ಹೈಕೋರ್ಟ್ ಸೂಚನೆ ಬೆನ್ನಲ್ಲೇ ಎಚ್ಚೆತ್ತ ಬಂಗಾಳ ಸರ್ಕಾರ, 56 ದಿನ ಬಳಿಕ ಶಹಜಹಾನ್ ಬಂಧನ!

By Suvarna NewsFirst Published Feb 29, 2024, 10:02 AM IST
Highlights

ಹೈಕೋರ್ಟ್ ಸೂಚನೆಯಿಂದ ಎಚ್ಚೆತ್ತ ಪಶ್ಚಿಮ ಬಂಗಾಳ ಸರ್ಕಾರ, ತನ್ನ ಟಿಎಂಸಿ ನಾಯಕ, ಮಹಿಳೆಯರ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿ ಶಹಜಹಾನ್ ಶೇಕ್ ಬಂಧಿಸಿದೆ. ಈ ಮೂಲಕ ಕೇಂದ್ರ ತನಿಖಾ ಸಂಸ್ಥೆಗಳು ಮಧ್ಯಪ್ರವೇಶಿದಂತೆ ನೋಡಿಕೊಂಡಿದೆ.

ಕೋಲ್ಕತಾ(ಫೆ.29) ಭೂಕಬಳಿಕೆ ಮತ್ತು ಹಿಂದೂ ಮಹಿಳೆಯರ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿ ಟಿಎಂಸಿ ನಾಯಕ ಶಹಜಹಾನ್ ಶೇಕ್ ಅರೆಸ್ಟ್ ಆಗಿದ್ದಾರೆ. ಹೈಕೋರ್ಟ್ ಮಧ್ಯಪ್ರವೇಶದ ಬಳಿಕ ಎಚ್ಚೆತ್ತುಕೊಂಡು ಪಶ್ಚಿಮ ಬಂಗಾಳ ಪೊಲೀಸ್, ಬರೋಬ್ಬರಿ 56 ದಿನಗಳ ಬಳಿಕ ಶಹಜಹಾನ್ ಶೇಕ್ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.  ಉತ್ತರ ಪರಗಣ ಮಿನಾಖಾನ್ ವಲಯದಲ್ಲಿ ಶಹಜಹಾನ್ ಬಂಧಿಸಲಾಗಿದೆ. ಜನವರಿ 5 ರಿಂದ ತಲೆಮರೆಸಿಕೊಂಡಿದ್ದ ಶಹಜಹಾನ್‌ಗೆ ಪಶ್ಚಿಮ ಬಂಗಾಳ ಸರ್ಕಾರ ಆಶ್ರಯ ನೀಡಿತ್ತು ಅನ್ನೋ ಆರೋಪ ಕೇಳಿಬಂದಿತ್ತು. ಪ್ರಮುಖ ಆರೋಪಿಯನ್ನು ಬಂಧಿಸಲು ಮೀನಾಮೇಷ ಎಣಿಸಿದ್ದ ಪೊಲೀಸ್ ಹಾಗೂ ಪಶ್ಚಮ ಬಂಗಾಳ ಸರ್ಕಾರಕ್ಕೆ ಚಾಟಿ ಬೀಸಿದ್ದ ಹೈಕೋರ್ಟ್, ಕೇಂದ್ರದ ತನಿಖಾ ಸಂಸ್ಥೆಗಳು ಶಹಜಹಾನ್ ಬಂಧಿಸಬಹುದು ಎಂದಿತ್ತು. ಕೇಂದ್ರ ಮಧ್ಯಪ್ರವೇಶಿಸಿದರೆ ಅಕ್ರಮಗಳ ಸರಮಾಲೆ ಬಟಾಬಯಲಾಗಲಿದೆ ಎಂದು ಅರಿತ ಮಮತಾ ಬ್ಯಾನರ್ಜಿ ಸರ್ಕಾರ ಇಂದು ಶಹಜಹಾನ್ ಅರೆಸ್ಟ್ ಮಾಡಿದೆ.

ಜನವರಿ 5 ರಂದು ಇಡಿ ಅಧಿಕಾರಿಗಳ ಮೇಲೆ ದಾಳಿ ಪ್ರಕರಣದಲ್ಲೂ ಶಹಜಹಾನ್ ಪ್ರಮುಖ ಆರೋಪಿಯಾಗಿದ್ದಾರೆ. ಇಡಿ ದೂರಿನ ಆಧಾರದಲ್ಲಿ ಶಹಜಹಾನ್ ಶೇಕ್ ಬಂಧಿಸಲಾಗಿದೆ. ಇದೀಗ ಪೊಲೀಸರು ಶಹಜಹಾನ್ ಶೇಕ್‌ನನ್ನು ಬಸಿರ್ಹಟ್ ಕೋರ್ಟ್‌ಗೆ ಹಾಜರುಪಡಿಸಿದ್ದಾರೆ. 

