಿಸಿದ್ದಾರೆ.
ಇನ್ನಷ್ಟು ದುಷ್ಪರಿಣಾಮ ಸಾಧ್ಯತೆ:ಹವಾಮಾನ ಬದಲಾವಣೆಯು ಭೂಮಿಯ ತಿರುಗುವಿಕೆಯ ಮೇಲೆ ಪರಿಣಾಮ ಬೀರುತ್ತಿದೆ. ಅದರಿಂದಾಗಿ ಭೂಮಿಯ ಚಲನೆ ಕೊಂಚ ನಿಧಾನವಾಗಿದ್ದು, ಹಗಲಿನ ಸಮಯ ತುಸು ದೀರ್ಘವಾಗಿದೆ. ಭೂಮಿಯು ಸುತ್ತುವ ಕಕ್ಷೆ ಕೂಡ ವ್ಯತ್ಯಾಸವಾಗಿದೆ. ಇದಕ್ಕೆ ಧ್ರುವ ಪ್ರದೇಶದಲ್ಲಿ ಮಂಜುಗಡ್ಡೆಗಳು ಕರಗಿ ನೀರು ಭೂಮಧ್ಯ ರೇಖೆಯತ್ತ ಹರಿಯುತ್ತಿರುವುದೇ ಕಾರಣ. ಹಸಿರುಮನೆ ಅನಿಲಗಳ ಬಿಡುಗಡೆಯನ್ನು ನಿಯಂತ್ರಿಸದಿದ್ದರೆ ಈ ಬದಲಾವಣೆ ಇನ್ನಷ್ಟು ತೀವ್ರಗೊಳ್ಳಲಿದೆ. ಸಾಂಪ್ರದಾಯಿಕವಾಗಿ ಭೂಮಿಯ ತಿರುಗುವಿಕೆ ಹಾಗೂ ಕಕ್ಷೆಗೆ ಚಂದ್ರನ ಪ್ರಭಾವ ಮುಖ್ಯ ಕಾರಣವಾಗಿದ್ದು, ಹವಾಮಾನ ಬದಲಾವಣೆಯು ಚಂದ್ರನ ಪ್ರಭಾವವನ್ನೂ ಮೀರಿಸಿ ಭೂಮಿಯ ಚಲನೆಯ ಮೇಲೆ ದುಷ್ಪರಿಣಾಮ ಉಂಟುಮಾಡುವ ಸಾಧ್ಯತೆಯಿದೆ ಎಂದು ವಿಜ್ಞಾನಿಗಳು ವಿವರಿಸಿದ್ದಾರೆ.
ಇನ್ಮುಂದೆ ಕತ್ತಲು ಕಡಿಮೆ, ಹಗಲು ಹೆಚ್ಚಂತೆ: ವಿಜ್ಞಾನಿಗಳಿಂದ ಬಯಲಾಯ್ತು ಸತ್ಯ!
ಈಗ ಉಂಟಾಗಿರುವ ಬದಲಾವಣೆಗಳು ಜನಸಾಮಾನ್ಯರ ನಿತ್ಯ ಜೀವನದ ಮೇಲೆ ಅಷ್ಟೇನೂ ಪರಿಣಾಮ ಬೀರುತ್ತಿಲ್ಲವಾದರೂ ಅಂತರಿಕ್ಷದಲ್ಲಿ ಭೂಮಿಯ ಚಲನೆಯ ಮೇಲೆ ಗಂಭೀರ ಪರಿಣಾಮವನ್ನು ಉಂಟುಮಾಡುವ ಸಾಧ್ಯತೆಯಿದೆ. ಭೂಮಿಯ ಚಲನೆಯಲ್ಲಿ ಅತ್ಯಂತ ಸಣ್ಣ ಬದಲಾವಣೆಯಾದರೂ ಭೂಮಿಯ ಮೇಲೆ ವಾಸಿಸುವವರಿಗೆ ಅದರಿಂದ ಅಗಾಧ ದುಷ್ಪರಿಣಾಮಗಳು ಎದುರಾಗಬಹುದು ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