ಕೆಂಪುಕೋಟೆ ಮೇಲೆ ಸಿಖ್ ಧ್ವಜ ಹಾರಿಸಿದವರಿಗೆ 2.5 ಕೋಟಿ| ನಿಷೇಧಿತ ಸಿಖ್ ಫಾರ್ ಜಸ್ಟೀಸ್ ಸಂಘಟನೆಯಿಂದ ಬಹುಮಾನ ಘೋಷಣೆ| ಬಜೆಟ್ ಅಧಿವೇಶನದ ವೇಳೆ ಸಂಸತ್ಗೆ ಮುತ್ತಿಗೆ ಹಾಕಲೂ ಸಂಘಟನೆ ಕರೆ
ನವದೆಹಲಿ(ಜ.28): ಮಂಗಳವಾರದ ರೈತರ ಟ್ರ್ಯಾಕ್ಟರ್ ರಾರಯಲಿ ವೇಳೆ ನಡೆದ ಕೆಂಪುಕೋಟೆಯ ಮೇಲಿನ ಸಿಖ್ ಧ್ವಜ ಹಾರಿಸಿದ ಘಟನೆಗೆ ನಿಷೇಧಿತ ಸಿಖ್ ಸಂಘಟನೆಯಾದ ‘ಸಿಖ್ ಫಾರ್ ಜಸ್ಟೀಸ್’ ಅತೀವ ಹರ್ಷ ವ್ಯಕ್ತಪಡಿಸಿದೆ.
ಈ ಕುರಿತು 7 ನಿಮಿಷಗಳ ವಿಡಿಯೋವೊಂದನ್ನು ಬಿಡುಗಡೆ ಮಾಡಿರುವ ಸಂಘಟನೆ, ಧ್ವಜ ಹಾರಿಸಿದವರಿಗೆ 2.5 ಕೋಟಿ ರು. ಬಹುಮಾನವನ್ನೂ ಘೋಷಿಸಿದೆ. ಜೊತೆಗೆ ಬಜೆಟ್ ಅಧಿವೇಶನದ ವೇಳೆ ಸಂಸತ್ತಿಗೆ ಮುತ್ತಿಗೆ ಹಾಕುವಂತೆಯೂ ಪ್ರತಿಭಟನಾಕಾರರಿಗೆ ಕರೆ ನೀಡಿದೆ.
ಸಿಖ್ ಫಾರ್ ಜಸ್ಟೀಸ್ ಸಂಘಟನೆಗೆ ಭಾರತ ನಿಷೇಧ ಹೇರಿದೆ. ಆದರೆ ಇದು ಈಗ ಅಮೆರಿಕದ ನ್ಯೂಯಾರ್ಕ್ನಲ್ಲಿ ಕೇಂದ್ರ ಕಚೇರಿ ಹೊಂದಿದ್ದು, ಅಲ್ಲಿಂದಲೇ ಕಾರ್ಯಾಚರಣೆ ನಡೆಸುತ್ತಿದೆ. ಪಂಜಾಬನ್ನು ಭಾರತದಿಂದ ವಿಭಜಿಸಿ ಪ್ರತ್ಯೇಕ ಖಲಿಸ್ತಾನ ಸ್ಥಾಪನೆ ಮಾಡಬೇಕು ಎಂಬುದು ಸಂಘಟನೆಯ ಧ್ಯೇಯ.