ಶಾಜಹಾನ್ ಬಂಧಿಸಿ: ಬಂಗಾಳ ಸರ್ಕಾರಕ್ಕೆ ಹೈಕೋರ್ಟ್‌ ಆದೇಶ

ಭೂಕಬಳಿಕೆ ಪ್ರಕರಣದ ಪ್ರಮುಖ ರೂವಾರಿ, ಟಿಎಂಸಿ ನಾಯಕ ಶಜಹಾನ್‌ ಮತ್ತು ಅತ್ಯಾಚಾರಿ ಟಿಎಂಸಿ ಕಾರ್ಯಕರ್ತರನ್ನು ಬಂಧಿಸಬೇಕು ಎಂದು ಆಗ್ರಹಿಸಿ ಸಾವಿರಾರು ಜನರು ಬೀದಿಗಿಳಿದು ಭಾರೀ ಹೋರಾಟ ನಡೆಸಿದ್ದರು. ಇತ್ತ ಬಿಜೆಪಿ ಕೂಡ ಹೋರಾಟ ನಡೆಸಿತ್ತು. ಆದರೆ ಚುನಾವಣಾ ಸಮೀಪದಲ್ಲೇ ಈ ಪ್ರಕರಣ ಟಿಎಂಸಿಗೆ ಮುಳುವಾಗಬಹುದು ಎಂದು ಮಮತಾ ಬ್ಯಾನರ್ಜಿ ಸರ್ಕಾರ ಸಂದೇಶಖಾಲಿ ನಾಯಕ ಶಹಜಹಾನ್ ಶೇಕ್ ಬಂಧಿಸದೆ ನಾಟಕವಾಡಿತ್ತು. ಕೊನೆಗೆ ಹೈಕೋರ್ಟ್ ಸ್ಪಷ್ಟನೆ ನೀಡುತ್ತಿದ್ದಂತೆ ಅನಿವಾರ್ಯವಾಗಿ ಬಂಧಿಸಿದೆ.

ಶಹಜಹಾನ್ ಬಂಧನ ವಿಳಂಬವನ್ನು ಕೋಲ್ಕತ್ತಾ ಹೈಕೋರ್ಟ್ ಪ್ರಶ್ನಿಸಿತ್ತು. ಇತ್ತೀಚೆಗೆ ಶಾಜಹಾನ್‌ನನ್ನು ಬಂಧಿಸಿ ಎಂದು ಪ. ಬಂಗಾಳದ ಪೊಲೀಸರಿಗೆ ಮಾತ್ರ ಕೋರ್ಟ್‌ ಸೂಚಿಸಿತ್ತು. ಆದರೆ ಪಶ್ಚಿಮ ಬಂಗಾಳ ಸರ್ಕಾರ ಶಹಜಹಾನ್ ನಾಪತ್ತೆ ಎಂದು ಕೈಚೆಲ್ಲಿ ಕುಳಿತಿತ್ತು. ಫೆ.28 ರಂದು ಸ್ಪಷ್ಟೀಕರಣ ನೀಡಿದ ಹೈಕೋರ್ಟ್  ಮುಖ್ಯ ನ್ಯಾ. ಶಿವಲಿಂಗಂ ನೇತೃತ್ವದ ಪೀಠ, ‘ಫೆ.7ರ ಆದೇಶದಲ್ಲಿ ಸಂದೇಶಖಾಲಿಯಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಮೇಲೆ ದಾಳಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್‌ ಹಾಗೂ ಸಿಬಿಐ ಜಂಟಿ ತನಿಖೆಗೆ ಮಾತ್ರ ತಡೆ ನೀಡಲಾಗಿತ್ತು. ಆದರೆ ಶಾಜಹಾನ್‌ ಬಂಧನದ ಬಗ್ಗೆ ಯಾವುದೇ ಅದೇಶ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಸಿಬಿಐ ಹಾಗೂ ಇ,ಡಿ. ಕೂಡ ಬಂಧಿಸಬಹುದು ಎಂದು ಕಲ್ಕತ್ತಾ ಹೈಕೋರ್ಟ್‌ ಸ್ಪಷ್ಟನೆ ನೀಡಿತ್ತು.

ಸಂದೇಶ್‌ಖಾಲಿ ಸಾಮೂಹಿಕ ರೇಪ್‌ ಕೇಸ್‌, ಬಂಗಾಳದಲ್ಲಿ ಭುಗಿಲೆದ್ದ ಸಂಘರ್ಷ ಟಿಎಂಸಿ ನಾಯಕರ ಆಸ್ತಿಗಳಿಗೆ ಬೆಂಕಿ

click me!