RRB NTPC exam: ರೈಲ್ವೆ ಪರೀಕ್ಷೆ ವಿರುದ್ಧ ಭುಗಿಲೆದ್ದ ಆಕ್ರೋಶ, ಗಯಾದಲ್ಲಿ ರೈಲಿಗೆ ಬೆಂಕಿ

By Kannadaprabha NewsFirst Published Jan 27, 2022, 4:15 AM IST
Highlights

* ಎನ್‌ಟಿಪಿಸಿ ಪರೀಕ್ಷೆ ರದ್ದು ಮಾಡಿದ ಇಲಾಖೆ
* ಸಮಸ್ಯೆ ಆಲಿಸಲು ಸಮಿತಿ ರಚನೆ
* ಹಿಂಸಾಚಾರಕ್ಕಿಳಿದರೆ ಪರೀಕ್ಷೆ ಬರೆಯದಂತೆ ಡಿಬಾರ್‌: ರೈಲ್ವೆ ಸಚಿವಾಲಯ ಎಚ್ಚರಿಕೆ
 

ಪಟನಾ/ಗಯಾ (ಜ.27): ರೈಲ್ವೆ ನೇಮಕಾತಿ ಮಂಡಳಿಯ ನಾನ್‌ ಟೆಕ್ನಿಕಲ್‌ ಪಾಪ್ಯುಲರ್‌ ಕೆಟಗರೀಸ್‌ (ಎನ್‌ಟಿಪಿಸಿ) (Non Technical Popular Categories) ಪರೀಕ್ಷೆ ವಿಧಾನದ ವಿರುದ್ಧ ಬಿಹಾರದಲ್ಲಿ ಉದ್ಯೋಗಾಕಾಂಕ್ಷಿಗಳು ನಡೆಸುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಬುಧವಾರ ರೈಲಿಗೆ ಬೆಂಕಿ ಹಚ್ಚಿ, ಹಳಿ ಕಿತ್ತುಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗಯಾ ಜಂಕ್ಷನ್ನಿಗೆ (Gaya Junction) ದಾಳಿಯಿಟ್ಟಪ್ರತಿಭಟನಾಕಾರರ ಗುಂಪೊಂದು ನಿಂತಿದ್ದ ಪ್ಯಾಸೆಂಜರ್‌ ರೈಲಿಗೆ ಬೆಂಕಿ ಇಟ್ಟಿದೆ. ಅದೃಷ್ಟವಶಾತ್‌ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸದ್ಯ ಭಾರೀ ಬಿಗಿ ಪೊಲೀಸ್‌ ಬಂದೋಬಸ್ತ್ ಮಾಡಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಗಿದೆ. ಕೆಲವು ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯಲಾಗಿದೆ.

ಪ್ರತಿಭಟನೆ ಭುಗಿಲೇಳುತ್ತಿದ್ದಂತೆಯೇ ಭಾರತೀಯ ರೈಲ್ವೆಯು (Indian Railways) ಎನ್‌ಟಿಪಿಸಿ ಹಾಗೂ ಲೆವೆಲ್ 1 ಪರೀಕ್ಷೆಗಳನ್ನು ರದ್ದುಗೊಳಿಸಲು ನಿರ್ಧರಿಸಿದೆ. ಹಾಗೆಯೇ ವಿವಿಧ ರೈಲ್ವೆ ನೇಮಕಾತಿ ಮಂಡಳಿಗಳು ನಡೆಸಿರುವ ಪರೀಕ್ಷೆಗಳಲ್ಲಿ ಉತ್ತೀರ್ಣರಾದವರ ಹಾಗೂ ಅನುತ್ತೀರ್ಣಗೊಂಡವರ ಅಹವಾಲುಗಳನ್ನು ಆಲಿಸುವ ಸಂಬಂಧ ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಲಾಗಿದೆ ಎಂದು ರೈಲ್ವೆ ವಕ್ತಾರರೊಬ್ಬರು ತಿಳಿಸಿದ್ದಾರೆ. ಅಭ್ಯರ್ಥಿಗಳಿಗೆ ತಮ್ಮ ಕಳವಳಗಳನ್ನು ಸಲ್ಲಿಸಲು ಫೆಬ್ರವರಿ 16 ರವರೆಗೆ ಮೂರು ವಾರಗಳ ಕಾಲಾವಕಾಶ ನೀಡಲಾಗಿದೆ ಮತ್ತು ಈ ಕಳವಳಗಳನ್ನು ಪರಿಶೀಲಿಸಿದ ನಂತರ ಸಮಿತಿಯು ತಮ್ಮ ಶಿಫಾರಸುಗಳನ್ನು ಮಾರ್ಚ್ 4, 2022 ರೊಳಗೆ ಸಲ್ಲಿಸುತ್ತದೆ.

