ತಕ್ಷಣವೇ ಉಕ್ರೇನ್ ಬಿಟ್ಟು ಹೊರಡಿ , ತನ್ನ ನಾಗರಿಕರಿಗೆ ವಾರ್ನಿಂಗ್ ನೀಡಿದ ಭಾರತ!

By Suvarna NewsFirst Published Oct 25, 2022, 10:00 PM IST
Highlights

ಭಾರತೀಯ ನಾಗರೀಕರು ಯಾರಾದರೂ ಉಕ್ರೇನ್‌ನಲ್ಲಿದ್ದರೆ ಒಂದು ಕ್ಷಣವೂ ತಡ ಮಾಡದೇ ಹೊರಡಲು ಸೂಚನೆ ನೀಡಲಾಗಿದೆ. ಭಾರತೀಯ ರಾಯಭಾರ ಕಚೇರಿ ಈ ಮಹತ್ವದ ವಾರ್ನಿಂಗ್ ನೀಡಿದೆ. ಇದಕ್ಕೆ ಕಾರಣ ರಷ್ಯಾ ಅತೀ ದೊಡ್ಡ ದಾಳಿಗೆ ಸಜ್ಜಾಗುತ್ತಿದ್ದು, ಸಂಪೂರ್ಣ ಉಕ್ರೇನ್ ಕೈವಶಕ್ಕೆ ಮುಂದಾಗಿದೆ.

ನವದೆಹಲಿ(ಅ.25); ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಮಹತ್ವದ ವಾರ್ನಿಂಗ್ ನೀಡಿದೆ. ಉಕ್ರೇನ್‌ನಲ್ಲಿರುವ ಭಾರತೀಯ ನಾಗರೀಕರು ತಕ್ಷಣವೇ ಉಕ್ರೇನ್ ಬಿಟ್ಟು ಹೊರಡಲು ಸೂಚನೆ ನೀಡಿದೆ. ಇದೀಗ ರಷ್ಯಾ ಮತ್ತೊಂದು ಸುತ್ತಿನ ದಾಳಿಗೆ ಮುಂದಾಗಿದೆ. ಈ ಬಾರಿ ಅತೀ ದೊಡ್ಡ ದಾಳಿ ಸಂಘಟಿಸುತ್ತಿರುವ ರಷ್ಯಾ, ಉಕ್ರೇನ್ ಬಹುತೇಕ ಭಾಗ ವಶಪಡಿಸಿಕೊಳ್ಳುವ ಲೆಕ್ಕಾಚಾರದಲ್ಲಿದೆ. ಅಕ್ಟೋಬರ್ 19 ರಂದು ಇದೇ ರೀತಿ ವಾರ್ನಿಂಗ್ ನೀಡಲಾಗಿತ್ತು. ಇದರಿಂದ ಬಹುತೇಕ ಭಾರತೀಯರು ಉಕ್ರೇನ್‌ನಿಂದ ಹತ್ತಿರದ ದೇಶಕ್ಕೆ, ಕೆಲವರು ಭಾರತಕ್ಕೆ ಮರಳಿದ್ದರು. ಭಾರತ ಸೂಚನೆ ಬಳಿಕ ರಷ್ಯಾ ಕೀವ್ ಸೇರಿದಂತೆ ಹಲವು ನಗರಗಳ ಮೇಲೆ ದಾಳಿ ನಡೆಸಿತ್ತು. ಇದೀಗ ಮತ್ತೆ ವಾರ್ನಿಂಗ್ ನೀಡಿದೆ. ಹೀಗಾಗಿ ಈ ಬಾರಿ ರಷ್ಯಾ ಅತೀ ದೊಡ್ಡ ದಾಳಿಗೆ ಸಜ್ಜಾಗಿರುವ ಸಾಧ್ಯತೆ ಇದೆ. 

