'ಇದು ಮಹಾರಾಷ್ಟ್ರ ಜನರ ನಿರ್ಧಾರವಲ್ಲ, ಅದಾನಿ ನಿರ್ಧಾರ..' ಟ್ರೆಂಡ್‌ ನೋಡಿ ಕೆಂಡವಾದ ಸಂಜಯ್‌ ರಾವುತ್‌!

Published : Nov 23, 2024, 12:20 PM IST
'ಇದು ಮಹಾರಾಷ್ಟ್ರ ಜನರ ನಿರ್ಧಾರವಲ್ಲ, ಅದಾನಿ ನಿರ್ಧಾರ..' ಟ್ರೆಂಡ್‌ ನೋಡಿ ಕೆಂಡವಾದ ಸಂಜಯ್‌ ರಾವುತ್‌!

ಸಾರಾಂಶ

ಮಹಾರಾಷ್ಟ್ರ ವಿಧಾನಸಭಾ ಚುನಾವಣಾ ಫಲಿತಾಂಶವನ್ನು ಶಿವಸೇನೆ ಉದ್ಧವ್‌ ಬಣದ ನಾಯಕ ಸಂಜಯ್ ರಾವುತ್‌ ಒಪ್ಪಿಕೊಂಡಿಲ್ಲ. ಫಲಿತಾಂಶದಲ್ಲಿ ತಪ್ಪುಗಳು ನಡೆದಿವೆ, ಇದು ಮಹಾರಾಷ್ಟ್ರ ಜನರ ನಿರ್ಧಾರವಲ್ಲ ಎಂದು ಆರೋಪಿಸಿದ್ದಾರೆ. ಗೌತಮ್ ಅದಾನಿ ಪ್ರಕರಣವನ್ನು ಪ್ರಸ್ತಾಪಿಸಿ, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮುಂಬೈ (ನ.23): ಮಹಾರಾಷ್ಟ್ರ ವಿಧಾನಸಭಾ ಚುನಾವಣಾ ಫಲಿತಾಂಶ ಹೆಚ್ಚೂ ಕಡಿಮೆ ನಿಚ್ಚಳವಾಗಿದೆ. ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸುವ ಆಸೆಯಲ್ಲಿದ್ದ ಮಹಾ ವಿಕಾಸ್‌ ಅಘಾಡಿಗೆ ಆಘಾತವಾಗಿದೆ. ಆರಂಭಿಕ ಟ್ರೆಂಡ್‌ಗಳು ಬಂದ ಬೆನ್ನಲ್ಲಿಯೇ ಶಿವಸೇನೆ-ಉದ್ಧವ್‌ ಬಣದ ನಾಯಕ ಅಂಜಯ್‌ ರಾವುತ್‌ ಸಿಟ್ಟಾಗಿ ಹೋಗಿದ್ದಾರೆ. ತಕ್ಷಣವೇ ಸುದ್ದಿಗೋಷ್ಠಿ ನಡೆಸಿದ ಸಂಜಯ್‌ ರಾವುತ್‌ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಈ ಫಲಿತಾಂಶ ಒಪ್ಪಿಕೊಳ್ಳೋಕೇ ಸಾಧ್ಯವಿಲ್ಲ. ಇದು ಮಹಾರಾಷ್ಟ್ರ ಜನರ ನಿರ್ಧಾರವಲ್ಲ. ಇಲ್ಲಿನ ಜನರು ದೇಶದ್ರೋಹಿಗಳಲ್ಲ. ಚುನಾವಣಾ ಫಲಿತಾಂಶದಲ್ಲಿ ತಪ್ಪುಗಳು ನಡೆದಿದೆ ಎಂದು ಸಾಲು ಸಾಲು ಆರೋಪ ಮಾಡಿದ್ದಾರೆ. ಇದೇ ವೇಳೆ ಗೌತಮ್‌ ಅದಾನಿ ಪ್ರಕರಣವನ್ನೂ ಅವರು ಪ್ರಸ್ತಾಪ ಮಾಡಿದ್ದಾರೆ. ಮಹಾರಾಷ್ಟ್ರದಲ್ಲಿ ಬ್ಯಾಲಟ್‌ ಪೇಪರ್‌ಗಳ ಮೂಲಕ ಮತ್ತೊಮ್ಮೆ ಚುನಾವಣೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ಸಂಜಯ್‌ ರಾವುತ್‌ ಮುಖದಲ್ಲೇ ಕೋಪ ಮಡುಗಟ್ಟಿತ್ತು. ಸುದ್ದಿಗೋಷ್ಠಿ ಕರೆದು ಬಿಜೆಪಿ ಹಾಗೂ ಮಹಾಯುತಿಯ ನಾಯಕರ ಮೇಲೆ ಸಾಲು ಸಾಲು ಆರೋಪಗಳನ್ನು ಮಾಡಿದರು. ಒಂದು ಹಂತದಲ್ಲಂತೂ ಎರಡೂ ಪಕ್ಷಗಳ ನಾಯಕರ ಮೇಲೆ ಅವರ ಆಕ್ರೋಶದ ಕಟ್ಟೆ ಒಡೆದಿತ್ತು. ಇಂಥ ಫಲಿತಾಂಶ ನಿರೀಕ್ಷೆ ಮಾಡೋದಕ್ಕೂ ಸಾಧ್ಯನಾ? ನೀವೆಲ್ಲರೂ ಸೇರಿ ಮಹಾರಾಷ್ಟ್ರದ ಜನರನ್ನೇ ದೇಶದ್ರೋಹಿಗಳು ಅನ್ನೋವಂತೆ ಬಿಂಬಿಸುತ್ತಿದ್ದೀರಿ ಎಂದಿದ್ದಾರೆ.