ಏತನ್ಮಧ್ಯೆ ರೈಲ್ವೆ ಸಚಿವಾಲಯ ಹೇಳಿಕೆ ಬಿಡುಗಡೆ ಮಾಡಿದ್ದು, ‘ಪ್ರತಿಭಟನೆಯ ವಿಡಿಯೋಗಳನ್ನು ವಿಶೇಷ ಏಜೆನ್ಸಿಗಳ ಸಹಾಯದಿಂದ ಸಚಿವಾಲಯವು ಪರಿಶೀಲಿಸಲಿದೆ. ಅಭ್ಯರ್ಥಿಗಳು ಪ್ರತಿಭಟನೆಯಲ್ಲಿ ತೊಡಗಿರುವುದು ಕಂಡುಬಂದರೆ, ಅದಕ್ಕೆ ಅನುಗುಣವಾಗಿ ದಂಡ ವಿಧಿಸಲಾಗುತ್ತದೆ. ಜೊತೆಗೆ ಅವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳುವುದಲ್ಲದೆ, ಜೀವಿತಾವಧಿಯಲ್ಲಿ ರೈಲ್ವೆ ಪರೀಕ್ಷೆ ಬರೆಯದಂತೆ ಡಿಬಾರ್‌ ಮಾಡಲಾಗುತ್ತದೆ’ ಎಂದು ಕಟುವಾದ ಎಚ್ಚರಿಕೆ ನೀಡಿದೆ. ಈ ನಡುವೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ (Ashwini Vaishnaw), ‘ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡಬೇಡಿ. ಪರೀಕ್ಷೆಯಲ್ಲಿ ಅಕ್ರಮ ನಡೆದಿದ್ದರೆ ಅದನ್ನು ಪರಿಹರಿಸೋಣ’ ಎಂದು ಮನವಿ ಮಾಡಿದ್ದಾರೆ.

East Coast Railway Recruitment 2022: ನರ್ಸಿಂಗ್​ ಸೂಪರಿಂಟೆಂಡೆಂಟ್​ ಸೇರಿ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ
ಏನಿದು ವಿವಾದ?: ಎನ್‌ಟಿಪಿಸಿ ಪರೀಕ್ಷೆಗಳನ್ನು ಒಂದೇ ಹಂತದಲ್ಲಿ ನಡೆಸುವುದಾಗಿ ರೈಲ್ವೆ ಇಲಾಖೆಯ 2019ರ ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿತ್ತು. ಆದರೆ ಇತ್ತೀಚೆಗೆ ರೈಲ್ವೆ ನೇಮಕಾತಿ ಮಂಡಳಿ ಎರಡು ಹಂತಗಳಲ್ಲಿ ಪರೀಕ್ಷೆ ನಡೆಸುವುದಾಗಿ ಪ್ರಕಟಿಸಿದೆ. ಅಂತಿಮ ಆಯ್ಕೆಗಾಗಿ 2ನೇ ಹಂತದ ಕಂಪ್ಯೂಟರ್‌ ಆಧಾರಿತ ಪರೀಕ್ಷೆ (ಸಿಬಿಟಿ)ಯನ್ನು ಎದುರಿಸಬೇಕಿದ್ದು, ಇದು ಆರ್‌ಆರ್‌ಬಿ-ಎನ್‌ಟಿಪಿಸಿಯು (RRB NTPC ) ಮೊದಲ ಹಂತದಲ್ಲಿ ಉತ್ತೀರ್ಣರಾದವರಿಗೆ ಎಸಗಿರುವ ವಂಚನೆ ಎಂದು ಆರೋಪಿಸಿದ್ದಾರೆ. ಲೆವೆಲ್‌ 2-ಲೆವೆಲ್‌ 6ರವರೆಗಿನ ಒಟ್ಟು 35000 ಹುದ್ದೆಗಳಿಗೆ ಒಟ್ಟು 1.25 ಕೋಟಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ.
 

RRB NTPC CBT 2 Exam 2022 : ರೈಲ್ವೆ ನೇಮಕಾತಿಯ ಸಿಬಿಟಿ-2 ಪರೀಕ್ಷೆಯ ದಿನಾಂಕ ಬಿಡುಗಡೆ
ಛತ್ತೀಸ್‌ಗಢ ನೌಕರರಿಗೆ ವಾರಕ್ಕೆ 5 ದಿನ ಕೆಲಸ
ರಾಯ್‌ಪುರ (ಜ. 27):
ಛತ್ತೀಸ್‌ಗಢ (chhattisgarh) ಸರ್ಕಾರ ರಾಜ್ಯದಲ್ಲಿ ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನಗಳ ಕರ್ತವ್ಯದ ಹೊಸ ನೀತಿ ಜಾರಿ ಮಾಡುವುದಾಗಿ ಘೋಷಿಸಿದೆ. ಗಣರಾಜ್ಯೋತ್ಸವ ಕಾರ್ಯಕ್ರಮದ ಬಳಿಕ ಟ್ವೀಟ್‌ ಮಾಡಿರುವ ಮುಖ್ಯಮಂತ್ರಿ ಭೂಪೇಶ್‌ ಬಾಘೇಲ್‌ (bhupesh baghel)ಈ ಮಾಹಿತಿ ನೀಡಿದ್ದಾರೆ. ನೌಕರರ ದಕ್ಷತೆ ಮತ್ತು ಉತ್ಪಾದಕತೆಯನ್ನು ಹೆಚ್ಚು ಮಾಡುವುದಕ್ಕೋಸ್ಕರ ವಾರದಲ್ಲಿ ಕೆಲಸದ ದಿನವನ್ನು 5 ದಿನಕ್ಕೆ ಸೀಮಿತ ಮಾಡಲಾಗಿದೆ ಎಂದಿದ್ದಾರೆ. ಜೊತೆಗೆ ಸರ್ಕಾರಿ ನೌಕರರ ಪಿಂಚಣಿ ನಿಧಿಗೆ ನೀಡುವ ಸರ್ಕಾರದ ಪಾಲನ್ನು ಶೆ.10ರಿಂದ ಶೇ.14ಕ್ಕೆ ಹೆಚ್ಚಿಸಲೂ ಸರ್ಕಾರ ನಿರ್ಧರಿಸಿದೆ ಎಂದು ಅವರು ತಿಳಿಸಿದ್ದಾರೆ.

click me!