ಟಿಎಂಸಿ ಸೇರಿದ್ದೇಕೆ ಬಿಜೆಪಿ ಮಾಜಿ ನಾಯಕ: ಐದು ಕಾರಣ ಕೊಟ್ಟ ಸಿನ್ಹಾ!

By Suvarna NewsFirst Published Mar 13, 2021, 4:43 PM IST
Highlights

ಟಿಎಂಸಿಗೆ ಸೇರ್ಪಡೆಗೊಂಡ ಬಿಜೆಪಿ ಮಾಜಿ ನಾಯಕ| ಟಿಎಮಸಿ ಸದಸ್ಯತ್ವ ಸ್ವೀಕರಿಸಿದ ಬಳಿಕ ಪ್ರಮುಖ ಮಾಹಿತಿ ಬಹಿರಂಗ| ತಾನೇಕೆ ಟಿಎಂಸಿ ಸೇರಿದೆ ಎಂದು ಕಾರಣ ಕೊಟ್ಟ ಸಿನ್ಹಾ

ಕೋಲ್ಕತ್ತಾ(ಮಾ.13): ಭಾರತೀಯ ಜನತಾ ಪಕ್ಷದ ನಾಐಕ ಹಾಗೂ ಅಟಲ್ ಬಿಹಾರಿ ವಾಜಪೇಯಿ ಅಧಿಕಾರವಧಿಯಲ್ಲಿ ವಿತ್ತ ಸಚಿವರಾಗಿದ್ದ ಯಶವಂತ್‌ ಸಿನ್ಹಾ ಶನಿವಾರದಂದು ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಕೈ ಹಿಡಿದಿದ್ದಾರೆ. ಕೋಲ್ಕತ್ತಾದ ಟಿಎಂಸಿ ಪಕ್ಷದ ಅನೇಕ ನಾಯಕರ ಸಮ್ಮುಖದಲ್ಲಿ ಅವರು ಟಿಎಂಸಿ ಸದಸ್ಯತ್ವ ಸ್ವೀಕರಿಸಿದ್ದಾರೆ. ಇನ್ನು ಇದೇ ವೇಳೆ ತಾವೇಕೆ ಟಿಎಂಸಿಗೆ ಸೇರ್ಪಡೆಗೊಂಡೆ ಎಂಬುವುದನ್ನೂ ಅವರು ತಿಳಿಸಿದ್ದಾರೆ. ಅಲ್ಲದೇ ಬಿಜೆಪಿ ವಿರುದ್ಧ ಕಿಡಿ ಕಾರಿರುವ ಸಿನ್ಹಾ ದೇಶವಿಂದು ''ಅನಿರೀಕ್ಷಿತ ಸಂದರ್ಭ'ಗಳನ್ನು ಎದುರಿಸುತ್ತಿದೆ ಎಂದಿದ್ದಾರೆ.

ಇನ್ನು ಯಶವಂತ್ ಸಿನ್ಹಾ ಅಟಲ್ ಸರ್ಕಾರ ಹಾಗೂ ಅದಕ್ಕೂ ಮುನ್ನ 1990ರಲ್ಲಿ ಚಂದ್ರಶೇಖರ್ ಕ್ಯಾಬಿನೆಟ್‌ನಲ್ಲಿ ಕೇಂದ್ರ ಸಚಿವರಾಗಿದ್ದವರು. ಆದರೆ ಕಳೆದ ಕೆಲ ವರ್ಷಗಳಿಂದ ಅವರು ಪಿಎಂ ಮೋದಿ ಆಡಳಿತವನ್ನು ಟೀಕಿಸುತ್ತಿದ್ದಾರೆ. ಅವರು 2018ರಲ್ಲಿ ಬಿಜೆಪಿ ಹೈಕಮಾಂಡ್‌ ಜೊತೆಗಿನ ಭಿನ್ನಮತದ ಬಳಿಕ ಪಕ್ಷ ತೊರೆದಿದ್ದರು. 