ಇದು ಮಹಾರಾಷ್ಟ್ರದ ನಿರ್ಧಾರವಲ್ಲ: ಶಿವಸೇನೆ ಉದ್ಧವ್‌ ಬಣದ ಸಂಸದ ಸಂಜಯ್‌ ರಾವುತ್‌, 'ಮಹಾರಾಷ್ಟ್ರದ ಜನರು ಅಪ್ರಾಮಾಣಿಕರಲ್ಲ. ನಾವು ಫಲಿತಾಂಶಗಳನ್ನು ಸ್ವೀಕರಿಸುವುದಿಲ್ಲ. ಇದು ಜನರ ನಿರ್ಧಾರವಲ್ಲ, ಸಾರ್ವಜನಿಕರೂ ಸಹ ಈ ನಿರ್ಧಾರವನ್ನು ಒಪ್ಪುವುದಿಲ್ಲ. ಇದು ಜನರ ನಿರ್ಧಾರ ಆಗಿರೋಕೆ ಸಾಧ್ಯವೇ ಇಲ್ಲ’ ​​ಎಂದು ಹೇಳಿದರು. ಮಹಾರಾಷ್ಟ್ರದಲ್ಲಿ ಶಿಂಧೆ ಅವರಿಗೆ 60 ಸ್ಥಾನಗಳು ಬರಲು ಸಾಧ್ಯವೇ? ಅಜಿತ್ ಪವಾರ್ ಗೆ 40 ಸ್ಥಾನ? ಬಿಜೆಪಿಗೆ 125 ಸ್ಥಾನ ಸಿಗುವ ಸಾಧ್ಯತೆ ಇದೆಯೇ? ಇದು ಸಾಧ್ಯವೇ ಇಲ್ಲ ಎಂದು ಹೇಳಿದರು.

