ಇನ್ನು 20 ದಿನಕ್ಕೆ ದೇಶದಲ್ಲಿ 2ನೇ ಅಲೆ ಅಬ್ಬರ ತುತ್ತತುದಿಗೆ!

By Kannadaprabha NewsFirst Published Mar 26, 2021, 8:30 AM IST
Highlights

ಇನ್ನು 20 ದಿನಕ್ಕೆ ದೇಶದಲ್ಲಿ 2ನೇ ಅಲೆ ಅಬ್ಬರ ತುತ್ತತುದಿಗೆ!| ಈ ಬಾರಿ 25 ಲಕ್ಷ ಮಂದಿಗೆ ಸೋಂಕು: ಎಸ್‌ಬಿಐ ವರದಿ

 

ನವದೆಹಲಿ: ದೇಶದಲ್ಲಿ ಕಂಡುಬರುತ್ತಿರುವ ಕೊರೋನಾ ವೈರಸ್‌ ಅಬ್ಬರ 2ನೇ ಅಲೆಯ ಸ್ಪಷ್ಟಸೂಚನೆ. ಇದು ಏಪ್ರಿಲ್‌ ಮಧ್ಯಭಾಗದ ವೇಳೆಗೆ ತುತ್ತತುದಿಗೆ ತಲುಪಬಹುದು ಎಂದು ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ಸಿದ್ಧಪಡಿಸಿರುವ ವರದಿ ಎಚ್ಚರಿಸಿದೆ. ಮಾ.23ರವರೆಗಿನ ಅಂಕಿ-ಸಂಖ್ಯೆಗಳನ್ನು ಆಧರಿಸಿ ಹೇಳುವುದಾದರೆ, ಎರಡನೇ ಅಲೆಯಲ್ಲಿ ದೇಶದ 25 ಲಕ್ಷ ಮಂದಿಗೆ ಸೋಂಕು ತಗುಲಬಹುದು. ಒಟ್ಟಾರೆ ಫೆ.15ರಿಂದ 100 ದಿನಗಳ ಕಾಲ ಈ ಎರಡನೆ ಅಲೆ ಇರಬಹುದು ಎಂದು ಭವಿಷ್ಯ ನುಡಿದಿದೆ.

ಸೋಂಕು ನಿಗ್ರಹಕ್ಕೆ ಸ್ಥಳೀಯ ಮಟ್ಟದಲ್ಲಿ ಲಾಕ್‌ಡೌನ್‌ ಅಥವಾ ನಿರ್ಬಂಧಗಳನ್ನು ಹೇರುವುದು ಪರಿಣಾಮಕಾರಿಯಾಗುವುದಿಲ್ಲ. ಕೊರೋನಾ ವಿರುದ್ಧದ ಹೋರಾಟದಲ್ಲಿ ವಿಜಯಿಯಾಗಲು ಸಾಮೂಹಿಕ ಲಸಿಕಾ ಅಭಿಯಾನವೇ ಏಕೈಕ ವಿಶ್ವಾಸ ಎಂದು 28 ಪುಟಗಳ ವರದಿಯಲ್ಲಿ ಎಸ್‌ಬಿಐ ತಿಳಿಸಿದೆ.

ಕೊರೋನಾ ಹೆಚ್ಚಾದ ಹಿನ್ನೆಲೆಯಲ್ಲಿ ಕೆಲವೊಂದು ರಾಜ್ಯಗಳು ಲಾಕ್‌ಡೌನ್‌ ಅಥವಾ ಇನ್ನಿತರೆ ನಿರ್ಬಂಧಗಳನ್ನು ಹೇರಿವೆ. ಅವುಗಳ ಪರಿಣಾಮ ಮುಂದಿನ ತಿಂಗಳು ಗೊತ್ತಾಗಲಿದೆ ಎಂದು ಹೇಳಿದೆ. ದೇಶದ ಎಲ್ಲ ರಾಜ್ಯಗಳಲ್ಲೂ ಕೊರೋನಾ ಲಸಿಕೆ ಅಭಿಯಾನಕ್ಕೆ ವೇಗ ನೀಡಬೇಕು. ಸದ್ಯ ನಿತ್ಯ 34 ಲಕ್ಷ ಮಂದಿಗೆ ಲಸಿಕೆ ನೀಡಲಾಗುತ್ತಿದ್ದು, ಇದನ್ನು 40ರಿಂದ 45 ಲಕ್ಷಕ್ಕೆ ಹೆಚ್ಚಳ ಮಾಡಬೇಕು. ಹೀಗಾದಲ್ಲಿ 45 ವರ್ಷ ಮೇಲ್ಪಟ್ಟವರಿಗೆ ಇನ್ನು 4 ತಿಂಗಳಲ್ಲಿ ಸಂಪೂರ್ಣವಾಗಿ ಲಸಿಕೆ ನೀಡಬಹುದಾಗಿದೆ ಎಂದು ವರದಿ ಸಲಹೆ ಮಾಡಿದೆ.

click me!