
ಕೋಲ್ಕತಾ(ಫೆ.22) ಸಂದೇಶಖಾಲಿ ದೌರ್ಜನ್ಯದಿಂದ ಇಕ್ಕಟ್ಟಿಗೆ ಸಿಲುಕಿರುವ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ಇದೀಗ ಮತ್ತೊಂದು ಹಿನ್ನಡೆಯಾಗಿದೆ. ಸಿಲಿಗುರಿಯ ಸಫಾರಿ ಪಾರ್ಕ್ನ ಸಿಂಹಗಳಿಗೆ ಸೀತಾ ಹಾಗೂ ಅಕ್ಬರ್ ಎಂದು ಹೆಸರಿಟ್ಟ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಕಾನೂನು ಹಿನ್ನಡೆಯಾಗಿದೆ. ಈ ಹೆಸರಿನ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದ ವಿಶ್ವ ಹಿಂದೂ ಪರಿಷತ್, ಸರ್ಕಾರಕ್ಕೆ ಬಿಸಿ ಮುಟ್ಟಿಸುವಲ್ಲಿ ಯಶಸ್ವಿಯಾಗಿದೆ. ವಿಹೆಚ್ಪಿ ಅರ್ಜಿ ವಿಚಾರಣೆ ನಡೆಸಿದ ಕೋಲ್ಕತಾ ಹೈಕೋರ್ಟ್ ಏಕದಸ್ಯ ಪೀಠ, ಈ ರೀತಿ ಹೆಸರಿಟ್ಟಿದ್ದು ಯಾಕೆ? ತಕ್ಷಣವೇ ಮರು ನಾಮಕರಣ ಮಾಡುವಂತೆ ಸರ್ಕಾರಕ್ಕೆ ಹೈಕೋರ್ಟ್ ಚಾಟಿ ಬೀಸಿದೆ.
ಜಸ್ಟೀಸ್ ಸುಗತಾ ಭಟ್ಟಾಚಾರ್ಯ ಏಕಸದಸ್ಯ ಪೀಠ, ಪಶ್ಚಿಮ ಬಂಗಾಳ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ. ಸಿಂಹಳಿಗೆ ಸೀತಾ ಹಾಗೂ ಅಕ್ಬರ್ ಎಂದು ಹೆಸರಿಟ್ಟಿದ್ದು ಯಾಕೆ? ಎಂದು ಪ್ರಶ್ನಿಸಿದೆ. ಯಾವುದೇ ಕಾರಣಕ್ಕೂ ಇಂತಹ ನಡೆಯನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ತಕ್ಷಣವೇ ಹೆಸರು ಬದಲಿಸಲು ಸರ್ಕಾರಕ್ಕೆ ಹೈಕೋರ್ಟ್ ಖಡಕ್ ಸೂಚನೆ ನೀಡಿದೆ.
ಬಂಗಾಳದ ಸಫಾರಿ ಪಾರ್ಕ್ನಲ್ಲಿ ಸಿಂಹಿಣಿ 'ಸೀತಾ' ಜೊತೆ 'ಅಕ್ಬರ್' ಸಿಂಹ, ಕೋರ್ಟ್ ಮೆಟ್ಟಿಲೇರಿದ ವಿಎಚ್ಪಿ!
ಕೋಲ್ಕತಾ ಹೈಕೋರ್ಟ್ ಕೇಳಿದ ಕೆಲ ಪ್ರಶ್ನೆಗಳಿಗೆ ದೀದಿ ಸರ್ಕಾರ ಕಂಗಾಲಾಗಿದೆ. ನಿಮ್ಮ ಮನೆಯ ನಾಯಿಗೆ ಹಿಂದೂ ದೇವರು, ಇಸ್ಲಾಮ್ ಪ್ರವಾದಿಗಳ ಹೆಸರಿಡುತ್ತೀರಾ? ಇದು ಸಾಧ್ಯವೇ? ಒಂದು ಪ್ರಾಣಿಗೆ ರಬೀಂದ್ರನಾಥ್ ಠಾಗೋರ್ ಎಂದು ಹೆಸರಿಡಲು ಸಾಧ್ಯವೇ? ಈ ಕನಿಷ್ಠ ಜ್ಞಾನ ನಿಮಗಿಲ್ಲವೆ? ಕೋಟ್ಯಾಂತರ ಜನರ ನಂಬಿಕೆ, ಶ್ರದ್ಧೆ, ಭಕ್ತಿಯನ್ನು ಅಪಮಾನಿಸಲು, ಅವಹೇಳನ ಮಾಡಲು ಹಾಗೂ ನಿಂದಿಸಲು ಅವಕಾಶವಿಲ್ಲ. ಸೀತಾ ಮಾತೆಯನ್ನು ಈ ದೇಶದ ಜನ ದೇವರಾಗಿ ಪೂಜಿಸುತ್ತಿದ್ದಾರೆ. ಮಂದಿರ ಕಟ್ಟಿ ನಿತ್ಯ ಪೂಜೆ ನಡೆಸುತ್ತಿದ್ದಾರೆ. ಅಕ್ಬರ್ ಈ ದೇಶದ ಮೊಘಲ್ ದೊರೆಯಾಗಿ ಇತಿಹಾಸದ ಪ್ರಮುಖ ಆಡಳಿತಗಾರರಾಗಿದ್ದಾರೆ. ಇವರ ಹೆಸರನ್ನು ಸಿಂಹಗಳಿಗೆ ಇಟ್ಟಿದ್ದು ಯಾಕೆ? ಎಂದು ಕೋರ್ಟ್ ಪ್ರಶ್ನಿಸಿದೆ.
ಏನಿದು ಪ್ರಕರಣ?
ಪಶ್ಚಿಮ ಬಂಗಾಳದ ಸಿಲಿಗುರಿಯ ಸಫಾರಿ ಪಾರ್ಕ್ಗೆ ಇತ್ತೀಚೆಗೆ ಒಡಿಶಾದಿಂದ ತರಲಾದ ಒಂದು ಗಂಡು, ಮತ್ತೊಂದು ಹೆಣ್ಣು ಸಿಂಹಕ್ಕೆ ಅಕ್ಬರ್ ಹಾಗೂ ಸೀತಾ ಎಂದು ನಾಮಕರಣ ಮಾಡಲಾಗಿತ್ತು. ಜೊತೆಗೆ ಅದನ್ನು ಸಫಾರಿ ವಲಯದಲ್ಲಿ ಒಂದೇ ಪ್ರದೇಶದೊಳಗೆ ಇರಿಸಿದ್ದಾರೆ. ಇದರಿಂದ ನಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಬರುತ್ತಿದೆ ಎಂದು ವಿಎಚ್ಪಿ ಆರೋಪಿಸಿತ್ತು. ಅಲ್ಲದೆ ಕೂಡಲೇ ಪ್ರಾಣಿಗಳ ಹೆಸರು ಬದಲಿಸಬೇಕು, ಜೊತೆಗೆ ಹೆಸರನ್ನೂ ಬದಲಿಸಬೇಕು ಎಂದು ಕೋರಿ ವಿಎಚ್ಪಿ ನಾಯಕರು ಕಲ್ಕತಾ ಹೈಕೋರ್ಟ್ ಮೊರೆ ಹೋಗಿದ್ದರು.
ತಾನೇ ಸಾಕಿದ ಸಿಂಹಕ್ಕೆ ಆಹಾರವಾದ ಝೂ ಕೀಪರ್: ಸಿಂಹಕ್ಕೆ ದಯಾಮರಣ ನೀಡಿದ ಝೂ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