ಗೌತಮ್‌ ಅದಾನಿಯಿಂದಲೇ ಹೀಗಾಗಿದೆ: ಮಹಾರಾಷ್ಟ್ರದ ಫಲಿತಾಂಶ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎನ್ನುವುದು ಬಿಜೆಪಿಗೆ ಗೊತ್ತಿತ್ತು, ಅದಕ್ಕಾಗಿಯೇ ಎರಡು ದಿನಗಳ ಹಿಂದೆ ಗೌತಮ್ ಅದಾನಿ ವಿರುದ್ಧ ಬಂಧನ ವಾರಂಟ್ ಹೊರಡಿಸಲಾಗಿತ್ತು ಎಂದು ಸಂಜಯ್ ರಾವತ್ ಹೇಳಿದ್ದಾರೆ. ಗೌತಮ್ ಅದಾನಿ ವಿರುದ್ಧ 200 ಕೋಟಿ ಲಂಚದ ಪ್ರಕರಣ ದಾಖಲಾಗಿತ್ತು. ಬಿಜೆಪಿಯ ರಹಸ್ಯ ಬಯಲಾಗಿದೆ. ಗೌತಮ್ ಅದಾನಿ, ಅಮಿತ್ ಶಾ, ಮೋದಿ, ದೇವೇಂದ್ರ ಫಡ್ನವಿಸ್, ಏಕನಾಥ್ ಶಿಂಧೆ, ಅಜಿತ್ ಪವಾರ್ ಎಲ್ಲರೂ ಒಂದಾಗಿದ್ದಾರೆ. ಅವರಿಂದ ಗಮನ ಬೇರೆಡೆ ಸೆಳೆಯಲು ಈ ವಂಚನೆ ಮಾಡಲಾಗಿದೆ ಎಂದಿದ್ದಾರೆ.

ಮಹಾರಾಷ್ಟ್ರದ ಮೇಲೆ ನಿರ್ಧಾರ ಹೇರಲಾಗಿದೆ: ಮುಂಬೈ ಗೌತಮ್ ಅದಾನಿ ಜೇಬಿಗೆ ಹೋಗುತ್ತಿದೆ ಎಂದು ಸಂಜಯ್ ರಾವತ್ ಹೇಳಿದ್ದಾರೆ. ನಾವು ಅದನ್ನು ವಿರೋಧಿಸಿದ್ದೇವೆ, ಆದ್ದರಿಂದ ಇದೆಲ್ಲವನ್ನೂ ಮಾಡಲಾಗಿದೆ. ಈ ದೇಶವನ್ನು ಅದಾನಿ ರಾಷ್ಟ್ರವಾಗಲು ಬಿಡುವುದಿಲ್ಲ. ಇದು ಮಹಾರಾಷ್ಟ್ರದ ಫಲಿತಾಂಶವಲ್ಲ, ಈ ಫಲಿತಾಂಶಗಳನ್ನು ಮಹಾರಾಷ್ಟ್ರದ ಜನರ ಮೇಲೆ ಹೇರಲಾಗಿದೆ. ನಾನು ಮತ್ತೆ ಹೇಳುತ್ತೇನೆ, ಇದು ಮಹಾರಾಷ್ಟ್ರದ ಜನರ ನಿರ್ಧಾರವಾಗಲು ಸಾಧ್ಯವಿಲ್ಲ ಎಂದು ಮತ್ತೆ ಮತ್ತೆ ಹೇಳುತ್ತಿದ್ದೇನೆ ಎಂದು ಹೇಳಿದರು. ಮಹಾರಾಷ್ಟ್ರದ ಜನರ ಮನಸ್ಸು ನಮಗೆ ತಿಳಿದಿದೆ. ಇದು ಫಲಿತಾಂಶವಾಗಿರೋಕೆ ಸಾಧ್ಯವೇ ಇಲ್ಲ ಎಂದಿದ್ದಾರೆ.

ಮಹಾರಾಷ್ಟ್ರ, ಜಾರ್ಖಂಡ್‌ ವಿಧಾನಸಭೆ ಫಲಿತಾಂಶ, ಇಲ್ಲಿಯವರೆಗೂ ಗೊತ್ತಾಗಿರುವ 10 ಅಂಶಗಳು!