ಉಕ್ರೇನ್‌ನಲ್ಲಿರುವ ಭಾರತೀಯರಿಗೆ ಯಾವುದೇ ನೆರವು ಬೇಕಿದ್ದಲ್ಲಿ ರಾಯಭಾರ ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ. ಉಕ್ರೇನ್‌ನಿಂದ ತೆರಳಲು ಎಲ್ಲಾ ನೆರವು ನೀಡಲಾಗುವುದು ಎಂದು ರಾಯಭಾರ ಕಚೇರಿ ಹೇಳಿದೆ. ಉಕ್ರೇನ್ ಕೂಡ ಪ್ರತಿದಾಳಿಗೆ ಸಜ್ಜಾಗುತ್ತಿದೆ. ಹೀಗಾಗಿ ಮತ್ತೊಂದು ಭೀಕರ ಯುದ್ಧಕ್ಕೆ ಉಕ್ರೇನ್ ಸಾಕ್ಷಿಯಾಗುವ ಸಾಧ್ಯತೆಗಳು ದಟ್ಟವಾಗಿದೆ.

 

Ukraine ಮೇಲೆ ಆತ್ಮಾಹುತಿ ಡ್ರೋನ್‌ ದಾಳಿ ಮಾಡಿದ ರಷ್ಯಾ: 8 ಮಂದಿ ಬಲಿ

ಉಕ್ರೇನ್‌ ದಾಳಿ ತೀವ್ರ: ರಷ್ಯಾದಿಂದ ಖೇರ್ಸನ್‌ ನಿವಾಸಿಗಳ ಸ್ಥಳಾಂತರ
ಇತ್ತೀಚೆಗಷ್ಟೇ ತನ್ನ ತೆಕ್ಕೆಗೆ ಪಡೆದಿದ್ದ ಉಕ್ರೇನ್‌ನ ಖೇರ್ಸನ್‌ ಪ್ರಾಂತ್ಯದ ಮೇಲೆ ಉಕ್ರೇನ್‌ನ ಸೇನೆ ದಾಳಿ ತೀವ್ರಗೊಳಿಸಿರುವ ಹಿನ್ನೆಲೆಯಲ್ಲಿ ಅಲ್ಲಿಯ ಜನರನ್ನು ತೆರವುಗೊಳಿಸಲು ರಷ್ಯಾ ಮುಂದಾಗಿದೆ. ತೆರವುಗೊಳ್ಳಲು ಆಸಕ್ತಿ ಹೊಂದಿರುವವರನ್ನು ಉಚಿತವಾಗಿ ರಷ್ಯಾಕ್ಕೆ ತೆರವುಗೊಳಿಸಲಾಗುವುದು ಎಂದು ರಷ್ಯಾ ಸೇನೆ ಹೇಳಿದೆ. ಉಕ್ರೇನ್‌ಗೆ ಸೇರಿದ 4 ಪ್ರಾಂತ್ಯಗಳನ್ನು ರಷ್ಯಾ ಇತ್ತೀಚೆಗೆ ಅಧಿಕೃತವಾಗಿ ತನ್ನ ವಶಕ್ಕೆ ಪಡೆದಿತ್ತು. ಆದರೆ ಇದೀಗ ಈ ಪ್ರಾಂತ್ಯದಲ್ಲೇ ಉಕ್ರೇನ್‌ ಭಾರೀ ದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ರಷ್ಯಾ ಹಿನ್ನಡೆ ಅನುಭವಿಸಿದೆ.