ಇನ್ನು ಇಂದು ಟಿಎಂಸಿ ಸದಸ್ಯತ್ವ ಸ್ವೀಕರಿಸಿದ ಬಳಿಕ ಬಿಜೆಪಿ ವಿರುದ್ಧದ ಹೋರಾಟದಲ್ಲಿ ಮಮತಾ ಬ್ಯಾನರ್ಜಿಗೆ ಬೆಂಬಲ ನೀಡುವುದಾಗಿ ಮಾತು ಕೊಟ್ಟಿದ್ದಾರೆ. ಇನ್ನು ಯಶವಂತ್ ಸಿನ್ಹಾ ತಮ್ಮ ಪಕ್ಷಕ್ಕೆ ಸೇರ್ಪಡೆಗೊಂಡಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಸುಬ್ರತ್ ಮುಖರ್ಜಿ 'ಯಶವಂತ್ ಸಿನ್ಹಾ ನಮ್ಮ ಜೊತೆಗಿದ್ದಾರೆಂದು ನಮಗೆ ಬಹಳ ಖುಷಿಯಾಗುತ್ತಿದೆ. ನಂದಿಗ್ರಾಮದಲ್ಲಿ ನಡೆದ ಹಲ್ಲೆಯಿಂದ ಮಮತಾ ಬ್ಯಾನರ್ಜಿ ಗಾಯಗೊಂಡಿರದಿದ್ದರೆ, ಇಂದು ಖುದ್ದು ಅವರೇ ಇಲ್ಲಿರುತ್ತಿದ್ದರು' ಎಂದಿದ್ದಾರೆ.

ಇನ್ನು ಟಿಎಂಸಿ ಸೇರ್ಪಡೆಗೊಂಡ ಸಿನ್ಹಾ ಕೆಲ ಮಹತ್ವದ ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ.

* ಮಮತಾ ಬ್ಯಾನರ್ಜಿ ಮೇಲಿನ ಹಲ್ಲೆಯೇ ಈ ನಿರ್ಧಾರಕ್ಕೆ ಪ್ರಮುಖ ಕಾರಣ. ಟಿಎಂಸಿ ಸೇರ್ಪಡೆಗೊಂಡು ಮಮತಾ ಬೆಂಬಲಿಸಲು ಇದು ಸೂಕ್ತ ಸಮಯವಾಗಿತ್ತು.

* ಬಿಜೆಪಿ ವಿರುದ್ಧ ಕಿಡಿ ಕಾರಿರುವ ಸಿನ್ಹಾ ದೇಶವಿಂದು ''ಅನಿರೀಕ್ಷಿತ ಸಂದರ್ಭ'ಗಳನ್ನು ಎದುರಿಸುತ್ತಿದೆ ಎಂದಿದ್ದಾರೆ

* ಯಾವುದೇ ಒಂದು ಪ್ರಜಾಪ್ರಭುತ್ವದ ಶಕ್ತಿ ಅದರ ಪ್ರಜಾಪ್ರಭುತ್ವ ಸಂಸ್ಥೆಯಲ್ಲಿದೆ. ಆದರೆ ಈಗ ನ್ಯಾಯಾಂಗ ಸೇರಿದಂತೆ ದೇಶದ ಎಲ್ಲಾ ಸಂಸ್ಥೆಗಳು ದುರ್ಬಲಗೊಂಡಿವೆ ಎಂದಿದ್ದಾರೆ.

* ಅಟಲ್ ಜಿ ಸಮಯದಲ್ಲಿ ಬಿಜೆಪಿ ಜನಸಂದೇಶವನ್ನು ನಂಬಿತ್ತು. ಆದರೆ ಇಂದಿನ ಸರ್ಕಾರವು ಜನರನ್ನು ತುಳಿದು ಆಳ್ವಿಕೆ ಮಾಡುವಲ್ಲಿ ನಂಬಿಕೆ ಹೊಂದಿದೆ. ಅಕಾಲಿ ಮತ್ತು ಬಿಜೆಡಿ ಬಿಜೆಪಿಯನ್ನು ತೊರೆದಿದೆ. ಇಂದು ಬಿಜೆಪಿಯೊಂದಿಗೆ ಯಾರು ನಿಲ್ಲುತ್ತಾರೆ? ಎಂದು ಸಿನ್ಹಾ ಪ್ರಶ್ನಿಸಿದ್ದಾರೆ.

* ಅಟಲ್ ಜಿ ರಾಷ್ಟ್ರೀಯ ಮೈತ್ರಿ ಮಾಡಿಕೊಂಡಿದ್ದರು. ಆದರೆ ಸಮ್ಮಿಶ್ರ ಪಾಲುದಾರರನ್ನು ದುರ್ಬಲಗೊಳಿಸಿ ಅವರ ಸ್ಥಾನ ಪಡೆಯುವುದನ್ನು ಅವರು ಎಂದಿಗೂ ಇಷ್ಟ ಪಡುತ್ತಿರಲಿಲ್ಲ. ಆದರೆ ಇಂದು ದೇಶಾದ್ಯಂತ ನಡೆಯುತ್ತಿರುವ ಗಂಭೀರ ಯುದ್ಧ. ಇದು ಕೇವಲ ರಾಜಕೀಯ ಹೋರಾಟವಲ್ಲ. ಇದು ಪ್ರಜಾಪ್ರಭುತ್ವವನ್ನು ಉಳಿಸುವ ಹೋರಾಟ ಎಂದಿದ್ದಾರೆ.

click me!