ಸೀಟ್‌ ಕದ್ದ ಬಿಜೆಪಿ:ಮಹಾರಾಷ್ಟ್ರದಲ್ಲಿ ಬಿಜೆಪಿಯ ಲಡ್ಕಿ ಬೆಹನ್ ಯೋಜನೆಯ ಮ್ಯಾಜಿಕ್ ಬಗ್ಗೆ ಕೇಳಿದಾಗ, ಕೋಪಗೊಂಡ ಅವರು, 'ಇಲ್ಲಿ ಲಾಡ್ಲಾ ಭಾಯ್, ಲಾಡ್ಲಾ ನಾನಾ, ಲಾಡ್ಲಾ ದಾದಾ ಜೀ, ಎಲ್ಲರೂ ಲಾಡ್ಲಾಗಳು. ಇದು ಏನೆಂದು ನಮಗೆ ತಿಳಿದಿದೆ. ಇದು ಜನರ ನಿರ್ಧಾರವಲ್ಲ, ನಮಗೆ ಗೊತ್ತು’ ಎಂದು ಹೇಳಿದರು. ಮೋದಿ ಜೀ ಸೋಲುತ್ತಿದ್ದಾರೆ ಎಂದು ನಾವು ಅಂದುಕೊಂಡಿದ್ದೆವು. ಅದೇ ರೀತಿ ಲೋಕಸಭೆ ಚುನಾವನೆಯಲ್ಲೂ ಆಯಿತು. ಈ ಬಾರಿ ಬಿಜೆಪಿ ನಮ್ಮಿಂದ 4-5 ಸೀಟ್‌ಗಳನ್ನು ಕದ್ದಿದೆ ಎಂದು ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿ ಎನ್‌ಡಿಎ ಡಬಲ್‌ ಸೆಂಚುರಿ, ಜಾರ್ಖಂಡ್‌ನಲ್ಲಿ ಬಹುಮತದತ್ತ ಐಎನ್‌ಡಿಐಎ!

ಸಂಜಯ್ ರಾವತ್, '2014 ಮತ್ತು 2019 ರಲ್ಲಿ ಮೋದಿ ಮತ್ತು ಶಾ ಅದೇ ಕೆಲಸ ಮಾಡಿದರು. ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಇರಬಾರದು ಎಂಬ ತಂತ್ರಗಾರಿಕೆಯಲ್ಲಿ ಕೆಲಸ ಮಾಡುತ್ತಾರೆ. ಅವರ ಬಳಿ ಅಷ್ಟೊಂದು ಹಣವಿದೆಯೆಂದರೆ ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ನೋಟು ಯಂತ್ರಗಳನ್ನು ಅಳವಡಿಸಿದ್ದಾರೆ. ನಮ್ಮ ಒಬ್ಬ ಶಾಸಕರೂ ಸೋಲುವುದಿಲ್ಲ, ಸೋತರೆ ನಾನೇ ರಾಜೀನಾಮೆ ನೀಡುತ್ತೇನೆ ಎಂದು ಶಿಂಧೆ ಹೇಳುತ್ತಿದ್ದರು. ಇದು ಯಾವ ರೀತಿಯ ಆತ್ಮವಿಶ್ವಾಸ? ಇದು ಸಂಭವಿಸುತ್ತದೆಯೇ? ಚುನಾವಣೆ ಸಂದರ್ಭದಲ್ಲಿ ಯಾರಾದರೂ ಹೀಗೆ ಮಾತನಾಡುತ್ತಾರೆಯೇ? ಮಹಾರಾಷ್ಟ್ರದಲ್ಲಿ ಮಹಾಯುತಿಗೆ 200ಕ್ಕೂ ಹೆಚ್ಚು ಸೀಟು ಸಿಗಲಿದೆಯೇ? ಎಂದು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮನೆ ಮುಂದೆ ದನ ಸೆಗಣಿ ಹಾಕಿದ್ದಕ್ಕೆ ಯುವಕನ ಕೊಲೆ
ಗಂಡ ಉಳಿಯಲಿಲ್ಲ, ಎಗ್ಸಾಂ ಬರೆಯಲಿಲ್ಲ, ಕ್ಯಾನ್ಸಲ್ ಆಗಿದ್ದು ಬರೀ ಫ್ಲೈಟ್ ಅಲ್ಲ ನೂರಾರು ಮಂದಿ ಕನಸು