ರಷ್ಯಾ ತಂಟೆಗೆ ನ್ಯಾಟೋ ಬಂದರೆ ಮಹಾವಿನಾಶ: ಪುಟಿನ್‌ ಎಚ್ಚರಿಕೆ
‘ಉಕ್ರೇನ್‌ ಮೇಲೆ ಯುದ್ಧ ಸಾರಿರುವ ತಮ್ಮ ಸೇನೆಯ ಜತೆ ನ್ಯಾಟೋ ಪಡೆಗಳು ನೇರ ಸಂಘರ್ಷಕ್ಕೆ ಇಳಿದರೆ ಅದು ಜಾಗತಿಕ ಮಹಾವಿನಾಶಕ್ಕೆ ಎಡೆ ಮಾಡಿಕೊಡಲಿದೆ’ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಎಚ್ಚರಿಕೆ ನೀಡಿದ್ದಾರೆ. ಕಜಕ್‌ಸ್ತಾನದ ರಾಜಧಾನಿ ಆಸ್ತಾನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನ್ಯಾಟೋ ಪಡೆಗಳು ರಷ್ಯಾ ಸೇನೆಯ ಜತೆ ನೇರ ಸಂಪರ್ಕ, ನೇರ ಸಂಘರ್ಷಕ್ಕೆ ಬರುವುದು ಅತ್ಯಂತ ಅಪಾಯಕಾರಿ ಕ್ರಮ. ಇದು ಜಾಗತಿಕ ಸರ್ವನಾಶಕ್ಕೆ ದಾರಿ ಮಾಡಿಕೊಡಬಲ್ಲದು. ಯಾರು ಈ ಬಗ್ಗೆ ಬುದ್ಧಿವಂತಿಕೆಯಿಂದ ಮಾತನಾಡುತ್ತಿದ್ದಾರೋ ಆ ಹೆಜ್ಜೆ ತುಳಿಯದಿರುವುದೇ ಒಳಿತು’ ಎಂದು ಹೇಳಿದರು.

Russia - Ukraine War: ರಷ್ಯಾ ಭಯೋತ್ಪಾದಕ ದೇಶ ಎಂದು ವಿಶ್ವ ಸಂಸ್ಥೆಯಲ್ಲಿ ಖಂಡಿಸಿದ ಉಕ್ರೇನ್‌

ಇತ್ತೀಚೆಗೆ ಉಕ್ರೇನಿನ 40 ನಗರಗಳ ಮೇಲೆ ರಷ್ಯಾದ ಕ್ಷಿಪಣಿಗಳು ದಾಳಿ ನಡೆಸಿವೆ. ಇದೇ ವೇಳೆ ಉಕ್ರೇನ್‌ ವಾಯುಪಡೆ ಕೂಡಾ ರಷ್ಯಾದ 25 ಕ್ಷಿಪಣಿಗಳನ್ನು ಗುರಿಯಾಗಿಸಿ ಪ್ರತಿದಾಳಿ ನಡೆಸಿತ್ತು. ಕೀವ್‌ ವಸತಿ ಪ್ರದೇಶದ ಮೇಲೆ ರಷ್ಯಾ ಇರಾನ್‌ ನಿರ್ಮಿತ ಕಾಮಿಕೇಜ್‌ ಡ್ರೋನ್‌ (ಸ್ಫೋಟಕ ಡ್ರೋನ್‌) ಬಳಸಿ ದಾಳಿ ನಡೆಸಿದೆ. ಕ್ರಿಮಿಯಾ ಸೇತುವೆ ಧ್ವಂಸಗೊಂಡಿದ್ದಕ್ಕೆ ಪ್ರತೀಕಾರವಾಗಿ ರಷ್ಯಾ ಕಳೆದ 4 ದಿನಗಳಿಂದ ಉಕ್ರೇನಿನ ನಗರಗಳ ಮೇಲೆ ಸತತ ಕ್ಷಿಪಣಿ ಬಾಂಬ್‌ ಮಳೆಯನ್ನು ಮುಂದುವರೆಸಿದೆ. ಈ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ ಇನ್ನು ನಿಖರವಾಗಿ ತಿಳಿದುಬಂದಿಲ್ಲ. ಆದರೆ ಕೀವ್‌ನ ಪ್ರಮುಖ ಮೂಲಭೂತ ಸೌಕರ್ಯಗಳಿಗೆ ಭಾರೀ ಹಾನಿಯಾಗಿದೆ ಎಂದು ಕೀವ್‌ ಗವರ್ನರ್‌ ಓಲೆಕ್ಸಿ ಕುಲೇಬಾ ಹೇಳಿದ್ದಾರೆ.

click me!