
ಶ್ರೀನಗರ(ಜೂ.15): ಜಮ್ಮು-ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಬಳಿ ಇರುವ ತೀತ್ವಾಲ್ ಎಂಬಲ್ಲಿ ಶಾರದಾ ದೇವಾಲಯದ ಗರ್ಭಗುಡಿ ನಿರ್ಮಾಣ ಕಾರ್ಯ ಆರಂಭವಾಗಿದೆ. ಕರ್ನಾಟಕದ ರಾಮನಗರ ಜಿಲ್ಲೆಯ ಮಾಗಡಿಯಿಂದ ತರಿಸಿಕೊಳ್ಳಲಾದ ಗ್ರಾನೈಟ್ ಕಲ್ಲುಗಳಿಂದ ದೇಗುಲದ ಗರ್ಭಗುಡಿಯ ಪರಿಕ್ರಮ ಗೋಡೆಗಳನ್ನು ನಿರ್ಮಿಸುವ ಕೆಲಸಕ್ಕೆ ಸೋಮವಾರ ಚಾಲನೆ ಸಿಕ್ಕಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ‘ಶಾರದಾ ಉಳಿಸಿ ಸಮಿತಿ’ ಅಧ್ಯಕ್ಷ ರವೀಂದ್ರ ಪಂಡಿತ, ‘ಮಾಗಡಿಯಿಂದ ತರಿಸಿಕೊಳ್ಳಲಾದ ಕಲ್ಲುಗಳಿಂದ ಶಾರದಾ ದೇಗುಲದ ಪರಿಕ್ರಮ ನಿರ್ಮಾಣ ಆರಂಭವಾಗಿದೆ ಎಂಬುದನ್ನು ತಿಳಿಸಲು ಹರ್ಷಿಸುತ್ತೇನೆ. ಬೆಂಗಳೂರಿನಿಂದ ಬಂದ ಕಾರ್ಮಿಕರು ದೇಗುಲ ನಿರ್ಮಿಸುತ್ತಿದ್ದಾರೆ’ ಎಂದಿದ್ದಾರೆ.
ಶಾರದೆಯ ಮೂಲ ನೆಲೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿದೆ. ‘ಅಲ್ಲಿಗೆ ತೆರಳಲು 1947ರ ವಿಭಜನೆಗೆ ಮುನ್ನ ತೀತ್ವಾಲ್ ಶಾರದಾ ಯಾತ್ರೆಯ ಬೇಸ್ ಕ್ಯಾಂಪ್ ಆಗಿತ್ತು. ಆದರೆ ವಿಭಜನೆ ವೇಳೆ ನಾಶವಾಗಿತ್ತು. ಅದನ್ನು ಈಗ ಮರುನಿರ್ಮಿಸಲಾಗುತ್ತಿದೆ’ ಎಂದಿದ್ದಾರೆ. ಇತ್ತೀಚೆಗೆ ಪಂಡಿತ ಅವರು ಗ್ರಾನೈಟ್ ಕಲ್ಲುಗಳ ಪರಿಶೀಲನೆಗೆ ಬೆಂಗಳೂರಿಗೆ ಆಗಮಿಸಿದ್ದರು.
ಆಕ್ರಮಿತ ಕಾಶ್ಮೀರದಲ್ಲಿನ ಶಾರದಾ ದೇಗುಲಕ್ಕೆ ಭೇಟಿ ನೀಡಲು ಕರ್ತಾರ್ಪುರ ಕಾರಿಡಾರ್ ಮಾದರಿಯಲ್ಲಿ ಅವಕಾಶ ನೀಡಬೇಕು ಎಂಬುದೂ ಪಂಡಿತ ಅವರ ಈ ಹಿಂದಿನ ಆಗ್ರಹ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